ಟೆಂಡರ್ ಶ್ಯೂರ್ : ಗುಣಮಟ್ಟದಲ್ಲಿ ರಾಜಿ ಮಾಡಿಕೊಳ್ಳಬೇಡಿ
ಬೆಂಗಳೂರು, ಜುಲೈ 1: ಮುಂದಿನ ವಾರದಲ್ಲಿ ಟೆಂಡರ್ ಶ್ಯೂರ್ ಕಾಮಗಾರಿಗಳ ಪ್ರಗತಿ ಪರಿಶೀಲನೆ ನಡೆಸುವುದಾಗುವುದಾಗಿ ಉಪಮುಖ್ಯಮಂತ್ರಿ ಹಾಗೂ ನಗರಾಭಿವೃದ್ಧಿ ಸಚಿವ ಡಾ. ಜಿ. ಪರಮೇಶ್ವರ್ ಅವರು ತಿಳಿಸಿದ್ದಾರೆ.
ಶನಿವಾರ (ಜೂ 30) ಟೆಂಡರ್ ಶ್ಯೂರ್ ಕಾಮಗಾರಿ ಬಗ್ಗೆ ಬಿಎಂಆರ್ಡಿಎನಲ್ಲಿ ಬಿಬಿಎಂಪಿ ಅಧಿಕಾರಿಗಳೊಂದಿಗೆ ಸಭೆ ನಡೆಸಿ, ಮಾಹಿತಿ ಪಡೆದುಕೊಂಡ ಸಚಿವರು, ಮೊದಲ ಮತ್ತು ಎರಡನೇ ಫೇಸ್ನಲ್ಲಿ ಒಟ್ಟು 12 ಟೆಂಡರ್ ಶ್ಯೂರ್ ಕಾಮಗಾರಿ ಕೈಗೆತ್ತಿಗೊಂಡಿದ್ದು, 10 ರಸ್ತೆಗಳ ಕೆಲಸ ಸಂಪೂರ್ಣಗೊಂಡಿದೆ.
ಕೊಪ್ಪಳ : ಮಾದರಿ ಘನ ತ್ಯಾಜ್ಯ ಘಟಕಕ್ಕೆ ಪರಮೇಶ್ವರ ಭೇಟಿ
ಸಿದ್ದಯ್ಯ ಪುರಾಣಿ ರಸ್ತೆ ಹಾಗೂ ಜಯನಗರ ರಸ್ತೆ ಕಾಮಗಾರಿ ಪ್ರಗತಿಯಲ್ಲಿದೆ ಎಂದು ಅಧಿಕಾರಿಗಳು ಪರಮೇಶ್ವರ್ ಅವರಿಗೆ ಮಾಹಿತಿ ನೀಡಿದ್ದಾರೆ.
ಬೆಂಗಳೂರು ಚರ್ಚ್ ಸ್ಟ್ರೀಟ್ ನಲ್ಲಿನ ಟೆಂಡರ್ ಶ್ಯೂರ್ ರಸ್ತೆ ಹಾಳಾಗಿರುವ ಬಗ್ಗೆ ಪ್ರಸ್ತಾಪಿಸಿದ ಸಚಿವರು, ಗುಣಮಟ್ಟದ ರಸ್ತೆ ನಿರ್ಮಿಸಬೇಕು. ಮುಂದಿನ ದಿನಗಳಲ್ಲಿ ಈ ರೀತಿ ಆಗದಂತೆ ಎಚ್ಚರಿಕೆ ವಹಿಸಿ ಎಂದು ಅಧಿಕಾರಿಗಳಿಗೆ ಪರಮೇಶ್ವರ್ ಸೂಚನೆ ನೀಡಿದ್ದಾರೆ.
ಯಾವುದೇ ಮಾದರಿಯ ರಸ್ತೆ ನಿರ್ಮಾಣ ಮಾಡಿದರೂ ಅದರ ಗುಣಮಟ್ಟದಲ್ಲಿ ಎಂದೂ ರಾಜಿ ಮಾಡಿಕೊಳ್ಳದೇ, ಉತ್ತಮ ರಸ್ತೆ ನಿರ್ಮಿಸುವಂತೆ ಸಲಹೆ ನೀಡಿದ ಸಚಿವರು, ಮಳೆಗಾಲ ಮುಗಿದ ಕೂಡಲೇ ಟೆಂಡರ್ ಶ್ಯೂರ್ ಕಾಮಗಾರಿ ಪ್ರಾರಂಭಿಸಬೇಕು. ಈ ವೇಳೆಯೊಳಗೆ ಟೆಂಡರ್ , ಇತರ ಪತ್ರ ವ್ಯವಹಾರ ಪೂರ್ಣಗೊಳಿಸಿ ಕೊಳ್ಳುವಂತೆಯೂ ಪರಮೇಶ್ವರ್ ಸಲಹೆ ನೀಡಿದ್ದಾರೆ.
ಸಭೆಯಲ್ಲಿ ಎಲ್ಲ ಟೆಂಡರ್ ಶ್ಯೂರ್ ಕಾಮಗಾರಿಗಳ ಸಂಪೂರ್ಣ ಮಾಹಿತಿಯನ್ನು ಹಾಗೂ ಯಾವ ರೀತಿ ಕಾಮಗಾರಿ ನಡೆಯುತ್ತಿದೆ ಎಂಬುದನ್ನು ಅಧಿಕಾರಿಗಳು ಸಚಿವ ಪರಮೇಶ್ವರ್ ಅವರಿಗೆ ಮಾಹಿತಿ ನೀಡಿದರು.
ಬಿಬಿಎಂಪಿ ಆಯುಕ್ತ ಮಂಜುನಾಥ ಪ್ರಸಾದ್, ಹೆಚ್ಚುವರಿ ಪೊಲೀಸ್ ಆಯುಕ್ತ (ಟ್ರಾಫಿಕ್) ಆರ್ ಹಿತೇಂದ್ರ, ಜನ ಅರ್ಬನ್ ಸ್ಪೇನ್ ಫೌಂಡೇಷನ್ ಅಧ್ಯಕ್ಷೆ ಸ್ವಾತಿ ರಾಮನಾಥನ್ ಹಾಗೂ ಇತರ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.