Bengaluru: 2 ವರ್ಷದಿಂದ ಚಾಮರಾಜಪೇಟೆ, ಮೈಸೂರು ರೋಡ್, ಜಯನಗರ ಜನತೆಗೆ ಶುದ್ಧ ಕುಡಿಯುವ ನೀರು ಸಿಗುತ್ತಿಲ್ಲ
ರಾಜ್ಯದ ರಾಜಧಾನಿ, ಆಡಳಿತ ನಗರ ಬೆಂಗಳೂರಿನ ಜನರಿಗೆ ಸರಿಯಾಗಿ ಕುಡಿಯುವ ನೀರು ಪೂರೈಕೆಯಾಗುತ್ತಿಲ್ಲ. ಸಿಕ್ಕರೂ ಕುಡಿಯಲು ಯೋಗ್ಯವಾಗಿರುವುದಿಲ್ಲ. ಇದು ವಿಧಾನಸಭೆ ಚುನಾವಣೆ ಹೊತ್ತಲ್ಲೇ ಬೆಂಗಳೂರು ಮಹಾನಗರದ ಜನರು ಎದುರಿಸುತ್ತಿರುವ ಸಮಸ್ಯೆಯಾಗಿದೆ.
ಇದೀಗ ಬೆಂಗಳೂರಿನ ಜಯನಗರದ ಸೌಂತ್ ಎಂಡ್ ಸರ್ಕಲ್, ಚಾಮರಾಜಪೇಟೆ ಮತ್ತು ಮೈಸೂರು ರಸ್ತೆಯ ಜನರಿಗೆ ಶುದ್ಧ ಕುಡಿಯುವ ನೀರು ಪೂರೈಕೆಯಾಗುವ ಮುಖ್ಯ ಪೈಪ್ ಬಿರುಕು ಬಿಟ್ಟಿದ್ದು, ಇದಕ್ಕೆ ಕೊಳಚೆ (ಚರಂಡಿ) ನೀರು ಸೇರಿಕೊಳ್ಳುತ್ತಿದೆ ಎಂಬ ಆತಂಕಕಾರಿ ಸಂಗತಿ ತಿಳಿದುಬಂದಿದೆ.

ಒಂದು ವಾರದ ಹಿಂದೆ ಈ ಸೋರಿಕೆ ಮತ್ತು ಮಿಶ್ರಣದ ಸಂಗತಿ ಪತ್ತೆಯಾಗಿದ್ದು, ಬೆಂಗಳೂರು ಜಲಮಂಡಳಿಗೆ ನಿರ್ದಿಷ್ಟವಾಗಿ ಯಾವ ಭಾಗದಲ್ಲಿ ಚರಂಡಿ ನೀರು ಮಿಶ್ರಿತವಾಗುತ್ತಿದೆ ಎಂಬುದನ್ನು ಪತ್ತೆ ಹಚ್ಚಲು ಸಾಧ್ಯವಾಗುತ್ತಿಲ್ಲ. ಅಲ್ಲದೇ ದುರಸ್ತಿ ಕೆಲಸವನ್ನು ನಡುರಸ್ತೆಯಲ್ಲಿಯೇ ಕೈ ಬಿಡಲಾಗಿದೆ.
ನನ್ನ ವ್ಯಾಪ್ತಿಗೆ ಬರಲ್ಲ ಎಂಬ ಅಧಿಕಾರಿಗಳ ಉವಾಚ
ಕುಡಿಯುವ ನೀರಿಗೆ ಚರಂಡಿ ನೀರು ಮಿಶ್ರಿಣ ವಿಚಾರವಾಗಿ ಜಲಮಂಡಳಿಯ ಅಧಿಕಾರಿಗಳ ನಡುವೆಯೇ ಭಿನ್ನಾಭಿಪ್ರಾಯ ಉಂಟಾಗಿದೆ. ಚರಂಡಿ ನೀರು ಸೇರುತ್ತಿರುವ ಜಾಗ ನನ್ನ ವ್ಯಾಪ್ತಿಗೆ ಬರಲ್ಲ, ಅದು ನಮ್ಮ ಕಾರ್ಯವ್ಯಾಪ್ತಿಗೆ ಸಂಬಂಧಿಸಿಲ್ಲ ಎಂದು ಅಧಿಕಾರಿಗಳು ಆರೋಪ ಮತ್ತು ಪ್ರತ್ಯಾರೋಪದಲ್ಲಿ ತೊಡಗಿದ್ದಾರೆ.
ಎರಡು ವರ್ಷದಿಂದ ಜನರಿಗೆ ಚರಂಡಿ ಮಿಶ್ರಿತ ನೀರು ಪೂರೈಕೆ
ಕಳೆದ ಎರಡು ವರ್ಷದಿಂದ ಕುಡಿಯುವ ನೀರಿಗೆ ಚರಂಡಿ ನೀರು ಸೇರುತ್ತಿರುವ ಸಂಗತಿ ಬಯಲಿಗೆ ಬಂದಿದ್ದರೂ, ಜಲಮಂಡಳಿಗೆ ಕೆಟ್ಟ ಹೆಸರು ಬರುತ್ತದೆ ಎಂಬ ಕಾರಣಕ್ಕೆ ಈ ವಿಷಯವನ್ನು ಎಲ್ಲೂ ಬಹಿರಂಗಪಡಿಸಿರಲಿಲ್ಲ. ಅಷ್ಟೇ ಅಲ್ಲದೇ, ಈ ಪೈಪ್ನಲ್ಲಿ ಎಷ್ಟು ಪ್ರಮಾಣದ ಕೊಳಚೆ ನೀರು ಮಿಶ್ರಿತವಾಗುತ್ತಿದೆ ಎಂಬ ಸಂಗತಿಯೂ ಪತ್ತೆಯಾಗಿಲ್ಲ.

ದುರಸ್ತಿ ಕಷ್ಟದ ಕೆಲಸ
ಬೆಂಗಳೂರು ಜಲಮಂಡಳಿಯ ಮುಖ್ಯ ಪೈಪ್ಲೈನ್ನಲ್ಲಿ ಚಿಕ್ಕ ಬಿರುಕು ಬಿಟ್ಟು ಅದಕ್ಕೆ ಚರಂಡಿ ನೀರು ಸೇರಿದರೆ ಅದನ್ನು ದುರಸ್ತಿ ಮಾಡುವುದು ಸುಲಭದ ಕೆಲಸವಲ್ಲ. ದುರಸ್ತಿ ನಡೆಸಬೇಕಾದಲ್ಲಿ ನೀರಿನ ಸರಬರಾಜನ್ನು ಕೆಲ ದಿನಗಳ ಮಟ್ಟಿಗೆ ನಿಲ್ಲಿಸಬೇಕಾಗುತ್ತದೆ. ಹಾಗೆ ಮಾಡಿದರೆ, ಬೆಂಗಳೂರಿನ ಹಲವು ಭಾಗಗಳಿಗೆ ನೀರು ಪೂರೈಕೆಯಾಗುವುದಿಲ್ಲ.
ದುರಸ್ತಿ ಯಾವಾಗ?
ಪೈಪ್ಲೈನ್ ಒಡೆದಿರುವ ಮತ್ತು ಕೊಳಚೆ ನೀರು ಮಿಶ್ರಣವಾಗುವ ಜಾಗ ಗೊತ್ತಾದರೆ ದುರಸ್ತಿ ಮಾಡಲು ಕನಿಷ್ಟ ಒಂದು ವಾರವಾದರೂ ಬೇಕಾಗುತ್ತದೆ. ಒಂದು ವಾರದ ಕಾಲ ನೀರು ಪೂರೈಕೆ ನಿಂತರೆ ಬೆಂಗಳೂರು ಜನತೆಗೆ ಕುಡಿಯುವ ನೀರಿನ ಅಭಾವ ಎದುರಾಗಲಿದೆ. ಹೀಗಾಗಿ ಬೆಂಗಳೂರು ಜಲಮಂಡಳಿಗೆ ದೊಡ್ಡ ತಲೆನೋವು ಎದುರಾಗಿದೆ.
ಇದು ಹೀಗೆ ಮುಂದುವರೆದರೆ ಬೆಂಗಳೂರಿನ ಜನತೆ ಚರಂಡಿ ಮಿಶ್ರಿತ ನೀರು ಕುಡಿಯಬೇಕೇ? ಎಂಬ ಪ್ರಶ್ನೆ ಕಾಡುತ್ತಿದೆ. ಕೂಡಲೇ ಬೆಂಗಳೂರು ಜಲಮಂಡಳಿ ಅಧಿಕಾರಿಗಳು ತ್ವರಿತವಾಗಿ ದುರಸ್ತಿ ಕಾರ್ಯಕ್ಕೆ ಮುಂದಾಬೇಕಿದ್ದು, ಚಾಮರಾಜಪೇಟೆ, ಜಯನಗರ ಮತ್ತು ಮೈಸೂರು ರಸ್ತೆ ಭಾಗಗಳ ಅಧಿಕಾರಿಗಳು ಒಟ್ಟುಗೂಡಿ ಕೆಲಸ ಮಾಡಬೇಕಿದೆ. ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಜನಪ್ರತಿನಿಧಿಗಳು ಜನರ ಕೋಪಕ್ಕೆ ತುತ್ತಾಗಬೇಕಾಗುತ್ತದೆ.












Click it and Unblock the Notifications