ಬಿಡಿಎ ಅಧ್ಯಕ್ಷರಿಗೆ ಟಾಂಗ್ ಕೊಟ್ಟ ಆಯುಕ್ತರು !
ಬೆಂಗಳೂರು, ಫೆಬ್ರವರಿ, 09 : "ನಾನು ಸಾಮಾನ್ಯ ವ್ಯಕ್ತಿಯನ್ನು ಕೂರಿಸಿ ಮಾತನಾಡುತ್ತೇನೆ. ಯಾರಿಗೂ ಅಗೌರವದಿಂದ ನಡೆದುಕೊಂಡಿಲ್ಲ. ಹಾಗಂತ ಬಿಡಿಎ ನಿಯಮ ಉಲ್ಲಂಘಿಸಿ ಎಲ್ಲಾ ಕಡತ ನಾನು ಕೊಡಲಿಕ್ಕೆ ಬರಲ್ಲ. ನಾನು ಬಿಡಿಎ ರೂಲ್ಸ್ ಬ್ರೇಕ್ ಮಾಡಿ ಕೆಲಸ ಮಾಡಲ್ಲ ! ನನ್ನ ಅವಧಿಯಲ್ಲಿ ಆಗಿರುವಷ್ಟು ತನಿಖೆ ಯಾರೂ ಮಾಡಿಸಿಲ್ಲ !
ಬಿಡಿಎ ಅಧ್ಯಕ್ಷ ಎಸ್.ಆರ್. ವಿಶ್ವನಾಥ್ ಅವರು ಹೊರಿಸಿದ ಆರೋಪವನ್ನು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಆಯುಕ್ತ ಎಚ್.ಆರ್. ಮಹದೇವ್ ಸರಾ ಸಗಟಾಗಿ ತಳ್ಳಿ ಹಾಕಿದ್ದಾರೆ. ಭವಾನಿ ಹೌಸಿಂಗ್ ಸೊಸೈಟಿ ಅಕ್ರಮಕ್ಕೆ ಸಂಬಂಧಪಟ್ಟಂತೆ ಹೈಕೋರ್ಟ್ ಎರಡು ಸಲ ಆದೇಶ ಮಾಡಿದೆ. ಇಷ್ಟು ತಡವಾಗಲಿಕ್ಕೆ ಕಾರಣ ಪ್ರಕರಣ ನ್ಯಾಯಾಲಯದಲ್ಲಿ ಬಾಕಿ ಇತ್ತು. ಸೊಸೈಟಿಗೆ ಯಾವುದೇ ಕಾರಣಕ್ಕೂ ಸಗಟು ನಿವೇಶನ ಕೊಟ್ಟಿಲ್ಲ. ಬದಲಿ ಜಾಗವನ್ನು ನೀಡುತ್ತಿದ್ದೇವೆ. ಈ ಬಗ್ಗೆ ನ್ಯಾಯಾಲಯದ ಸ್ಪಷ್ಟ ಆದೇಶವಿದೆ. ಸರ್ಕಾರವೂ ಸಹ ಪ್ರಾಧಿಕಾರದಲ್ಲಿ ಈ ಬಗ್ಗೆ ತೀರ್ಮಾನ ತೆಗೆದುಕೊಳ್ಳಿ ಎಂಬ ನಿರ್ದೇಶನವಿದೆ. ಈ ನಿರ್ದೇಶನದ ಮೇರೆಗೆ 2019 ರಲ್ಲಿ ಪ್ರಾಧಿಕಾರದ ಅಧ್ಯಕ್ಷರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಭವಾನಿ ಹೌಸಿಂಗ್ ಸೊಸೈಟಿಗೆ ಬದಲಿ ಜಾಗ ನೀಡಲು ನಿರ್ಣಯ ಕೈಗೊಳ್ಳಲಾಗಿದೆ. ಈ ವಿಷಯವನ್ನು ಮುಖ್ಯಮಂತ್ರಿಗಳ ಕಚೇರಿ ಗಮನಕ್ಕೆ ತಂದು, ಆದೇಶವನ್ನು ಮಾತ್ರ ಅನುಷ್ಠಾನಗೊಳಿಸಿದ್ದೇನೆ. ಬೋರ್ಡ್ ತೀರ್ಮಾನ ಜಾರಿ ಮಾಡುವುದು ನನ್ನ ಕರ್ತವ್ಯ. ಇವರು ಅಧ್ಯಕ್ಷರಾಗಿ ಬೋರ್ಡ್ ಮೀಟಿಂಗ್ ನಡಾವಳಿಗಳನ್ನು ರದ್ದು ಮಾಡಬೇಕಿತ್ತು. ನಾನು ಬಿಡಿಎ ಅಕ್ರಮಗಳನ್ನು ತನಿಖೆ ನಡೆಸುತ್ತಿದ್ದು, ಅವುಗಳಲ್ಲಿ ಸಿಕ್ಕಿ ಬೀಳುವ ಅಧಿಕಾರಿಗಳು ಶಾಮೀಲಾಗಿ ನನ್ನ ವಿರುದ್ಧ ಪಿತೂರಿ ನಡೆಸುತ್ತಿದ್ದಾರೆ ಎಂದು ಮಹದೇವ ಅವರು ತಿರಗೇಟು ನೀಡಿದ್ದಾರೆ.
ಬಿಡಿಎ ಅಧ್ಯಕ್ಷರ ಮತ್ತು ಆಯುಕ್ತರ ನಡುವೆ ಶೀತಲ ಸಮರ !

ತಾತ್ಕಾಲಿಕ ತಡೆ :
ಭವಾನಿ ಹೌಸಿಂಗ್ ಸೊಸೈಟಿಗೆ ಸಂಬಂಧಿಸಿದಂತೆ ಮುಖ್ಯಮಂತ್ರಿಗಳು ತಾತ್ಕಾಲಿಕವಾಗಿ ತಡೆ ಮಾಡಲು ಸೂಚಿಸಿದ್ದಾರೆ. ಹೀಗಾಗಿ ನಗರಾಭಿವೃದ್ಧಿ ಇಲಾಖೆಗೆ ಕಳುಹಿಸುವ ಪ್ರಕ್ರಿಯೆ ತಡೆ ಹಿಡಿದಿದ್ದೇನೆ. ಎಲ್ಲವೂ ಕಾನೂನು ಬದ್ಧವಾಗಿಯೇ ನಡೆದಿದೆ. ಬದಲಿ ಜಾಗ ಕೊಡುವ ಅಧಿಕಾರ ಬಿಡಿಎ ಆಯುಕ್ತರಿಗೆ ಇಲ್ಲ. ಮುಖ್ಯಮಂತ್ರಿಗಳ ಕಚೇರಿ ಹಾಗೂ ನಗರಭಾವೃದ್ಧಿ ಇಲಾಖೆಯ ಶಿಫಾರಸಿನ ಮೇರೆಗೆ ತೀರ್ಮಾನ ತೆಗೆದುಕೊಳ್ಳಲಾಗಿದೆ. ತೆಗೆದುಕೊಂಡ ತಿರ್ಮಾನಗಳನ್ನು ಅನುಷ್ಠಾನ ಮಾಡುವುದು ಬಿಡಿಎ ಆಯುಕ್ತರಾಗಿ ನನ್ನ ಕರ್ತವ್ಯ. ತಾತ್ಕಾಲಿಕವಾಗಿ ತಡೆ ಹಿಡಿಯಲು ಮುಖ್ಯಮಂತ್ರಿಗಳು ಹೇಳಿದ್ದರಿಂದ ಸದ್ಯಕ್ಕೆ ತಡೆ ಹಿಡಿದಿದ್ದೇನೆ. ನಾನು ಯಾವ ಕಾರಣಕ್ಕೂ ಬಿಡಿಎ ನಿಯಮ ಉಲ್ಲಂಘಿಸಿ ಕೆಲಸ ಮಾಡುವುದಿಲ್ಲ ಎಂದು ಆಯುಕ್ತರು ಸ್ಪಷ್ಟಪಡಿಸಿದರು.

ಎಸ್ಐಟಿ ರಚನೆಗೆ ತಡೆಯೊಡ್ಡಿಲ್ಲ :
ಬಿಡಿಎ ನಲ್ಲಿ ನಡೆದಿರುವ ಪ್ರಮುಖ ಹಗರಣಗಳೆಂದರೆ, ಕಾರ್ನರ್ ಕಟ್ಟಿಂಗ್ ಹಗರಣ. ಸಗಟು ಹಂಚಿಕೆ ಅಕ್ರಮ. ಮೂಲೆ ನಿವೇಶನ ಕಡಿತ ಮಾಡಿ ಅಕ್ರಮ ಪರಭಾರೆ ಮಾಡುವ ಹಗರಣ ಕುರಿತು ಎಸಿಬಿ ತನಿಖೆ ನಡೆಸುತ್ತಿದ್ದು, ನ್ಯಾಯಾಲಯದಲ್ಲಿ ತಡೆಯಾಜ್ಞೆ ಯಿದೆ. ಈ ಹಿನ್ನೆಲೆಯಲ್ಲಿ ಎಸ್ಐಟಿ ರಚನೆ ಮಾಡಿದರೆ, ಹೈಕೋರ್ಟ್ ಆದೇಶ ಉಲ್ಲಂಘನೆ ಮಾಡಿದಂತಾಗುತ್ತದೆ. ಇನ್ನು ಬಿಡಿಎ ಅಕ್ರಮಗಳನ್ನು ಪತ್ತೆ ಮಾಡಿ ತನಿಖೆ ಮಾಡುವ ನಿಟ್ಟಿನಲ್ಲಿ ಸಾಕಷ್ಟು ಶೋಕಾಸ್ ನೋಟಿಸ್ ನೀಡಿದ್ದೇನೆ. ಶೋಕಾಸ್ ನೋಟಿಸ್ ನೀಡಿದ ಪುಟ ಸಂಖ್ಯೆಯೇ ಐದು ನೂರು ಮೀರಿವೆ. ಬಿಡಿಎ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ತಪ್ಪು ಮಾಡಿದ ಅಧಿಕಾರಿಗಳ ವಿರುದ್ಧ ಎಫ್ಐಆರ್ ಮಾಡಿಸಿ ತನಿಖೆ ನಡೆಸುತ್ತಿದ್ದೇನೆ. ಹಲವರು ಬಂಧನಕ್ಕೆ ಒಳಗಾಗಿದ್ದರೆ. ಇನ್ನೂ ಹಲವು ಅಕ್ರಮಗಳಿಗೆ ಸಂಬಂಧಿಸಿದಂತೆ ವರದಿ ಸಿದ್ಧಪಡಿಸುತ್ತಿದ್ದು, ಅದನ್ನು ತನಿಖೆಗೆ ಒಳಪಡಿಸುತ್ತೇನೆ. ನಾನು ವಹಿಸಿರುವ ಬಿಡಿಎ ಅಕ್ರಮವನ್ನು ಡಿಸಿಪಿ ಅನುಚೇತ್ ಅವರು ಸಮರ್ಥವಾಗಿ ತನಿಖೆ ನಡೆಸುತ್ತಿದ್ದಾರೆ. ಅಕ್ರಮದಲ್ಲಿ ಶಾಮೀಲಾದರವರು ಈಗಾಗಲೇ ಬಂಧನಕ್ಕೆ ಒಳಗಾಗಿದ್ದಾರೆ. ಸದ್ಯದಲ್ಲಿ ತನಿಖೆಯ ಇನ್ನೊಂದು ಹಂತಕ್ಕೆ ತಲುಪಲಿದ್ದು, ಮತ್ತಷ್ಟು ಅಧಿಕಾರಿಗಳು ಬಂಧನಕ್ಕೆ ಒಳಗಾಗಲಿದ್ದಾರೆ. ಇಂತಹ ಸಮಯದಲ್ಲಿ ಈ ಪ್ರಕರಣವನ್ನು ಎಸ್ ಐಟಿಗೆ ವಹಿಸಿದರೆ, ಆರೋಪಿಗಳು ತಪ್ಪಿಸಿಕೊಳ್ಳಲು ಅವಕಾಶ ನೀಡಿದಂತಾಗುತ್ತದೆ. ಹೈಕೋರ್ಟ್ ನಿಂದ ಛೀಮಾರಿ ಹಾಕಿಸಿಕೊಳ್ಳುವ ಸಾಧ್ಯತೆಯಿರುತ್ತದೆ. ಈ ಬಗ್ಗೆ ನಗರಾಭಿವೃದ್ಧಿ ಅಪರ ಕಾರ್ಯದರ್ಶಿಗಳ ಜತೆ ಚರ್ಚಿಸಿದ್ದು, ಕಾನೂನು ತಜ್ಞರೊಂದಿಗೆ ಸಮಾಲೋಚಿಸಿ ಎಸ್ ಐಟಿಗೆ ವಹಿಸುವ ಬಗ್ಗೆ ತೀರ್ಮಾನ ಕೈಗೊಳ್ಳಬೇಕಾಗಿರುದರಿಂದ ಇದಕ್ಕೆ ಹಿನ್ನೆಡೆಯಾಗಿದೆ ಹೊರತು, ಎಸ್ಐಟಿ ರಚನೆ ಮಾಡಬಾರದು ಎಂದು ನಾನು ತಡೆಯೊಡ್ಡಿಲ್ಲ ಎಂದು ಬಿಡಿಎ ಆಯುಕ್ತರು ಟಾಂಗ್ ನೀಡಿದ್ದಾರೆ.

ಬಿನ್ನಿಮಿಲ್ ಕ್ಲಿಯರ್ :
ಸಗಟು ನಿವೇಶನ ಹಂಚಿಕೆ ಸಂಬಂಧ ಬಿನ್ನಿಮಿಲ್ ಹೌಸಿಂಗ್ ಸೊಸೈಟಿ ಅಕ್ರಮದ ಬಗ್ಗೆ ಈಗಾಗಲೇ ಕ್ರಮ ಜರುಗಿಸಿ ಸರ್ಕಾರಕ್ಕೆ ವರದಿ ನೀಡಿದ್ದೇನೆ. ತಪ್ಪಿತಸ್ಥರ ಅಧಿಕಾರಿಗಳಿಗೆ ನೋಟಿಸ್ ನೀಡಿದ್ದೇನೆ. ಎಲ್ಲಾ ಸಗಟು ನಿವೇಶನ ರದ್ದು ಮಾಡಿ, ನೋಂದಣಿಯನ್ನು ರದ್ದು ಪಡಿಸುವಂತೆ ಸರ್ಕಾರಕ್ಕೆ ಶಿಫಾರಸು ಮಾಡಿದ್ದೇನೆ. ಇನ್ನು ಹೊಸಕೆರೆಹಳ್ಳಿ ಅನಾಥ ಮಕ್ಕಳ ಸಂಸ್ಥೆಯ ಸಗಟು ಹಂಚಿಕೆ ಸಂಬಂಧ ಪಟ್ಟಂತೆ, ಕನ್ನಿಂಗ್ ಹ್ಯಾಮ್ ರಸ್ತೆಯ ಖಾಸಗಿ ಕಚೇರಿ ಮೇಲೆ ದಾಳಿ ನಡೆಸಿ ತಪ್ಪಿತಸ್ಥ ಅಧಿಕಾರಿಗಳು ಮತ್ತು ಬ್ರೋಕರ್ ಗಳ ಮೇಲೆ ಎಫ್ಐಆರ್ ದಾಖಲಿಸಿ ಜೈಲಿಗೆ ಕಳುಹಿಸಲಾಗಿದೆ. ಇದರ ಮುಂದುವರೆದ ತನಿಖೆ ಡಿಸಿಪಿ ಅನುಚೇತ್ ಅವರ ನೇತೃತ್ವದಲ್ಲಿ ಸಮರ್ಥವಾಗಿ ನಡೆಯುತ್ತಿದೆ. ಸದ್ಯದಲ್ಲಿ ಈ ಹಗರಣದಲ್ಲಿ ಭಾಗಿಯಾಗಿರುವ ಮತ್ತಷ್ಟು ಅಧಿಕಾರಿಗಳು ಬಂಧನಕ್ಕೆ ಒಳಗಾಗಲಿದ್ದಾರೆ. ಇಂತಹ ಸಮಯದಲ್ಲಿ ಈ ಪ್ರಕರಣ ಎಸ್ಐಟಿಗೆ ವಹಿಸಿದರೆ, ಪ್ರಸ್ತುತ ಚಾಲ್ತಿಯಲ್ಲಿರುವ ತನಿಖೆಯು ಸ್ಥಗಿತಗೊಂಡು, ಭ್ರಷ್ಟರನ್ನು ಕಾನೂನು ಕ್ರಮದಿಂದ ತಪ್ಪಿಸಿಕೊಳ್ಳಲು ಸಹಕರಿಸಿದಂತಾಗುತ್ತದೆ ಈ ಹಿನ್ನೆಲೆಯಲ್ಲಿ ಎಸ್ಐಟಿ ರಚನೆಗೆ ಪತ್ರ ಬರೆಯಲು ವಿಳಂಬವಾಗಿದೆಯೇ ವಿನಃ ಎಸ್ಐಟಿ ರಚನೆಗೆ ತಡೆಯೊಡ್ಡಿಲ್ಲ ಎಂದು ಆಯುಕ್ತರು ಸಮರ್ಥಿಸಿಕೊಂಡರು.

ನಾನು ರೂಲ್ಸ್ ಬ್ರೇಕ್ ಮಾಡಲ್ಲ:
ಬಿಡಿಎ ಅಧ್ಯಕ್ಷರಿಗೆ ಕಡತ ಕೊಡಲ್ಲ ಎಂಬುದು ಸರಿಯಲ್ಲ. ಅವರಿಗೆ ಇರುವ ಅಧಿಕಾರದಲ್ಲಿ ಯಾವ ಕಡತ ನೋಡಲು ಅದಕ್ಕೆ ಅವಕಾಶ ಕೊಟ್ಟಿದ್ದೇನೆ. ಎಲ್ಲಾ ಕಡತ ಕೊಡಿ ಎಂದರೆ ಬಿಡಿಎ ನಿಯಮಗಳನ್ನು ನಾನು ಉಲ್ಲಂಘಿಸಬೇಕಾಗುತ್ತದೆ. ನಾನು ಯಾವತ್ತಿಗೂ ಬಿಡಿಎ ನಿಯಮ ಉಲ್ಲಂಘನೆ ಮಾಡುವುದಿಲ್ಲ. ಎಲ್ಲಾ ಕಡತಗಳನ್ನು ಅಧ್ಯಕ್ಷರು ಕೇಳುವ ಅಗತ್ಯವೇನಿದೆ ? ಸಾಮಾನ್ಯ ವ್ಯಕ್ತಿಯನ್ನೂ ಕೂರಿಸಿ ಮಾತನಾಡಿಸುತ್ತೇನೆ. ಇನ್ನು ಅಧ್ಯಕ್ಷರಿಗೆ ಗೌರವ ಕೊಡಲ್ಲ, ಅವರ ಮಾತು ಕೇಳಲ್ಲ ಎಂಬುದರಲ್ಲಿ ಹುರುಳಿಲ್ಲ. ಸುಮ್ಮನೆ ಆರೋಪ ಮಾಡುವುದರಲ್ಲಿ ಅರ್ಥವಿಲ್ಲ. ನಾನು ನನ್ನ ಪರಿಮಿತಿಯಲ್ಲಿ ಕೆಲಸ ಮಾಡಬೇಕು. ನನ್ನ ಅವಧಿಯಲ್ಲಿ ಒತ್ತುವರಿದಾರರ ಪಾಲಾಗಿದ್ದ ಬಿಡಿಎಗೆ ಸೇರಿದ 300 ಎಕರೆ ಗೂ ಅಧಿಕ ಆಸ್ತಿಯನ್ನು ಪತ್ತೆ ಹಚ್ಚಿದ್ದೇನೆ. ಇದರ ಅಂದಾಜು ಮೌಲ್ಯ 3 ಸಾವಿರ ಕೋಟಿಗೂ ಅಧಿಕ. ಈ ಆಸ್ತಿಯನ್ನು ಬಿಡಿಎ ತನ್ನ ಸುಪರ್ದಿಗೆ ತೆಗೆದುಕೊಳ್ಳಲಿದೆ. ಈ ನಿಟ್ಟಿನಲ್ಲಿ ನಾನು ಕಾರ್ಯೋನ್ಮುಖವಾಗಿದ್ದೇನೆ. ಬಿಡಿಎ ಅಕ್ರಮದಲ್ಲಿ ಶಾಮೀಲಾಗಿರುವ ಅಧಿಕಾರಿಗಳು ಜೈಲಿಗೆ ಹೋಗುವ ಭೀತಿಯಿಂದ ನನ್ನ ವಿರುದ್ಧ ಷಡ್ಯಂತ್ರ್ಯ ರೂಪಿಸುತ್ತಿರಬೇಕು ಎಂದು ಆಯುಕ್ತರು ತಿಳಿಸಿದರು. ಬೆಂಗಳೂರಿನ ಜಾರಕಬಂಡೆ ಕಾವಲ್ ನಲ್ಲಿ ಬಿಡಿಎ ಜಾಗ ಒತ್ತುವರಿ ತೆರವು ಮಾಡಿ ಬಿಡಿಎ ಸುಪರ್ದಿಗೆ ತೆಗೆದುಕೊಳ್ಳಲಾಗಿದ್ದು, ಈ ಸಂಬಂಧ ನನಗೆ ಬೆದರಿಕೆಯೂ ಬಂದಿದೆ. ಬಿಡಿಎ ಆಸ್ತಿ ರಕ್ಷಣೆ ಮಾಡುವ ಸಂದರ್ಭದಲ್ಲಿ ಇಂತಹ ಬೆದರಿಕೆಗಳಿಗೆ ನಾನು ತಲೆ ಕೆಡಿಸಿಕೊಳ್ಳುವುದಿಲ್ಲ ಎಂದರು.