ನಾಯಿ ಮಾಂಸ ಸಾಗಾಟ ಆರೋಪ: ಬೆಂಗಳೂರಿನ ಹೋಟೆಲ್ ಮಾಲೀಕರಿಗೆ ಆಹಾರ ಇಲಾಖೆ ನೋಟಿಸ್
ಬೆಂಗಳೂರು, ಜುಲೈ 28: ಕಳಪೆ ಮಾಂಸ ದಂಧೆ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಹಾಗೂ ಆಹಾರ ಇಲಾಖೆಯಿಂದ ತನಿಖೆ ಮುಂದುವರೆದಿದೆ. ಈ ಹಿನ್ನೆಲೆಯಲ್ಲಿ ಅಬ್ದುಲ್ ರಜಾಕ್ನಿಂದ ಮಾಂಸ ಪಡೆಯುತ್ತಿದ್ದ ಹೋಟೆಲ್, ರೆಸ್ಟೋರೆಂಟ್ಗಳಿಗೆ ಆಹಾರ ಇಲಾಖೆ ನೋಟಿಸ್ ನೀಡಿದೆ ಎನ್ನಲಾಗಿದೆ.
ಬೆಂಗಳೂರಿಗೆ ಕುರಿ ಮಾಂಸದ ಜೊತೆಗೆ ನಾಯಿ ಮಾಂಸ ಸಾಗಾಟ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ಆಹಾರ ಇಲಾಖೆ ಅಧಿಕಾರಿಗಳು ವಿಚಾರಣೆ ತೀವ್ರಗೊಳಿಸಿದ್ದು, ಕೋಲ್ಡ್ ಸ್ಟೋರೇಜ್ನಲ್ಲಿರುವ ಮತ್ತು ಅಂಗಡಿಗಳಲ್ಲಿನ ಮಾಂಸಗಳ ಮಾದರಿಗಳನ್ನು ಸಂಗ್ರಹಿಸಲು ಮುಂದಾಗಿದ್ದಾರೆ. -18 ಡಿಗ್ರಿ ಸ್ಟೋರೇಜ್ನಲ್ಲಿಟ್ಟ ಮಾಂಸ ಹಾನಿಕಾರಕವಲ್ಲ. ಆದರೆ ಅದಕ್ಕೆ ಬಳಸುವ ರಾಸಾಯನಿಕ ಅಪಾಯಕಾರಿಯಾಗಿದೆ.

ಈ ಹಿನ್ನೆಲೆಯಲ್ಲಿ ಮಾಂಸದ ಮಾದರಿಗಳನ್ನು ಸಂಗ್ರಹಿಸುವಂತೆ ಆಹಾರ ಇಲಾಖೆ ವಲಯ ಅಧಿಕಾರಿಗಳಿಗೆ ಸೂಚನೆ ನೀಡಿದೆ. ಮೊದಲ ಹಂತವಾಗಿ ಬೆಂಗಳೂರಿನ 9 ರೆಸ್ಟೋರೆಂಟ್, ಹೋಟೆಲ್ ಮಾಲೀಕರಿಗೆ ನೊಟೀಸ್ ನೀಡಲಾಗಿದ್ದು, ವ್ಯವಹಾರದ ದಾಖಲೆ ಸಮೇತ ವಿಚಾರಣೆಗೆ ಹಾಜರಾಗುವಂತೆ ಅಧಿಕಾರಿಗಳು ಸೂಚನೆ ನೀಡಿದ್ದಾರೆ ಎನ್ನಲಾಗಿದೆ.
ಇನ್ನು ಸೋಮವಾರದಂದು ಆಹಾರ ಇಲಾಖೆಯ ಅಧಿಕಾರಿಯಾಗಿರುವ ಡಾ. ಜಗನ್ನಾಥ್ ಅವರ ನೇತೃತ್ವದಲ್ಲಿ ಕೂಡ ತನಿಖೆ ನಡೆಯಲಿದೆ. ಅಬ್ದುಲ್ ರಜಾಕ್ ನಗರದ ಸುಮಾರು ನೂರಕ್ಕೂ ಹೆಚ್ಚು ಹೊಟೇಲ್ ಹಾಗೂ ರೆಸ್ಟೋರೆಂಟ್ಗಳಿಗೆ ಮಾಂಸ ಮಾರಾಟ ಮಾಡುತ್ತಿರುವುದು ತಿಳಿದು ಬಂದಿದೆ.
ಇನ್ನು ರೈಲಿನಲ್ಲಿ ಮಾಂಸ ಸಾಗಾಟ ಮಾಡಿದ ಆರೋಪದ ಕಾರಣ ರೈಲ್ವೆ ಇಲಾಖೆಗೂ ಕೂಡ ಪತ್ರ ಬರೆದಿರುವ ಪೊಲೀಸರು, ಮಾಂಸ ಯಾವ ರೈಲಿನಲ್ಲಿ ಬರುತ್ತಿತ್ತು. ಯಾವ ರಾಜ್ಯದಿಂದ ಬರುತ್ತಿತ್ತು. ಪಾರ್ಸೆಲ್ ಪಡೆಯಲು ಯಾರು ಬರುತ್ತಿದ್ದರು ಎನ್ನುವ ಮಾಹಿತಿ ಕಲೆ ಹಾಕಲು ರೈಲ್ವೆ ಫ್ಲಾಟ್ ಫಾರ್ಮ್ನಲ್ಲಿರುವ ಸಿಸಿಟಿವಿ ದೃಶ್ಯಾವಳಿಗಳನ್ನು ನೀಡುವಂತೆ ರೈಲ್ವೆ ಇಲಾಖೆ ಬಳಿ ಮನವಿ ಮಾಡಿದೆ ಎಂದು ತಿಳಿದು ಬಂದಿದೆ.












Click it and Unblock the Notifications