Bengaluru-Mysuru Expressway: ಅಜಾಗರೂಕತೆಯಿಂದ ವಾಹನ ಓಡಿಸಿದರೆ ಲೈಸನ್ಸ್ ರದ್ದು- ವಿವರ ತಿಳಿಯಿರಿ
ಬೆಂಗಳೂರು, ಜುಲೈ 13: ಬೆಂಗಳೂರು ಮೈಸೂರು ಎಕ್ಸ್ಪ್ರೆಸ್ವೇಯಲ್ಲಿ ಅಜಾಗರೂಕತೆಯಿಂದ ವಾಹನ ಚಾಲನೆ ಮಾಡುವವರ ಪರವಾನಿಗೆಯನ್ನು ರದ್ದುಪಡಿಸುವ ಕುರಿತು ಚಿಂತಿಸಲಾಗುತ್ತಿದೆ ಎಂದು ಕರ್ನಾಟಕದ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ( ಸಂಚಾರ ಮತ್ತು ರಸ್ತೆ ಸುರಕ್ಷತೆ ) ಅಲೋಕ್ ಕುಮಾರ್ ಹೇಳಿದ್ದಾರೆ.
ಬೆಂಗಳೂರು ಮೈಸೂರು ಎಕ್ಸ್ಪ್ರೆಸ್ವೇ ಅಲ್ಲಿ ನಡೆದಿರುವ ವಾಹನ ಅಪಘಾರದಲ್ಲಿ ಈಗಾಗಲೇ ನೂರಾರು ಜನರು ಸಾವನ್ನು ಅಪ್ಪಿದ್ದಾರೆ. ಮೂರು ನೂರಕ್ಕು ಹೆಚ್ಚು ಜನರು ಗಾಯಗೊಂಡಿದ್ದಾರೆ. ರಾಂಗ್ ರೂಟ್ನಲ್ಲಿ ಜನರು ವಾಹನ ಚಾಲನೆ ಮಾಡುತ್ತಿರುವ ಅನೇಕ ವಿಡಿಯೊಗಳು ಸಾಮಾಜಿಕ ಮಾಧ್ಯಮದಲ್ಲಿ ಕಾಣಿಸಿಕೊಂಡಿವೆ ಎಂದು ಪೊಲೀಸರು ತಿಳಿಸಿದ್ದಾರೆ.

ಇಂತಹ ವಿಡಿಯೊಗಳನ್ನು ಟ್ವಿಟ್ಟರ್ನಲ್ಲಿ ಹಂಚಿಕೊಂಡಿರುವ ಎಡಿಜಿಪಿ ಅಲೋಕ್ ಕುಮಾರ್ ಅವರು, 'ಸಂಬಂಧಿತ ಪೊಲೀಸರು ಇಂತಹ ಉಲ್ಲಂಘನೆಗಳನ್ನು ತಡೆಯಲು ಮತ್ತು ಅಪಘಾತಗಳನ್ನು ಕಡಿಮೆ ಮಾಡಲು ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದಾರೆ. ಅಂತಹ ರಸ್ತೆ ಬಳಕೆದಾರರಿಂದ ಇತರ ರಸ್ತೆ ಬಳಕೆದಾರರಿಗೆ ಅಪಾಯವಿದೆ. ಉಲ್ಲಂಘನೆಗಳನ್ನು ರೆಕಾರ್ಡ್ ಮಾಡುವಾಗ ದಯವಿಟ್ಟು ನಂಬರ್ ಪ್ಲೇಟ್ ಅನ್ನು ಸಹ ಸೆರೆಹಿಡಿಯಿರಿ. ನಾವು ಪರವಾನಗಿಗಳನ್ನು ರದ್ದುಗೊಳಿಸಲು ಶಿಫಾರಸು ಮಾಡುತ್ತೇವೆ' ಎಂದು ತಿಳಿಸಿದ್ದಾರೆ.
ಬೆಂಗಳೂರು ಮೈಸೂರು ಎಕ್ಸ್ಪ್ರೆಸ್ವೇಯಲ್ಲಿ ಲಾರಿಯೊಂದು ನಿಯಂತ್ರಣ ಕಳೆದುಕೊಂಡು ರಸ್ತೆಯ ಇನ್ನೊಂದು ಬದಿಗೆ ನುಗ್ಗುತ್ತಿರುವ ಭಯಾನಕ ವಿಡಿಯೋ ವೈರಲ್ ಆಗಿದೆ. ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಆದರೂ, ಚಾಲಕನ ಪರವಾನಗಿ ರದ್ದುಗೊಳಿಸುವುದರೊಂದಿಗೆ ಚಾಲಕನ ಮೇಲೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಉನ್ನತ ಪೊಲೀಸ್ ಅಧಿಕಾರಿಗಳು ಖಚಿತಪಡಿಸಿದ್ದಾರೆ.
ಬೆಂಗಳೂರು ಮೈಸೂರು ಎಕ್ಸ್ಪ್ರೆಸ್ವೇ ಸುರಕ್ಷತೆಯ ವಿಷಯ ವಿಧಾನಸಭೆಯಲ್ಲಿ ಪ್ರಸ್ತಾಪವಾಗಿದೆ. ಅಪಘಾತಗಳನ್ನು ತಡೆಗಟ್ಟಲು ಕರ್ನಾಟಕ ಸರ್ಕಾರವು ಕ್ರಮಗಳನ್ನು ತೆಗೆದುಕೊಳ್ಳುತ್ತದೆ ಎಂದು ಹೇಳಲಾಗಿದೆ. ಸರ್ಕಾರದ ಪ್ರಕಾರ, ಈ ಸಂಪೂರ್ಣ ನಿಯಂತ್ರಿತ ಎಕ್ಸ್ಪ್ರೆಸ್ವೇ ಈ ವರ್ಷದ ಜೂನ್ವರೆಗೆ 100 ಸಾವುಗಳು ಸಂಭವಿಸಿದ್ದು, 335 ಜನರು ಗಾಯಗೊಂಡಿದ್ದಾರೆ.

ವಿಧಾನಸಭೆಯಲ್ಲಿ ಮಾತನಾಡಿದ ಗೃಹ ಸಚಿವ ಡಾ ಜಿ ಪರಮೇಶ್ವರ ಅವರು, 'ಎಕ್ಸ್ಪ್ರೆಸ್ವೇಗೆ ಸರಿಯಾದ ತಿರುವುಗಳು ಮತ್ತು ವೇಗದ ವಾಹನಗಳಿಗೆ ಸೈನ್ ಬೋರ್ಡ್ಗಳಿಲ್ಲ. ರಸ್ತೆಯುದ್ದಕ್ಕೂ ಹೊಸ ಸೂಚನಾ ಫಲಕಗಳನ್ನು ಅಳವಡಿಸುತ್ತೇವೆ. ನಮ್ಮ ಮಾಹಿತಿಯ ಪ್ರಕಾರ, ಮಾರ್ಚ್ನಲ್ಲಿ 20, ಏಪ್ರಿಲ್ನಲ್ಲಿ 23, ಮೇನಲ್ಲಿ 29 ಮತ್ತು ಜೂನ್ನಲ್ಲಿ 28 ಸಾವುಗಳು ವರದಿಯಾಗಿವೆ' ಎಂದು ತಿಳಿಸಿದ್ದಾರೆ.












Click it and Unblock the Notifications