ಬೆಂಗಳೂರು ಚರ್ಚ್ ಸ್ಟ್ರೀಟ್ ಸ್ಫೋಟ ತನಿಖೆಗೆ ಎಳ್ಳು-ನೀರು!
ಬೆಂಗಳೂರು, ಏ.1 : ಬೆಂಗಳೂರು ಚರ್ಚ್ ಸ್ಟ್ರೀಟ್ ಸ್ಫೋಟದ ತನಿಖೆ ಹಾದಿ ವಿವಿಧ ದಿಕ್ಕಿನಲ್ಲಿ ಸಾಗಿ ಅಂತ್ಯ ಕಾಣುವುದರಲ್ಲಿ ವಿಫಲವಾಗಿದೆ. ತನಿಖೆ ಆರಂಭವೇ ಆಗದೇ ಅಂತ್ಯವಾದಂತೆ ತೋರುತ್ತಿದೆ. ರಾಷ್ಟ್ರೀಯ ತನಿಖಾ ದಳ ಪ್ರಕರಣವನ್ನು ಚೆನ್ನೈ ರೈಲು ಸ್ಫೋಟ, ಬಿಜನೂರು ಬ್ಲಾಸ್ಟ್, ಮಧ್ಯ ಪ್ರದೇಶ ಮತ್ತು ಆಂಧ್ರ ಪ್ರದೇಶದ ಎರಡು ದೊಡ್ಡ ದರೋಡೆ ಪ್ರಕರಣಗಳಿಗೆ ತಳುಕು ಹಾಕಿ ನೋಡುತ್ತಿದೆ.
ಮಧ್ಯ ಪ್ರದೇಶದ ಖಾಂದ್ವಾ ಜೈಲಿನಿಂದ 2013 ರಲ್ಲಿ ಪರಾರಿಯಾಗಿರುವ ಸ್ಟೂಡೆಂಟ್ ಇಸ್ಲಾಮಿಕ್ ಫೌಂಡೇಷನ್ ನ(ಸಿಮಿ) 5 ಜನರ ಮೇಲೆ ತನಿಖಾ ದಳ ಪ್ರಾಥಮಿಕವಾಗಿ ಎಫ್ ಐ ಆರ್ ವೊಂದನ್ನು ದಾಖಲಿಸಿ ವಿಚಾರಣೆ ನಡೆಸುತ್ತಿದೆ.[ಬೆಂಗಳೂರಲ್ಲಿ ಓರ್ವ ಶಂಕಿತ ಉಗ್ರ ಸೇರಿ ಇಬ್ಬರು ವಶ]

ಪ್ರಕರಣಗಳನ್ನು ಕ್ಲಬ್ ಮಾಡಲಾಗುವುದೆ?
ಈ ಬಗ್ಗೆ ಅಧಿಕೃತ ಪ್ರಕಟಣೆಯೊಂದನ್ನು ಹೊರಡಿಸಿರುವ ತನಿಖಾ ದಳ ಎಲ್ಲ ಪ್ರಕರಣಗಳನ್ನು ಒಟ್ಟಾಗಿ ಸೇರಿಸಿ ತನಿಖೆ ನಡೆಸಲಾಗುವುದು. ಈ ಎಲ್ಲ ಘಟನೆಗಳ ಹಿಂದೆ ಸಿಮಿ ಸಂಘಟನೆಗೆ ಸೇರಿದ 5 ಜನ ಉಗ್ರರು ಇರುವುದು ಸಾಬೀತಾಗುತ್ತಿದೆ ಎಂದು ತಿಳಿಸಿದೆ.
ಮೊದಲು ಶಂಕಿತರನ್ನು ಬಂಧಿಸಬೇಕಿದೆ. ಚೆನ್ನೈ ಬಾಂಬ್ ಸ್ಫೋಟವನ್ನು ಗಣನೆಗೆ ತೆಗೆದುಕೊಳ್ಳುವುದಾದರೆ 5 ಜನ ಶಂಕಿತರು ಬಾಂಬ್ ಹೊತ್ತೊಯ್ದಿರುವುದು ಸಾಬೀತಾಗಿದೆ. ಈ ಬಗ್ಗೆ ಸಿಸಿಟಿವಿಯಲ್ಲಿ ದಾಖಲೆ ಸಿಕ್ಕಿದೆ. ಬಿಜನೂರ್ ಬ್ಲಾಸ್ಟ್ ಮತ್ತು ಮಧ್ಯ ಪ್ರದೇಶ ಮತ್ತು ಕರೀಮ್ ನಗರದ ಬ್ಯಾಂಕ್ ದರೋಡೆಗಳು 5 ಜನರಿಂದಲೇ ನಡೆದಿದೆ. ಈ ಎಲ್ಲ ಮಾಹಿತಿಗಳನ್ನು ಕಲೆಹಾಕಿ ಒಟ್ಟಾಗಿ ವಿಚಾರಣೆ ನಡೆಸಲಾಗುತ್ತಿದೆ ಎಂದು ತನಿಖಾ ದಳ ಒನ್ ಇಂಡಿಯಾಕ್ಕೆ ಮಾಹಿತಿ ನೀಡಿದೆ.[ಉಗ್ರರ ಮೇಲೆ ಕಣ್ಣಿಡಲು ಸಿದ್ದುಗೆ ರಾಜನಾಥ್ ಸೂಚನೆ]
ಚರ್ಚ್ ಸ್ಟ್ರೀಟ್ ಸ್ಫೋಟ ತನಿಖೆ ಅಂತ್ಯ?
ಪ್ರಕರಣಕ್ಕೆ ಸಂಬಂಧಿಸಿ ಬೆಂಗಳೂರು ಪೊಲೀಸರು ದೇಶಾದ್ಯಂತ ಸಂಚರಿಸಿ ಮಾಹಿತಿ ಕಲೆ ಹಾಕಿದ್ದಾರೆ. ಬಿಹಾರದಲ್ಲಿ ಕೆಲವರನ್ನು ವಿಚಾರಣೆಗೂ ಒಳಪಡಿಸಿದ್ದರು. ಈ ಬಗ್ಗೆ ವಿವರಣೆ ನೀಡಿರುವ ಬೆಂಗಳೂರು ಪೊಲೀಸ್ ಆಯುಕ್ತ ಎಂ.ಎನ್.ರೆಡ್ಡಿ, ತನಿಖೆಯನ್ನು ರಾಷ್ಟ್ರೀಯ ತನಿಖಾ ದಳಕ್ಕೆ ಒಪ್ಪಿಸುವ ಕುರಿತು ಮಾತುಕತೆ ನಡೆದಿದೆ ಎಂದು ತಿಳಿಸಿದ್ದಾರೆ.
ಕೇಂದ್ರ ಗೃಹ ಸಚಿವ ರಾಜ್ ನಾಥ್ ಸಿಂಗ್ ಕೆಲ ದಿನಗಳ ಹಿಂದೆ ಸಿಎಂ ಸಿದ್ದರಾಮಯ್ಯ ಸೇರಿದಂತೆ 3 ರಾಜ್ಯದ ಮುಖ್ಯಮಂತ್ರಿಗಳಿಗೆ ಪತ್ರ ಬರೆದು ಉಗ್ರರ ವಿರುದ್ಧದ ತನಿಖೆ ಯಾವ ದಿಕ್ಕಿನಲ್ಲಿದೆ? ಎಂಬುದರ ಕುರಿತು ಮಾಹಿತಿ ಕೇಳಿದ್ದರು. ಶಂಕಿತರು ಕೇರಳಕ್ಕೂ ಭೇಟಿ ನೀಡಿದ್ದರು ಎಂಬ ಮಾಹಿತಿ ಲಭ್ಯವಾಗಿದ್ದು ತನಿಖಾ ದಳ ಅಲ್ಲಿಗೂ ಭೇಟಿ ನೀಡಿ ವಿಚಾರಣೆ ನಡೆಸಿತ್ತು.












Click it and Unblock the Notifications