ವಿಡಿಯೋ: ನಾಣ್ಯಗಳಲ್ಲಿ ನಿರ್ಮಿಸಿದ ಭವ್ಯ ರಾಮಮಂದಿರ ಕಲಾಕೃತಿಗೆ ಜನ ಮೆಚ್ಚುಗೆ
ಬೆಂಗಳೂರು, ಮಾರ್ಚ್ 02: ರಾಷ್ಟ್ರಧರ್ಮ ಸಂಸ್ಥೆಯು ಬೆಂಗಳೂರಿನಲ್ಲಿ ನಿರ್ಮಾಣ ಮಾಡಿರುವ ನಾಣ್ಯಗಳ ಶ್ರೀರಾಮ ಮಂದಿರ ಕಲಾಕೃತಿಗೆ ಜನರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
Recommended Video
ಒಂದು ಹಾಗೂ 5 ರೂಪಾಯಿಯ ಸುಮಾರು 60 ಸಾವಿರ ನಾಣ್ಯಗಳನ್ನು ಬಳಸಿಕೊಂಡು ಕಲಾಕೃತಿ ನಿರ್ಮಿಸಲಾಗಿದೆ. ಒಟ್ಟು ಎರಡು ಲಕ್ಷ ಮೌಲ್ಯದ ನಾಣ್ಯಗಳ ಬಳಕೆ ಮಾಡಲಾಗಿದೆ. 30/40 ಅಡಿ ಎತ್ತರದ ಕಲಾಕೃತಿ ಇದಾಗಿದೆ.
ಲಾಲ್ಬಾಗ್ನ ಪಶ್ಚಿಮ ದ್ವಾರದಲ್ಲಿರುವ ಅನಂತವನದಲ್ಲಿ ಕಲಾಕೃತಿಯನ್ನು ನಿರ್ಮಿಸಲಾಗಿದೆ. ಕಲಾಕೃತಿ ಕುರಿತು ಯಾರು ಏನು ಹೇಳಿದ್ದಾರೆ ಎಂಬುದನ್ನು ನೋಡೋಣ ಬನ್ನಿ.
ಬಿಜೆಪಿ ವಕ್ತಾರ ಸಂತೋಷ್ ಕೆಂಚಂಬಾ ವಿವರ ನೀಡಿದ್ದು, ಸುಪ್ರೀಂಕೋರ್ಟ್ ತೀರ್ಪು ನೀಡಿ, ರಾಮ ಮಂದಿರ ಇನ್ನೇನು ನಿರ್ಮಾಣವಾಗಲಿದೆ ಎಂದಾಗ ಪ್ರತಿಯೊಬ್ಬರ ಮನೆಗೆ ತೆರಳಿ ಹೂವನ್ನು ಸಂಗ್ರಹಿಸಿ ಶ್ರೀರಾಮನಿಗೆ ಪೂಜೆ ಮಾಡಲಾಯಿತು.
ಹಾಗೆಯೇ ಶ್ರೀ ರಾಮ ಮಂದಿರ ಟ್ರಸ್ಟ್ ನಿಧಿ ಸಮರ್ಪಣ ಅಭಿಯಾನವನ್ನೂ ಹಮ್ಮಿಕೊಂಡು ಶ್ರೀ ರಾಮ ಮಂದಿರ ನಿರ್ಮಾಣಕ್ಕೆ ಜನರಿಂದ ಹಣವನ್ನು ಸಂಗ್ರಹಿಸಲಾಯಿತು.

ಕರ್ನಾಟಕದಲ್ಲಿಯೂ ಶ್ರೀರಾಮನನ್ನು ನೆನಪಿನಲ್ಲಿಡುವಂತೆ ಏನಾದರೂ ಮಾಡಬೇಕು ಎನ್ನುವ ಆಲೋಚನೆ ಬಂದು ಬಳಿಕ ಎಲ್ಲರ ಒಪ್ಪಿಗೆಯಂತೆ ನಾಣ್ಯಗಳಲ್ಲಿ ಕಲಾಕೃತಿ ನಿರ್ಮಾಣ ಮಾಡಲಾಯಿತು ಎಂದರು.
ಕಲಾವಿದ ರಘು ಮಾತನಾಡಿ, ನಿಧಿ ಸಮರ್ಪಣಾ ಅಭಿಯಾನದಲ್ಲಿ ಜನರ ಭಾವನೆ ಹಾಗೂ ಶ್ರದ್ಧೆ ರಾಮನ ಮೇಲೆ ಎಷ್ಟಿದೆ ಎಂಬುದನ್ನು ತೋರಿಸಿಕೊಟ್ಟಿದ್ದಾರೆ. 60 ಸಾವಿರದಷ್ಟು ನಾಣ್ಯಗಳನ್ನು ಬಳಕೆ ಮಾಡಲಾಗಿದೆ. ಸುಮಾರು 15-20 ದಿನಗಳ ಕಾಲ ಕೆಲಸ ಮಾಡಿ ಕಲಾಕೃತಿ ಈ ರೂಪ ಪಡೆದಿದೆ ಎಂದರು.
ಸಚಿವ ನಾರಾಯಣ ಗೌಡ ಮಾತನಾಡಿ, ಶ್ರೀರಾಮನನ್ನು ಯಾರೂ ಇಷ್ಟಪಡದವರಿಲ್ಲ, ಆದರೆ ರಾಮ ಮಂದಿರ ವಿಚಾರದಲ್ಲಿ ರಾಜಕೀಯ ಮಾಡುವವರಿದ್ದಾರೆ. ಒಮ್ಮೆ ಶ್ರೀ ರಾಮ ಮಂದಿರ ನಿರ್ಮಾಣವಾಗಲಿ, ಬಳಿಕ ಇಂದು ವಿರೋಧಿಸಿದವರೆಲ್ಲಾ ಎಲ್ಲರಿಗಿಂತಲೂ ಮೊದಲು ರಾಮನ ದರ್ಶನ ಪಡೆಯುತ್ತಾರೆ.
ಎಲ್ಲರಿಗೂ ರಾಮನೆಂದರೆ ಭಕ್ತಿ. ಈ ರಾಮ ಮಂದಿರವು ಜಾತಿ, ಧರ್ಮ, ಪಕ್ಷ ಬೇಧವಿಲ್ಲದೆ ನಿರ್ಮಾಣವಾಗುತ್ತಿದೆ. ಎಲ್ಲರೂ ಅವರ ಕೈಲಾದ ಸಹಾಯವನ್ನು ಸಮರ್ಪಿಸುತ್ತಿದ್ದಾರೆ ಎಂದು ಹೇಳಿದರು.
ತೇಜಸ್ವಿನಿ ಅನಂತಕುಮಾರ್ ಮಾತನಾಡಿ, ನಾನು ಕೆಲವು ದಿನಗಳ ಹಿಂದೆ ಅಯೋಧ್ಯೆ ರಾಮಮಂದಿರಕ್ಕೆ ಭೇಟಿ ನೀಡಿದ್ದೆ, ಭೂಮಿ ಇರುವವರೆಗೂ ರಾಮ ಇದ್ದೇ ಇರುತ್ತಾನೆ, ಸುಪ್ರೀಂಕೋರ್ಟ್ ತೀರ್ಪು ಸಂತಸ ತಂದಿದೆ ಎಂದರು.
ಸಚಿವ ಆರ್ ಅಶೋಕ್ ಮಾತನಾಡಿ, ಶ್ರೀ ರಾಮ ಮಂದಿರ ನಿರ್ಮಾಣ ಮಾಡಲು ಎಲ್ಲರೂ ತಮಗೆ ಅನುಕೂಲವಾದ ರೀತಿಯಲ್ಲಿ ದೇಣಿಗೆ ನೀಡುತ್ತಿದ್ದಾರೆ, ಅದಕ್ಕೆ ಕಲ್ಲು ಹಾಕಲು ಹೋಗಬೇಡಿ, ನಿಮಗೆ ಇಷ್ಟವಿದ್ದರೆ ಕೊಡಿ, ಇಲ್ಲವೆಂದರೆ ಬಿಡಿ, ಎಲ್ಲರೂ ಹಣ ನೀಡುತ್ತಿರುವುದು ಒತ್ತಡದಿಂದಲ್ಲ ರಾಮನ ಮೇಲಿನ ಭಕ್ತಿಯಿಂದ ಎಂದು ಹೇಳಿದರು.












Click it and Unblock the Notifications