Bengaluru-Mysuru Expressway: ಏಕಾಎಕಿ ಟೋಲ್ ಸಂಗ್ರಹ, ಕೆಂಗೇರಿ-ಬಿಡದಿಗೆ 75ರೂ. ಕಡಿತ, ಸವಾರರು ಆಕ್ರೋಶ
ಬೆಂಗಳೂರು- ಮೈಸೂರು ಎಕ್ಸ್ಪ್ರೆಸ್ವೇ ಉದ್ಘಾಟನೆ ಬಳಿಕ ಟೋಲ್ (ರಸ್ತೆ ಶುಲ್ಕ) ಸಂಗ್ರಹ ಎಂದಿದ್ದ ಪ್ರಾಧಿಕಾರ ಮಾರ್ಚ್ 08ರಿಂದಲೇ ದಿಢೀರನೇ ಟೋಲ್ ಶುಲ್ಕ ಸಂಗ್ರಹಿಸುತ್ತಿದೆ.
ಬೆಂಗಳೂರು, ಮಾರ್ಚ್ 09: ಎರಡು ನಗರಗಳನ್ನು ಸಂಪರ್ಕಿಸುವ ಬಹುನಿರೀಕ್ಷೆಯ ದಶಪಥ ಹೆದ್ದಾರಿಯಾದ ಬೆಂಗಳೂರು- ಮೈಸೂರು ಎಕ್ಸ್ಪ್ರೆಸ್ವೇ ಉದ್ಘಾಟನೆಗೆ ದಿನಗಣನೆ ಶುರುವಾಗಿದೆ. ಉದ್ಘಾಟನೆ ಬಳಿಕ ಟೋಲ್ನಲ್ಲಿ (ರಸ್ತೆ ಶುಲ್ಕ) ಶುಲ್ಕ ಸಂಗ್ರಹ ಎಂದಿದ್ದ ಪ್ರಾಧಿಕಾರ ಏಕಾಎಕಿ ಟೋಲ್ ಸಂಗ್ರಹಿಸುತ್ತಿದೆ. ಈ ನಡೆಗೆ ವಾಹನ ಸವಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬೆಂಗಳೂರು- ಮೈಸೂರು ದಶಪಥ ಹೆದ್ದಾರಿಯಲ್ಲಿ (Bengaluru-Mysuru Expressway) ಫೆಬ್ರವರಿ 28ರಿಂದ ಟೋಲ್ ಸಂಗ್ರಹ ಆರಂಭಿಸಲಾಗುವುದು ಎಂದು ಹೆದ್ದಾರಿ ಪ್ರಧಿಕಾರ ಹೇಳಿತ್ತು. ಆಗ ಉದ್ಘಾಟನೆಗೂ ಮುನ್ನ ಟೋಲ್ ಸಂಗ್ರಹವೇಕೆ? ಎಂಬ ಪ್ರಶ್ನೆ ಎದ್ದಿತ್ತು. ಹೀಗಾಗಿ ಮಾರ್ಚ್ 14ರಿಂದ ಟೋಲ್ ಶುಲ್ಕ ಸಂಗ್ರಹಿಸಲಾಗುವುದು. ಅಷ್ಟರೊಳಗೆ ಸರ್ವೀಸ್ ರಸ್ತೆ ಕೆಲಸ ಪೂರ್ಣಗೊಳಿಸಲಾಗುವುದು ಎಂದು ಪ್ರಾಧಿಕಾರ ತಿಳಿಸಿತ್ತು.

ಮಾರ್ಚ್ 12ರಂದು ದಶಪಥ ಹೆದ್ದಾರಿ ಉದ್ಘಟನೆಯಾಗುತ್ತದೆ. ಬಳಿಕವೇ ರಸ್ತೆ ಶುಲ್ಕ (ಟೋಲ್) ಸಂಗ್ರಹಿಸಬಹುದು ಎಂದು ನಂಬಿಕೊಂಡಿದ್ದರು. ಆದರೆ ಇದೀಗ ದಿಢೀರನೇ ಟೋಲ್ ಶುಲ್ಕ ಸಂಗ್ರಹ (ಮಾ.8 ರಿಂದ) ಆರಂಭಿಸಲಾಗಿದೆ. ಹೆದ್ದಾರಿ ಪಕ್ಕ ಸರ್ವೀಸ್ ರಸ್ತೆ ಕಲ್ಪಿಸದೇ ಹಣ ವಸೂಲಿಗೆ ಮುಂದಾಗಿದೆ. ಕೆಂಗೇರಿಯಿಂದ ಬಿಡದಿಗೆ ಬರಲು 75 ರೂಪಾಯಿ ಟೋಲ್ ಶುಲ್ಕ ಕಡಿತವಾಗಿದೆ. ಈ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ಮಾಡಿ ಹರಿಬಿಡಲಾಗಿದ್ದು, ಸಾಕಷ್ಟು ಟೀಕೆ ವ್ಯಕ್ತವಾಗಿವೆ.
ಬುಧವಾರ ರಾತ್ರಿ ಕೆಂಗೇರಿಯಿಂದ ಬಿಡದಿಗೆ ಬರುತ್ತಿದ್ದ ವಾಹನ ಸವಾರ ಫಾಸ್ಟಾಗ್ನಿಂದ 75 ರೂಪಾಯಿ ಕಟ್ ಆಗಿದೆ. ಈ ಕುರಿತು ಮೊಬೈಲ್ಗೆ ಸಂದೇಶ ರವಾನೆಯಾದ ಬಳಿಕವೇ ಸದ್ದಿಲ್ಲದೇ ಟೋಲ್ ಶುಲ್ಕ ಸಂಗ್ರಹ ಆರಂಭವಾಗಿರುವುದು ಬೆಳಕಿಗೆ ಬಂದಿದೆ.

ಸರ್ವೀಸ್ ರಸ್ತೆಯೇ ಇಲ್ಲ: ಆಕ್ರೋಶ
ದಶಪಥ ರಸ್ತೆಯಲ್ಲಿ ಬೆಂಗಳೂರು-ನಿಡಘಟ್ಟ ಮಧ್ಯದ ಶೇಷಗಿರಿಹಳ್ಳಿಯ ಟೋಲ್ ಬಳಿ ಸ್ಥಳೀಯ ವಾಹನಗಳು ಸಂಚರಿಸಲು ಸೂಕ್ತ ಸರ್ವಿಸ್ ರಸ್ತೆಯನ್ನು ಪ್ರಾಧಿಕಾರ ಕಲ್ಪಿಸಿಲ್ಲ. ಅಲ್ಲದೇ ಇದೇ ಭಾಗದಲ್ಲಿ ಶಾಲಾ ಮಕ್ಕಳಿಗೆ, ಸ್ಥಳೀಯರಿಗೆ ರಸ್ತೆ ದಾಟಲು ಸ್ಕೈವಾಕ್ಗಳು ಇಲ್ಲ. ಹೀಗಿದ್ದಾಗ ಟೋಲ್ ನಲ್ಲಿ ರಸ್ತೆ ಶುಲ್ಕ ಸಂಗ್ರಹಿಸುವ ಅಗತ್ಯವೇನಿತ್ತು ಎಂದು ಸವಾರರು ಮತ್ತು ಗ್ರಾಮಸ್ಥರು ಪ್ರಶ್ನಿಸಿದ್ದಾರೆ. ಶೇಷಗಿರಿಹಳ್ಳಿ ಸಮೀಪ ಮೊದಲ ಹಂತದಲ್ಲಿ ಒಂದು ಟೋಲ್ ಕಾರ್ಯಾಚರಣೆ ನೆಡೆಸುತ್ತಿದೆ.
ಟೋಲ್ ದರ ನಿಗದಿ ಎಷ್ಟಿದೇ?
ಕಾರು, ಜೀಪು, ವ್ಯಾನುಗಳಂತಹ ವಾಹನಗಳು ಏಕಮುಖ ಸಂಚಾರಕ್ಕೆ 135 ರೂಪಾಯಿ, ಲಘು ವಾಣಿಜ್ಯ, ಲಘು ಸರಕು ವಾಹನ, ಮಿನಿಬಸ್ (ಏಕಮುಖ) 220 ರೂ., ಭಾರಿ ನಿರ್ಮಾಣ ಯಂತ್ರ, ಬೃಹತ್ ಯಂತ್ರಗಳ ವಾಹನ, ಮಲ್ಟಿ ಆಕ್ಸೆಲ್ ವಾಹನ (6ರಿಂದ 8 ಆಕ್ಸೆಲ್) 720 ರೂಪಾಯಿ ಜೊತೆಗೆ ಭಾರಿ ಗಾತ್ರದ ವಾಹನಗಳಿಗೆ 880 ರೂಪಾಯಿ ನಿಗದಿಮಾಡಲಾಗಿದೆ.
ಪ್ರಧಾನಿಯಿಂದ ಎಕ್ಸಪ್ರೆಸ್ವೇ ಉದ್ಘಾಟನೆಗೆ ದಿನಗಣನೆ
ಉದ್ಯಾನ ನಗರಿ ಬೆಂಗಳೂರು ಮತ್ತು ಅರಮನೆ ನಗರಿ ಮೈಸೂರು ಸಂಪರ್ಕ ಕಲ್ಪಿಸುವ ಎಕ್ಸಪ್ರೆಸ್ವೇ ಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಇದೇ ಮಾರ್ಚ 12ರಂದು ಹಸಿರು ನಿಶಾನೆ ತೋರಿಸಲಿದ್ದಾರೆ. ಅಲ್ಲಿಂದ ಹೆದ್ದಾರಿ ಸಾರ್ವಜನಿಕ ಬಳಕೆಗೆ ಮುಕ್ತವಾಗಲಿದೆ. ಮದ್ದೂರು ಬಳಿ ಬೃಹತ್ ಸಾರ್ವಜನಿಕ ಕಾರ್ಯಕ್ರಮ ನಡೆಯಲಿದೆ, ಲಕ್ಷಾಂತರ ಜನರು, ಕಾರ್ಯಕರ್ತರು ಈ ವೇಳೆ ಪಾಲ್ಗೊಳ್ಳಲಿದ್ದಾರೆ.












Click it and Unblock the Notifications