ಕಾಡು ಬಿಟ್ಟು ನಾಡಿಗೆ ಚಿರತೆ ನುಗ್ಗಲು ಕಾರಣವೇನು?
ಬೆಂಗಳೂರು, ಫೆಬ್ರವರಿ, 11: ಕಾಡು ಪ್ರಾಣಿಗಳು ನಾಡಿಗೆ ದಾಂಗುಡಿ ಇಡುತ್ತಿರುವುದಕ್ಕೆ ಕಾರಣಗಳು ಹಲವಾರು. ಇದು ನಾವೇ ತಂದುಕೊಂಡ ಆತಂಕ. ಬೆಂಗಳೂರಿನ ಪೂರ್ವ ವಲಯದಲ್ಲಿ ಚಿರತೆ ಪ್ರತ್ಯಕ್ಷ, ಚಾಮರಾಜನಗರದ ಹಳ್ಳಿಗಳಿಗೆ ದಾಳಿ ಇಟ್ಟ ಆನೆ ಇವು ಪ್ರತಿದಿನದ ಸುದ್ದಿಯಾಗಿದೆ.
ಅಷ್ಟಕ್ಕೂ ಈ ಕಾಡು ಪ್ರಾಣಿಗಳು ನಾಡಿಗೆ ದಾಳಿ ಇಡುತ್ತಿರುವುದು ಯಾಕೆ? ಒಂದೇ ಶಬ್ದದ ಉತ್ತರ ಅರಣ್ಯ ನಾಶ. ಇದು ನಾವೇ ತಂದುಕೊಂಡ ಆಪತ್ತು. ಅವುಗಳ ಆಹಾರ ಮತ್ತು ವಾಸಸ್ಥಾನದ ಮೇಲೆ ದಾಳಿ ಮಾಡಿದ ನಾವು ಈಗ ಇದನ್ನು ಅನುಭವಿಸಲೇಬೇಕು.[ವಿಬ್ ಗಯಾರ್ ಶಾಲೆಗೆ ನುಗ್ಗಿದ್ದ ಚಿರತೆ ಸೆರೆಸಿಕ್ಕಿದ್ದು ಹೀಗೆ]
ಅಷ್ಟಕ್ಕೂ ವರ್ತೂರಿನ ವಿಬ್ ಗಯಾರ್ ಶಾಲೆಗೆ ಚಿರತೆ ನುಗ್ಗಿದ್ದು ಯಾಕೆ? ಈಗ ಮತ್ತೆರಡು ಚಿರತೆಗಳು ಕಂಡುಬಂದಿದ್ದು ಯಾಕೆ? ಎಂಬುದಕ್ಕೆ ಉತ್ತರ ಹುಡುಕಿ ಹೊರಟಾಗ ಅನೇಕ ಅಂಶಗಳು ಕಣ್ಣಿಗೆ ರಾಚುತ್ತವೆ. ಇವುಗಳನ್ನು ಒಂದೊಂದಾಗಿ ನೋಡಿದ ಮೇಲೆ ತಪ್ಪು ನಮ್ಮದೋ ಅಥವಾ ಕಾಡು ಪ್ರಾಣಿಗಳದ್ದೋ ನೀವೇ ತೀರ್ಮಾನಿಸಿ.....

ಕಸದ ರಾಶಿ
ವರ್ತೂರು ಮಹಾನಗರದ ಕಸ ವಿಲೇವಾರಿ ಕೇಂದ್ರವಾಗಿ ಬದಲಾಗಿರುವುದು ಗೊತ್ತೇ ಇದೆ. ಇದನ್ನು ವಿರೋಧಿಸಿ ಸ್ಥಳೀಯ ನಿವಾಸಿಗಳು ನಿರಂತರ ಪ್ರತಿಭಟನೆಯನ್ನು ನಡೆಸಿದ್ದಾರೆ.

ನಾಯಿಗಳ ಹುಡುಕಿ ಬಂದವು
ವರ್ತೂರು ಹೊರವಲಯದ ಕೃಷ್ಣಗಿರಿ ಅರಣ್ಯದಿಂದ ಚಿರತೆಗಳು ಬಂದಿರುವ ಸಾಧ್ಯತೆ ಹೆಚ್ಚಾಗಿದೆ. ಕಸದ ರಾಶಿ ಹೆಚ್ಚಿದ್ದರಿಂದ ಬೀದಿ ನಾಯಿಗಳು ಹೆಚ್ಚಿದವು. ನಾಯಿಗಳನ್ನು ತಿನ್ನಲು ಚಿರತೆಗಳು ಕಾಡು ಬಿಟ್ಟು ನಾಡಿಗೆ ಆಗಮಿಸಿದವು.

ವನ್ಯಜೀವಿ-ಮಾನವ ಸಂಘರ್ಷ
ಬೆಂಗಳೂರು ಸೇರಿ ರಾಜ್ಯದ ವಿವಿಧೆಡೆ ಅರಣ್ಯ ಪ್ರದೇಶ ಕಣ್ಮರೆಯಾಗುತ್ತಿದ್ದಂತೆ ವನ್ಯಜೀವಿಗಳು ಹಾಗೂ ಮಾನವ ನಡುವಿನ ಸಂಘರ್ಷ ಹೆಚ್ಚುತ್ತಿದೆ. ಪ್ರತಿ ವರ್ಷ ಇಂಥ 300 ಘಟನೆಗಳು ಸಂಭವಿಸುತ್ತಿವೆ. ಮಾನವನ ಅತಿಕ್ರಮ ಪ್ರವೇಶವೇ ಇಂಥ ಘಟನೆಗಳಿಗೆ ಕಾರಣವಾಗುತ್ತಿದೆ.

ಸುರಕ್ಷತಾ ವಲಯ ಇಲ್ಲ
ತಲೆ ಎತ್ತಿರುವ ಕಾಂಕ್ರೀಟ್ ಅರಣ್ಯ ಪ್ರದೇಶ ವನ್ಯಜೀವಿಗಳ ಅಸ್ತಿತ್ವಕ್ಕೆ ಧಕ್ಕೆ ಇಟ್ಟಿವೆ. ವನ್ಯಜೀವಿಗಳ ಸಂರಕ್ಷಣೆ ನಿಟ್ಟಿನಲ್ಲಿ ಸುರಕ್ಷತಾ ವಲಯ ಸ್ಥಾಪಿಸಿದರೆ ಇಂಥ ಘಟನೆಗಳಿಂದ ರಕ್ಷಣೆ ಪಡೆಯಬಹುದು ಎಂದು ವನ್ಯಜೀವಿ ತಜ್ಞರು ಹೇಳುತ್ತಾರೆ.

ಕೇಂದ್ರ ಸರ್ಕಾರ ಮೊದಲೇ ಹೇಳಿತ್ತು
ಕೇಂದ್ರ ಸರ್ಕಾರ 2011ರಲ್ಲಿ ಚಿರತೆಗಳ ದಾಳಿ ತಪ್ಪಿಸಲು ಪ್ರಾಥಮಿಕ ಸ್ಪಂದನಾ ಹಾಗೂ ತ್ವರಿತ ಕಾರ್ಯಾಚರಣೆ ಪಡೆ ರಚಿಸುವಂತೆ ರಾಜ್ಯಕ್ಕೆ ಸೂಚಿಸಿತ್ತು. ಆದರೆ ಇದ್ಯಾವುದರ ಬಗ್ಗೆ ರಾಜ್ಯ ಸರ್ಕಾರ ಇಲ್ಲಿವರೆಗೆ ತಲೆ ಕೆಡಿಸಿಕೊಂಡಿಲ್ಲ.












Click it and Unblock the Notifications