BDA: ಬಿಡಿಎ 52 ಕಿ. ಮೀ. ರಸ್ತೆ ಯೋಜನೆಗೆ ಹಲವು ವಿಘ್ನ
ಬೆಂಗಳೂರು, ಮಾರ್ಚ್ 19: ಬೆಂಗಳೂರು ನಗರದ ಸಂಚಾರ ದಟ್ಟಣೆ ಕಡಿಮೆ ಮಾಡಲು ಬೆಂಗಳೂರು ಬ್ಯುಸಿನೆಸ್ ಕಾರಿಡಾರ್-2 ಯೋಜನೆಯನ್ನು ಜಾರಿಗೊಳಿಸಲು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಮುಂದಾಗಿದೆ. 2005 ಮತ್ತು 2006ರಲ್ಲಿ ಎರಡು ಬಾರಿ ಈ ಯೋಜನೆಯ ವಿನ್ಯಾಸವನ್ನು ಬಿಡಿಎ ಬದಲಾವಣೆ ಮಾಡಿದೆ. ಬಿಡಿಎ ಈ ಯೋಜನೆ ಆರಂಭಿಸಲು ಇನ್ನೂ ಟೆಂಡರ್ ಕರೆಯಬೇಕಿದೆ.
ಬೆಂಗಳೂರು ಬ್ಯುಸಿನೆಸ್ ಕಾರಿಡಾರ್-1 ಮತ್ತು 2 ಯೋಜನೆಯನ್ನು ಬಿಡಿಎ ಕೈಗೊಂಡಿದೆ. ಮೊದಲ ಯೋಜನೆ ವ್ಯಾಪ್ತಿ 73 ಕಿ. ಮೀ. ಮತ್ತು 2ನೇ ಯೋಜನೆ 52 ಕಿ. ಮೀ. ಆಗಿದೆ. ಆದರೆ ಬಿಬಿಸಿ-2 ಯೋಜನೆಗೆ ಭೂ ಸ್ವಾಧೀನವೇ ದೊಡ್ಡ ಸವಾಲಾಗಿದೆ. ಯೋಜನೆ ಆರಂಭಕ್ಕೂ ಮುನ್ನ ಆಸ್ತಿ ಮಾಲೀಕರ ಮನವೊಲಿಸಬೇಕಿದೆ.

ಎಲ್ಲಿಗೆ ಸಂಪರ್ಕ ಕಲ್ಪಿಸಲಿದೆ?: ಬಿಬಿಸಿ-2 ಯೋಜನೆಗೆ 1,400 ಎಕರೆ ಭೂಮಿ ಬೇಕು ಎಂದು ಅಂದಾಜಿಸಲಾಗಿದೆ. ಇದರ ಪೈಕಿ 250 ಎಕರೆ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲು ವಿರೋಧ ಎದುರಾಗಿದೆ. ಈ ಯೋಜನೆ ಹೊಸೂರು ರಸ್ತೆ-ತುಮಕೂರು ರಸ್ತೆ (ವಯಾ ಬನ್ನೇರುಘಟ್ಟ ರಸ್ತೆ, ಕನಕಪುರ ರಸ್ತೆ, ಮೈಸೂರು ರಸ್ತೆ, ಮಾಗಡಿ ರಸ್ತೆ) ಮೂಲಕ ಸಂಪರ್ಕಿಸುತ್ತದೆ.
ಯೋಜನೆಯ ವಿನ್ಯಾಸವನ್ನು ಎರಡು ಬಾರಿ ಬದಲಾವಣೆ ಮಾಡಲಾಗಿದೆ. 2005ರಲ್ಲಿ ಮಾಗಡಿ ರಸ್ತೆ ಜೊತೆಗೆ ಮಾದಾವರನ್ನು ಸಂಪರ್ಕಿಸುವಂತೆ ಯೋಜನೆ ವಿನ್ಯಾಸ ಮಾಡಲಾಗಿತ್ತು. ಯೋಜನೆಗೆ ಅಗತ್ಯವಿರುವ ಭೂಮಿ ಸ್ವಾಧೀನಕ್ಕೆ ಪ್ರಾಥಮಿಕ ಅಧಿಸೂಚನೆಯನ್ನು ಹೊರಡಿಸಲಾಗಿತ್ತು.
ಆದರೆ ಸರ್ಕಾರದ ಮುಖ್ಯ ಕಾರ್ಯದರ್ಶಿಗಳು ಯೋಜನೆಯಿಂದ ತುಮಕೂರು ರಸ್ತೆಯಲ್ಲಿ ಟ್ರಾಫಿಕ್ ಜಾಮ್ ಉಂಟಾಗಬಹುದು. ಆದ್ದರಿಂದ 2-3 ಕಿ. ಮೀ. ವಿನ್ಯಾಸ ಬದಲಾವಣೆ ಮಾಡಬಹುದು ಎಂದು ಸಲಹೆ ನೀಡಿದರು. ಆದ್ದರಿಂದ ಮಾದನಾಯಕನಹಳ್ಳಿಯಿಂದ ಮಾಗಡಿ ರಸ್ತೆಗೆ ರಸ್ತೆ ವಿನ್ಯಾಸ ಬದಲಾವಣೆ ಮಾಡಲಾಯಿತು.
2005, 2006ರಲ್ಲಿ ಈ ಯೋಜನೆಗೆ ಗುರುತಿಸಿದ ಜಾಗದ ಮಾಲೀಕರಿಗೆ ಬಿಡಿಎ ಭೂ ಸ್ವಾಧೀನ ಅಧಿಕಾರಿಗಳು ಕೆಲವು ದಿನಗಳ ಹಿಂದೆ ನೋಟಿಸ್ ನೀಡಿದ್ದಾರೆ. 2006ರಲ್ಲಿ ಯೋಜನೆಗೆ ಗುರುತಿಸಿದ್ದ ಜಾಗದಲ್ಲಿ ಈಗ ಜನರು ಮನೆಗಳನ್ನು ನಿರ್ಮಾಣ ಮಾಡುತ್ತಿದ್ದಾರೆ. ಸುಮಾರು 250 ಎಕರೆ ಪ್ರದೇಶ ಆಗ ಖಾಲಿ ಇತ್ತು. ಆದರೆ ಈಗ ಚಿತ್ರಣ ಬದಲಾಗಿದ್ದು, ಭೂ ಸ್ವಾಧೀನಕ್ಕೆ ವಿರೋಧ ಎದುರಾಗಿದೆ.
ಬಿಡಿಎ ನೋಟಿಸ್ ನೀಡಿದ ಬಳಿಕ ಆಸ್ತಿ ಮಾಲೀಕರು ಆಕ್ರೋಶಗೊಂಡಿದ್ದಾರೆ. ಆದರೆ ಇವುಗಳು ಅಕ್ರಮವಾಗಿ ನಿರ್ಮಾಣ ಮಾಡಿದ ಮನೆಗಳು ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ. ಈಗ ಕೇವಲ ನೋಟಿಸ್ ನೀಡಲಾಗಿದೆ. ಆಕ್ಷೇಪಣೆಗಳನ್ನು ಸ್ವೀಕಾರ ಮಾಡಿದ ಬಳಿಕ ಅಂತಿಮ ಅಧಿಸೂಚನೆಯನ್ನು ಪ್ರಕಟಿಸಲಾಗುತ್ತದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
2005ರ ವಿನ್ಯಾಸವನ್ನು ಬಿಡಿಎ ರದ್ದುಗೊಳಿಸಿಲ್ಲ. 2006ರ ಪರಿಷ್ಕೃತ ವಿನ್ಯಾಸದ ಜೊತೆ ಸೇರಿಸಿ ಯೋಜನೆ ಜಾರಿಗೊಳಿಸಲಾಗುತ್ತದೆ. ಆದ್ದರಿಂದ ಎರಡು ವರ್ಷದ ವಿನ್ಯಾಸದ ವ್ಯಾಪ್ತಿಗೆ ಒಳಪಡುವ ಆಸ್ತಿ ಮಾಲೀಕರಿಗೆ ನೋಟಿಸ್ ನೀಡಲಾಗಿದೆ ಎಂದು ಬಿಡಿಎ ಹೇಳಿದೆ.
ಬಿಬಿಸಿ-2, ಬಿಬಿಸಿ-1 ಯೋಜನೆಗೆ ಇನ್ನೂ ಸಹ ಬಿಡಿಎ ಟೆಂಡರ್ ಕರೆದಿಲ್ಲ. ಭೂ ಸ್ವಾಧೀನದ ತಕರಾರುಗಳನ್ನು ಮೊದಲು ಬಗೆಹರಿಸಿಕೊಂಡು ಬಳಿಕ ಮುಂದಿನ ಪ್ರಕ್ರಿಯೆಗಳನ್ನು ಮಾಡಲು ಅಧಿಕಾರಿಗಳು ತಯಾರಿ ನಡೆಸಿದ್ದಾರೆ.












Click it and Unblock the Notifications