ಕಸ, ಗುಂಡಿ, ಟ್ರಾಫಿಕ್ ಮುಕ್ತ ಮುಕ್ತ ಮುಕ್ತ ನಗರಕ್ಕೆ ರೆಡ್ಡಿ ಸೂತ್ರ
ಬೆಂಗಳೂರು, ಸೆಪ್ಟೆಂಬರ್. 24: "ಬೆಂಗಳೂರನ್ನು ರಸ್ತೆ ಗುಂಡಿ ಮುಕ್ತ ನಗರವನ್ನಾಗಿ ಮಾಡುತ್ತೇವೆ, ಪ್ರತಿ ಸೋಮವಾರ ಎಲ್ಲಾ ಇಲಾಖೆಗಳ ಸಭೆ ಕರೆದು ಜನರಿಗೆ ತೊಂದರೆಯಾಗದಂತೆ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳುತ್ತೇವೆ. ಬಿಬಿಎಂಪಿ ಕೈ ತಪ್ಪಿ ಹೋಗಿರುವ ಹಳೆಯ ಆಸ್ತಿಯನ್ನು ಮರಳಿ ಪಡೆಯುತ್ತೇವೆ. ಬಿಬಿಎಂಪಿ ಕಾನೂನು ವಿಭಾಗವನ್ನು ಪುನರ್ ಸಂಘಟನೆ ಮಾಡುತ್ತೇವೆ" ಈ ರೀತಿ ಭರವಸೆ ನೀಡಿದ್ದು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ನೂತನ ಮೇಯರ್ ಮಂಜುನಾಥ ರೆಡ್ಡಿ.
ಬೆಂಗಳೂರಿನ ಪ್ರೆಸ್ ಕ್ಲಬ್ ನಲ್ಲಿ ವರದಿಗಾರರ ಒಕ್ಕೂಟ ಗುರುವಾರ ಆಯೋಜಿಸಿದ್ದ ಮಾಧ್ಯಮ ಸಂವಾದದಲ್ಲಿ ಹಲವಾರು ವಿಚಾರಗಳನ್ನು ಮೇಯರ್ ತೆರೆದಿಟ್ಟರು. ಬಿಬಿಎಂಪಿ ಬೊಕ್ಕಸ ಖಾಲಿಯಾಗಿದ್ದು ಮೊದಲು ಬಂಡವಾಳ ಕ್ರೋಢಿಕರಣ ಮಾಡಬೇಕಿದೆ ಎಂದು ಹೇಳಿದರು. ಬೆಂಗಳೂರು ನಗರದ ಸದ್ಯದ ಸ್ಥಿತಿ ಸುಧಾರಣೆಗೆ ಪತ್ರಕರ್ತರು ನೀಡಿದ ಸಲಹೆಗಳನ್ನು ಮುಕ್ತವಾಗಿ ಸ್ವೀಕರಿಸಿದರು.[ನೋಡಿ ನಮ್ಮ ಬೆಂಗಳೂರು ಹೇಗಿದೆ?]
ಕಸ, ರಸ್ತೆ ಗುಂಡಿ, ಫುಟ್ ಪಾತ್ ವ್ಯಾಪಾರ, ಫ್ಲೆಕ್ಸ್ ಅಳವಡಿಕೆ, ಟ್ರಾಫಿಕ್, ಕಾನೂನು ತೊಡಕುಗಳನ್ನು ಪರಿಹರಿಸಲು ತಕ್ಷಣ ಕ್ರಮ ತೆಗೆದುಕೊಳ್ಳುತ್ತೇನೆ ಎಂದು ಭರವಸೆ ನೀಡಿದರು. ಕೈ ತಪ್ಪಿ ಹೋಗುತ್ತಿರುವ ಬೆಂಗಳೂರಿನ ಮಾರುಕಟ್ಟೆಗಳನ್ನು ಮತ್ತೆ ಸುಪರ್ದಿಗೆ ತೆಗೆದುಕೊಂಡು ಆದಾಯ ಹೆಚ್ಚು ಮಾಡಿಕೊಳ್ಳುತ್ತೇವೆ ಎಂದು ತಿಳಿಸಿದರು.

ದೇವಾಲಯ ತೆರವು
ಸಾರ್ವಜನಿಕ ರಸ್ತೆಯಲ್ಲಿ ದೇವಾಲಯ, ಮಸೀದಿಗಳಿದೆ. ಇವುಗಳನ್ನು ಯಾರ ಮನಸ್ಸಿಗೂ ನೋವಾಗದಂತೆ ಎಚ್ಚರಿಕೆ ವಹಿಸಿ ತೆರವು ಮಾಡಲಾಗುತ್ತದೆ. ಈ ಮೂಲಕ ಸುಗಮ ಸಂಚಾರಕ್ಕೆ ನಮ್ಮ ಮೊದಲ ಆದ್ಯತೆ.

ಬೀದಿ ನಾಯಿ ಸಮಸ್ಯೆ
ಬೆಂಗಳೂರನ್ನು ಬಹುವಾಗಿ ಕಾಡುತ್ತಿರುವ ಬೀದಿ ನಾಯಿ ಸಮಸ್ಯೆಗೆ ಸಂತಾನಹರಣ ಚಿಕಿತ್ಸೆ ಮಾಡುವುದೇ ಪರಿಹಾರ. ಅವುಗಳನ್ನು ಕೊಲ್ಲಲು ನ್ಯಾಯಾಲಯದ ಆದೇಶ ಅಡ್ಡಿ ಬರುತ್ತದೆ. ಆ ರೀತಿ ಮಾಡುವುದು ಸರಿಯಲ್ಲ.

ಹೊಸ ಕಾನೂನು ಸಹಕಾರ ಕಮೀಟಿ
ಬಿಬಿಎಂಪಿಗೆ ಸಂಬಂಧಿಸಿದ ಕಾನೂನು ಕಮೀಟಿ ಸರಿಯಾಗಿ ಕೆಲಸ ಮಾಡುತ್ತಿಲ್ಲ ಎಂಬ ದೂರು ಕೇಳಿಬಂದಿದೆ. ವಕೀಲರು ದೂರುದಾರೊಂದಿಗೆ ಶಾಮೀಲಾಗಿ ಬಿಬಿಎಂಪಿಗೆ ಹಣ ಮತ್ತು ಆಸ್ತಿಯ ನಷ್ಟ ಮಾಡುತ್ತಿದ್ದಾರೆ ಎಂಬ ದೂರು ಇದೆ. ಇದನ್ನು ಬಗೆಹರಿಸಲು ಹೊಸ ಕಮೀಟಿ ನೇಮಕ ಮಾಡಿಕೊಳ್ಳಲಾಗುವುದು.

ಜನರು ನೇರವಾಗಿ ಭೇಟಿ ಮಾಡಬಹುದು
ಜನರು ನನ್ನನ್ನು ನೇರವಾಗಿ ಭೇಟಿ ಮಾಡಬಹುದು. ಯಾವ ಕಾರ್ಪೋರೇಟರ್ ಅಥವಾ ರಾಜಕೀಯ ಮುಖಂಡರ ಶಿಪಾರಸು ಪತ್ರವೂ ಬೇಕಿಲ್ಲ. ಸಮಸ್ಯೆ ಪರಿಹಾರಕ್ಕೆ ನೇರವಾಗಿ ನನ್ನ ಬಳಿಗೆ ಬನ್ನಿ.

ನೋಂದಣಿ ಪ್ರಕ್ರಿಯೆ ಸರಿ ಮಾಡ್ತೆನೆ
ಬಿಬಿಎಂಪಿಯಿಂದ ಜಾಗ ಬಾಡಿಗೆ ಪಡೆಯುವವರ ನೋಂದಣಿ ಪ್ರಕ್ರಿಯೆ ಸರಿಇಲ್ಲ ಎಂಬುದನ್ನು ಒಪ್ಪಿಕೊಳ್ಳುತ್ತೇನೆ . 100 ರು. ಛಾಪಾ ಕಾಗದದಲ್ಲಿ ಎಲ್ಲ ವ್ಯವಹಾರ ನಡೆಯುತ್ತಿದೆ. ಇದನ್ನು ಬದಲಾಯಿಸಿ ಸೂಕ್ತ ನೋಂದಣಿ ವ್ಯವಸ್ಥೆ ಜಾರಿ ಮಾಡುತ್ತೇನೆ.

ರಾಜಕಾಲುವೆ ಒತ್ತುವರಿ ತೆರವು
ಬೆಂಗಳೂರಿನ ರಾಜಕಾಲುವೆಯನ್ನು ಒತ್ತುವರಿ ಮಾಡಿಕೊಂಡವರನ್ನು ಹಂತ ಹಂತವಾಗಿ ತೆರವು ಮಾಡಿಸುತ್ತೇನೆ. ಇಲ್ಲಿ ಯಾವ ಪ್ರಭಾವ, ಪಕ್ಷ ಎಂಬುದಕ್ಕೆ ನಾವು ಬಗ್ಗುವುದಿಲ್ಲ.












Click it and Unblock the Notifications