BDA: ಬೆಂಗಳೂರು ದಕ್ಷಿಣದಲ್ಲಿ ಬಿಡಿಎ ನಿರ್ಮಿಸಲಿದೆ ಅಪಾರ್ಟ್ಮೆಂಟ್, ಲೇಔಟ್
ಬೆಂಗಳೂರು, ಜನವರಿ 30: ಕರ್ನಾಟಕ ಸರ್ಕಾರದ ಉದ್ದೇಶಿತ ಕೈಗಾರಿಕಾ ಹಬ್ಗೆ ಭೂಮಿ ನೀಡಲು ರೈತರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ (ಕೆಐಎಡಿಬಿ) ರೈತರ ಭೂಮಿ ಸ್ವಾಧೀನಪಡಿಸಿಕೊಳ್ಳಬಾರದು ಎಂದು ಹೋರಾಟ ಆರಂಭಿಸಿದ್ದಾರೆ. ಇಂತಹ ಹೊತ್ತಿನಲ್ಲಿಯೇ ಬಿಡಿಎ ಬೆಂಗಳೂರು ದಕ್ಷಿಣ ತಾಲೂಕಿನಲ್ಲಿ 600 ಎಕರೆ ಭೂಮಿಯನ್ನು ಸ್ವಾಧೀನ ಮಾಡಿಕೊಳ್ಳುವ ತಯಾರಿ ಆರಂಭಿಸಿದೆ.
ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಕೈಗೆತ್ತಿಕೊಳ್ಳಲಿರುವ ಮಹತ್ವದ ಬೆಂಗಳೂರು ಬ್ಯುಸಿನೆಸ್ ಕಾರಿಡಾರ್ (ಬಿಬಿಸಿ) ಯೋಜನೆಗೆ ಅನುದಾನ ಒದಗಿಸುವ ಭರವಸೆಯನ್ನು ಹುಡ್ಕೋ ನೀಡಿದೆ. ನಗರದ ಸಂಚಾರ ದಟ್ಟಣೆಯನ್ನು ಕಡಿಮೆ ಮಾಡುವ ಉದ್ದೇಶದಿಂದ ಕೈಗೊಂಡಿರುವ ಯೋಜನೆ ಇದಾಗಿದೆ.

ಈ ಬೆಂಗಳೂರು ಬ್ಯುಸಿನೆಸ್ ಕಾರಿಡಾರ್ ಹಾದು ಹೋಗುವ ಹಳ್ಳಿಗಳಲ್ಲಿ ರೈತರ ಜಮೀನು ಸ್ವಾಧೀನ ಮಾಡಿಕೊಳ್ಳಲು ಬಿಡಿಎ ಮುಂದಾಗಿದೆ. ಅಪಾರ್ಟ್ಮೆಂಟ್ ನಿರ್ಮಾಣ, ಹೊಸದಾಗಿ ಬಡಾವಣೆ ನಿರ್ಮಾಣ ಮಾಡಿ ಸೈಟುಗಳನ್ನು ಮಾರಾಟ ಮಾಡಲು ಬಿಡಿಎ ಈ ಭೂಮಿಯನ್ನು ವಶಕ್ಕೆ ಪಡೆದುಕೊಳ್ಳಲಿದೆ.
ಯಾವ-ಯಾವ ಹಳ್ಳಿಗಳು?: ಸದ್ಯದ ಮಾಹಿತಿ ಪ್ರಕಾರ ಬೆಂಗಳೂರು ದಕ್ಷಿಣ ತಾಲೂಕಿನ ಹುಲಿಮಂಗಲ, ಹುಲ್ಲಹಳ್ಳಿ, ಮಾರಗೊಂಡನಹಳ್ಳಿ ಮತ್ತು ಅಕ್ಕಪಕ್ಕದ ಹಳ್ಳಿಗಳ ಸುಮಾರು 600 ಎಕರೆ ಭೂಮಿಯನ್ನು ಬಿಡಿಎ ಗುರುತಿಸಿದೆ ಎಂಬ ಮಾಹಿತಿ ಸಿಕ್ಕಿದೆ. ಆದರೆ ಈ ಯೋಜನೆ ಇನ್ನೂ ಪ್ರಸ್ತಾವಿತ ಹಂತದಲ್ಲಿದ್ದು, ಮುಂದಿನ ಪ್ರಕ್ರಿಯೆಗಳು ಬಾಕಿ ಇದೆ.
ಇಲ್ಲಿ ಬೆಂಗಳೂರು ಬ್ಯುಸಿನೆಸ್ ಕಾರಿಡಾರ್ ರಸ್ತೆ ಹಾದು ಹೋಗುತ್ತದೆ. ಇಲ್ಲಿ ಹೊಸ ಲೇಔಟ್, ಅಪಾರ್ಟ್ಮೆಂಟ್ ನಿರ್ಮಾಣ ಮಾಡಿ, ಅವುಗಳನ್ನು ಮಾರಾಟ ಮಾಡಿ ಅದರಿಂದಲೂ ಬಿಡಿಗೆ ಆದಾಯ ಸಂಗ್ರಹ ಮಾಡುವುದು ಯೋಜನೆಯಾಗಿದೆ. ರೈತರಿಗೆ ಸದ್ಯಕ್ಕೆ ಭೂಮಿ ಸ್ವಾಧೀನ ಮಾಡಿಕೊಳ್ಳುವ ಕುರಿತು ಯಾವುದೇ ಮಾಹಿತಿ ಇಲ್ಲ.
ಕರ್ನಾಟಕ ರಕ್ಷಣಾ ವೇದಿಕೆ (ಪ್ರವೀಣ್ ಶೆಟ್ಟಿ ಬಣ) ಅಧ್ಯಕ್ಷ ಪ್ರವೀಣ್ ಶೆಟ್ಟಿ ಮಾತನಾಡಿ, "ಸರ್ಕಾರ ರಿಯಲ್ ಎಸ್ಟೇಟ್ ಉದ್ಯಮಿಗಳು, ಭೂ ಮಾಫಿಯಾ ಜೊತೆ ಕೈ ಜೋಡಿಸಿದೆ. ನಾವು ಸರ್ಕಾರದ ಕ್ರಮವನ್ನು ಖಂಡಿಸುತ್ತೇವೆ. ಬಿಡಿಎ ಮತ್ತು ಕೆಐಎಡಿಬಿ ಹೆಸರಿನಲ್ಲಿ ಸರ್ಕಾರ ರೈತರ ಭೂಮಿಯನ್ನು ಕಬಳಿಸುತ್ತಿದೆ" ಎಂದು ಆರೋಪಿಸಿದ್ದಾರೆ.
"ಚಿಕ್ಕಪುಟ್ಟ ರೈತರನ್ನು ಬಿಡಿಎ ಹೆಸರಿನಲ್ಲಿ ಸರ್ಕಾರ ಬೆದರಿಸುತ್ತಿದೆ. ಬಿಡಿಎ ನಗರದ ಹಲವು ಕಡೆ ಲೇಔಟ್ ಮಾಡಿ ಸೈಟುಗಳನ್ನು ಮಾರಾಟ ಮಾಡುತ್ತದೆ. ಆದರೆ ಬಡವರಿಗೆ ಸೈಟುಗಳನ್ನು ಹಂಚಿಕೆ ಮಾಡುದಿಲ್ಲ. ಭೂಮಿ ವಶಕ್ಕೆ ಪಡೆದರೆ ಅವರಿಗೆ ಸೈಟು ನೀಡಬೇಕು, ಅವರ ಕುಟುಂಬಕ್ಕೆ ಉದ್ಯೋಗ ನೀಡಬೇಕು ಎಂದು ನಾವು ಸರ್ಕಾರವನ್ನು ಆಗ್ರಹಿಸುತ್ತೇವೆ" ಎಂದು ಪ್ರವೀಣ್ ಶೆಟ್ಟಿ ಹೇಳಿದ್ದಾರೆ.
ರಕ್ಷಣಾ ವೇದಿಕೆ ಉಪಾಧ್ಯಕ್ಷ ಪುನೀತ್ ಮಾತನಾಡಿ, "ಸರ್ಕಾರ 10 ಎಕರೆ ಭೂಮಿಯನ್ನು ಅಭಿವೃದ್ಧಿಗೊಳಿಸಲಿ. ಅಲ್ಲಿರುವ ಸೈಟುಗಳನ್ನು ಬಡವರಿಗೆ ನೀಡಲಿ. ರೈತರನ್ನು ಕೆಂಪಾಪುರ, ನಂಜಾಪುರ, ಹುಲ್ಲಹಳ್ಳಿ, ಮಾರಗೊಂಡನಹಳ್ಳಿ ಗ್ರಾಮಗಳಿಂದ ಒಕ್ಕಲೆಬ್ಬಿಸುವುದನ್ನು ಸರ್ಕಾರ ನಿಲ್ಲಿಸಬೇಕು, ಇಲ್ಲವಾದಲ್ಲಿ ನಾವು ಸರ್ಕಾರದ ವಿರುದ್ಧ ಜಾಥಾ ನಡೆಸುತ್ತೇವೆ" ಎಂದು ಎಚ್ಚರಿಕೆ ನೀಡಿದರು.
ಹೊಸ ಬಡಾವಣೆ ನಿರ್ಮಾಣ ಮಾಡಲು ಭೂ ಸ್ವಾಧೀನಕ್ಕೆ ಈಗಾಗಲೇ ಬಿಡಿಎ ಆದೇಶವನ್ನು ಹೊರಡಿಸಿದೆ, ಅಧಿಕಾರಿಗಳನ್ನು ನೇಮಕ ಮಾಡಿಕೊಂಡಿದೆ. ಈ ಕುರಿತು ಉಪ ಆಯುಕ್ತರು (ಭೂ ಸ್ವಾಧೀನ) ಅವರ ಕಛೇರಿ ಆದೇಶ ಹೊರಡಿಸಿದೆ, ಪ್ರಾಧಿಕಾರವು ಪಿ. ಆರ್. ಆರ್-2 ಯೋಜನೆಗೆ ಹೊಂದಿಕೊಂಡಂತಿರುವ ಗ್ರಾಮಗಳಲ್ಲಿ ಹೊಸದಾಗಿ ರಚಿಸಲು ಉದ್ದೇಶಿಸಿರುವ ಬಡಾವಣೆಗೆ ಭೂಸ್ವಾಧೀನಪಡಿಸಿಕೊಳ್ಳಲು ಅಗತ್ಯವಿರುವ ಜಮೀನನ್ನು ಗುರುತಿಸಿ, ಪ್ರಾಥಮಿಕ ಅಧಿಸೂಚನೆ ಹೊರಡಿಸುವ ಬಗ್ಗೆ ಎಂಬ ವಿಷಯವನ್ನು ಆದೇಶ ಒಳಗೊಂಡಿದೆ.












Click it and Unblock the Notifications