ಗಂಟೆ 7 ಆದರೂ ಏಳದ ಆರೋಪಿ ಪವಿತ್ರಾ ಗೌಡಗೆ ಪೊಲೀಸರಿಂದ ಫುಲ್ ಕ್ಲಾಸ್
ಬೆಂಗಳೂರು, ಜೂನ್ 15: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಜೊತೆಗೆ ಎ-೧ ಆರೋಪಿಯಾಗಿ ಪವಿತ್ರಾ ಗೌಡನನ್ನು ಸಹ ಪೊಲೀಸರು ಬಂಧಿಸಿದ್ದಾರೆ. ಕಳೆದ ಐದು ದಿನಗಳಿಂದ ಆರೋಪಿಗಳ ವಿಚಾರಣೆ ನಡೆಯುತ್ತಿದ್ದು, ಆರೋಪಿ ಪವಿತ್ರಾ ಗೌಡಗೆ ಕಮಿಷನರ್ ದಯಾನಂದ್ ಕ್ಲಾಸ್ ತೆಗೆದುಕೊಂಡಿದ್ದಾರೆ ಎಂದು ವರದಿಯಾಗಿದೆ.
ಪ್ರಕರಣ ಸಂಬಂಧ ಮೊದಲು ಬಂಧಿಸಿದ ಒಟ್ಟು 13 ಆರೋಪಿಗಳನ್ನು ಅನ್ನಪೂರ್ಣೇಶ್ವರಿ ಪೊಲೀಸ್ ಠಾಣೆಯಲ್ಲಿರಿಸಲಾಗಿದ್ದು, ಪವಿತ್ರಾ ಗೌಡನನ್ನು ಮಹಿಳಾ ಸಾಂತ್ವಾನ ಕೇಂದ್ರದಲ್ಲಿರಿಸಲಾಗಿತ್ತು. ಪ್ರತಿ ದಿನ ವಿಚಾರಣೆಗೆ ಠಾಣೆ ಕರೆ ತರಲಾಗುತ್ತಿದ್ದು, ಬೆಳಗ್ಗೆ 7ಗಂಟೆಯೊಳಗೆ ವಿಚಾರಣೆಗೆ ಹಾಜರಾಗುವಂತೆ ಸೂಚಿಸಲಾಗಿತ್ತು.

ಆದರೆ ಆರೋಪಿ ಪವಿತ್ರಾ ಗೌಡ ನಿನ್ನೆ ಬೆಳಗ್ಗೆ ಬೇಗ ಏದ್ದೇಳಲು ನಿರಾಕರಿಸಿದ್ದು, ಪೊಲೀಸ್ ಸಿಬ್ಬಂದಿ ಆಕೆ ಏಳುವವರೆಗೆ ಕಾದು ವಿಚಾರಣೆಗೆ ಕರೆತಂದಿದ್ದಾರೆ. ಆರೋಪಿಯ ವರ್ತನೆಗೆ ಕಮಿಷನರ್ ಮತ್ತು ಡಿಸಿಪಿ ನಿನ್ನೆ ಪುಲ್ ಕ್ಲಾಸ್ ತೆಗೆದುಕೊಂಡಿದ್ದಾರೆ ಎನ್ನಲಾಗಿದೆ. ಹೀಗಾಗಿ ಪವಿತ್ರಾ ಗೌಡ ಇಂದು ಬೆಳಗ್ಗೆ 7 ಗಂಟೆಯೊಳಗೆ ಠಾಣೆಯಲ್ಲಿ ವಿಚಾರಣೆಗೆ ಹಾಜರಿದ್ದರು ಎನ್ನಲಾಗಿದೆ. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಪೊಲೀಸರು ವಿಚಾರಣೆಯನ್ನು ತೀವ್ರಗೊಳಿಸಿದ್ದಾರೆ.
ಪವಿತ್ರಾ ಗೌಡಗೆ ಪಶ್ಚಾತ್ತಾಪ
'ನನಗೆ ರೇಣುಕಾಸ್ವಾಮಿ ಅಶ್ಲೀಲ ಮೆಸೇಜ್ಗಳನ್ನು ಮಾಡುತ್ತಿದ್ದ. ಇದನ್ನು ನಾನು ಮನೆ ಕೆಲಸದವ ಪವನ್ಗೆ ಕಳುಹಿಸಿದ್ದೆ. ಅವನಿಗೆ ಕಳುಹಿಸುವ ಮೊದಲು ಈ ವಿಚಾರ ದರ್ಶನ್ಗೆ ಗೊತ್ತಾಗಬಾರದು ಎಂದು ಹೇಳಿದ್ದೆ. ದರ್ಶನ್ಗೆ ಗೊತ್ತಾದರೆ ಏನಾದರೂ ಅನಾಹುತ ಆಗಬಹುದು ಅಂತಲೂ ಹೇಳಿದ್ದೆ. ನನಗೆ ಕೊಲೆ ಮಾಡುತ್ತಾರೆ ಎನ್ನುವ ಕಲ್ಪನೆಯೂ ಇರಲಿಲ್ಲ. ಕೆಟ್ಟದಾಗಿ ಮೆಸೇಜ್ ಮಾಡಿದ ಎಂದು ಚಪ್ಪಲಿಯಲ್ಲಿ ಹೊಡೆದು ವಾಪಸ್ ಬಂದೆ ಎಂದು ಪವಿತ್ರಾ ಗೌಡ ಪೊಲೀಸರ ಮುಂದೆ ಹೇಳಿಕೆ ನೀಡಿದ್ದಾರೆ ಎನ್ನಲಾಗಿದೆ.
'ಕೊಲೆಯಾದ ರೇಣುಕಾಸ್ವಾಮಿ ನನಗೆ ಕಳುಹಿಸುತ್ತಿದ್ದ ಮೆಸೇಜ್ಗಳ ಬಗ್ಗೆ ದರ್ಶನ್ಗೆ ಹೇಳಿ ತಪ್ಪು ಮಾಡಿದೆ. ಅಶ್ಲೀಲ ಮೆಸೇಜ್ ತೋರಿಸಿ, ಹೇಳಿದ್ದಕ್ಕೆ ಇಷ್ಟೆಲ್ಲಾ ಆಯ್ತು. ನಾನೇ ಈ ಬಗ್ಗೆ ಪೊಲೀಸರಿಗೆ ದೂರು ಕೊಡಬಹುದಿತ್ತು. ಅಶ್ಲೀಲ ಮೆಸೇಜ್ ಬಗ್ಗೆ ದೂರು ಕೊಟ್ಟಿದ್ದರೆ ಕಾನೂನು ಕ್ರಮ ಆಗುತ್ತಿತ್ತು. ಅದನ್ನು ಬಿಟ್ಟು ಪ್ರತಿಯೊಂದು ಮೆಸೇಜ್ ತೋರಿಸಿ ಹೇಳಿದ್ದು ತಪ್ಪಾಯಿತು. ಅಶ್ಲೀಲ ಮೆಸೇಜ್ಗಳನ್ನು ಅವರಿಗೆ ತೋರಿಸಿ ಹೇಳಬಾರದಿತ್ತು. ಇದು ಕೊಲೆಯಾಗುವ ಹಂತಕ್ಕೆ ಹೋಗುತ್ತದೆ ಅಂತಾ ಅಂದುಕೊಂಡಿರಲಿಲ್ಲ' ಎಂದು ಪೊಲೀಸರ ಮುಂದೆ ಅಳಲು ತೋಡಿಕೊಂಡಿದ್ದಾರೆ ಎನ್ನಲಾಗಿದೆ.












Click it and Unblock the Notifications