ಬೆಂಗಳೂರಲ್ಲಿ ಸ್ವಚ್ಛತಾ ಅಭಿಯಾನಕ್ಕೆ ಚುರುಕು:12 ಬ್ಲ್ಯಾಕ್ ಸ್ಪಾಟ್ ನಿರ್ಮೂಲನೆ, 35 ಲೋಡ್ ತ್ಯಾಜ್ಯ ತೆರವು
ಬೆಂಗಳೂರು: ಬೆಂಗಳೂರು ನಗರ ಐಟಿ ಖ್ಯಾತಿಗೆ, ಉದ್ಯಾನ ನಗರಿ ಎಂದೆಲ್ಲ ಕರೆಸಿಕೊಳ್ಳುತ್ತದೆ. ಇಲ್ಲಿನ ಟ್ರಾಫಿಕ್ ದಟ್ಟಣ ಜೊತೆಗೆ ಕಸ ಸಮಸ್ಯೆಯಿಂದಲೂ ಆಗಾಗ ಮುನ್ನೆಲೆಗೆ ಬರುವ ಬೆಂಗಳೂರು ಕಸು ಮುಕ್ತಗೊಳಿಸುವ ನಿಟ್ಟಿನಲ್ಲಿ ಕೇಂದ್ರ ನಗರ ಪಾಲಿಕೆ ಸ್ವಚ್ಛತಾ ಅಭಿಯಾನಕ್ಕೆ ಚುರುಕು ನೀಡಿದೆ. ಇದರ ಭಾಗವಾಗಿ ಪಾಲಿಕೆ ವ್ಯಾಪ್ತಿಯಲ್ಲಿ 12 ಬ್ಲ್ಯಾಕ್ ಸ್ಪಾಟ್ ಸಂಪೂರ್ಣ ನಿರ್ಮೂಲನೆ ಆಗಿದೆ.
ಹೌದು ಬರೋಬ್ಬರಿ 162 ಪೌರಕಾರ್ಮಿಕರು ಹಾಗೂ ಸ್ವಚ್ಛತಾ ಸಿಬ್ಬಂದಿ ಹಾಗೂ ಮುಖ್ಯ ಅಧಿಕಾರಿಗಳ ಸಮ್ಮುಖದಲ್ಲಿ ನಿರಂತರ ಸಾಮೂಹಿಕ ಸ್ವಚ್ಛತಾ ಕಾರ್ಯಾಚರಣೆಗಳ ಮೂಲಕ ಬ್ಲ್ಯಾಕ್ ಸ್ಪಾಟ್ ಗಳನ್ನು ನಿರ್ಮೂಲನೆ ಮಾಡಲಾಗಿದೆ. ಪಾದಚಾರಿ ಮಾರ್ಗಗಳ ಒತ್ತುವರಿಗೆ ಕಡಿವಾಣ ಹಾಕಲಾಗಿದೆ ಎಂದು ಕೇಂದ್ರ ನಗರ ಪಾಲಿಕೆಯ ಆಯುಕ್ತರಾದ ರಾಜೇಂದ್ರ ಚೋಳನ್ ಶನಿವಾರ ತಿಳಿಸಿದರು.

ನಗರದ ಸ್ವಚ್ಛತೆ ಕಾಪಾಡುವುದು ಹಾಗೂ ನಾಗರಿಕರಿಗೆ ಆರೋಗ್ಯಕರ ಪರಿಸರ ಒದಗಿಸುವ ಉದ್ದೇಶದಿಂದ ಇಂದು ಕೇಂದ್ರ ನಗರ ಪಾಲಿಕೆ ವ್ಯಾಪ್ತಿಯ ವಿವಿಧ ಪ್ರದೇಶಗಳಲ್ಲಿ ವಿಶೇಷ ಸ್ವಚ್ಛತಾ ಅಭಿಯಾನ ಕೈಗೊಳ್ಳಲಾಯಿತು. ಸದರಿ ಪಾಲಿಕೆ ವ್ಯಾಪ್ತಿಯ 06 ವಿಧಾನಸಭಾ ಕ್ಷೇತ್ರಗಳ ವಿವಿಧ ಭಾಗಗಳಲ್ಲಿ ಕಸದ ಸಂಗ್ರಹಣೆ ಆಗುವ ಸ್ಥಳಗಳನ್ನು ಗುರುತಿಸಿ, ಅವುಗಳನ್ನು ತೆರವುಗೊಳಿಸುವ ಕಾರ್ಯವನ್ನು ನಿರಂತರವಾಗಿ ಕೈಗೊಳ್ಳಲಾಗುತ್ತಿದೆ.
ನಿಯಮಿತ ಸ್ವಚ್ಛತಾ ಕಾರ್ಯಗಳ ಜೊತೆಗೆ ವಿಶೇಷ ಸ್ವಚ್ಛತಾ ಅಭಿಯಾನವನ್ನು ರೂಪಿಸುವುದರಿಂದ, ನಗರದಲ್ಲಿ ಗುರುತಿಸಲ್ಪಟ್ಟ ಬ್ಲ್ಯಾಕ್ ಸ್ಪಾಟ್ ಪ್ರದೇಶಗಳನ್ನು ಶಾಶ್ವತವಾಗಿ ನಿರ್ಮೂಲನೆ ಮಾಡಲು ಹೆಚ್ಚಿನ ಆದ್ಯತೆ ನೀಡಲಾಗಿದೆ. ಸಾರ್ವಜನಿಕರು ರಸ್ತೆ ಬದಿ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಕಸ ಎಸೆಯದೇ ಮನೆ ಹತ್ತಿರ ಬರುವ ಆಟೋ ಟಿಪ್ಪರ್ ಗಳಿಗೆ ತ್ಯಾಜ್ಯ ನೀಡುವ ಮೂಲಕ ನಗರ ಸ್ವಚ್ಛತೆಗೆ ಹಾಗೂ ಆರೋಗ್ಯಕರ ವಾತಾವರಣ ನಿರ್ಮಿಸಲು ಸಹಕರಿಸಬೇಕು ಎಂದು ಅವರು ಮನವಿ ಮಾಡಿದರು.
ಸ್ವಚ್ಛತೆ ಕಾರ್ಯಾಚರಣೆ ಪ್ರಮುಖ ಅಂಶಗಳು:
* ಒಟ್ಟು 9.62 ಕಿಲೋ ಮೀಟರ್ ವ್ಯಾಪ್ತಿಯಲ್ಲಿ ಸ್ವಚ್ಛತೆ ಕೈಗೊಳ್ಳಲಾಗಿದೆ
* 07 ಜೆಸಿಬಿ ಯಂತ್ರಗಳು ಮತ್ತು 30 ಟ್ರ್ಯಾಕ್ಟರ್ ಗಳ ಬಳಕೆ
* ರಸ್ತೆ ಬದಿಗಳಲ್ಲಿ ಸಂಗ್ರಹವಾಗಿದ್ದ 35 ಲೋಡ್ ತ್ಯಾಜ್ಯ ತೆರವು
* 12 ಬ್ಲ್ಯಾಕ್ ಸ್ಪಾಟ್ ಗಳ ಸಂಪೂರ್ಣ ನಿರ್ಮೂಲನೆ
* 162 ಪೌರಕಾರ್ಮಿಕರು ಹಾಗೂ ಸ್ವಚ್ಛತಾ ಸಿಬ್ಬಂದಿಗಳು ಭಾಗಿ

ಸ್ವಚ್ಛಗೊಂಡ ಪ್ರಮುಖ ಪ್ರದೇಶಗಳು:
ಈ ವಿಶೇಷ ಸ್ವಚ್ಛತಾ ಅಭಿಯಾನವು ಚಾಮರಾಜಪೇಟೆ, ಚಿಕ್ಕಪೇಟೆ, ಗಾಂಧಿನಗರ, ಶಾಂತಿನಗರ, ಶಿವಾಜಿನಗರ ಮತ್ತು ಸಿ.ವಿ. ರಾಮನ್ ನಗರ ವಿಧಾನಸಭಾ ಕ್ಷೇತ್ರಗಳಲ್ಲಿ ನಡೆದಿದೆ.
* ಚಾಮರಾಜಪೇಟೆ ಕ್ಷೇತ್ರ: ಭಕ್ಷಿ ಗಾರ್ಡನ್, ಬಾರ್ಲೇನ್, ಅಂಬೇಡ್ಕರ್ ಪ್ರತಿಮೆ ಸಮೀಪ ಹಾಗೂ ಸುತ್ತಮುತ್ತಲಿನ ಪ್ರದೇಶಗಳು
* ಚಿಕ್ಕಪೇಟೆ ಕ್ಷೇತ್ರ: ವಾರ್ಡ್ 143, 144 ಮತ್ತು 145 ರಲ್ಲಿ ಮುರುಮರ ವೃತ್ತದಿಂದ ಡೈರಿ ವೃತ್ತದವರೆಗೆ, ಇಂದಿರಾ ಗಾಂಧಿ ಮಕ್ಕಳ ಆರೋಗ್ಯ ಸಂಸ್ಥೆ ಹಾಗೂ ಸ್ಪೆಷಾಲಿಟಿ ಆಸ್ಪತ್ರೆಯ ಸುತ್ತಮುತ್ತ
* ಗಾಂಧಿನಗರ ಕ್ಷೇತ್ರ: 6ನೇ ಅಡ್ಡರಸ್ತೆ, ಕಿಲಾರಿ ರಸ್ತೆ, ಅವಿನ್ಯೂ ರಸ್ತೆ, ಕಬ್ಬನ್ ಪೇಟೆ
* ಶಾಂತಿನಗರ ಕ್ಷೇತ್ರ: ದೊಮ್ಮಲೂರು ವಿಲೇಜ್, ಸಿದ್ಧಾರ್ಥ ನಗರ ಪಾದಚಾರಿ ಮಾರ್ಗ
* ಶಿವಾಜಿನಗರ ಕ್ಷೇತ್ರ: ಸೆಪ್ಪಿಂಗ್ಸ್ ರಸ್ತೆ ಮತ್ತು ಸುತ್ತಮುತ್ತಲಿನ ಅಡ್ಡರಸ್ತೆಗಳು
* ಸಿ.ವಿ. ರಾಮನ್ ನಗರ ಕ್ಷೇತ್ರ: ಜೀವನ್ ಭೀಮಾನಗರ ಬಿ.ಡಿ.ಎ ಮುಖ್ಯ ರಸ್ತೆ ಇಂದ ಹಳೆ ವಿಮಾನ ನಿಲ್ದಾಣ ರಸ್ತೆವರೆಗೆ ಸ್ವಚ್ಛತಾ ಕಾರ್ಯ ನಡೆದಿದೆ. ಅಭಿವೃದ್ಧಿ ಅಪರ ಆಯುಕ್ತ ದಲ್ಜಿತ್ ಕುಮಾರ್ ಅವರ ಮಾರ್ಗದರ್ಶನದಲ್ಲಿ ನಡೆದ ಸ್ವಚ್ಛತೆ ಕಾರ್ಯಾಚರಣೆ ನಡೆದಿದೆ ಎಂದು ಪಾಲಿಕೆ ಆಯುಕ್ತರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.












Click it and Unblock the Notifications