OLX ನಲ್ಲಿ ಕಾರು ಮಾರಲು ಹೋದ ವ್ಯಕ್ತಿ ಕಾರು ಕಳೆದುಕೊಂಡಿದ್ದು ಹೇಗೆ ?
ಬೆಂಗಳೂರು ಸೆ. 15: ಹಳೇ ವಸ್ತುಗಳನ್ನು ಮಾರಾಟ ಮಾಡಲು ಜನರು ಇತ್ತೀಚೆಗೆ OLX ಜಾಲ ತಾಣದ ಮೊರೆ ಹೋಗುತ್ತಾರೆ. ಒಎಲ್ಎಕ್ಸ್ ನಲ್ಲಿ ವಸ್ತು ಮಾರಾಟ ಮಾಡುವರನ್ನೇ ಟಾರ್ಗೆಟ್ ಮಾಡಿ ವಂಚನೆ ಮಾಡುವ ದೊಡ್ಡ ಜಾಲ ಬೆಂಗಳೂರಿನಲ್ಲಿ ಹುಟ್ಟಿಕೊಂಡಿದೆ. ಒಎಲ್ಎಕ್ಸ್ ನಲ್ಲಿ ಕಾರು ಮಾರಲು ಹೋದ ವ್ಯಕ್ತಿಯ ಬಳಿ ಖದೀಮರು ಟ್ರಯಲ್ ನೋಡುವ ನೆಪದಲ್ಲಿ ಕಾರು ಕದ್ದು ಪರಾರಿಯಾಗಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಜಯನಗರದ ನಿವಾಸಿ ಅಜೀಜ್ ಎಂಬಾತ ತನ್ನ ಐ 20 ಕಾರು ಮಾರಲು ಮುಂದಾಗಿದ್ದ. ಸಾಮಾಜಿಕ ಜಾಲ ತಾಣ ಒಎಲ್ಎಕ್ಸ್ನಲ್ಲಿ ತನ್ನ ಹುಂಡೈ I-20 ಕಾರು ಮಾರುವ ಬಗ್ಗೆ ಜಾಹೀರಾತು ಹಾಕಿದ್ದ. ಇದನ್ನು ನೋಡಿ ಕರೆ ಮಾಡಿದ್ದ ವ್ಯಕ್ತಿಯೊಬ್ಬ, ತನ್ನ ಹೆಸರು ಜಗದೀಶ್, ನಿಮ್ಮ ಕಾರು ನನಗೆ ಇಷ್ಟವಾಗಿದೆ. ಓಕೆ ಎಂದರೆ ಹಣ ಕೊಟ್ಟು ಖರೀದಿ ಮಾಡುತ್ತೇನೆ ಎಂದು ತಿಳಿಸಿದ್ದ. ಇದನ್ನು ನಂಬಿದ್ದ ಅಜೀಜ್ ಕಾರನ್ನು ನೋಡಲು ಮನೆ ಸಮೀಪ ಬರುವಂತೆ ಹೇಳಿದ್ದ.
ಜಯನಗರ ನಾಲ್ಕನೇ ಬ್ಲಾಕ್ಗೆ ಬರುವಂತೆ ಅಜೀಜ್ ಹೇಳಿದ್ದ. ಅಜೀಜ್ ಹೇಳಿದಂತೆ ಬಂದಿದ್ದ ಭೂಪನೊಬ್ಬ, ಹುಂಡೈ ಐ 20 ಕಾರು ನೋಡಿ ತುಂಬಾ ಚೆನ್ನಾಗಿದೆ ಎಂದು ಹೊಗಳಿದ್ದಾನೆ. ಅಮೇಲೆ ಕಾರಿನ ಬೆಲೆಯ ಬಗ್ಗೆ ಐದು ನಿಮಿಷ ಮಾತುಕತೆ ನಡೆಸಿದ್ದಾರೆ. ಕಾರಿನ ಬೆಲೆ ಎಷ್ಟು ಎಂದು ಕೇಳಿದಾಗ, 3.50 ಲಕ್ಷ ರೂ. ನೀಡುವಂತೆ ಅಜೀಜ್ ಹೇಳಿದ್ದಾನೆ. ಮುಂಗಡ ಹಣ ಒಂದು ಸಾವಿರ ರೂ. ನೀಡಿದ ಕಳ್ಳ, ಈ ವಾಹನದ ದಾಖಲೆಗಳನ್ನು ನೀಡುವಂತೆ ಕೇಳಿದ್ದಾನೆ. ಕಾರಿನ ದಾಖಲೆಗಳನ್ನು ತೆಗೆದುಕೊಂಡು ಹೋಗಲು ಮನೆಯೊಳಗೆ ಹೋಗುತ್ತಿದ್ದಂತೆ ಟ್ರಯಲ್ ನೋಡುವ ನೆಪದಲ್ಲಿ ಕಾರನ್ನು ಕದ್ದು ಪರಾರಿಯಾಗಿದ್ದಾನೆ.

ಮನೆಯಲ್ಲಿ ದಾಖಲೆ ತೆಗೆದುಕೊಂಡು ಬರುವಷ್ಟರಲ್ಲಿ ಕಾರು ಮತ್ತು ಖರೀದಿ ಮಾಡಲು ಬಂದಿದ್ದ ವ್ಯಕ್ತಿ ನಾಪತ್ತೆಯಾಗಿದ್ದಾರೆ. ಆದರೆ ಕಾರನ್ನು ಕದ್ದು ಪರಾರಿಯಾಗುತ್ತಿರುವ ದೃಶ್ಯ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಸುಮಾರು ಒಂದು ತಾಸು ನೋಡಿದರೂ ಆ ವ್ಯಕ್ತಿ ವಾಪಸು ಬಂದಿಲ್ಲ. ಮೊಬೈಲ್ ಗೆ ಕರೆ ಮಾಡಿದರೆ ಸ್ವಿಚ್ ಆಫ್ ಅಂತ ಬಂದಿದೆ. ಈ ಕುರಿತು ಅಜೀಜ್ ಪೊಲೀಸರಿಗೆ ದೂರು ನೀಡಿದ್ದಾರೆ. ಅಜೀಜ್ ನೀಡಿದ ದೂರಿನ ಮೇರೆಗೆ ಆರೋಪಿಯ ಪತ್ತೆಗೆ ಜಯನಗರ ಪೊಲೀಸರು ಬಲೆ ಬೀಸಿದ್ದಾರೆ.
ಒಎಲ್ಎಕ್ಸ್ನಲ್ಲಿ ಕಾರು ಮಾರು ಹೋದ ಟೆಕ್ಕಿ ಸಿಗಲೇ ಇಲ್ಲ: ಎಂಎನ್ ಸಿ ಕಂಪನಿಯಲ್ಲಿ ಟೆಕ್ಕಿಯಾಗಿದ್ದ ಅಜಿತಾಬ್ ಕುಮಾರ್ ಎಂಬಾತ ಒಎಲ್ಎಕ್ಸ್ನಲ್ಲಿ ಕಾರು ಮಾರಲು ಹೋಗಿ ನಾಪತ್ತೆಯಾದವ ಈವರೆಗೂ ಪತ್ತೆಯಾಗಿಲ್ಲ. 2017 ರಲ್ಲಿ ತನ್ನ ಸಿಯಾಜ್ ಕಾರು ಮಾರಾಟ ಮಾಡಿ ಕೋಲ್ಕತಾ ಐಐಎಂನಲ್ಲಿ ಎಂಬಿಎ ಪದವಿ ಪಡೆಯಲು ಮುಂದಾಗಿದ್ದ. ಹಣ ಹೊಂದಿಸಲು ತನ್ನ ಹೊಸ ಮಾರುತಿ ಸಿಯಾಜ್ ಕಾರನ್ನು ಮಾರುವುದಾಗಿ ಒಎಲ್ಎಕ್ಸ್ ನಲ್ಲಿ ಜಾಹೀರಾತು ಹಾಕಿದ್ದ. ಅದನ್ನು ನೋಡಿ ವ್ಯಕ್ತಿಯೊಬ್ಬ ಕರೆ ಮಾಡಿದ್ದ. ವೈಟ್ ಫೀಲ್ಡ್ ನ ಸಮೀಪ ನೆಲೆಸಿದ್ದ ಅಜಿತಾಬ್ ತನ್ನ ಕಾರನ್ನು ತೆಗೆದುಕೊಂಡು ಮಾರಲು ಹೋದವನು ನಾಲ್ಕು ವರ್ಷ ಕಳೆದರೂ ವಾಪಸು ಸಿಗಲಿಲ್ಲ.
ಅಜಿತಾಬ್ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದ ರಾಜ್ಯ ಸರ್ಕಾರ ಸಿಐಡಿ ತನಿಖೆಗೆ ವಹಿಸಿತ್ತು. ಆದರೂ ಆತ ಪತ್ತೆಯಾಗಲಿಲ್ಲ.

ಕೊನೆಗೆ ಪೋಷಕರು ಹೈಕೋರ್ಟ್ ಮೊರೆ ಹೋಗಿ ಸಿಬಿಐ ತನಿಖೆಗೆ ಆಗ್ರಹಿಸಿದರು. ಹೈಕೋರ್ಟ್ ನಿರ್ದೇಶನ ಮೇರೆಗೆ ಅಜಿತಾಬ್ನನ್ನು ಪತ್ತೆ ಮಾಡುವಂತೆ ಸಿಬಿಐ ತನಿಖೆಗೆ ವಹಿಸಲಾಯಿತು. ಎರಡು ವರ್ಷ ತನಿಖೆ ಮಾಡಿದ ಸಿಬಿಐ ಬಿ ವರದಿ ಸಲ್ಲಿಸಿತು. ಅಜಿತಾಬ್ ಪತ್ತೆ ಮಾಡಲು ಸಾಧ್ಯವಾಗಲಿಲ್ಲ!
ಆತ ಜೀವಂತ ಇರುವುದೇ ಅನುಮಾನ: ಕಾರನ್ನು ಕದಿಯುವ ಉದ್ದೇಶದಿಂದ ಅಜಿತಾಬ್ನನ್ನು ಕರೆಸಿಕೊಂಡು ಕೊಲೆ ಮಾಡಿ ಕಾರು ಕಸಿದುಕೊಂಡು ಹೋಗಿರುವ ಶಂಕೆ ಪೊಲೀಸರು ವ್ಯಕ್ತಪಡಿಸಿದ್ದರು. ಒಎಲ್ ಎಕ್ಸ್ ನಲ್ಲಿ ಕಾರು ಮಾರಲು ಹೋದ ಟೆಕ್ಕಿ ಬದುಕೇ ದುರಂತದಲ್ಲಿ ಅಂತ್ಯವಾಯಿತು.

Recommended Video
ಒಎಲ್ಎಕ್ಸ್ ಜಾಹೀರಾತು ಮೇಲೆ ಕಿರಾತಕರ ಕಣ್ಣು: ಒಎಲ್ಎಕ್ಸ್ ಜಾಲ ತಾಣದಲ್ಲಿ ಹಳೇ ವಸ್ತುಗಳನ್ನು ಉತ್ತಮ ಬೆಲೆಗೆ ಮಾರಾಟ ಮಾಡಲು ಅವಕಾಶವಿದೆ. ಇದನ್ನು ಅರಿತ ಕಳ್ಳರು, ಬೈಕ್ ಮತ್ತು ಕಾರುಗಳನ್ನು ಮಾರಾಟ ಮಾಡುವರನ್ನು ಟಾರ್ಗೆಟ್ ಮಾಡಿ ಅವರ ವಾಹನ ಕದಿಯುವುದನ್ನು ಕರಗತ ಮಾಡಿಕೊಂಡಿದ್ದಾರೆ. ಹೀಗಾಗಿ ಸಾರ್ವಜನಿಕರು ತಮ್ಮ ವಸ್ತುಗಳನ್ನು ಮಾರಾಟ ಮಾಡಲು ಜಾಹೀರಾತು ಹಾಕುವರು ಎಚ್ಚರಿಕೆ ವಹಿಸಬೇಕು. ವಾಹನ, ಅಥವಾ ಯಾವುದೇ ವಸ್ತು ಕದಿಯುವ ಉದ್ದೇಶದಿಂದ ಒಎಲ್ಎಕ್ಸ್ ಜಾಹೀರಾತುದಾರರನ್ನೇ ಟಾರ್ಗೆಟ್ ಮಾಡುತ್ತಾರೆ. ಜನರು ಎಚ್ಚರಿಕೆಯಿಂದ ಇರಬೇಕು ಎಂದು ಪೊಲೀಸರು ಸಲಹೆ ಮಾಡಿದ್ದಾರೆ.












Click it and Unblock the Notifications