ಬೆಂಗಳೂರಿಗರೇ ಎಚ್ಚರ!, ಕುಡಿಯೋಕೆ ಕಾವೇರಿ ನೀರು ಸಿಗಲ್ಲ!
ಬೆಂಗಳೂರು, ಸೆ. 06: ಮುಂಗಾರು ಮಳೆ, ಆಗಾಗ ತಮಿಳುನಾಡಿನಿಂದ ಬರುವ ಬಿರುಗಾಳಿ ಮಳೆ ಬಂದರೂ ಬೆಂಗಳೂರಿಗೆ ಕುಡಿಯುವ ನೀರಿನ ಅಭಾವ ಈ ಬಾರಿ ಬಲವಾಗಿ ತಟ್ಟಲಿದೆ. ಸುಮಾರು 40 ವರ್ಷಗಳಲ್ಲೇ ಕಾಣದಷ್ಟು ಕುಡಿಯುವ ನೀರಿನ ಬರವನ್ನು ಬೆಂಗಳೂರು ಎದುರಿಸಬೇಕಾಗುತ್ತದೆ ಎಂದು ಜಲ ಸಂಪನ್ಮೂಲ ತಜ್ಞರು ಎಚ್ಚರಿಕೆ ನೀಡಿದ್ದಾರೆ.
ಬೆಂಗಳೂರಿಗೆ ವಿವಿಧ ಹಂತಗಳಲ್ಲಿ ಅರ್ಕಾವತಿ, ಮಂಚನಬೆಲೆ, ತಿಪ್ಪಗೊಂಡನಹಳ್ಳಿ ಜಲಾಶಯ ಮೂಲಕ ಕಾವೇರಿ ತಲುಪುತ್ತಾಳೆ. ಅದರೆ, ಪರಿಸ್ಥಿತಿ ಹೀಗೆ ಮುಂದುವರೆದರೆ ಎಷ್ಟೋ ಕಡೆ ನಲ್ಲಿ ತಿರುಗಿಸಿದರೆ ನೀರು ಮಾತ್ರ ಬರುವುದೇ ಇಲ್ಲ.
ಕೃಷ್ಣರಾಜಸಾಗರದಲ್ಲಿ 17 ಟಿಎಂಸಿ (thousand million cubic feet) ನೀರಿದ್ದು, ಅದರಲ್ಲಿ 13 ಟಿಎಂಸಿ ಅಡಿ ನೀರು ಈಗ ತಮಿಳುನಾಡಿಗೆ ಬಿಡುವಂತೆ ಸುಪ್ರೀಂಕೋರ್ಟ್ ಆದೇಶಿಸಿದೆ. ಪ್ರತಿದಿನ 15,000 ಕ್ಯೂಸೆಕ್ಸ್ ನೀರು ತಮಿಳುನಾಡಿನ ರೈತರ ಸಾಂಬಾ ಬೆಳೆಗೆ ನೀರು ಒದಗಿಸುತ್ತಿದ್ದರೆ, ಇತ್ತ ಕಾವೇರಿ ಕೊಳ್ಳದ ಜನತೆ ಹಾಗೂ ಬೆಂಗಳೂರಿಗರಿಗೆ ನೀರಿನ ಅಭಾವ, ಹಾಹಾಕಾರ ಶುರುವಾಗಲಿದೆ.
ಮಂಡ್ಯ, ಮೈಸೂರು, ಕರ್ನಾಟಕ ಬಂದ್ ಮಾಡಿ ರಸ್ತೆ ತಡೆದು, ಬಸ್ ಗೆ ಕಲ್ಲೆಸೆದು, ಪ್ರತಿಕೃತಿ ದಹಿಸಿ, ಕಚೇರಿಯ ಮೇಜು, ಕುರ್ಚಿ ಪುಡಿ ಪುಡಿ ಮಾಡಿದರೂ ಒಂದು ಹನಿ ನೀರು ತೊಟ್ಟಿಕ್ಕುವುದಿಲ್ಲ. ಅಸಲಿಗೆ ಬಂದ್ ಯಾರ ವಿರುದ್ಧ ಸುಪ್ರೀಂಕೋರ್ಟ್ ವಿರುದ್ಧವೇ? ಕಾವೇರಿ ವಿವಾದದ ಬಗ್ಗೆ ಬೆಂಗಳೂರು ಜನತೆಯಲ್ಲಿ ನಿರ್ಲಕ್ಷ್ಯ, ಪರ್ಯಾಯ ನೀರು ಬಳಕೆ, ಹೋರಾಟದ ಅಗತ್ಯತೆ ಎದ್ದು ಕಾಣುತ್ತಿದೆ.

ಪಂಪ್ ಹೌಸ್ ಸಮಸ್ಯೆ ಬಗೆಹರಿಸಲು ಸಾಧ್ಯವಾಗುತ್ತಿಲ್ಲ.
ತಿಪ್ಪಗೊಂಡನಹಳ್ಳಿ, ತೊರೆಕಾಡನಹಳ್ಳಿ, ತಾತಗುಣಿ, ಹಾರೋಹಳ್ಳಿಯಲ್ಲಿ ಕೆಲವು ನೀರಿನ ಪಂಪ್ಗಳಲ್ಲಿ ನೀರಿನ ಪೂರೈಕೆ ಆಗಾಗ ಸ್ಥಗಿತಗೊಳ್ಳುವ ಸುದ್ದಿ ಕೇಳಿರುತ್ತೀರಿ. ಆಗ ನಗರದ ರಾಜಾಜಿನಗರ ಸೇರಿದಂತೆ ಆ ಭಾಗಕ್ಕೆ ನೀರಿನ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ. ಕಾವೇರಿ ನೀರು ಸರಬರಾಜು ಯೋಜನೆ(CWSS) 4ನೇ ಹಂತ ಎರಡನೇ ಘಟ್ಟ ಕಾಮಗಾರಿ ಕುಂಟುತ್ತಾ ಸಾಗಿದೆ. ಜಲಮಂಡಳಯಿಂದ ಪಂಪ್ ಹೌಸ್ ಸಮಸ್ಯೆ ಬಗೆಹರಿಸಲು ಸಾಧ್ಯವಾಗುತ್ತಿಲ್ಲ.
ಟಿಜಿ ಹಳ್ಳಿ ಜಲಾಗಾರ ಚಿತ್ರ ಕೃಪೆ: http://en.wikipedia.org/wiki/User:Sanjaykattimani
ಪರ್ಯಾಯ ಮಾರ್ಗ ಇಲ್ಲವೇ?
ಹೊಸ ಬಡಾವಣೆಗಳಲ್ಲಿ ಬೋರ್ ವೆಲ್ ಕೊರೆಯುವುದು, ಹಳೆ ಬೋರ್ ವೆಲ್ ದುರಸ್ತಿ, ಟ್ಯಾಂಕರ್ ಮೂಲಕ ನೀರು ಪೂರೈಕೆ ಪರ್ಯಾಯ ಮಾರ್ಗ ಕಂಡು ಕೊಳ್ಳಲಾಗಿದೆ. ಕಾವೇರಿ ನೀರನ್ನು ನಂಬಿಕೊಂಡರೆ ಆಗುವುದಿಲ್ಲ ಎಂಬುದು ಜನತೆಗೆ ಮನದಟ್ಟಾಗಿದೆ. ಆದರೆ, ಟ್ಯಾಂಕರಿನ ಬೆಲೆ 300 ರು. ನಿಂದ 600 ರು. 1,000 ರು ಗೂ ಏರಿಕೆಯಾದ ಉದಾಹರಣೆಗಳಿದೆ. ಇದಲ್ಲದೆ, ಅಂತರ್ಜಲ ಕಾಯುವಿಕೆ, ಮಳೆಕೊಯ್ಲು ಮುಂತಾದ ನೀರು ಪುನರ್ ಬಳಕೆ ಮಾಡುವ ವಿಧಾನಗಳನ್ನು ಕಡ್ಡಾಯಗೊಳಿಸಲಾಗಿದೆ. ಆದರೆ, ನೀರು ಮಾತ್ರ ಪೋಲಾಗುವುದು ತಪ್ಪುತ್ತಿಲ್ಲ.

ನೀರು ಎಲ್ಲಿಂದ ಬರುತ್ತಿದೆ? ನೀರು ಸಾಕಾಗುತ್ತಾ?
ಬೆಂಗಳೂರು ಜಲ ಮಂಡಳಿ(BWSSB) ಪ್ರತಿನಿತ್ಯ ಮಂಡ್ಯ ಜಿಲ್ಲೆ ಮಳವಳ್ಳಿ ತಾಲೂಕು ತೊರೆಕಾಡನಹಳ್ಳಿಯಿಂದ ಒಟ್ಟು ನಾಲ್ಕು ಹಂತಗಳಲ್ಲಿ ಸುಮಾರು 900 ಮಿಲಿಯನ್ ಲೀ ನೀರು ಹರಿಸಲಾಗುತ್ತಿದೆ. ಮಂಡ್ಯಕ್ಕಿಂತ ಹೆಚ್ಚು ಬೆಂಗಳೂರಿಗರೆ ಕಾವೇರಿ ನೀರು ಕುಡಿಯುತ್ತಿದ್ದಾರೆ.
ಬೆಂಗಳೂರಿನ 1 ಕೋಟಿ 90 ಲಕ್ಷ ಮಂದಿಗೆ ವರ್ಷಕ್ಕೆ 19 ಟಿಎಂಸಿ ನೀರು ಬೇಕಾಗುತ್ತದೆ. ಕೆಆರ್ ಎಸ್ ನ 26 ಟಿಎಂಸಿ(ಈಗ 17 ಇದೆ)ಯಲ್ಲಿ ಎಲ್ಲಿಗೆ ಅಂತಾ ನೀರು ಹರಿಸುವುದು? ಈಗ ಬೆಂಗಳೂರಿಗೆ ಬರುತ್ತಿರುವ ನೀರು ನಿಂತರೆ ಪರಿಸ್ಥಿತಿ ಹದಗೆಡಲಿದೆ. ಏಕೆಂದರೆ ನಗರದಲ್ಲಿ ಕೆರೆಗಳನ್ನು ನುಂಗಿ ಹಾಕಲಾಗಿದೆ.

ಬೆಂಗಳೂರಿಗರು ಹೋರಾಡಬೇಕು ಏಕೆ?
ಕುಡಿಯುವ ನೀರಿನ ಅವಶ್ಯಕತೆ, ಪರ್ಯಾಯ ಜಲಮೂಲ ದುಬಾರಿಯಾಗಿದೆ. ಬೆಂಗಳೂರಿನಲ್ಲಿ ಪ್ರಮುಖ ಕೆರೆಗಳು ಕಲುಷಿತಗೊಂಡಿದೆ. ಬಳಕೆ ಯೋಗ್ಯ ಎಂದರೆ ಅದು ಕಾವೇರಿ ಕೊಳ್ಳದ ನೀರು ಎಂಬ ಪರಿಸ್ಥಿತಿ ಇದೆ. ರೈತರು ಭತ್ತ, ಕಬ್ಬು ಹೇಗೆ ಬೆಳೆಯುತ್ತಾರೆ ಎಂಬ ಅರಿವು ಇಲ್ಲದಿದ್ದರೂ, ಅವರಿಲ್ಲದಿದ್ದರೆ ನಾಳೆ ನಗರವಾಸಿಗಳ ಹೊಟ್ಟೆಗೆ ತಣ್ಣೀರ ಬಟ್ಟೆ ಎಂಬ ಅಂಶ ಎಲ್ಲರಿಗೂ ಮನದಟ್ಟಾಗಬೇಕು
ದುಡ್ಡು ಕೊಟ್ಟರೆ ಬಿಸ್ಲೇರಿ, ಫುಡ್ ಮಾಲ್ ಗಳಲ್ಲಿ ಅಕ್ಕಿ, ಗೋಧಿ, ಸಕ್ಕರೆ ಸಿಗುವಾಗ ರೈತರು ಅವರ ಸಂಕಷ್ಟದ ಬಗ್ಗೆ ಯಾಕೆ ತಲೆಕೆಡಿಸಿಕೊಳ್ಳಬೇಕು ಎನ್ನುವ ಮನೋಭಾವ ಬಹುತೇಕ ನಗರವಾಸಿಗಳಲ್ಲಿ ಇದೆ.











Click it and Unblock the Notifications