Leopard in Bengaluru: ಚಿರತೆ ಬಂತು ಚಿರತೆ... ಆನೇಕಲ್ನಲ್ಲಿ ಮತ್ತೆ ಚಿರತೆ ಪ್ರತ್ಯಕ್ಷ: ಚುರುಕುಗೊಂಡ ಶೋಧಕಾರ್ಯ!
ಬೆಂಗಳೂರು ನವೆಂಬರ್ 1: ಬೆಂಗಳೂರಿನ ಆನೇಕಲ್ ಭಾಗದಲ್ಲಿ ಮತ್ತೆ ಚಿರತೆ ಪ್ರತ್ಯಕ್ಷವಾಗಿದ್ದು ಸ್ಥಳೀಯರಲ್ಲಿ ಆತಂಕ ಹೆಚ್ಚಿಸಿದೆ. ಆನೇಕಲ್ನ ಕೃಷ್ಣಾರೆಡ್ಡಿ ಕೈಗಾರಿಕಾ ಪ್ರದೇಶದಲ್ಲಿ ಚಿರತೆ ಕಾಣಿಸಿಕೊಂಡ ದೃಶ್ಯ ಮೊಬೈಲ್ನಲ್ಲಿ ಸೆರೆಯಾಗಿದೆ. ನಿನ್ನೆ ರಾತ್ರಿ 11 ಗಂಟೆಗೆ ಚಿರತೆ ಪ್ರತ್ಯಕ್ಷವಾಗಿದೆ.
ಕೂಡ್ಲಿ ಬಳಿಯ ಕೃಷ್ಣಾರೆಡ್ಡಿ ಬಡಾವಣೆಯಲ್ಲಿ ಚಿರತೆ ಕಾಪೌಂಡ್ ಹಾರಿ ಹೋಗಿರುವುದು ಕಂಡುಬಂದಿದೆ. ಸ್ಥಳೀಯರು ಈ ದೃಶ್ಯವನ್ನು ಮೊಬೈಲ್ನಲ್ಲಿ ಸೆರೆ ಹಿಡಿದು ಅರಣ್ಯ ಅಧಿಕಾರಿಗಳಿಗೆ ನೀಡಿದ್ದಾರೆ. ಹೀಗಾಗಿ ಇಂದು ಮತ್ತೆ ಚಿರತೆ ಸೆರೆಗಾಗಿ ಥರ್ಮಲ್ ಡ್ರೋನ್ ಮೂಲಕ ಅಧಿಕಾರಿಗಳು ಕಾರ್ಯಚರಣೆ ನಡೆಸಿದ್ದಾರೆ.

ಪಾಳು ಬಿದ್ದ ಕಟ್ಟಡದ ಬಳಿ ಚಿರತೆ ಕಾಪೌಂಡ್ ಹಾರಿರುವುದು ಗಮನದಲ್ಲಿಟ್ಟುಕೊಂಡು ಅರಣ್ಯಾಧಿಕಾರಿಗಳು ಸ್ಥಳದಲ್ಲಿ ಶೋಧಕಾರ್ಯ ಆರಂಭಿಸಿದ್ದಾರೆ. ಚಿರತೆ ಸೆರೆಗಾಗಿ ಎಂಟು ಜನರ ನುರಿತ ವಿಶೇಷ ತಂಡ ಮೈಸೂರಿನಿಂದ ಬೆಂಗಳೂರಿಗೆ ಬಂದಿದೆ. ಹುಣಸೂರು ವನ್ಯಜೀವಿ ವಿಭಾಗ ತಂಡದೊಂದಿಗೆ ವೈದ್ಯರು, ಇನ್ನಿತರ ಅಧಿಕಾರಿಗಳು ಚಿರತೆ ಹಿಡಿಯಲು ಬೇಕಾದ ಅಗತ್ಯ ಸಾಮಾಗ್ರಿಗಳೊಂದಿಗೆ ಶೋಧಕಾರ್ಯ ಶುರುಮಾಡಿದ್ದಾರೆ.
ಬಯಲು ಪ್ರದೇಶದಲ್ಲಿ ಚಿರತೆ ಹಿಡಿಯುವುದು ಕಷ್ಟಕರವಾಗಿದೆ. ಚಿರತೆ ಸೆರೆ ಹಿಡಿಯುವವರೆಗೂ ಸ್ಥಳೀಯರಿಗೆ ಏಕಾಂಗಿಯಾಗಿ ಓಡಾಡದಂತೆ ಹಾಗೂ ಜಾಗರೂಕರಾಗಿರುವಂತೆ ಮನವಿ ಮಾಡಲಾಗಿದೆ. ಆದರೂ ಚಿರತೆ ಇರುವ ಸ್ಥಳವನ್ನು ಅಧಿಕಾರಿಗಳು ಪತ್ತೆ ಮಾಡುತ್ತಿದ್ದಾರೆ.

ಆನೇಕಲ್ನ ಕೂಡ್ಲು ಗೇಟ್ ಬಳಿ ಅ.29ರ ರಾತ್ರಿಯಿಂದ ಕಾಣಿಸಿಕೊಂಡಿರುವ ಚಿರತೆ, ಅ. 30ರಂದು ಒಂದು ಅಪಾರ್ಟ್ಮೆಂಟ್ನೊಳಕ್ಕೆ ನುಗ್ಗಿತ್ತು. ಫಸ್ಟ್ ಫ್ಲೋರ್ವರೆಗೂ ಹೋಗಿ ತಿರುಗಾಟ ನಡೆಸಿದೆ. ಕೂಡ್ಲು ಗೇಟ್ ಬಳಿಯ ಸಲಾರ್ ಪುರಿಯ ಸತ್ವ ಕ್ಯಾಡೆನ್ಜಾ ಅಪಾರ್ಟ್ಮೆಂಟ್ನೊಳಗೆ ಕಾಣಿಸಿಕೊಂಡ ಚಿರತೆ ಪಾರ್ಕಿಂಗ್ ಲಾಟ್ನಿಂದ ಪ್ರವೇಶಿಸಿ ಮೊದಲ ಮಹಡಿಯವರೆಗೆ ಸಂಚಾರ ನಡೆಸಿದೆ. ಸೋಮವಾರ ರಾತ್ರಿ ಕೂಡಾ ಕೂಡ್ಲು ಬಳಿಯ ಐಟಿ ಟೆಕ್ ಪಾರ್ಕ್ ಬಳಿ ಚಿರತೆ ಕಾಣಿಸಿಕೊಂಡಿತ್ತು.
ವೈಟ್ಫೀಲ್ಡ್-
ಕೂಡ್ಲುಗೇಟ್ ಪ್ರಾಂತ್ಯದಲ್ಲಿ ಓಡಾಡಿಕೊಂಡಿದ್ದು, ರಾತ್ರಿ ಓಡಾಟ ನಡೆಸಿರುವುದು ಕೆಲವು ಸಿಸಿ ಟಿವಿಗಳ ಮೂಲಕ ಗೊತ್ತಾಗಿತ್ತು. ಚಿರತೆ ಹಿಡಿಯಲು ಮುಂದಾಗಿರುವ ಅರಣ್ಯಾಧಿಕಾರಿಗಳು ರಾತ್ರಿಯೆಲ್ಲ ಅನೌನ್ಸ್ಮೆಂಟ್ ಮಾಡುತ್ತಿದ್ದು, ನಾಗರಿಕರು ಯಾರೂ ಹೊರಗೆ ಬಾರದಂತೆ ಎಚ್ಚರಿಕೆ ವಹಿಸಬೇಕೆಂದು ಪ್ರಕಟಿಸಿದ್ದಾರೆ. ಅಧಿಕಾರಿಗಳು ಅಪಾರ್ಟ್ಮೆಂಟ್ಗಳಿಗೆ ತೆರಳಿ ಸೆಕ್ಯೂರಿಟಿಗಳಿಗೆ ಹಾಗೂ ನಿವಾಸಿಗಳಿಗೆ ಜಾಗೃತಿ ಮೂಡಿಸುತ್ತಿದ್ದಾರೆ. ಚಿರತೆ ಓಡಾಟ ಹಿನ್ನೆಲೆಯಲ್ಲಿ ಎಚ್ಚರಿಕೆಯಿಂದಿರಲು, ಒಬ್ಬೊಬ್ಬರೇ ಓಡಾಡದಂತೆ ನಿವಾಸಿಗಳಿಗೆ ಸೂಚನೆ ನೀಡಿದ್ದಾರೆ. ರಾತ್ರಿ ಚಿರತೆ ಕಾಣಿಸಿಕೊಂಡರೆ ಕೂಡಲೇ ಅರಣ್ಯ ಅಧಿಕಾರಿಗಳಿಗೆ ಮಾಹಿತಿ ನೀಡುವಂತೆ ಸೂಚಿಸಿದ್ದಾರೆ.












Click it and Unblock the Notifications