BREAKING: ಬೆಂಗಳೂರಲ್ಲಿ ಹಾಡಹಗಲೇ ಗುಂಡಿನ ದಾಳಿ: ಸ್ಥಳದಲ್ಲೇ ಗನ್ ಬಿಟ್ಟು ಪರಾರಿ, ಇಬ್ಬರಿಗೆ ಗಾಯ
ಬೆಂಗಳೂರು, ಮಾರ್ಚ್ 14: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಮತ್ತೆ ಗುಂಡಿನ ಸದ್ದು ಕೇಳಿ ಬಂದಿದೆ. ಇಲ್ಲಿನ ಜ್ಯುವೆಲ್ಲರಿ ಮಳಿಗೆಯೊಂದರಲ್ಲಿ ಹಾಡುಹಗಲೇ ಗುರುವಾರ ನಾಲ್ವರ ಗುಂಪು ಗುಂಡಿನ ದಾಳಿ ನಡೆಸಿ ಪರಾರಿಯಾಗಿದೆ.
ಬೆಂಗಳೂರಿನ ಕೋಡಿಗೆಹಳ್ಳಿ ವ್ಯಾಪ್ತಿಯಲ್ಲಿ ಜನವಸತಿ ಪ್ರದೇಶವಾದ ದೇವಿನಗರದ ಜ್ಯುವೆಲ್ಲರಿ ಅಂಗಡಿಯನ್ನು ಎಂದಿನಂತೆ ಗುರುವಾರ ಬೆಳಗ್ಗೆ ತೆರೆಯಲಾಗಿದೆ. ಅಂಗಡಿ ತೆರೆದ ಕೆಲವೇ ನಿಮಿಷಗಳಲ್ಲಿ ಸ್ಥಳಕ್ಕೆ ಬಂದ ದುಷ್ಕರ್ಮಿಗಳು ರಾಜಾರೋಷವಾಗಿ ಗುಂಡಿನ ಮಳೆಗರೆದು ಪರಾರಿಯಾಗಿದ್ದಾರೆ.

ಘಟನೆಯಲ್ಲಿ ಅಪ್ಪುರಾಮ್ ಹಾಗೂ ಅಭಿರಾಮ್ ಎಂಬುವವರಿಗೆ ಗಾಯಗಳಾಗಿವೆ. ಜ್ಯುವೆಲ್ಲರಿ ಅಂಗಡಿ ಒಳಗೆ ರಕ್ತಸಿಕ್ತ ದೃಶ್ಯಗಳು ಕಂಡು ಬಂದಿವೆ. ಅವಸರದಲ್ಲೇ ಬಂದಿದ್ದ ಕಿರಾತಕರು ಗುಂಡಿನ ದಾಳಿ ನಡೆಸಿ ಒಂದು ಪಿಸ್ತೂಲ್ ಅನ್ನು ಸ್ಥಳದಲ್ಲಿಯೇ ಬಿಟ್ಟು ಹೋಗಿದ್ದು, ಅದನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ಸೇರಿಸಲಾಗಿದೆ.
ಚಿನ್ನಾಭರಣ ಕಳ್ಳತನವಾಗಿಲ್ಲ
ಗುರುವಾರ ಬೆಳಗ್ಗೆ 10.45 ಗಂಟೆಗೆ ಗುಂಡಿನ ದಾಳಿ ನಡೆದಿದೆ ಎಂದು ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಇತ್ತೀಚೆಗೆ ಬ್ಯಾಂಕ್ವೊಂದರಲ್ಲಿ ಗುಂಡಿನ ದಾಳಿ ನಡೆದು, ಖದೀಮರು ಚಿನ್ನಾಭರಣ ದೋಚಿದ್ದರು. ಆ ಘಟನೆ ಮಾಸುವ ಮುನ್ನವೇ ಮತ್ತೊಂದು ಗುಂಡಿನ ದಾಳಿಯ ಘಟನೆ ಜರುಗಿದೆ.
ಆದರೆ ಈ ಘಟನೆಯಲ್ಲಿ ಕಳ್ಳತನದಂತಹ ಕೆಲಸಗಳು ನಡೆದಿಲ್ಲ. ಏಕಾಎಕಿ ಮಳಿಗೆಗೆ ಆಗಮಿಸಿದ ನಾಲ್ವರ ಗುಂಪು ಗುಂಡಿನ ದಾಳಿ ನಡೆಸಿ ಪರಾರಿಯಾಗಿದೆ. ಯಾರು ಚಿನ್ನಾಭರವನ್ನು ಕಳ್ಳತನ ಮಾಡಿಲ್ಲ. ಜ್ಯುವೆಲ್ಲರಿ ಮಳಿಗೆಯಲ್ಲಿ ಕಳ್ಳತನವಾಗಿಲ್ಲ. ದುಷ್ಕರ್ಮಿಗಳು ಮೇಲ್ನೋಟಕ್ಕೆ ಕಳ್ಳತನಕ್ಕೆ ಬಂದಂತೆ ಕಾಣುತ್ತಿಲ್ಲ ಎನ್ನಲಾಗಿದೆ.
ಕಾನೂನಿನ ಭಯ ಇಲ್ಲದೇ ಹಾಡಹಗಲೇ ಕೃತ್ಯ
ಹಾಡಹಗಲೇ ಈ ರೀತಿಯ ಘಟನೆಗಳು ಬೆಂಗಳೂರು ಜನರ ನಿದ್ದೆಗೆಡಿಸುತ್ತಿವೆ. ಕಳ್ಳರಿಗೆ, ರೌಡಿಗಳಿಗೆ ಕಾನೂನಿನ ಭಯ ಇಲ್ಲದಂತಾಗಿದೆ. ಪೊಲೀಸ್ ಇಲಾಖೆ ಇಂತಹ ಘಟನೆ ಮರುಕಳಿಸದಂತೆ ನೋಡಿಕೊಳ್ಳಬೇಕು. ಇಂತಹ ಸಾಮಾಜಘಾತುಕ ಶಕ್ತಿಗಳಿಗೆ ಆಗಾಗ ಬಿಸಿ ಮುಟ್ಟಿಸಬೇಕು ಎಂದು ಗುಂಡಿನ ದಾಳಿ ನಡೆದ ಸ್ಥಳದಲ್ಲಿ ನಿವಾಸಿಗಳು ಆಗ್ರಹಿಸಿದ್ದಾರೆ.
ಆರೋಪಿಗಳ ಪತ್ತೆಗೆ ಶೋಧ
ಸದ್ಯ ಘಟನೆಯು ಕಳ್ಳತನ, ದರೋಡೆಗಾಗಿ ನಡೆಯದೇ, ಯಾವುದೇ ಹಳೆಯ ದ್ವೇಷ, ಇನ್ನಿತರ ವೈಯಕ್ತಿಕ ವಿಚಾರಕ್ಕೆ ನಡೆದಿರಬಹುದು ಎಂದು ಶಂಕಿಸಲಾಗಿದೆ. ಸ್ಥಳದಲ್ಲಿದ್ದ ಗನ್ ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಎಲ್ಲ ಆಯಾಮಗಳನ್ನು ತನಿಖೆ ನಡೆಸಲು ಆರಂಭಿಸಿದ್ದಾರೆ. ಪರಾರಿಯಾದ ದುಷ್ಕರ್ಮಿಗಳಿಗಾಗಿ ಬಲೆ ಬೀಸಿದ್ದಾರೆ. ಸ್ಥಳದಲ್ಲಿ ಸಿಸಿ ಕ್ಯಾಮೆರಾಗಾಗಿ ಪೊಲೀಸರು ತಡಕಾಡಿದ್ದಾರೆ ಎಂದು ತಿಳಿದು ಬಂದಿದೆ.












Click it and Unblock the Notifications