ಬೆಂಗಳೂರಲ್ಲಿ ಜನಗಣತಿ ಸ್ವಯಂ ನೋಂದಣಿಗೆ ಕೇವಲ 2% ಸ್ಪಂದನೆ; ಮನೆ ಮನೆ ಸಮೀಕ್ಷೆ ಶುರು, ಮಾಹಿತಿ ನೀಡದಿದ್ದರೆ ಕಾನೂನು ಕ್ರಮ
ಬೆಂಗಳೂರು: 2027ರ ಜನಗಣತಿ ಪ್ರಕ್ರಿಯೆಗೆ ಸಂಬಂಧಿಸಿದಂತೆ ಮನೆಗಳ ಪಟ್ಟಿ ಮಾಡಲು ನೀಡಲಾಗಿದ್ದ 'ಸ್ವಯಂ-ನೋಂದಣಿ' ಅವಕಾಶಕ್ಕೆ ಬೆಂಗಳೂರಿನಲ್ಲಿ ತೀರಾ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ. ಕೇವಲ ಶೇಕಡಾ 2ರಷ್ಟು ಜನರು ಮಾತ್ರ ಆನ್ಲೈನ್ ಮೂಲಕ ಸ್ವಯಂ-ನೋಂದಣಿ ಮಾಡಿಕೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ಬಗ್ಗೆ ಮಾಹಿತಿ ನೀಡಿರುವ ಗ್ರೇಟರ್ ಬೆಂಗಳೂರು ಪ್ರಾಧಿಕಾರದ (GBA) ವಿಶೇಷ ಆಯುಕ್ತರಾದ ಮುನೀಶ್ ಮೌದ್ಗಿಲ್, "ಜನರು ತಾವಾಗಿಯೇ ನೋಂದಣಿ ಮಾಡಿಕೊಳ್ಳಲಿ ಎಂಬ ಉದ್ದೇಶದಿಂದ ನಾವು ಸಾಕಷ್ಟು ಪ್ರಚಾರ ಹಾಗೂ ಜಾಹೀರಾತುಗಳನ್ನು ನೀಡಿದ್ದೆವು. ಆದರೆ, ಸಾರ್ವಜನಿಕರ ಪ್ರತಿಕ್ರಿಯೆ ತೀರಾ ನಿರಾಶಾದಾಯಕವಾಗಿದೆ" ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಸ್ವಯಂ-ನೋಂದಣಿಗೆ ಹೆಚ್ಚಿನ ಸಮಯಾವಕಾಶ ಸಿಗಬಹುದು ಎಂಬ ನಿರೀಕ್ಷೆ ಇತ್ತಾದರೂ, ಕೇಂದ್ರ ಸರ್ಕಾರವು ಏಪ್ರಿಲ್ 15ರ ನಂತರ ಗಡುವನ್ನು ವಿಸ್ತರಿಸಲಿಲ್ಲ.

ಈ ಹಿನ್ನೆಲೆಯಲ್ಲಿ ಮನೆಗಳ ಪಟ್ಟಿ ಮಾಡುವ ನಿಟ್ಟಿನಲ್ಲಿ ಕ್ಷೇತ್ರ ಕಾರ್ಯ ಗುರುವಾರದಿಂದಲೇ ಆರಂಭವಾಗಿದೆ. ಇದಕ್ಕಾಗಿ ಬರೋಬ್ಬರಿ 23,000 ಗಣತಿದಾರರು ಮತ್ತು 2,500 ಮೇಲ್ವಿಚಾರಕರನ್ನು ಕರ್ತವ್ಯಕ್ಕೆ ನಿಯೋಜಿಸಲಾಗಿದೆ. ಪ್ರತಿಯೊಬ್ಬ ಗಣತಿದಾರರು ಸುಮಾರು 200 ಮನೆಗಳಿಗೆ ಭೇಟಿ ನೀಡಿ ಮಾಹಿತಿ ಕಲೆಹಾಕುವ ಗುರಿ ಹೊಂದಿದ್ದಾರೆ. ವಯಸ್ಸು, ಅಂಗವೈಕಲ್ಯ ಹಾಗೂ ಇತರ ವೈಯಕ್ತಿಕ ಕಾರಣಗಳ ಆಧಾರದ ಮೇಲೆ ಸುಮಾರು 8,000 ಸರ್ಕಾರಿ ಸಿಬ್ಬಂದಿಗೆ ಜನಗಣತಿ ಕರ್ತವ್ಯದಿಂದ ವಿನಾಯಿತಿ ನೀಡಲಾಗಿದೆ ಎಂದು ಮುನೀಶ್ ಮೌದ್ಗಿಲ್ ತಿಳಿಸಿದ್ದಾರೆ.
ಮನೆಗೆ ಬರುವ ಗಣತಿದಾರರು ಕೇಳುವ ಪ್ರಶ್ನೆಗಳಿಗೆ ಸಾರ್ವಜನಿಕರು ತ್ವರಿತವಾಗಿ ಉತ್ತರಿಸಿದರೆ ಇಡೀ ಪ್ರಕ್ರಿಯೆಯು ಕೇವಲ ಐದರಿಂದ ಎಂಟು ನಿಮಿಷಗಳಲ್ಲಿ ಪೂರ್ಣಗೊಳ್ಳುತ್ತದೆ. ಹೀಗಾಗಿ ಪ್ರತಿಯೊಬ್ಬರೂ ಸಹಕರಿಸಬೇಕು ಎಂದು ಅಧಿಕಾರಿಗಳು ಮನವಿ ಮಾಡಿದ್ದಾರೆ. ಜನಗಣತಿಯಲ್ಲಿ ಪಾಲ್ಗೊಂಡು ಸರಿಯಾದ ಮಾಹಿತಿ ನೀಡುವುದು 'ಜನಗಣತಿ ಕಾಯ್ದೆ, 1948'ರ ಅಡಿಯಲ್ಲಿ ಪ್ರತಿಯೊಬ್ಬ ನಾಗರಿಕನ ಶಾಸನಬದ್ಧ ಜವಾಬ್ದಾರಿಯಾಗಿದೆ. ಉದ್ದೇಶಪೂರ್ವಕವಾಗಿ ಮಾಹಿತಿ ನೀಡಲು ವಿಫಲರಾದರೆ ಅಥವಾ ನಿರಾಕರಿಸಿದರೆ ಅಂತಹವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಲಾಗಿದೆ.
ಒಂದು ವೇಳೆ ಗಣತಿದಾರರು ಭೇಟಿ ನೀಡಿದಾಗ ಮನೆಯಲ್ಲಿ ಯಾರಾದರೂ ಇಲ್ಲದಿದ್ದರೆ, ಸಂಪರ್ಕಿಸಲು ಅನುಕೂಲವಾಗುವಂತೆ ಮೊಬೈಲ್ ಸಂಖ್ಯೆ ಇರುವ ಸ್ಟಿಕ್ಕರ್ ಅನ್ನು ಮನೆಯ ಬಾಗಿಲಿಗೆ ಅಂಟಿಸಲಾಗುತ್ತದೆ. ಸಾರ್ವಜನಿಕರು ಆ ಸಂಖ್ಯೆಗೆ ಕರೆ ಮಾಡಿ ಗಣತಿದಾರರು ಮತ್ತೆ ಯಾವಾಗ ಬರಬೇಕು ಎಂಬುದನ್ನು ತಿಳಿಸಬಹುದು. ಇನ್ನು, ಹಗಲಿನಲ್ಲಿ ಮನೆಯಲ್ಲಿ ಇರದ ಉದ್ಯೋಗಸ್ಥರ ಅನುಕೂಲಕ್ಕಾಗಿ, ಮುಂದಿನ ವಾರದಿಂದ ಬೆಳಿಗ್ಗೆ 6 ರಿಂದ 10 ಗಂಟೆಯವರೆಗೆ ಮತ್ತು ಸಂಜೆ 6 ರಿಂದ 9 ಗಂಟೆಯವರೆಗೆ ಗಣತಿದಾರರು ವಿಶೇಷ ಕಾರ್ಯಾಚರಣೆ ನಡೆಸಲಿದ್ದಾರೆ. ಯಾವುದೇ ಒಬ್ಬ ನಾಗರಿಕನೂ ಈ ಪ್ರಕ್ರಿಯೆಯಿಂದ ಹೊರಗುಳಿಯಬಾರದು ಎಂಬುದೇ ಇದರ ಮುಖ್ಯ ಉದ್ದೇಶವಾಗಿದೆ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.













Click it and Unblock the Notifications