ಚಿದಂಬರಂ ಬಜೆಟ್ ನಂತರ ಶಿವಪ್ರಸಾದ್ ಬಜೆಟ್
ಬೆಂಗಳೂರು, ಫೆ.17 : ಅತ್ತ ನವದೆಹಲಿಯಲ್ಲಿ ಕೇಂದ್ರ ಹಣಕಾಸು ಸಚಿವ ಪಿ.ಚಿದಂಬರಂ 2014-15ರ ಮಧ್ಯಂತರ ಬಜೆಟ್ ಮಂಡನೆ ಮಾಡಿ ಮುಗಿಸಿದ್ದಾರೆ. ಇತ್ತ ಬೆಂಗಳೂರಿನಲ್ಲಿ ಡಾ.ಕೆ.ಶಿವಪ್ರಸಾದ್ ಮಧ್ಯಾಹ್ನ 3 ಗಂಟೆಗೆ ಬಿಬಿಎಂಪಿ ಬಜೆಟ್ ಮಂಡಿಸಲಿದ್ದಾರೆ. ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ 2014-15ರ ಬಜೆಟ್ ಅನ್ನು ಸೋಮವಾರ ಮಂಡಿಸಲಿದೆ.
ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರದ ನೆರವುಗಳನ್ನು ಆಧಾರವಾಗಿಟ್ಟುಕೊಂಡು ಸಿದ್ಧಪಡಿಸಿರುವ ಆಯವ್ಯಯವನ್ನು ತೆರಿಗೆ ಮತ್ತು ಹಣಕಾಸು ಸ್ಥಾಯಿ ಸಮಿತಿ ಅಧ್ಯಕ್ಷ ಶಿವಪ್ರಸಾದ್ ಸೋಮವಾರ ಮಧ್ಯಾಹ್ನ 3ಗಂಟೆಗೆ ಪಾಲಿಕೆಯ ಕೌನ್ಸಿಲ್ ಸಭೆಯಲ್ಲಿ ಮಂಡಿಸಲಿದ್ದಾರೆ. [ಚಿದಂಬರಂ ಬಜೆಟ್ ನಲ್ಲೇನಿದೆ?]
ಬೆಂಗಳೂರಿನ ಜನರ ಮೇಲೆ ಹೊಸ ತೆರಿಗೆ ಹೊರೆ ಹೇರದೆ, ಬೆರಳೆಣಿಕೆಯಷ್ಟು ಹೊಸ ಯೋಜನೆಗಳನ್ನು ಮಾತ್ರ ಒಳಗೊಂಡಿರುವ ಸುಮಾರು 8 ಸಾವಿರ ಕೋಟಿ ಮೊತ್ತದ ಬಜೆಟ್ ಅನ್ನು ಮಂಡಿಸಲಾಗುತ್ತದೆ. ಗುತ್ತಿಗೆದಾರರಿಗೆ ಬಿಲ್ ಪಾವತಿ ಮತ್ತು ನಡೆಯುತ್ತಿರುವ ಕಾಮಗಾರಿಗಳಿಗೆ ಅನುದಾನ ಒದಗಿಸಲು ಬಜೆಟ್ ಆದ್ಯತೆ ನೀಡುವ ಸಾಧ್ಯತೆ ಇದೆ. [ಬಿಬಿಎಂಪಿ 2013ರ ಬಜೆಟ್ ಮುಖ್ಯಾಂಶಗಳು]
ಪಾಲಿಕೆ ಈಗಾಗಲೇ 1800ಕೋಟಿ ಗುತ್ತಿಗೆದಾರರ ಬಾಕಿ ಉಳಿಸಿಕೊಂಡಿದೆ. ಇದರೊಂದಿಗೆ 1500 ಕೋಟಿಗೂ ಹೆಚ್ಚಿನ ಸಾಲದ ಹೊರೆ ಇದೆ. ನಗರದಲ್ಲಿನ ಟ್ರಾಫಿಕ್ ಜಾಮ್ ತಪ್ಪಿಸಲು ಅನೇಕ ಸಂಚಾರ ಸುಧಾರಣೆ, ರಸ್ತೆ ಅಭಿವೃದ್ಧಿ ಯೋಜನೆಗಳನ್ನು ಬಜೆಟ್ ನಲ್ಲಿ ಪ್ರಸ್ತಾಪಿಸುವ ಸಾಧ್ಯತೆ ಇದೆ. [ಸಿದ್ದರಾಮಯ್ಯ ಬಜೆಟ್ ನಲ್ಲಿ ಬೆಂಗಳೂರಿಗೆ ಸಿಕ್ಕಿದ್ದೇನು?]
ಅಂದಹಾಗೆ ಕಳೆದ ಬಾರಿ ಮೇಯರ್ ಆಗಿದ್ದ ಡಿ.ವೆಂಕಟೇಶಮೂರ್ತಿ 10,000 ಕೋಟಿಗೂ ಮೀರಿದ ಬಜೆಟ್ ಮಂಡಿಸಿದ್ದರು. ಆದರೆ, ಅದನ್ನು ಅನುಷ್ಠಾನಗೊಳಿಸಲು ಸಾಧ್ಯವಾಗಿರಲಿಲ್ಲ. ಆದ್ದರಿಂದ ಈ ಬಾರಿ ಬಜೆಟ್ ಗಾತ್ರವನ್ನು 7.5ಸಾವಿರ ಕೋಟಿಯಿಂದ 8 ಸಾವಿರ ಕೋಟಿ ಮಿತಿಯಲ್ಲಿ ರೂಪಿಸಲಾಗಿದೆ ಎಂದು ತಿಳಿದುಬಂದಿದೆ.