ಬೆಂಗಳೂರಿಗೆ ಸಿಹಿಸುದ್ದಿ ಕೊಟ್ಟ ಕೇಂದ್ರ ಸಚಿವ ನಿತಿನ್ ಗಡ್ಕರಿ
ಬೆಂಗಳೂರು, ಅಕ್ಟೋಬರ್ 06; ಬೆಂಗಳೂರು ಮತ್ತು ತಮಿಳುನಾಡಿನ ದಿಂಡಿಗಲ್ ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿ 209ರ ಕಾಮಗಾರಿ 2020ರಲ್ಲಿ ಸ್ಥಗಿತವಾಗಿತ್ತು. ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಈಗ ಸಿಹಿಸುದ್ದಿಯೊಂದನ್ನು ನೀಡಿದ್ದಾರೆ. ರಸ್ತೆ ಕಾಮಗಾರಿ ಅಪೂರ್ಣಗೊಂಡಿದ್ದು, ಅಗೆದು ಹಾಕಿರುವುದರಿಂದ ವಾಹನ ಸವಾರರಿಗೂ ತೊಂದರೆ ಉಂಟಾಗಿದೆ.
ಬೆಂಗಳೂರು-ದಿಂಡಿಗಲ್ ರಸ್ತೆ ವ್ಯಾಪ್ತಿಯಲ್ಲಿ ಬರುವ ಕನಕಪುರ-ಮಳವಳ್ಳಿ ತನಕದ ಚತುಷ್ಪಥ ಮತ್ತು ಬೈಪಾಸ್ ರಸ್ತೆಯ ಕಾಮಗಾರಿ ತ್ವರಿತಗೊಳಿಸಲು ಕ್ರಮ ಕೈಗೊಳ್ಳಲಾಗಿದೆ. 2022ರ ಜೂನ್ ವೇಳೆಗೆ ಕಾಮಗಾರಿ ಪೂರ್ಣಗೊಳ್ಳುವ ನಿರೀಕ್ಷೆ ಇದೆ ಎಂದು ಸಚಿವರು ಹೇಳಿದ್ದಾರೆ.
ಮಾರ್ಚ್ 16ರಂದು ಮಾಜಿ ಸಚಿವ, ಕಾಂಗ್ರೆಸ್ ನಾಯಕ ಪಿಜಿಆರ್ ಸಿಂಧ್ಯಾ ಸಚಿವ ನಿತಿನ್ ಗಡ್ಕರಿಗೆ ಪತ್ರವನ್ನು ಬರೆದಿದ್ದರು. ಬೆಂಗಳೂರು-ಕನಕಪುರ-ಬಿಳಿಗಿರಿರಂಗನ ಬೆಟ್ಟ-ದಿಂಡಿಗಲ್ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಗುತ್ತಿಗೆದಾರರ ಹಣದ ಕೊರತೆಯಿಂದಾಗಿ ನಿಂತಿದೆ. ರಸ್ತೆ ಕಾಮಗಾರಿ ತ್ವರಿತಗೊಳಿಸಲು ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದ್ದರು.
ಈ ಪತ್ರಕ್ಕೆ ಉತ್ತರ ನೀಡಿರುವ ಕೇಂದ್ರ ಸಚಿವ ನಿತಿನ್ ಗಡ್ಕರಿ, 'ಈ ರಸ್ತೆ ಕಾಮಗಾರಿ ಗುತ್ತಿಗೆಯನ್ನು ಸದ್ಭಬ್ ಬೆಂಗಳೂರು ಹೈವೇ ಪ್ರೈವೇಟ್ ಕಂಪನಿ ವಹಿಸಿಕೊಂಡಿದೆ. ಕಂಪನಿ ಆರ್ಥಿಕ ಸಂಕಷ್ಟದಲ್ಲಿ ಇರುವುದರಿಂದ ಮತ್ತು ಮೂಲ ಸೌಲಭ್ಯ ಸ್ಥಳಾಂತರ ವಿಳಂಬ ಆಗಿದ್ದರಿಂದ ಯೋಜನೆ ಅನುಷ್ಠಾನ ವಿಳಂಬವಾಗುತ್ತಿದೆ' ಎಂದು ವಿವರಣೆ ನೀಡಿದ್ದಾರೆ.

ಕಾಮಗಾರಿ ಶೇ 79ರಷ್ಟು ಪ್ರಗತಿಯಾಗಿದೆ
ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಈ ಯೋಜನೆ ಮೇಲೆ ನಿಗಾ ಇಟ್ಟಿದೆ. ಹಣದ ಹರಿವಿನ ಬಗ್ಗೆಯೂ ಕ್ರಮ ವಹಿಸಲಾಗಿದೆ. ಈ ರಸ್ತೆ ಬಿಆರ್ಟಿ ಹುಲಿ ಮೀಸಲು ಗಡಿಯಿಂದ ಬೆಂಗಳೂರು ನೈಸ್ ಜಂಕ್ಷನ್ ತನಕ 170.92 ಕಿ. ಮೀ. ಉದ್ದವಿದೆ. ಕಾಮಗಾರಿ ವಹಿಸಿಕೊಂಡ ಕಂಪನಿಗೆ 2017ರ ಆಗಸ್ಟ್ 21ರಂದು ಕಾರ್ಯಾದೇಶ ನೀಡಲಾಗಿದೆ. ಇದುವರೆಗೂ ಶೇ 79ರಷ್ಟು ಪ್ರಗತಿ ಆಗಿದೆ' ಎಂದು ಪತ್ರದಲ್ಲಿ ಮಾಹಿತಿ ನೀಡಿದ್ದಾರೆ.

ಕೇಂದ್ರ, ಕಂಪನಿಯ ಬಂಡಾವಳ ಹೂಡಿಕೆ
ಬೆಂಗಳೂರು ಮತ್ತು ತಮಿಳುನಾಡಿನ ದಿಂಡಿಗಲ್ ರಸ್ತೆ ಕಾಮಗಾರಿಗೆ ಕೇಂದ್ರ ಸರ್ಕಾರ ಮತ್ತು ಸದ್ಭಬ್ ಬೆಂಗಳೂರು ಹೈವೇ ಪ್ರೈವೇಟ್ ಕಂಪನಿ ಅನುದಾನ ಹಂಚಿಕೆ ಮಾಡಿಕೊಂಡಿವೆ. ಕೇಂದ್ರ ಶೇ 40ರಷ್ಟು ಮತ್ತು ಕಂಪನಿ ಶೇ 60ರಷ್ಟು ಅನುದಾನ ಹಾಕಲಿವೆ. ಕೇಂದ್ರ ಸರ್ಕಾರ ತನ್ನ ಪಾಲಿನ 403 ಕೋಟಿಗಳ ಪೈಕಿ 362.76 ಕೋಟಿಯನ್ನು ಕಂಪನಿಗೆ ಈಗಾಗಲೇ ನೀಡಿದೆ. ಆದರೆ ಕಂಪನಿಗೆ ಆರ್ಥಿಕ ಹೊರೆ ಕಾರಣದಿಂದಾಗಿ ರಸ್ತೆ ಕಾಮಗಾರಿ 2020ರಲ್ಲಿ ಸ್ಥಗಿತವಾಗಿತ್ತು.

ಮಾಹಿತಿ ಹಕ್ಕು ಕಾಯ್ದೆ ಅಡಿ ಮಾಹಿತಿ ಸಂಗ್ರಹ
ಸದ್ಭಬ್ ಬೆಂಗಳೂರು ಹೈವೇ ಪ್ರೈವೇಟ್ ಕಂಪನಿ ಆರ್ಥಿಕ ಸಂಕಷ್ಟದ ಕಾರಣ ಕಾಮಗಾರಿ ನಿಲ್ಲಿಸಿದೆ ಎಂದು ಆರ್ಟಿಐ ಮೂಲಕ ರವಿಕುಮಾರ್ ಕಂಚನಹಳ್ಳಿ ಮಾಹಿತಿ ಪಡೆದಿದ್ದರು. ರಸ್ತೆಯ ನಿರ್ಮಾಣ ವೆಚ್ಚ 1008 ಕೋಟಿ ಆಗಲಿದೆ ಎಂದು ಅಂದಾಜಿಸಲಾಗಿತ್ತು. ಇದು ಗುಜರಾತ್ ಮೂಲದ ಸಂಸ್ಥೆಯಾಗಿದ್ದು, ಕಂಪನಿ ಆರ್ಥಿಕ ಸ್ಥಿತಿಯನ್ನು ನೋಡದೇ ಯೋಜನೆಯನ್ನು ಅವರಿಗೆ ನೀಡಲಾಗಿದೆ ಎಂದು ರವಿ ಕುಮಾರ್ ಆರೋಪಿಸಿದ್ದರು.
Recommended Video

ರಸ್ತೆ ಅಗೆದು ಹಾಕಿ ತೊಂದರೆ
ಸದ್ಭಬ್ ಬೆಂಗಳೂರು ಹೈವೇ ಪ್ರೈವೇಟ್ ಕಂಪನಿ ರಸ್ತೆ ಕಾಮಗಾರಿಗಾಗಿ ರಸ್ತೆಯನ್ನು ಅಗೆದು ಹಾಕಿದೆ. ಈಗ ಅದರ ಕಾಮಗಾರಿ ಪೂರ್ಣಗೊಳಿಸಿಲ್ಲ. ರಸ್ತೆ ಅಗೆದಿರುವುದರಿಂದ ವಾಹನ ಸವಾರರಿಗೆ ತೊಂದರೆಯಾಗಿದೆ. ಯೋಜನೆಯ ಕಾಮಗಾರಿ ಬಗ್ಗೆ ಕೇಂದ್ರ ಸರ್ಕಾರ ಗಮನ ಹರಿಸಬೇಕು ಎಂದು ಒತ್ತಾಯಿಸಲಾಗಿತ್ತು. ಈಗ ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರೇ ಈ ಕುರಿತು ಪತ್ರದ ಮೂಲಕ ಸ್ಪಷ್ಟನೆ ನೀಡಿದ್ದಾರೆ.












Click it and Unblock the Notifications