ಫಿಶ್ ಪ್ರಿಯರ ಹಸಿವು ನೀಗಿಸುವ ಮೀನಿಗೊಂದು ದಿನಾಚರಣೆ
ಬೆಂಗಳೂರು, ಜುಲೈ, 11: ಮನುಷ್ಯನಿಗಿಂತಲೂ ಹೆಚ್ಚಿನ ಇತಿಹಾಸ ಹೊಂದಿರುವ ಮತ್ಸ್ಯ ಸಂತತಿ ಉಳಿವು ಮತ್ತು ಸಂರಕ್ಷಣೆಗೂ ಒಂದು ದಿನವಿದೆ. ನಿಮ್ಮ ಬಾಯಿಗೆ ರುಚಿ ಹಚ್ಚಿಸುವ ಮೀನು ಖಾದ್ಯಗಳನ್ನು ತಯಾರು ಮಾಡಲು ಮೀನು ಒದಗಿಸುವ ಮೀನುಗಾರರಿಗೆ ಒಂದು ದಿನ ಬೇಡವೇ?
ಹೌದು.. ಕರ್ನಾಟಕ ಸರ್ಕಾರ ಜುಲೈ 12 ರಂದು ಮೀನುಗಾರರ ದಿನಾಚರಣೆ ಹಮ್ಮಿಕೊಂಡಿದೆ. ಹೆಬ್ಬಾಳದ ಪಶು ವೈದ್ಯಕೀಯ ಕಾಲೇಜಿನಲ್ಲಿ ಮೀನುಗಾರರ ದಿನಾಚರಣೆ ಬೆಳಗ್ಗೆ 9.30ಕ್ಕೆ ಆರಂಭವಾಗಲಿದೆ.[ನೀವಿದ್ದಲ್ಲೆ ಬರಲಿದೆ ರುಚಿ ರುಚಿ ಮೀನು ಖಾದ್ಯ]

ರಾಜ್ಯದ ಮೀನುಗಾರಿಕೆ ಸಚಿವ ಪ್ರಮೋದ್ ಮಧ್ವರಾಜ್ ಕಾರ್ಯಕ್ರಮ ಉದ್ಘಾಟನೆ ಮಾಡಲಿದ್ದಾರೆ. ಕೃಷಿ ಮತ್ತು ತೋಟಗಾರಿಕೆ ವಿಶ್ವ ವಿದ್ಯಾಲಯದ ವೈಸ್ ಛಾನ್ಸಲರ್ ಡಾ. ಸಿ ವಸುದೇವಪ್ಪ ಕಿರು ಹೊತ್ತಿಗೆಯನ್ನು ಬಿಡುಗಡೆ ಮಾಡಲಿದ್ದಾರೆ.
ದೇಶದ ಸಾಕಷ್ಟು ಜನರ ಹಸಿವು ನೀಗಿಸುತ್ತಿರುವ ಮೀನಿಗೆ ಮತ್ತು ಮೀನು ಕೃಷಿಕರಿಗೆ ಗೌರವ ಅರ್ಪಿಸಲು ದಿನಾಚರಣೆ ಮಾಡಲಾಗುತ್ತಿದೆ. ದಿನಾಚರಣೆ ನಂತರ ಭರಪೂರ ಮೀನು ಖಾದ್ಯ ಇದ್ದರೂ ಇರಬಹುದು ಬಿಡಿ!
ಅಮೂರ್ ಮೀನು ವಿತರಣೆ
1957ರಲ್ಲಿ ಆರಂಭಗೊಂಡ ಮೀನು ತಳಿ ಅಭಿವೃದ್ಧಿ ಇಂದಿಗೂ ಮುಂದುವರಿದಿದ್ದು, ಈ ಕಾರ್ಯಕ್ರಮದಲ್ಲಿ ಇತ್ತೀಚೆಗೆ ಅಭಿವೃದ್ಧಿಪಡಿಸಿರುವ ಅಮೂರ್ ಮೀನು ತಳಿಯ ಮರಿಗಳನ್ನು ರೈತರಿಗೆ ವಿತರಿಸುವ ಕಾರ್ಯಕ್ರಮವೂ ನಡೆಯಲಿದೆ.[ಕಾವೇರಿ ಪ್ರವಾಹದ ನೀರಲ್ಲಿ ಮೀನು ಹಿಡಿದೋನೇ ಜಾಣ]
ಇದು ವೈ ಬಸವರಾಜ್ ಕನಸು
ಮೀನುಗಾರಿಕೆ ಇಲಾಖೆ ಸಹಾಯಕ ಸಂಶೋಧನಾ ನಿರ್ದೇಶಕ ಡಾ.ವೈ.ಬಸವರಾಜು ರೈತರಿಗೆ ಮೀನು ತಳಿ ಅಭಿವೃದ್ಧಿಯ ಬಗ್ಗೆ ಮಾಹಿತಿ ನೀಡಲು ಮತ್ತು ಜಾಗೃತಿ ಮೂಡಿಸಲು ಇಂಥದ್ದೊಂದು ಕಾರ್ಯಕ್ರಮಕ್ಕೆ ಮುಂದಾಗಿದ್ದಾರೆ. ಅಮೂರ್ ಮೀನು ತಳಿಯ ಅಭಿವೃದ್ಧಿಗಾಗಿಯೇ ಬಸವರಾಜು ಸತತ 6 ವರ್ಷಗಳ ಕಾಲ ಸಂಶೋಧನೆ ನಡೆಸಿದ್ದಾರೆ.[ಲಾಲಾರಸ ಸ್ರವಿಸುವಂತೆ ಮಾಡುವ 'ಮೀನು ಗಮ್ಮತ್ ಥಾಲಿ'!]

ವಿಶ್ವದಲ್ಲಿ ಚೀನಾ ನಂತರ ಮೀನುಗಾರಿಕಾ ಕ್ಷೇತ್ರದಲ್ಲಿ ಭಾರತ 2ನೇ ಸ್ಥಾನದಲ್ಲಿ ವಿರಾಜಮಾನವಾಗುವಂತೆ ಮಾಡುವಲ್ಲಿ ಮೀನು ತಳಿ ಸಂಶೋಧಕರು ಹಾಗೂ ಮೀನುಗಾರರ ಪಾತ್ರ ತುಂಬಾ ಮಹತ್ವದ್ದಾಗಿದೆ. 'ಮೀನಿಗೊಂದು ದಿನ' ಎಂಬ ಘೋಷವಾಕ್ಯದಲ್ಲಿ ಕಾರ್ಯಕ್ರಮ ಆಚರಿಸಲಾಗುತ್ತಿದೆ. ಹೆಚ್ಚಿನ ಮಾಹಿತಿಗೆ ಡಾ.ಬಸವರಾಜು-9900582551 ಅವರನ್ನು ಸಂಪರ್ಕಿಸಬಹುದು.












Click it and Unblock the Notifications