ಧನ್ಯವಾದ ಹೇಳಿದ ಉತ್ತರ ಭಾರತದ ಮಹಿಳೆಗೆ 'ಜನ ಗಣ ಮನ' ಎಂದ ಬೆಂಗಳೂರು ಪೊಲೀಸರು!
ಬೆಂಗಳೂರು, ಫೆಬ್ರವರಿ 12: ನಗರದ ಪೊಲೀಸರ ವರ್ತನೆ ಬಗ್ಗೆ ಆರೋಪಗಳು ಇರುವಂತೆಯೇ ಮೆಚ್ಚುಗೆಯೂ ಇದೆ. ಜನರ ಸುರಕ್ಷತೆ, ನೆರವು ನೀಡುವುದು, ಸಾರ್ವಜನಿಕ ಸಮಸ್ಯೆಗಳನ್ನು ತಾವೇ ಖುದ್ದಾಗಿ ಮುತುವರ್ಜಿ ವಹಿಸಿ ಪರಿಹರಿಸುವುದು ಮುಂತಾದ ಮಾನವೀಯ ಮೌಲ್ಯಗಳನ್ನು ಎತ್ತಿಹಿಡಿಯುವ ಕಾರ್ಯಗಳಲ್ಲಿಯೂ ಪೊಲೀಸರು ಮುಂದಿದ್ದಾರೆ.
ನಗರದಲ್ಲಿ ಮಧ್ಯರಾತ್ರಿ ಓಡಾಡುವ ವೇಳೆ ತಮ್ಮ ಸುರಕ್ಷತೆಗೆ ಬೆಂಗಳೂರು ಪೊಲೀಸರು ನೀಡಿದ ಸಹಕಾರದ ಬಗ್ಗೆ ಜನರು ಸಾಮಾಜಿಕ ಜಾಲತಾಣಗಳಲ್ಲಿ ಬರೆದುಕೊಂಡಿದ್ದಾರೆ. ತಡರಾತ್ರಿ ಸಂಕಷ್ಟಕ್ಕೆ ಸಿಲುಕಿದ್ದ ಉತ್ತರ ಭಾರತದ ಯುವತಿಯೊಬ್ಬರು ಪೊಲೀಸರನ್ನು ಕೊಂಡಾಡಿದ್ದಾರೆ.
ಬೆಂಗಳೂರು ಪೊಲೀಸರಿಗೆ ಪ್ರಶಂಸೆ ವ್ಯಕ್ತಪಡಿಸಿದ ಜನತೆ
'ಒಮ್ಮೆ ಮಧ್ಯರಾತ್ರಿ 12 ಗಂಟೆ ವೇಳೆಗೆ ನನ್ನ ಕಾರು ಹಾಳಾಗಿತ್ತು. ನನ್ನ ಕುಟುಂಬದವರು ನನ್ನನ್ನು ಕರೆದೊಯ್ಯಲು ಬರುವವರೆಗೂ ನನ್ನ ಜತೆಯೇ ನಿಂತಿದ್ದರು. ನೀವು ಅದ್ಭುತ ಕೆಲಸ ಮಾಡಿದ್ದೀರಿ' ಎಂದು ಸಾಫ್ಟ್ವೇರ್ ಉದ್ಯೋಗಿ ನೀಲೋತ್ಪಲ್ ಮಿಶ್ರಾ ಎಂಬುವವರು ಟ್ವೀಟ್ ಮಾಡಿದ್ದಾರೆ.
ಜನ ಗಣ ಮನ ಎಂದ ಪೊಲೀಸರು
ಇದಕ್ಕೆ ಬೆಂಗಳೂರು ಸಿಟಿ ಪೊಲಿಸ್ ಟ್ವಿಟ್ಟರ್ ಖಾತೆಯಲ್ಲಿ, 'ಪ್ರಿಯ ನೀಲೋತ್ಪಲ್ ಮಿಶ್ರಾ, ನಾವೂ ನಿಮ್ಮ ಕುಟುಂಬದ ಸದಸ್ಯರಲ್ಲಿ ಒಬ್ಬರು... ಜನ ಗಣ ಮನ...' ಎಂದು ಟ್ವೀಟ್ ಮಾಡಿದ್ದಾರೆ. ಈ ಪ್ರತಿಕ್ರಿಯೆ ಬಹಳ ಸೊಗಸಾಗಿದೆ ಎಂದು ಮಿಶ್ರಾ ಮತ್ತೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ತಂಗಿಗೆ ರಕ್ಷಣೆ ನೀಡಿದ್ದ ಪೊಲೀಸ್
'ನನ್ನ ತಂಗಿ ಫೆ.6ರಂದು ಕೆಂಪೇಗೌಡ ವಿಮಾನ ನಿಲ್ದಾಣದಿಂದ ಎಎಸ್ಸಿ ಬಸ್ ನಿಲ್ದಾಣಕ್ಕೆ ರಾತ್ರಿ 1 ಗಂಟೆ ವೇಳೆಗೆ ಬಂದಿಳಿದು ನನಗಾಗಿ ಕಾಯುತ್ತಿದ್ದಳು. ನಾನು ಅಲ್ಲಿಗೆ ತೆರಳಿದಾಗ ಅಚ್ಚರಿಯಾಯಿತು. ಅಲ್ಲಿ ಪೊಲೀಸರೊಬ್ಬರು ಆಕೆಯ ಸುರಕ್ಷತೆಯಾಗಿ ಜತೆಯೇ ನಿಂತುಕೊಂಡಿದ್ದರು' ಎಂದು ಪ್ರವೀಣ್ ಪ್ರಕಾಶ್ ಎಂಬುವವರು ಮಂಗಳವಾರ ಬೆಂಗಳೂರು ನಗರ ಪೊಲೀಸರ ಕರ್ತವ್ಯವನ್ನು ಶ್ಲಾಘಿಸಿದ್ದಾರೆ.
ನಾಗಕರಿಕ ಸ್ನೇಹಿ ಇ-ಆಡಳಿತ ಪ್ರಶಸ್ತಿಗೆ ಪಾತ್ರವಾದ ಬೆಂಗಳೂರು ಪೊಲೀಸ್
ಇದು ಸೇವೆಯ ನೈಜ ಅರ್ಥ
ಪ್ರವೀಣ್ ಪ್ರಕಾಶ್ ಅವರ ಟ್ವೀಟ್ಗೆ ಬೆಂಗಳೂರು ಪೊಲೀಸರು, 'ಧನ್ಯವಾದಗಳು. ಇದು ಕಾಳಜಿ, ಸಹಾನುಭೂತಿ ಮತ್ತು ಧೈರ್ಯದ 24/7 ಸಾರ್ವಜನಿಕ ಸೇವೆಯ ನೈಜ ಅರ್ಥ' ಎಂದು 'ನಾವು ಯಾವಾಗಲೂ ನಿಮ್ಮೊಂದಿಗೆ ಇದ್ದೇವೆ' ಎಂದು ಪ್ರತಿಕ್ರಿಯಿಸಿದ್ದರು.
ಸ್ಯಾಂಕಿ ಕೆರೆ ಬಳಿ ಕಂಡದ್ದು...
'ಕಳೆದ ಶನಿವಾರ ಹೆಚ್ಚೂ ಕಡಿಮೆ ಮಧ್ಯರಾತ್ರಿ, ಸ್ಯಾಂಕಿ ಕೆರೆಯ ಮೂರನೇ ಮುಖ್ಯ ರಸ್ತೆ ಮೂಲಕ ಹೋಗುತ್ತಿದ್ದೆ. ಆದರೆ ಎರಡು ದ್ವಿಚಕ್ರ ವಾಹನಗಳು ಅಕ್ಕಪಕ್ಕ ಹೋಗುತ್ತಿರುವುದನ್ನು ನೋಡಿದೆ. ಹತ್ತಿರದಿಂದ ನೋಡಿದಾಗ, ಮಹಿಳೆಯೊಬ್ಬರು ತಮ್ಮ ಸ್ಕೂಟರ್ನಲ್ಲಿದ್ದರು, ಮತ್ತೊಂದು ಬೈಕ್ನಲ್ಲಿ ಇದ್ದದ್ದು ಬೆಂಗಳೂರು ಪೊಲೀಸ್. ಮಹಿಳೆಯನ್ನು ಸುರಕ್ಷಿತವಾಗಿ ಕರೆದೊಯ್ಯುತ್ತಿದ್ದರು' ಎಂದು ವೀಎಸ್ ಎಂಬ ಖಾತೆಯಿಂದ ಟ್ವೀಟ್ ಮಾಡಲಾಗಿದೆ.
ಟಿಕ್ಟಾಕ್ಗೆ ಬೆಂಗಳೂರು ನಗರ ಪೊಲೀಸರ ಸೇರ್ಪಡೆ
ಮಹಿಳೆಯರ ಸುರಕ್ಷತೆಗೆ ಪೊಲೀಸರ ಯೋಜನೆ
ರಾಜಧಾನಿಯಲ್ಲಿ ಮಹಿಳೆಯರ ಸುರಕ್ಷತೆಗೆ ಪೊಲೀಸರು ಹೊಸ ಪೈಲಟ್ ಪ್ರಾಜೆಕ್ಟ್ ಜಾರಿಗೆ ತರುವ ಚಿಂತನೆ ಮಾಡಿದ್ದಾರೆ. ಪ್ರಮುಖ ಸ್ಥಳಗಳಲ್ಲಿ ಮಹಿಳೆಯರ ಓಡಾಟ ಹೆಚ್ಚಾದರೆ ಸಹಜವಾಗಿಯೇ ಅವರ ಸುರಕ್ಷತೆಯ ವಾತಾವರಣ ನಿರ್ಮಾಣವಾಗುತ್ತದೆ. ಮಹಿಳೆಯರ ಓಡಾಟ ಕಡಿಮೆ ಇರುವಲ್ಲಿ ದೌರ್ಜನ್ಯ ಹಾಗೂ ಭಯದ ವಾತಾವರಣ ಇರುತ್ತದೆ ಎನ್ನುವುದು ಅವರ ನಂಬಿಕೆ. ಅದಕ್ಕಾಗಿ ವ್ಯಾಪಾರ ಚಟುವಟಿಕೆಗಳಲ್ಲಿ ಮಹಿಳೆಯರು ಹೆಚ್ಚು ತೊಡಗಿಕೊಳ್ಳುವಂತೆ ಮಾಡುವ ಯೋಜನೆ ರೂಪಿಸಿದ್ದಾರೆ. ಅದಕ್ಕಾಗಿ ವಿವಿಧ ಸರ್ಕಾರಿ ಇಲಾಖೆಗಳ ಜತೆಗೆ ಮಾತುಕತೆ ನಡೆಸಿದ್ದಾರೆ.