Namma Metro: ಜು.6ಕ್ಕೆ ನೇರಳೆ ಮಾರ್ಗದ ಈ ನಿಲ್ದಾಣಗಳ ಮಧ್ಯೆ ಮೆಟ್ರೋ ಸೇವೆ ವ್ಯತ್ಯಯ..
ಬೆಂಗಳೂರು, ಜುಲೈ 05: ಬೆಂಗಳೂರು ಮೆಟ್ರೋ ರೈಲಿನ ಅತೀ ಉದ್ದದ ಮಾರ್ಗವಾಗಿರುವ ನೇರಳೆ ಮಾರ್ಗದಲ್ಲಿ ಸಂಚರಿಸುವ ಪ್ರಯಾಣಿಕರಿಗೆ ಕಹಿ ಸುದ್ದಿಯೊಂದು ಸಿಕ್ಕಿದೆ. ಈ ಮಾರ್ಗದಲ್ಲಿ ಮೆಟ್ರೋ ಸಂಚಾರದಲ್ಲಿ ಜುಲೈ 6ರಂದು ವ್ಯತ್ಯಯವಾಗಲಿದೆ ಎಂದು ಬೆಂಗಳೂರು ಮೆಟ್ರೋ ರೈಲು ನಿಗಮ (BMRCL) ಮಾಹಿತಿ ನೀಡಿದೆ. ಭಾನುವಾರ ಬೆಳಗ್ಗೆ ಓಡಾಡುವವರು ಈ ಸುದ್ದಿ ಗಮನಿಸಬೇಕು.
ಬೆಂಗಳೂರು ಮೆಟ್ರೋ ರೈಲು ನಿಗಮ (BMRCL) ವತಿಯಿಂದ ನಿರ್ವಹಣಾ ಕಾಮಗಾರಿ ನಡೆಯುತ್ತಿದೆ. ಜುಲೈ 06 ರಂದು ಭಾನುವಾರ ಬೆಳಗ್ಗೆ 7:00 ರಿಂದ 8:00ರ ಒಂದು ಗಂಟೆಯ ಅವಧಿಗೆ ಸ್ವಾಮಿ ವಿವೇಕಾನಂದ ಮೆಟ್ರೋ ನಿಲ್ದಾಣ ಮತ್ತು ಬೈಯಪ್ಪನಹಳ್ಳಿ ಮೆಟ್ರೋ ನಿಲ್ದಾಣದ ನಡುವಿನ ನೇರಳೆ ಮಾರ್ಗದಲ್ಲಿ ಅಗತ್ಯ ನಿರ್ವಹಣಾ ಕಾರ್ಯಗಳನ್ನು ಕೈಗೊಳ್ಳಲಾಗುತ್ತಿದೆ.

ಈ ಕಾಮಗಾರಿಗಳನ್ನು ನಿರ್ವಹಿಸಲು, ಇಂದಿರಾನಗರ ಮತ್ತು ಬೈಯಪ್ಪನಹಳ್ಳಿ ನಿಲ್ದಾಣಗಳ ನಡುವೆ ಮೆಟ್ರೋ ರೈಲು ಸೇವೆಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗುತ್ತದೆ. ಈ ಮಾರ್ಗದಲ್ಲಿ ಬೆಳಗ್ಗೆ 08:00 ರಿಂದ ಸಾಮಾನ್ಯ ಸೇವೆಗಳನ್ನು ಪುನರಾರಂಭಿಸುತ್ತದೆ ಎಂದು BMRCL ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಇತರ ಎಲ್ಲಾ ಮಾರ್ಗಗಳಲ್ಲಿ ಮೆಟ್ರೋ ಸೇವೆಗಳು ಯಾವುದೇ ಅಡೆತಡೆಯಿಲ್ಲದೆ ಕಾರ್ಯನಿರ್ವಹಿಸಲಿವೆ. ಚಲ್ಲಘಟ್ಟದಿಂದ ಇಂದಿರಾನಗರ, ಬೈಯಪ್ಪನಹಳ್ಳಿಯಿಂದ ವೈಟ್ ಫೀಲ್ಡ್ (ಕಾಡುಗೋಡಿ), ಮತ್ತು ಮಾದಾವರದಿಂದ ರೇಷ್ಮೆ ಸಂಸ್ಥೆ ವರೆಗಿನ ಸೇವೆಗಳು ಬೆಳಗ್ಗೆ 07:00 ಗಂಟೆಯಿಂದ ಭಾನುವಾರದ ನಿಗದಿತ ಸಮಯದಂತೆ ಕಾರ್ಯ ನಿರ್ವಹಿಸಲಿದೆ ಎಂದು ತಿಳಿಸಿದರು.
ಪ್ರಯಾಣಿಕರು ಈ ತಾತ್ಕಾಲಿಕ ಬದಲಾವಣೆಯನ್ನು ಗಮನಿಸಿ ಅದಕ್ಕೆ ಅನುಗುಣವಾಗಿ ತಮ್ಮ ಪ್ರಯಾಣವನ್ನು ಯೋಜಿಸುವಂತೆ ವಿನಂತಿಸಲಾಗಿದೆ. ಇದರಿಂದ ಉಂಟಾಗುವ ಅನಾನುಕೂಲತೆಗೆ ಬಿಎಂಆರ್ಸಿಎಲ್ ವಿಷಾದಿಸುತ್ತದೆ ಮತ್ತು ಸಾರ್ವಜನಿಕ ಸಹಕಾರವನ್ನು ಕೋರುತ್ತದೆ.
ನಮ್ಮ ಮೆಟ್ರೋ ಹಸಿರು ಮಾರ್ಗವಾದ ರೇಷ್ಮೆ ಸಂಸ್ಥೆ ಹಾಗೂ ಮಾದಾವರವರೆಗಿನ ಮೆಟ್ರೋ ಸಂಚಾರದಲ್ಲಿ ಯಾವುದೇ ಬದಲಾವಣೆ ಆಗಿಲ್ಲ. ಎಂದಿನಂತೆ ಸಂಚಾರ ಇರುತ್ತದೆ ಎಂದು ಪ್ರಕಟಣೆಯಲ್ಲಿ ವಿವರಿಸಲಾಗಿದೆ.












Click it and Unblock the Notifications