Bengaluru Bandh: ಬಂದ್ ಧಿಕ್ಕರಿಸಿ ರಸ್ತೆಗಿಳಿದರೆ ಮನವೊಲಿಕೆಗೆ ಸಾರಿಗೆ ಒಕ್ಕೂಟ ಸಜ್ಜು
ಬೆಂಗಳೂರು, ಸೆಪ್ಟಂಬರ್ 10: ಖಾಸಗಿ ಸಾರಿಗೆ ಒಕ್ಕೂಟ ಕರೆ ಕೊಟ್ಟಿರುವ ಪ್ರತಿಭಟನೆ ಯಶಸ್ಸಿಗಾಗಿ ಸಂಘಟನೆಗಳು ಭರದ ತಯಾರಿ ಮಾಡಿಕೊಂಡಿದ್ದರೆ, ಅತ್ತ ನಮ್ಮ ಗತಿ ಹೇಗೆ ಎಂಬ ಚಿಂತೆ ಸಾರ್ವಜನಿಕರನ್ನು ಕಾಡತೊಡಗಿದ್ದು, ಇದರ ಮಧ್ಯೆ ಬಂದ್ ಬಿಸಿ ಇಂದು ಮಧ್ಯರಾತ್ರಿಯಿಂದಲೇ ಬೆಂಗಳೂರಿಗರನ್ನ ಕಾಡಲಿದ್ದು, ಖಾಸಗಿ ಸಾರಿಗೆ ನಂಬಿ ಬೆಂಗಳೂರಿಗೆ ಬಂದರೆ ಪರದಾಟ ತಪ್ಪಿದ್ದಲ್ಲ.
ಇದೇ ಸೋಮವಾರ ಕರೆ ಕೊಟ್ಟಿರುವ ಬಂದ್ ಅನ್ನು ಶತಯಗತಾಯ ಯಶಸ್ವಿ ಮಾಡಲೇಬೇಕೆಂದು ಸಾರಿಗೆ ಒಕ್ಕೂಟ ಪಣ ತೊಟ್ಟಿದ್ದರೆ, ಅತ್ತ ನಮ್ಮ ಕಥೆ ಹೇಗೆ ಶಿವಾ ಅಂತ ಖಾಸಗಿ ವಾಹನಗಳನ್ನೆ ನಂಬಿರೋ ವರ್ಗ ಚಿಂತೆಗೀಡಾಗಿದೆ. ಈಗಾಗಲೇ ಬಂದ್ ಯಶಸ್ವಿಗಾಗಿ ಒಕ್ಕೂಟ ಅಲರ್ಟ್ ಆಗಿರುವ ಸಂಘಟನೆಗಳು, ಬಂದ್ ಕಾವನ್ನ ಇಂದು ಮಧ್ಯರಾತ್ರಿಯಿಂದಲೇ ಏರಿಸಲು ತಯಾರಿ ನಡೆಸಿವೆ.

ಈಗಾಗಲೇ ಬಂದ್ ಸಕ್ಸಸ್ ಗಾಗಿ ಸಾರಿಗೆ ಒಕ್ಕೂಟ ನಗರದ ಬಹುತೇಕ ಕಡೆ ಅಭಿಯಾನದ ಮೂಲಕ ಜನರನ್ನ ಎಚ್ಚರಿಸುವ ಕೆಲಸ ಮಾಡುತ್ತಿದೆ. ಅದೇನೇ ಆದರೂ ಈ ಬಾರಿಯ ಬಂದ್ ನಿಂದ ಸರ್ಕಾರಕ್ಕೆ ಬಿಸಿ ಮುಟ್ಟಿಸಲೇ ಬೇಕೆಂದು ಒಕ್ಕೂಟ ಪಣ ತೊಟ್ಟಿದೆ.
ಇಂದು ಮಧ್ಯರಾತ್ರಿಯಿಂದಲೇ ಬಂದ್ ನ ವಾತಾವರಣ ಸೃಷ್ಟಿಸುವ ನಿಟ್ಟಿನಲ್ಲಿ ಭಾನುವಾರ ಮಧ್ಯರಾತ್ರಿಯಿಂದಲೇ ಸಂಪೂರ್ಣ ಖಾಸಗಿ ವಾಹನಗಳ ಓಡಾಟವನ್ನು ನಿಲ್ಲಿಸಲು ಮುಂದಾಗಿವೆ. ಭಾನುವಾರ ಮಧ್ಯರಾತ್ರಿಯಿಂದ ಆಟೋ, ಟ್ಯಾಕ್ಸಿ, ಗೂಡ್ಸ್ ವಾಹನಗಳು ಸೇರಿದಂತೆ ಯಾವುದೇ ವಾಹನಗಳು ರಸ್ತೆಗಿಳಿಸದಂತೆ ಕರೆ ಕೊಟ್ಟಿವೆ.
ಜೊತೆಗೆ ಸೋಮವಾರ ಮಧ್ಯರಾತ್ರಿವರೆಗೂ ಬಂದ್ ಮಾಡುವ ತಯಾರಿಯಲ್ಲಿರೋ ಸಂಘಟನೆಗಳು, ಇಂದು ಮಧ್ಯರಾತ್ರಿಯಿಂದಲೇ ಖುದ್ದು ಫೀಲ್ಡ್ ಗಿಳಿದು, ಯಾರಾದರೂ ಬಂದ್ ಧಿಕ್ಕರಿಸಿ ರಸ್ತೆಗಿಳಿದು ಬಾಡಿಗೆಗೆ ಮುಂದಾದರೆ ಅಂತವರನ್ನು ಮನವೊಲಿಸುವ ನಿಟ್ಟಿನಲ್ಲಿ ತಯಾರಿ ನಡೆಸಿವೆ.
ಇನ್ನೂ ಇಂದು ರಾತ್ರಿಯಿಂದಲೇ ವಾಹನಗಳನ್ನ ನಿಲ್ಲಿಸುವುದರಿಂದ ಬೇರೆ ಬೇರೆ ಊರುಗಳಿಂದ ನಗರಕ್ಕೆ ಬರುವವರಿಗೆ ಸಮಸ್ಯೆ ಕಾಡುವ ಸಾಧ್ಯತೆ ಇದೆ. ಜೊತೆಗೆ ಏರ್ಪೋಟ್ ನಿಂದ ಆಗಮಿಸುವಂತಹ ಪ್ರಯಾಣಿಕರಿಗೆ ಹೆಚ್ಚಿನ ಸಮಸ್ಯೆಯಾಗುವ ಸಾಧ್ಯತೆ ಇದ್ದು, ನೀವೇನಾದರೂ ರಾತ್ರಿ ಬಳಿಕ ನಗರಕ್ಕೆ ಖಾಸಗಿ ಸಾರಿಗೆ ನಂಬಿ ಬರುವುದಾದರೆ ಹನ್ನೆರಡು ಗಂಟೆ ಒಳಗಾಗಿ ನಗರಕ್ಕೆ ಬಂದು ನಿಮ್ಮ ಸ್ಥಳಗಳನ್ನ ಸೇರಿದ್ರೆ ಸೂಕ್ತ.
ಒಟ್ಟಾರೆ ಸರ್ಕಾರ ವರ್ಸಸ್ ಖಾಸಗಿ ಒಕ್ಕೂಟದ ತಿಕ್ಕಾಟದ ನಡುವೆ ಜನಕ್ಕೆ ಇಂದು ಮಧ್ಯರಾತ್ರಿಯಿಂದಲೇ ಒಂದಷ್ಟು ಸಂಕಷ್ಟ ಎದುರಾಗುವ ಸಾಧ್ಯತೆ ಇದ್ದು, ಜನ ಕೂಡ ಸ್ವಲ್ಪ ಎಚ್ಚರವಹಿಸಬೇಕಿದೆ.












Click it and Unblock the Notifications