ಅಖಂಡ ಶ್ರೀನಿವಾಸ್ ಮನೆಗೆ ಬೆಂಕಿ ಇಟ್ಟ ಪ್ರಕರಣ ಮಾಜಿ ಮೇಯರ್ ಸಂಪತ್ ರಾಜ್ ಜೈಲಿಗೆ
ಬೆಂಗಳೂರು, ನವೆಂಬರ್ 20: ಅಖಂಡ ಶ್ರೀನಿವಾಸ್ ಮನೆಗೆ ಬೆಂಕಿ ಇಡಲು ಪ್ರಚೋದಿಸಿದ ಆರೋಪದಡಿ ತಲೆಮರೆಸಿಕೊಂಡು ಬಂಧನಕ್ಕೆ ಒಳಗಾದ ಮಾಜಿ ಮೇಯರ್ ಸಂಪತ್ ರಾಜ್ ಜೈಲು ಸೇರಿದ್ದಾರೆ.
ಮೂರು ದಿನಗಳ ಕಾಲ ವಿಚಾರಣೆ ನಡೆಸಿದ ಸಿಸಿಬಿ ಪೊಲೀಸರು ಪೊಲೀಸ್ ಕಸ್ಟಡಿ ಮುಗಿದ ಹಿನ್ನೆಲೆಯಲ್ಲಿ ಇಂದು ಮಧ್ಯಾಹ್ನ ಸಿಟಿ ಸಿವಿಲ್ ನ್ಯಾಯಾಲಯದ 67 ನೇ ಹಾಲ್ ನಲ್ಲಿ ನ್ಯಾಯಾಧೀಶರ ಮುಂಧೆ ಹಾಜರು ಪಡಿಸಿದರು. ನವೆಂಬರ್ 24 ರ ವರೆಗೂ ನ್ಯಾಯಾಂಗ ಬಂಧನಕ್ಕೆ ನೀಡಿ ನ್ಯಾಯಾಧೀಶರು ಆದೇಶ ಮಾಡಿದರು. ರಾಷ್ಟ್ರೀಯ ತನಿಖಾ ದಳ ವಿಚಾರಣೆ ನಡೆಸುವ ಅಗತ್ಯ ಬಿದ್ದರೆ ಜೈಲಿನಲ್ಲಿಯೇ ವಿಚಾರಣೆ ನಡೆಸಲು ಅನುಮತಿ ನೀಡಲಾಗಿದೆ. ಮಾಜಿ ಮೇಯರ್ ಇದೀಗ ಜೈಲು ಸೇರಲಿದ್ದಾರೆ. ನ್ಯಾಯಾಲಯದ ಆದೇಶದ ಹಿನ್ನೆಲೆಯಲ್ಲಿ ಸಿಸಿಬಿ ಪೊಲೀಸರು ಸಂಪತ್ ರಾಜ್ ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲು ಸಿದ್ಧತೆ ನಡೆಸಿದ್ದಾರೆ.
ಬೆಂಗಳೂರು ಗಲಭೆ: ಪಿಎಫ್ಐ, ಎಸ್ಡಿಪಿಐ ಕಚೇರಿ ಸೇರಿ 43 ಕಡೆ ಎನ್ಐಎ ದಾಳಿ
ಸಂಪತ್ ರಾಜ್ ವಿರುದ್ಧ ಸಿಸಿಬಿ ಪೊಲೀಸರು ಪರಿಶಿಷ್ಟ ಜಾತಿ ಮತ್ತು ಪಂಗಡದ ದೌರ್ಜನ್ಯ ತಡೆ ಕಾಯ್ದೆ ಹಾಗೂ ಸಾರ್ವಜನಿಕ ಆಸ್ತಿಗೆ ನಷ್ಟವುಂಟು ಮಾಡಿದ ಆರೋಪವಿದ್ದು, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಸಿಬಿ ಪೊಲೀಸರು ವಿಚಾರಣೆ ವೇಳೆ ಮಹತ್ವದ ಮಾಹಿತಿಯನ್ನು ಕಲೆ ಹಾಕಿದ್ದಾರೆ. ಅನಾರೋಗ್ಯ ನಾಟಕವಾಡಿ ಆಸ್ಪತ್ರೆ ಸೇರಿದ್ದ ಸಂಪತ್ ರಾಜ್ ಸಿಸಿಬಿ ವಿಚಾರಣೆಗೆ ಹಾಜರಾಗಿರಲಿಲ್ಲ. ಚಿಕಿತ್ಸೆ ನೆಪದಲ್ಲಿ ಸಂಪತ್ ರಾಜ್ ಪರಾರಿಯಾಗಿದ್ದರು. ಆರೋಪಿಗಾಗಿ ಶೋಧ ನಡೆಸಿದರೂ ಪತ್ತೆಯಾಗಿರಲಿಲ್ಲ.
ಕೆಲ ದಿನಗಳ ಹಿಂದಷ್ಟೇ ಸಂಪತ್ ರಾಜ್ ಗೆ ಆಶ್ರಯ ನೀಡಿ ತಪ್ಪಿಸಿಕೊಳ್ಳಲು ನೆರವು ನೀಡಿದ್ದ ಆತನ ಆಪ್ತ ರಿಯಾಜುದ್ದೀನ್ ರನ್ನು ಬಂಧಿಸಿದ್ದರು. ಬಳಿಕ ಸಂಪತ್ ರಾಜ್ ಬಾಮೈದನನ್ನು ಸಿಸಿಬಿ ಪೊಲೀಸರು ವಿಚಾರಣೆಗೆ ಕರೆಸಲು ಮುಂದಾಗಿದ್ದರು. ಈ ಬೆಳವಣಿಗೆ ನಡುವೆ ರಾತ್ರೋ ರಾತ್ರಿ ಸಂಪತ್ ರಾಜ್ ಸಿಸಿಬಿ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದರು. ಅವರನ್ನು ನ್ಯಾಯಾಲಯದ ಮುಂದೆ ಹಾಜರು ಪಡಿಸಿ ಎರಡು ದಿನ ಪೊಲೀಸ್ ಕಸ್ಟಡಿಗೆ ಪಡೆಯಲಾಗಿತ್ತು. ಬಳಿಕ ಹೆಚ್ಚುವರಿಯಾಗಿ ಒಂದು ದಿನ ಪಡೆದು ಸಿಸಿಬಿ ಪೊಲೀಸರು ವಿಚಾರಣೆ ನಡೆಸಿದ್ದಾರೆ.
ಮಾಜಿ ಮೇಯರ್ ಸಂಪತ್ ರಾಜ್ ಎಸ್ಕೇಪ್ ಚರಿತ್ರೆ !
ಎನ್ಐಎ ವಿಚಾರಣೆ: ಸಂಪತ್ ರಾಜ್ ಅವರನ್ನು ಸಿಸಿಬಿ ಪೊಲೀಸರು ವಿಚಾರಣೆ ಪುರ್ಣಗೊಳಿಸಿದ ಬೆನ್ನಲ್ಲೇ ಎನ್ ಐಎ ಅಧಿಕಾರಿಗಳು ವಿಚಾರಣೆ ನಡೆಸಲು ಮುಂದಾಗಿದ್ದಾರೆ. ಡಿ.ಜೆ. ಹಳ್ಳಿ ಹಾಗೂ ಕೆ.ಜಿ. ಹಳ್ಳಿ ಠಾಣೆಗಳಿಗೆ ಬೆಂಕಿ ಇಟ್ಟು ಸಾರ್ವಜನಿಕ ಆಸ್ತಿಗೆ ನಷ್ಟವುಂಟು ಮಾಡಿರುವ ಆರೋಪಕ್ಕೆ ಸಂಬಂಧ ಪಟ್ಟಂತೆ ಎನ್ಐಎ ಅಧಿಕಾರಿಗಳು ಈಗಾಗಲೇ ಎರಡು ಪ್ರತ್ಯೇಕ ಪ್ರಕರಣ ದಾಖಲಿಸಿದ್ದಾರೆ. ಅಲ್ಲದೇ ಬೆಂಗಳೂರಿನ 43 ಕಡೆ ದಾಳಿ ನಡೆಸಿದ್ದರು ಪಿಎಫ್ಐ ಹಾಗೂ ಎಸ್ಡಿಪಿ ಕಚೇರಿಗಳ ಮೇಲೂ ದಾಳಿ ನಡೆಸಿ ಮಾರಕಾಸ್ತ್ರಗಳನ್ನು ವಶಫಡಿಸಿಕೊಂಡಿದ್ದರು.
ಅಖಂಡ ಶ್ರೀನಿವಾಸ್ ಮನೆಗೆ ಬೆಂಕಿ ಹಚ್ಚಿದ ಪ್ರಕರಣದ ಭಾಗವಾಗಿ ಡಿ.ಜೆ. ಹಳ್ಳಿಯಲ್ಲಿ ಠಾಣೆಗೆ ಬೆಂಕಿ ಇಡಲಾಗಿದೆ. ಇದಕ್ಕೆ ಸಂಪತ್ ರಾಜ್ ಆರ್ಥಿಕ ನೆರವು ನೀಡಿರುವ ಆರೋಪಗಳಿದ್ದು, ಬಂಧಿತ ಆರೋಪಿಗಳಿಂದ ಕೆಲ ಮಹತ್ವದ ಸಾಕ್ಷಾಧಾರಗಳನ್ನು ಸಂಗ್ರಹಿಸಲಾಗಿದೆ. ಈ ಹಿನ್ನೆಲೆಯಲ್ಲಿ ಎನ್ ಐಎ ಅಧಿಕಾರಿಗಳು ಸಂಪತ್ ರಾಜ್ ಅವರನ್ನು ವಿಚಾರಣೆ ಒಳಪಡಿಸುವ ಸಾಧ್ಯತೆಯಿದೆ.