Bengaluru - Mysuru expressway: ಹೆದ್ದಾರಿಯ ಸಮಸ್ಯೆಗಳನ್ನು ಬಗೆಹರಿಸಲಾಗಿದೆ ಎಂದ NHAI
ಬೆಂಗಳೂರು, ಮಾರ್ಚ್. 22:ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಿದ ಒಂದು ವಾರದೊಳಗೆ ಬೆಂಗಳೂರು - ಮೈಸೂರು ಎಕ್ಸ್ಪ್ರೆಸ್ವೇ ಜಲಾವೃತಗೊಂಡು ಸಾರ್ವಜನಿಕರಿಂದ ಭಾರೀ ಟೀಕೆಗೆ ಒಳಗಾಗಿತ್ತು. ಚುನಾವಣಾ ಸಮಯದಲ್ಲಿ ರಾಜಕೀಯ ಪಕ್ಷಗಳು ಆಡಳಿತ ಪಕ್ಷವನ್ನು ಗುರಿಯಾಗಿಸಿಕೊಂಡು ವಾಗ್ದಾಳಿ ನಡೆಸಿದ್ದವು.
ಬೆಂಗಳೂರು - ಮೈಸೂರು ಎಕ್ಸ್ಪ್ರೆಸ್ವೇ ಜಲಾವೃತಗೊಂಡು ವಾಹನ ಸವಾರರಿಗೆ ತೊಂದರೆಯಾಗಿದ್ದಕ್ಕೆ ಕಾರಣ ತಿಳಿಸಿದ್ದ ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಎನ್ಎಚ್ಎಐ) , ಈಗ ಮತ್ತೆ ಎಲ್ಲಾ ಸಮಸ್ಯೆಗಳನ್ನು ಬಗೆಹರಿಸಲಾಗಿದೆ. ಚರಂಡಿಗೆ ಪೈಪ್ಗಳನ್ನು ಅಳವಡಿಸಲಾಗಿದೆ ಎಂದು ತಿಳಿಸಿದೆ. ಎನ್ಎಚ್ಎಐ ಹೆದ್ದಾರಿ ಜಲಾವೃತಗೊಂಡಿದ್ದ ರಾಮನಗರದ ಸಂಗಬಸವನ ದೊಡ್ಡಿ ಸೇರಿದಂತೆ ಎಕ್ಸ್ಪ್ರೆಸ್ವೇಯ ಮರು ಪರಿಶೀಲನೆ ನಡೆಸಿದೆ.

ಕೆಲವು ಗ್ರಾಮಸ್ಥರು ತಮ್ಮ ಹಳ್ಳಿಗಳನ್ನು ತಲುಪಲು ಅಥವಾ ರಸ್ತೆ ದಾಟಲು ರಸ್ತೆ ಪಕ್ಕ ಹಾಕಲಾಗಿರುವ ತಡೆಗೋಡೆಗಳನ್ನು ತೆಗೆಯಬೇಕಾಗಿತ್ತು. ಪ್ರಯಾಣಿಕರು ಮಾಡುವ ದೂರುಗಳನ್ನು ಪರಿಹರಿಸಲು ಕೆಲಸ ಮಾಡುತ್ತಿದ್ದು ವಿವಿಧ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ ಎಂದು ಭರವಸೆ ನೀಡಿದ್ದಾರೆ. ಜೊತೆಗೆ ಗ್ರಾಮಸ್ಥರು ಚರಂಡಿಗೆ ಮಣ್ಣು ಸುರಿದಿದ್ದರಿಂದ ಪ್ರವಾಹ ಉಂಟಾಗಿದೆ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.
ಸದ್ಯ ಹೆದ್ದಾರಿಯಲ್ಲಿನ ನೀರು ಸರಾಗವಾಗಿ ಹರಿಯಲು ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ನೀರನ್ನು ಹೊರಹಾಕಲು ಎರಡು ಸಾಲು ಪೈಪ್ಗಳನ್ನು ಹಾಕಿದೆ. ಪ್ರಯಾಣಿಕರ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಚೈನ್ ಲಿಂಕ್ ಫೆನ್ಸಿಂಗ್ ಅನ್ನು ಕಟ್ಟುನಿಟ್ಟಾಗಿ ನಿರ್ವಹಿಸುವಂತೆ ಅಧಿಕಾರಿಗಳು ಯೋಜನಾ ನಿರ್ದೇಶಕರು ಮತ್ತು ಗುತ್ತಿಗೆದಾರರಿಗೆ ಸೂಚಿಸಿದ್ದಾರೆ. ಈ ಹಿಂದೆ, ಈ ಎಕ್ಸ್ಪ್ರೆಸ್ವೇ ಉದ್ಘಾಟನೆಯಾದ ಕೆಲವು ದಿನಗಳ ನಂತರ, ಕೆಲವು ವಾಹನಗಳು ರಿವರ್ಸ್ಗೇರ್ನಲ್ಲಿ ತಪ್ಪಾದ ದಿಕ್ಕಿನಲ್ಲಿ ಚಲಿಸುತ್ತಿರುವುದು ಕಂಡುಬಂದಿತ್ತು.

ಇನ್ನು, ಭಾರೀ ವಿವಾದ ಮತ್ತು ರಾಜಕೀಯ ಟೀಕೆಗೆ ಗುರಿಯಾದ ಬೆಂಗಳೂರು - ಮೈಸೂರು ಎಕ್ಸ್ಪ್ರೆಸ್ವೇ ಜಲಾವೃತ ವಿಷಯಕ್ಕೆ ಸಚಿವಾಲಯ ಹೇಳಿಕೆ ನೀಡಿತ್ತು. "ಮಾದಾಪುರ ಮತ್ತು ಇತರರು ತಮ್ಮ ಕೃಷಿ ಜಮೀನು ಮತ್ತು ಗ್ರಾಮಕ್ಕೆ ಹೋಗಲು ಕಿ.ಮೀ.42.640 ಕಡಿಮೆ ಮಾಡಲು ಪ್ರಯತ್ನಿಸಿದ್ದಾರೆ. ಹೀಗಾಗಿ 3 ಮೀ ಅಗಲದವರೆಗೆ ಒಳ ಚರಂಡಿಯನ್ನು ಮಣ್ಣಿನಿಂದ ಮುಚ್ಚುವ ಮೂಲಕ ಸರ್ವಿಸ್ ರಸ್ತೆಯಿಂದ ತಮ್ಮದೇ ಆದ ಅನಧಿಕೃತ ಮಾರ್ಗವನ್ನು ನಿರ್ಮಿಸಿದ್ದಾರೆ. ಈ ಕಾರಣದಿಂದ ಮಳೆ ಬಂದಾಗ ನೀರು ಸರಾಗವಾಗಿ ಹರಿಯಲು ಸಾಧ್ಯವಾಗದೇ ರಸ್ತೆ ಮುಳುಗುವಿಕೆಗೆ ಕಾರಣವಾಗಿದೆ" ಎಂದಿತ್ತು.
ಅನಧಿಕೃತವಾಗಿ ಗ್ರಾಮಸ್ಥರು ಹಾಕಿದ್ದ ದಿಬ್ಬವನ್ನು 18.03.2023 ರಂದು ಮುಂಜಾನೆಯೇ ತೆರವುಗೊಳಿಸಲಾಗಿದ್ದು, ಚರಂಡಿಯಲ್ಲಿ ನೀರು ಸರಾಗವಾಗಿ ಹರಿಯುವಂತೆ ಮಾಡಲು 1.2 ಮೀಟರ್ ವ್ಯಾಸದ ಎರಡು ಸಾಲಿನ ಪೈಪಲ್ಗಳನ್ನು ಅಳವಡಿಸಲಾಗಿದೆ ಎಂದು ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ತನ್ನ ಪ್ರಕಟಣೆಯಲ್ಲಿ ತಿಳಿಸಿತ್ತು. ಈಗ ಹೆದ್ದಾರಿಯಲ್ಲಿ ಮರು ಪರಿಶೀಲನೆ ನಡೆಸಿದೆ.
*ಬಿಡದಿ ಸರ್ವಿಸ್ ರಸ್ತೆ ಸಂಚಾರಕ್ಕೆ ಮುಕ್ತ*
ಬಿಡದಿಯಲ್ಲಿನ ವಿಸ್ತರಣೆ ಜಂಟಿಗೆ ಸಂಬಂಧಿಸಿದಂತೆ, ಹೆದ್ದಾರಿ ಪ್ರಾಧಿಕಾರ ಪತ್ರಿಕಾ ಪ್ರಕಟಣೆ ನೀಡಿದ್ದು, ಈಗ ರಸ್ತೆ ಸಂಚಾರಕ್ಕೆ ಮುಕ್ತವಾಗಿದೆ ಎಂದು ಹೇಳಿದೆ. ಚೈನ್ ಲಿಂಕ್ ಫೆನ್ಸಿಂಗ್ ಅನ್ನು ಕಟ್ಟುನಿಟ್ಟಾಗಿ ನಿರ್ವಹಿಸಲಾಗುವುದು. ಆರು ಪಥದ ಎಕ್ಸ್ಪ್ರೆಸ್ವೇನಲ್ಲಿ ಪ್ರಯಾಣಿಕರ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಬೇಲಿ ದುರಸ್ತಿಗೆ ಹೆಚ್ಚಿನ ಆದ್ಯತೆ ನೀಡಲಾಗುವುದು ಎಂದು ಹೇಳಿದೆ.
"ಸರ್ವೀಸ್ ರಸ್ತೆ ಲಭ್ಯವಿಲ್ಲ ಎಂದು ಸ್ಥಳೀಯ ನಿವಾಸಿಗಳು ತಿಳಿಸಿದ್ದಾರೆ. ಇದು ಪ್ರವೇಶ ನಿಯಂತ್ರಿತ ಹೆದ್ದಾರಿಯಾಗಿದ್ದು, ಎರಡೂ ಬದಿಯಲ್ಲಿ 112 ಕಿಮೀ ದ್ವಿಪಥದ ಸರ್ವಿಸ್ ರಸ್ತೆಯನ್ನು ಒದಗಿಸಲಾಗಿದೆ. ಎನ್ಎಚ್ಎಐ ಸರ್ವೀಸ್ ರಸ್ತೆಯನ್ನು ನಿರ್ಮಿಸುತ್ತಿದೆ" ಎಂದು ಎನ್ಎಚ್ಎಐ ಹೇಳಿದೆ, ತುರ್ತು ಪರಿಸ್ಥಿತಿಗಳು ಮತ್ತು ವಾಹನ ಕೆಟ್ಟು ನಿಂತೆ ಪರಿಹರಿಸಲು ಆಂಬ್ಯುಲೆನ್ಸ್ಗಳು, ಗಸ್ತು ವಾಹನಗಳು ಮತ್ತು ಕ್ರೇನ್ಗಳ ನಿಯೋಜನೆ ಒಳಗೊಂಡಿರುವ ಹಲವಯ ನಿರ್ವಹಣಾ ವ್ಯವಸ್ಥೆಯನ್ನು ಜಾರಿಗೆ ತರಲಾಗಿದೆ ಎಂದು ಮಾಹಿತಿ ನೀಡಿದೆ.












Click it and Unblock the Notifications