Bengaluru Mysuru Expressway ಹಿಂದೆ ಅಡಗಿರುವ ಸತ್ಯ- ಸಂಗತಿಗಳು: ದೇವೇಗೌಡರೇ ರೂವಾರಿ? ಈ ಮಾಹಿತಿ ತಿಳಿಯಿರಿ
ಬೆಂಗಳೂರು, ಮಾರ್ಚ್ 11: ಬೆಂಗಳೂರು ಮೈಸೂರು ದಶಪಥ ಎಕ್ಸ್ಪ್ರೆಸ್ವೇ ಅನ್ನು ಪ್ರಧಾನಿ ನರೇಂದ್ರ ಅವರು ಮಾರ್ಚ್ 12 ರಂದು ಉದ್ಘಾಟಿಸಲಿದ್ದಾರೆ. ಉದ್ಘಾಟನೆಗೂ ಮುನ್ನ ಈ ಹೆದ್ದಾರಿಯ ಭಾರೀ ಸದ್ದು ಮಾಡುತ್ತಿದೆ. ಈ ದಶಪಥದ ಕ್ರೆಡಿಟ್ ಪಡೆಯಲು ಬಿಜೆಪಿ, ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳು ಹರಸಾಹಸ ಪಡುತ್ತಿವೆ. ಕುಮಾರಸ್ವಾಮಿ ನೇತೃತ್ವದ ಜೆಡಿಎಸ್ ಪಕ್ಷವು ಇನ್ನೂ ಮುಂದೆ ಹೋಗಿ, ರಾಜ್ಯದ ದಿನಪತ್ರಿಕೆಗಳಿಗೆ ಒಂದು ಪುಟದ ಜಾಹೀರಾತನ್ನು ನೀಡಿದೆ. ಈ ಜಾಹೀರಾತನ್ನು ರಾಜ್ಯದ ಎಲ್ಲಾ ಪ್ರಮುಖ ದಿನಪತ್ರಿಕೆಗಳು ಪ್ರಕಟಿಸಿವೆ.

ಜೆಡಿಎಸ್ ನೀಡಿರುವ ಜಾಹೀರಾತಿನಲ್ಲಿ ಏನಿದೆ?
ಬೆಂಗಳೂರು ಮೈಸೂರು ದಶಪಥ ಹೆದ್ದಾರಿಗೆ ದೇವೇಗೌಡರೇ ರೂವಾರಿ ಎಂದು ಜೆಡಿಎಸ್ ತಿಳಿಸಿದೆ. ಬೆಂಗಳೂರು-ಮೈಸೂರು ನಗರವನ್ನು ಸಂಪರ್ಕಿಸುತ್ತಿದ್ದ ಅಂದಿನ ರಾಜ್ಯ ಹೆದ್ದಾರಿ 17 (SH-17) ಒಟ್ಟು ಉದ್ದ 111,6 ಕಿ.ಮೀ. ಉದ್ದ ಇತ್ತು. ಈ ರಾಜ್ಯ ಹೆದ್ದಾರಿ ಬಹುತೇಕ ಅಂದಿನ ಬೆಂಗಳೂರು, ಮಂಡ್ಯ ಮತ್ತು ಮೈಸೂರು ಜಿಲ್ಲೆಗಳಲ್ಲಿನ ತಾಲೂಕುಗಳು ಮತ್ತು ದಾರಿ ಉದ್ದಕ್ಕೂ ಬರುವ ಹಳ್ಳಿಗಳನ್ನು ಸಂಪರ್ಕಿಸುವ ಜಿಲ್ಲಾ ಮುಖ್ಯರಸ್ತೆಯಾಗಿತ್ತು ಎಂದು ಜೆಡಿಎಸ್ ಹೇಳಿದೆ.

ಮೈಸೂರಿನಿಂದ ಬೆಂಗಳೂರಿನ ಅರಮನೆಗೆ ಸವಾರಿ
ಮೈಸೂರಿನಿಂದ ಬೆಂಗಳೂರಿನ ಅರಮನೆಗೆ ಕುದುರೆ ಸವಾರಿ, ಸಾರೋಟು ಮತ್ತು ಎತ್ತಿನ ಬಂಡಿಗಳಲ್ಲಿ ಸಂಚರಿಸುವ ರಸ್ತೆಯಾಗಿತ್ತು. ಪ್ರವಾಸದ ವೇಳೆ ಮೈಸೂರು ಮಹಾರಾಜರು ಹಾಗೂ ಸಿಬ್ಬಂದಿ ವಿಶ್ರಾಂತಿಗಾಗಿ ಮತ್ತು ತಂಗುವಿಕೆಗೆ ಬಿಡದಿಯನ್ನು ಆಯ್ಕೆ ಮಾಡಿ ಸದರಿ ಪ್ರದೇಶವನ್ನು ಅಭಿವೃದ್ಧಿ ಪಡಿಸಿದರು. ತುಮಕೂರು ಜಿಲ್ಲೆ ತುರುವೇಕೆರೆಯಲ್ಲಿನ ಅಮ್ಮಸಂದ್ರ ಸಿಮೆಂಟ್ ಕಾರ್ಖಾನೆ ಸ್ಥಾಪನೆಯಾದ ನಂತರ ಆ ಕಾರ್ಖಾನೆಯಿಂದ ಸಿಮೆಂಟ್ ತರಿಸಿ, ಸಿಮೆಂಟ್ ರಸ್ತೆ ತಯಾರಿಸಿದರು ಎಂದು ಜನತಾದಳ ತಿಳಿಸಿದೆ.

ಈ ಹೆದ್ದಾರಿಯಲ್ಲಿ ಹಲವಾರು ಅಪಘಾತ
ಅಂದಿನಿಂದಲೂ ಮೈಸೂರು ನಗರವು ಪ್ರವಾಸಿಗರ ಆಕರ್ಷಣೀಯ ಬೀಡಾಗಿದ್ದರೂ, ಸ್ವಾತಂತ್ರ್ಯ ಬಂದು ಹಲವಾರು ವರ್ಷ ಕಳೆದರೂ ಅಭಿವೃದ್ಧಿಯಾಗಿರಲಿಲ್ಲ. ಈ ಹಳೇ ರಾಜ್ಯ ಹೆದ್ದಾರಿಯಲ್ಲಿ ಹಲವಾರು ಅಪಘಾತವಾಗುವ ತೀವ್ರ ತೆರವಾದ ರಸ್ತೆ ತಿರುವುಗಳಿದ್ದವು. 1983ನೇ ಇಸವಿಯಲ್ಲಿ ಬೆಂಗಳೂರು - ಮೈಸೂರು ರಾಜ್ಯ ಹೆದ್ದಾರಿಯಲ್ಲಿ ತಮಿಳುನಾಡಿನಿಂದ ಮೈಸೂರಿಗೆ ಶೈಕ್ಷಣಿಕ ಪ್ರವಾಸಕ್ಕೆ ತೆರಳಿದ್ದ ಶಾಲಾ ಮಕ್ಕಳಿದ್ದ ಬಸ್ ಬಿಡದಿ ಬಳಿ ಇರುವ ಮಾಯಗಾನಹಳ್ಳಿ ಹತ್ತಿರವಿದ್ದ ಅಪಾಯಕಾರಿ ತಿರುವಿನಲ್ಲಿ ಅಪಘಾತಕ್ಕೆ ಒಳಗಾಯಿತು. ಬಸ್ನಲ್ಲಿ ಇದ್ದ 23 ವಿದ್ಯಾರ್ಥಿಗಳು ಮೃತಪಟ್ಟಿದ್ದರು. ಹಲವಾರು ವಿದ್ಯಾರ್ಥಿಗಳು ಗಾಯಗೊಂಡಿದ್ದರು ಎಂದು ಜೆಡಿಎಸ್ ಪಕ್ಷ ಹೇಳಿದೆ.

ನಾಲ್ಕು ಪಥದ ರಸ್ತೆಯಾಗಿ ಮಾಡಲು ಯೋಜನೆ
1983ರ ಅವಧಿಯಲ್ಲಿ ಕರ್ನಾಟಕದಲ್ಲಿ ಲೋಕೋಪಯೋಗಿ ಮತ್ತು ನೀರಾವರಿ ಖಾತೆ ಸಚಿವರಾಗಿದ್ದ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರು ಅಂದಿನ ಲೋಕೋಪಯೋಗಿ ಇಲಾಖೆ ಕಾರ್ಯದರ್ಶಿ ಶ್ರೀ ಕೆ.ಸಿ ರೆಡ್ಡಿ ಮತ್ತು ಮುಖ್ಯ ಇಂಜಿನಿಯರ್ ಶ್ರೀ ಸಿದ್ದಪ್ಪ ಅವರೊಂದಿಗೆ ಘಟನಾ ಸ್ಥಳವನ್ನು ಪರಿಶೀಲಿಸಿದರು. 15 ದಿನಗಳಲ್ಲಿ ಪದೇಪದೆ ಅಪಘಾತಕ್ಕೆ ಒಳಪಡುತ್ತಿದ್ದ ಈ ಸ್ಥಳವನ್ನು ನಾಲ್ಕು ಪಥದ ರಸ್ತೆಯಾಗಿ ಮಾಡಲು ಯೋಜನೆ ರೂಪಿಸಲಾಯಿತು. ಮಧ್ಯದಲ್ಲಿ ಮಿಷಿಯನ್ ಹಾಗೂ ದೀಪಗಳನ್ನು ಅಳವಡಿಸಲಾಯಿತು. ಇದರಿಂದ ಅಪಘಾತಗಳನ್ನು ತಡೆಯಲಾಯಿತು ಎಂದು ಜೆಡಿಎಸ್ ಜಾಹೀರಾತು ನೀಡಿದೆ.

ಹಲವಾರು ರಸ್ತೆ ಸುಧಾರಣಾ ಕಾಮಗಾರಿಗಳು
ಬೆಂಗಳೂರು- ಮೈಸೂರು ರಾಜ್ಯ ಹೆದ್ದಾರಿಯಲ್ಲಿ ರಾಮನಗರ- ಚನ್ನಪಟ್ಟಣ, ಬೆಂಗಳೂರು-ಬಿಡದಿ, ಬಿಡದಿ-ರಾಮನಗರ, ಮತ್ತು ಚನ್ನಪಟ್ಟಣ-ಮದ್ದೂರು ಮಾರ್ಗದಲ್ಲಿ ಪದೇಪದೆ ಅಪಘಾತಕ್ಕೆ ಒಳಗಾಗುತ್ತಿದ್ದ ಹಲವಾರು ರಸ್ತೆಗಳನ್ನು ಗುರುತಿಸಲಾಯಿತು. ರಸ್ತೆ ಸುರಕ್ಷತಾ ಕಾಮಗಾರಿಗಳನ್ನು ಕೈಗೊಂಡು ಅಪಘಾತಗಳನ್ನು ತಡೆಯಲಾಯಿತು.

ಯೋಜನಾ ವರದಿ ತಯಾರಿಕೆಗೆ ಅನುಮತಿ
ಬೆಂಗಳೂರು- ಮೈಸೂರು ರಾಜ್ಯ ಹೆದ್ದಾರಿಯಲ್ಲಿ ವೇಗವಾಗಿ ಬೆಳೆಯುತ್ತಿದ್ದ ವಾಹನ ದಟ್ಟನೆಯನ್ನು ಮನಗಂಡು ಎಚ್ಡಿ ದೇವೇಗೌಡರು, ಲೋಕೋಪಯೋಗಿ ಖಾತೆ ಸಚಿವರಾಗಿ ರಾಜ್ಯ ಹೆದ್ದಾರಿ ಸುಧಾರಣೆ ಮತ್ತು ಬೆಂಗಳೂರು- ಮೈಸೂರು ನಡುವೆ ಎಕ್ಸ್ಪ್ರೆಸ್ವೇ ನಿರ್ಮಾಣಕ್ಕೆ ಕಾರ್ಯತಂತ್ರ ಆಯ್ಕೆ ಅಧ್ಯಯನ ಕೈಗೊಳ್ಳಲು ಒಂದು ನುರಿತ ಸಂಸ್ಥೆ ನೇಮಕ ಮಾಡಿದರು. ಈ ಸಂಸ್ಥೆ ವರದಿ ಹಿನ್ನೆಲೆಯಲ್ಲಿ ಈಗಿನ ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ ವೇಗೆ ಪರ್ಯಾಯವಾಗಿ ನೈಸ್ ಸಂಸ್ಥೆಯಿಂದ ಬೆಂಗಳೂರು- ಮೈಸೂರು ಎಕ್ಸ್ಪ್ರೆಸ್ ವೇ ನಿರ್ಮಾಣಕ್ಕೆ ಸಂಬಂಧಿಸಿದಂತೆ ಯೋಜನಾ ವರದಿ ತಯಾರಿಕೆಗೆ ಅನುಮತಿ ನೀಡಲಾಯಿತು ಎಂದು ಜನತಾದಳ ತಿಳಿಸಿದೆ.

ಚತುಷ್ಪಥ ಹೆದ್ದಾರಿಯಾಗಿ ನಿರ್ಮಾಣ
ಬೆಂಗಳೂರು- ಮೈಸೂರು ದ್ವಿಪಥ ಹೆದ್ದಾರಿಯನ್ನು 2003-2004ರ ಅವಧಿಯಲ್ಲಿ ಚತುಷ್ಪಥ ಹೆದ್ದಾರಿಯನ್ನಾಗಿ KRDCL ಸಂಸ್ಥೆಯಿಂದ MWs NCC ಹಾಗೂ Maytas ಮತ್ತು MWs Soma ಗುತ್ತಿಗೆದಾರರ ಮುಖೇನ ಅಭಿವೃದ್ಧಿ ಕೈಗೊಳ್ಳಲಾಯಿತು. ಆದರೆ, ಅಗತ್ಯವಿರುವ ಭೂಮಿಯ ಭೂ-ಸ್ವಾಧೀನಗೊಳ್ಳದೆ, ಹಲವು ಕಡೆ ಹೆದ್ದಾರಿಯ ಆಗಲೀಕರಣ ಕೈಗೊಳ್ಳಲು ಸಾಧ್ಯವಾಗಲಿಲ್ಲ. 2004-06ರಲ್ಲಿ ಅಂದಿನ ಮುಖ್ಯಮಂತ್ರಿ ಧರ್ಮಸಿಂಗ್ ನೇತೃತ್ವದಲ್ಲಿದ್ದ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರ, 2006-08 ರಲ್ಲಿನ ಕುಮಾರಸ್ವಾಮಿ ನೇತೃತ್ವದಲ್ಲಿನ ಜೆಡಿಎಸ್-ಬಿಜೆಪಿ ಸಮ್ಮಿಶ್ರ ಸರ್ಕಾರದಲ್ಲಿ ಈ ಹೆದ್ದಾರಿ ಅಗಲೀಕರಣ ಮತ್ತು ಉನ್ನತೀಕರಣವನ್ನು ಪೂರ್ಣ ಗೊಳಿಸಲಾಯಿತು ಎಂದು ಜೆಡಿಎಸ್ ಹೇಳಿದೆ.

ಅನಿವಾರ್ಯವಾದ ಉನ್ನತೀಕರಣ
2014ರಲ್ಲಿ ಕೇಂದ್ರ ಸರ್ಕಾರ ಬೆಂಗಳೂರು ಮೈಸೂರು ನಡುವಿನ ರಾಜ್ಯ ಹೆದ್ದಾರಿ 17 ನ್ನು ರಾಷ್ಟ್ರೀಯ ಹೆದ್ದಾರಿ 275 ಮೇಲ್ದರ್ಜೆಗೇರಿಸಿತು. ಈ ಮಧ್ಯೆ ಮೈಸೂರು ಇನ್ಫ್ರಾಸ್ಟ್ರಕ್ಚರ್ ಕಾರಿಡಾರ್ ಯೋಜನೆಯನ್ನು ಯೋಜನಾ ಕರಾರಿನಂತೆ ಅನುಷ್ಠಾನಗೊಳಿಸಲು ವಿಫಲವಾದ ನೈಸ್ ಸಂಸ್ಥೆ ಕೋರ್ಟ್ ಮೆಟ್ಟಿಲು ಹತ್ತಿದ ಹಿನ್ನೆಲೆಯಲ್ಲಿ, ಪರ್ಯಾಯವಾಗಿ ಪ್ರಸ್ತುತದಲ್ಲಿರುವ ಬೆಂಗಳೂರು-ಮೈಸೂರು ನಡುವಿನ ರಾಜ್ಯ ಹೆದ್ದಾರಿಯನ್ನು ಉನ್ನತೀಕರಿಸುವುದು ಅನಿವಾರ್ಯವಾಯಿತು ಎಂದು ಜನತಾದಳ ಹೇಳಿದೆ.

ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರದ ಕಾಮಗಾರಿ
Bengaluru Myore ದಶಪಥ ರಸ್ತೆಯನ್ನಾಗಿ ಮಾಡಲು ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರದ ವತಿಯಿಂದ ಕಾಮಗಾರಿ ಕೈಗೊಳ್ಳಲಾಗಿದೆ. ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರದ ಉನ್ನತೀಕರಿಸುವ ಈ ರಾಷ್ಟ್ರೀಯ ಹೆದ್ದಾರಿಯ ಒಟ್ಟು 116 ಕಿ.ಮೀ.ನಲ್ಲಿ ಹಾಲಿ ಇರುವ ಸುಮಾರು 60 ಕಿ.ಮೀ. ಗಳಲ್ಲಿ Elevated ರಸ್ತೆಯನ್ನು ಮತ್ತು ಐದು ಬೈಪಾಸ್ಗಳನ್ನು ಮಾತ್ರ ನಿರ್ಮಿಸಲಾಗಿದೆ ಎಂದು ಜೆಡಿಎಸ್ ಹೇಳಿದೆ.

ಜೆಡಿಎಸ್ ಆರೋಪವೇನು?
ಇನ್ನು ಬಾಕಿ ಇರುವ 57 ಕಿ.ಮೀ. ಹೆದ್ದಾರಿಯನ್ನು ಈಗಾಗಲೆ, KRDCL ಮುಖೇನ ಅಭಿವೃದ್ಧಿಗೊಳಿಸಿದ್ದ ರಸ್ತೆಯನ್ನು ಬಳಸಿ ಆಗಲೀಕರಣ ಹಾಗೂ ಉನ್ನತೀಕರಣ ಮಾಡಲಾಗಿದೆ. ಪ್ರಾಧಿಕಾರ ನಿರ್ಮಿಸಿರುವ ಎಲಿವೆಟೆಡ್ ರಸ್ತೆ, ಬೈಪಾಸ್ಗಳು ಸಾಂಪ್ರದಾಯಿಕವಾಗಿ ಸಂಪರ್ಕ ಕಲ್ಪಿಸುವ ಜಿಲ್ಲೆ ಮತ್ತು ತಾಲೂಕು ಕೇಂದ್ರಗಳು ಗ್ರಾಮ ಪಂಚಾಯಿತಿ ಕೇಂದ್ರಗಳು, ಕೈಗಾರಿಕಾ ಪ್ರದೇಶಗಳಾದ ರೇಷ್ಮೆ ವಲಯ ಮತ್ತು ಚಂದದ ಗೊಂಬೆಗಳ ಬೀಡುಗಳನ್ನು ವಂಚಿತಗೊಳಿಸಿವೆ ಎಂದೂ ಜೆಡಿಎಸ್ ಆರೋಪಿಸಿದೆ.

ಆರ್ಥಿಕ ಸವಲತ್ತುಗಳಿಂದ ವಂಚನೆ
ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ ವೇ ಕಾರಿಡಾರ್ ನೂತನವಾಗಿ ನಿರ್ಮಿತವಾಗಿರುವ ಗ್ರೀನ್ ಫೀಲ್ಡ್ ಕಾರಿಡಾರ್ ಆಗಿಲ್ಲ. ಇದು ಕೇವಲ ಪ್ರಸ್ತುತದ ರಸ್ತೆ ಅಗಲೀಕರಣ ಮತ್ತು ಉನ್ನತೀಕರಣಕ್ಕೆ ಸೀಮಿತವಾಗಿದೆ. ಅಲ್ಲದೆ, ಈ ಕಾರಿಡಾರ್ ಸಾಂಪ್ರದಾಯಿಕವಾಗಿ ಸಂಪರ್ಕ ಕಲ್ಪಿಸಬೇಕಾಗಿದ್ದ ಸಾಮಾಜಿಕ, ಶೈಕ್ಷಣಿಕ ಹಾಗೂ ಆರ್ಥಿಕ ಸವಲತ್ತುಗಳನ್ನು ವಂಚಿತಗೊಳಿಸಿದೆ. ಅಲ್ಲದೆ, ಇದು ಟೋಲ್ ರಸ್ತೆ ಆಗಿರುವುದರಿಂದ ಸರ್ಕಾರಕ್ಕೆ ಕಡಿಮೆ ಆರ್ಥಿಕ ಹೊರೆ ಆಗಿದ್ದು, ಪ್ರಯಾಣಿಕರಿಗೆ ಹೆಚ್ಚಿನ ಹೊರೆ ಹೊರಿಸಲಾಗಿದೆ ಎಂದು ಜೆಡಿಎಸ್ ಜಾಹೀರಾತು ನೀಡಿದೆ.











Click it and Unblock the Notifications