ವಿದ್ಯುತ್ ಪರಿಷ್ಕೃತ ಹೆಚ್ಚಿಸದಂತೆ ಹೋಟೆಲ್ ಮಾಲೀಕರ ಸಂಘ ಮನವಿ
ಬೆಂಗಳೂರು, ಸೆಪ್ಟಂಬರ್ 27: ರಾಜ್ಯದಲ್ಲಿ ಸತತವಾಗಿ ಹೆಚ್ಚಿಸಲಾದ ವಿದ್ಯುತ್ ದರವನ್ನು ಸದ್ಯಕ್ಕೆ ಜಾರಿಗೊಳಿಸದೆ ಮುಂದಿನ ಏಪ್ರಿಲ್ ತಿಂಗಳವರೆಗೆ ಮುಂದೂಡುವಂತೆ 'ಬೃಹತ್ ಬೆಂಗಳೂರು ಹೋಟೆಲುಗಳ ಸಂಘ' ರಾಜ್ಯ ಸರ್ಕಾರವನ್ನು ಆಗ್ರಹಿಸಿದೆ.
ಈ ಕುರಿತು ಮಾಧ್ಯಮ ಪ್ರಕಟಣೆ ಹೊರಡಿಸಿರುವ ಸಂಘದ ಅಧ್ಯಕ್ಷ ಪಿ.ಸಿ.ರಾವ್, "ಹೋಟೆಲ್ ಸೇರಿದಂತೆ ಇನ್ನಿತರ ಉದ್ಯಮಗಳು ಈಗಾಗಲೇ ಕೋವಿಡ್ ಸಂಕಷ್ಟದಿಂದ ಸಣ್ಣ ಮಟ್ಟಿಗೆ ಚೇತರಿಸಿಕೊಳ್ಳುತ್ತಿವೆ. ಇದರ ಬೆನ್ನಲ್ಲೇ ಒಂದರ ಮೇಲೊಂದರಂತೆ ತೆರಿಗೆ, ದರ ಹೆಚ್ಚಳದಿಂದ ಸಾಕಷ್ಟು ಆರ್ಥಿಕ ಸಮಸ್ಯೆ ಉಂಟಾಗುತ್ತಿದೆ. ಆದ್ದರಿಂದ ರಾಜ್ಯ ಸರ್ಕಾರ 2023ರ ಮಾರ್ಚ್ ಅಂತ್ಯದವರೆಗೆ ಅನ್ವಯವಾಗುವಂತೆ ವಿದ್ಯುತ್ ದರ ಪರಿಷ್ಕರಣೆ ಮಾಡಿ ಹೊರಡಿಸಿದ ಆದೇಶವನ್ನು ಸರ್ಕಾರ 2023ರ ಏಪ್ರಿಲ್ ವರೆಗೆ ಮುಂದೂಡಬೇಕು," ಎಂದು ಅವರು ಮನವಿ ಮಾಡಿಕೊಂಡಿದ್ದಾರೆ.
ಪ್ರಸಕ್ತ ವರ್ಷದಲ್ಲಿ ಎರಡು ಬಾರಿ ವಿದ್ಯುತ್ ದರವನ್ನು ಏರಿಕೆ ಮಾಡಿ ಸಂಬಂಧಿಸಿದ ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗವು ಆದೇಶಿಸಿದೆ. ಎರಡು ಬಾರಿ ಆದೇಶದಿಂದ ಒಟ್ಟು ಶೇ. 10ರಷ್ಟು ವಿದ್ಯುತ್ ದರ ಹೆಚ್ಚಾದಂತಾಗಿದೆ. ಈ ಹೆಚ್ಚಳವಾದ ವಿದ್ಯುತ್ ದರಕ್ಕೆ ಶೇ.9ರಷ್ಟು ತೆರಿಗೆ ಅನ್ವಯವಾಗಲಿದೆ. ಇದರಿಂದ ಹೋಟೆಲ್ ಉದ್ಯಮ ಸೇರಿದಂತೆ ಸಾರ್ವಜನಿಕಗೆ ಆರ್ಥಿಕ ಹೊರೆಯಾಗಲಿದೆ ಎಂದು ಹೇಳಿದರು.

ವಿದ್ಯುತ್ ತೆರಿಗೆ ಶೇ.4ಕ್ಕೆ ಇಳಿಸಲು ಮನವಿ
ಇದನ್ನು ಮನಗಂಡು ರಾಜ್ಯ ಸರ್ಕಾರ ಪ್ರಸಕ್ತ ಆದೇಶವನ್ನು ಮುಂದಿನ ವರ್ಷದ ಏಪ್ರಿಲ್ ವರಗೆ ಮುಂದೂಡಬೇಕು. ಹಾಲಿ ವಿದ್ಯುತ್ ತೆರಿಗೆ ಶೇ.9ಅನ್ನು ಶೇ.4ಕ್ಕೆ ಇಳಿಸಬೇಕು. ಟ್ರಾನ್ಸಮಿಷನ್ ಮತ್ತು ಸರಬರಾಜಿನಲ್ಲಿ ಆಗುವ ನಷ್ಟವನ್ನು ಕಡಿಮೆ ಮಾಡಬೇಕು. ರಾಜ್ಯ ಹಾಗೂ ಕೇಂದ್ರ ಸರ್ಕಾರದ ಇಲಾಖೆಗಳು ಪಾವತಿಸಬೇಕಾದ ಬಾಕಿ ವಿದ್ಯುತ್ ಮೊತ್ತವನ್ನು ಬಡ್ಡಿ ಸಮೇತ ಸಂಗ್ರಹಿಸಬೇಕು. ಈ ಮೂಲಕ ಗ್ರಾಹಕರಿಗೆ ಅನುಕೂಲ ಮಾಡಿಕೊಬೇಕು ಎಂದು ಅವರು ಕೋರಿದ್ದಾರೆ.
ಕಲ್ಲಿದ್ದಲು ಖರೀದಿ ವೆಚ್ಚ ಹೆಚ್ಚಾಗಿದ್ದರಿಂದ ಹೊಂದಾಣಿಕೆ ಶುಲ್ಕವನ್ನು ಪರಿಷ್ಕರಿಸಿ ಅಕ್ಟೋಬರ್ 1ರಿಂದ ಜಾರಿಗೆಬರುವಂತೆ ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗ ಆದೇಶಿಸಿತ್ತು. ಇದರಿಂದ ಬೆಂಗಳೂರು ಬೆಸ್ಕಾಂ ವ್ಯಾಪ್ತಿಯ ಗ್ರಾಹಕರು ಅಕ್ಟೋಬರ್ 1ರಿಂದ ಪ್ರತಿ ಯೂನಿಟ್ಗೆ 24ಪೈಸೆಗೆ ಬದಲಾಗಿ 43ಪೈಸೆ ಹಣ ಪಾವತಿಸಬೇಕಿದೆ. ಅಗತ್ಯ ವಸ್ತುಗಳ ದರ ಏರಿಕೆ, ಆಹಾರ ಪದಾರ್ಥಗಳ ಮೇಲಿನ ಹೇರಿಕೆ ಹಾಗೂ ಮುಂತಾದ ಕಾರಣದಿಂದ ತತ್ತರಿಸುವ ಉದ್ಯಮ, ಸಾರ್ವಜನಿಕರಿಗೆ ವಿದ್ಯುತ್ ದರ ಪರಿಷ್ಕರಣೆಯಿಂದ ಗಾಯದ ಮೇಲೆ ಬರೆ ಎಳೆಯಬೇಡಿ ಎಂದು 'ಬೆಂಗಳೂರು ಹೋಟೆಲುಗಳ ಸಂಘ ಮನವಿ ಮಾಡಿದೆ.












Click it and Unblock the Notifications