5 ಹೊಸ ಪಾಲಿಕೆ: ಬೆಂಗಳೂರು ಅಭಿವೃದ್ಧಿಗೆ ಸಂಕಷ್ಟ, ಆಸ್ತಿ ತೆರಿಗೆ ಗೊಂದಲ & ಆಸ್ತಿ ತೆರಿಗೆ ಹೆಚ್ಚಳ ಸಾಧ್ಯತೆ!
ಬೆಂಗಳೂರಿನಲ್ಲಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಬದಲಿಗೆ ಹೊಸ ಐದು ಪಾಲಿಕೆಗಳ ರಚನೆಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ತೆಗೆದುಕೊಂಡಿರುವ ಕ್ರಮಕ್ಕೆ ವಿರೋಧ ವ್ಯಕ್ತವಾಗಿದೆ. ಈ ಸಂಬಂಧ ಬಿಬಿಎಂಪಿಯ ಮಾಜಿ ವಿರೋಧ ಪಕ್ಷದ (ಬಿಜೆಪಿ)ನಾಯಕರು ಕರ್ನಾಟಕ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ. ಮೊದಲಿನಿಂದಲೂ ಹೊಸ ಐದು ಪಾಲಿಕೆಗಳ ರಚನೆಗೆ ವಿರೋಧ ವ್ಯಕ್ತವಾಗುತ್ತಿದ್ದರೂ ರಾಜ್ಯ ಕಾಂಗ್ರೆಸ್ ಸರ್ಕಾರವು ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿಲ್ಲ. ಇದೀಗ ಹೊಸ ಪಾಲಿಕೆಗಳ ರಚನೆಯಿಂದ ಕನ್ನಡಿಗರಿಗೆ ಏನು ಸಮಸ್ಯೆ ಆಗಲಿದೆ. ಆರ್ಥಿಕವಾಗಿ ಏನು ಸಮಸ್ಯೆ ಎದುರಾಗಲಿದೆ ಹಾಗೂ ಬೆಂಗಳೂರು ಅಭಿವೃದ್ಧಿಗೆ ಹೇಗೆ ಹಿನ್ನಡೆ ಆಗಲಿದೆ ಎನ್ನುವ ವಿಷಯಗಳನ್ನು ವಿವರಿಸಿ ಸರ್ಕಾರಕ್ಕೆ ಪತ್ರ ಬರೆಯಲಾಗಿದೆ.
ಬೆಂಗಳೂರು ಅಭಿವೃದ್ಧಿ ಹಾಗೂ ಆಡಳಿತ ವಿಕೇಂದ್ರೀಕರಣದ ಉದ್ದೇಶದಿಂದ ಬೆಂಗಳೂರನ್ನು ಐದು ಪಾಲಿಕೆಗಳನ್ನಾಗಿ ವಿಭಜನೆ ಮಾಡುವುದಾಗಿ ರಾಜ್ಯ ಸರ್ಕಾರ ಹೇಳಿದ್ದು ಈಗಾಗಲೇ ಬಹುತೇಕ ಪ್ರಕ್ರಿಯೆಗಳು ನಡೆದಿವೆ. ಇದೀಗ ಆಸ್ತಿ ತೆರಿಗೆ ಸಂಗ್ರಹ ಹಾಗೂ ಆಸ್ತಿ ತೆರಿಗೆ ಪಾವತಿ ವಿಚಾರದಲ್ಲಿ ಯಾವ ರೀತಿಯ ಸಮಸ್ಯೆ ಆಗಬಹುದು ಎನ್ನುವ ಬಗ್ಗೆ ಬಿಬಿಎಂಪಿಯ ವಿರೋಧ ಪಕ್ಷದ ಮಾಜಿ ನಾಯಕ ಪದ್ಮನಾಭ ರೆಡ್ಡಿ ಅವರು ಕರ್ನಾಟಕ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಅವರಿಗೆ ಪತ್ರ ಬರೆದಿದ್ದಾರೆ.

ಆಸ್ತಿ ತೆರಿಗೆ ವಿಚಾರದಲ್ಲಿ ಸಮಸ್ಯೆ: ಗ್ರೇಟರ್ ಬೆಂಗಳೂರು ಗೌವರ್ನ್ಸ ಆಕ್ಟ್ 2024 ಜಾರಿ ಮಾಡುವುದರಿಂದ ಆಸ್ತಿ ತೆರಿಗೆ ಸಂಗ್ರಹ ಹಾಗೂ ಬೆಂಗಳೂರಿನ ಅಭಿವೃದ್ಧಿ ವಿಚಾರದಲ್ಲಿ ಭಾರೀ ಹಿನ್ನಡೆ ಆಗಲಿದೆ ಎಂದು ಪದ್ಮನಾಭ ರೆಡ್ಡಿ ಅವರು ವಿವರಿಸಿದ್ದಾರೆ. ಐದು ಪಾಲಿಕೆಗಳಲ್ಲೂ ಬಿಬಿಎಂಪಿ ಅಥವಾ ನೂತನ ಜಿಎಬಿಯಿಂದ ಆಸ್ತಿದಾರರಿಗೂ ಸಂಕಷ್ಟ ಎದುರಾಗುವ ಸಾಧ್ಯತೆ ಇದೆ ಎಂದು ಅವರು ವಿವರಿಸಿದ್ದಾರೆ.
ಪಾಲಿಕೆ | ವಿಧಾನಸಭಾ ಕ್ಷೇತ್ರ | ಆಸ್ತಿ ತೆರಿಗೆ (2025) | ವಿಸ್ತೀರ್ಣ qs( ಕಿ.ಮೀ)
ಸೆಂಟ್ರಲ್: ಸಿವಿ ರಾಮನಗರ, ಚಾಮರಾಜಪೇಟೆ, ಚಿಕ್ಕಪೇಟೆ, ಗಾಂಧಿನಗರ, ಶಾಂತಿನಗರ ಹಾಗೂ ಶಿವಾಜಿನಗರ ಪ್ರದೇಶದಲ್ಲಿ ಪ್ರಾಪರ್ಟಿ ಟ್ಯಾಕ್ಸ್ 659 ಕೋಟಿ ಸಂಗ್ರಹವಾಗುತ್ತಿದೆ. ಇದರ ವಿಸ್ತೀರ್ಣವು 78 ಕಿ.ಮೀ ಇದೆ.
ಪೂರ್ವ: ಕೃಷ್ಣರಾಜಪುರ, ಮಹದೇವಪುರ (ಬೆಳ್ಳಂದೂರು ವಾರ್ಡ್ ಹೊರತುಪಡಿಸಿ) ಈ ಭಾಗದಲ್ಲಿ ಆಸ್ತಿ ತೆರಿಗೆ ಸಂಗ್ರಹ ಪ್ರಮಾಣವು 912 ಕೋಟಿ ರೂಪಾಯಿ ಇದೆ. ಅಲ್ಲದೇ ಈ ನೂತನ ಪಾಲಿಕೆಯ ವಿಸ್ತೀರ್ಣವು 168 ಕಿ.ಮೀ ಇದೆ.
ಉತ್ತರ: ಇನ್ನು ಬೆಂಗಳೂರಿನ ನೂತನ ಮಹಾನಗರ ಪಾಲಿಕೆ ಬೆಂಗಳೂರು ಉತ್ತರ ಭಾಗದಲ್ಲಿ ಬ್ಯಾಟರಾಯನಪುರ, ದಾಸರಹಳ್ಳಿ (ಶೆಟ್ಟಿಹಳ್ಳಿ, ಮಲ್ಲಸಂದ್ರ, ಬಾಗಲಕುಂಟೆ, ಟಿ.ದಾಸರಹಳ್ಳಿ ಹೊರತುಪಡಿಸಿ), ಹೆಬ್ಬಾಳ, ಪುಲಕೇಶಿನಗರ (ಕುಶಾಲನಗರ ಹೊರತುಪಡಿಸಿ), ಆರ್ಆರ್ ನಗರ (ಜಾಲಹಳ್ಳಿ, ಜೆಪಿ ಪಾರ್ಕ್, ಯಶವಂತಪುರ ಹೊರತುಪಡಿಸಿ), ಸರ್ವಜ್ಞನಗರ ಹಾಗೂ ಯಲಹಂಕ ಪ್ರದೇಶಗಳು ಸೇರಿವೆ. ಈ ಪ್ರದೇಶಗಳಿಂದ ಬಿಬಿಎಂಪಿಗೆ 543 ಕೋಟಿ ರೂಪಾಯಿ ಆಸ್ತಿ ತೆರಿಗೆ ಸಂಗ್ರಹವಾಗುತ್ತದೆ. 158 ಕಿ.ಮೀ ಇದೆ.
ದಕ್ಷಿಣ: ಬೆಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರ ಬಿಟಿಎಂ ಲೇಔಟ್, ಬೆಂಗಳೂರು ದಕ್ಷಿಣ, ಬೊಮ್ಮನಹಳ್ಳಿ, ಜಯನಗರ, ಮಹದೇವಪುರ (ಬೆಳ್ಳಂದೂರು ಭಾಗ), ಪದ್ಮನಾಭನಗರ (ಬನಶಂಕರಿ ದೇವಸ್ಥಾನ, ಕುಮಾರಸ್ವಾಮಿ ಲೇಔಟ್, ಪದ್ಮನಾಭನಗರ, ಚಿಕ್ಕಲಸಂದ್ರ) ಆರ್.ಆರ್.ನಗರ (ಆರ್.ಆರ್. ನಗರ ವಾರ್ಡ್). ಯಶವಂತಪುರ (ಹೆಮ್ಮಿಗೆಪುರ ಭಾಗ) ಪ್ರದೇಶಗಳು ಸೇರಿವೆ ಈ ಪ್ರದೇಶಗಳಿಂದ ಬಿಬಿಎಂಪಿಗೆ ಬರೋಬ್ಬರಿ 733 ಕೋಟಿ ತೆರಿಗೆ ಸಂಗ್ರಹವಾಗುತ್ತಿದ್ದು. ಈ ಹೊಸ ಪಾಲಿಕೆಯ ವಿಸ್ತೀರ್ಣವು
147 ಕಿ.ಮೀ ವ್ಯಾಪ್ತಿ ಒಳಗೊಂಡಿದೆ.
ಪಶ್ಚಿಮ: ಬೆಂಗಳೂರಿನ ನೂತನ ಹಾಗೂ ಐದನೇ ಮಹಾನಗರ ಪಾಲಿಕೆ ಬೆಂಗಳೂರು ಪಶ್ಚಿಮ ಭಾಗದಲ್ಲಿ ಬಸವನಗುಡಿ, ದಾಸರಹಳ್ಳಿ (ಚೊಕ್ಕಸಂದ್ರ, ಪಿಐಎ, ರಾಜಗೋಪಾಲನಗರ, ಹೆಗ್ಗನಹಳ್ಳಿ), ಗೋವಿಂದರಾಜ ನಗರ, ಮಹಾಲಕ್ಷ್ಮಿ ಲೇಔಟ್, ಮಲ್ಲೇಶ್ವರಂ, ಪದ್ಮನಾಭನಗರ (ಹೊಸಕೆರೆಹಳ್ಳಿ, ಗಣೇಶ ಮಂದಿರ, ಕರಿಸಂದ್ರ, ಯಡಿಯೂರು). ರಾಜಾಜಿನಗರ, ಆರ್.ಆರ್ ನಗರ (ಎಚ್ಎಂಟಿ, ಲಕ್ಷ್ಮೀದೇವಿನಗರ, ಲಗ್ಗೆರೆ, ಕೊಟ್ಟಿಗೆಪಾಳ್ಯ, ಜ್ಞಾನಭಾರತಿ, ಆರ್ಆರ್ ನಗರ ವಾರ್ಡ್), ವಿಜಯ ನಗರ ಪ್ರದೇಶಗಳು ಬರಲಿದ್ದು ಈ ಭಾಗದಿಂದ ಪಾಲಿಕೆಗೆ ಬರೋಬ್ಬರಿ 580 ಕೋಟಿ ರೂಪಾಯಿ ಆಸ್ತಿ ತೆರಿಗೆ ಸಂಗ್ರಹವಾಗುತ್ತಿದೆ.
ಇದೀಗ ರಾಜ್ಯ ಸರ್ಕಾರವು ನೂತನ ಪಾಲಿಕೆಗಳನ್ನು ರಚನೆ ಮಾಡಿದರೆ ಇದರಿಂದ ಪಾಲಿಕೆಯ ಆದಾಯವು ವಿಭಜನೆ ಆಗಲಿದೆ. ಅಲ್ಲದೇ ಅಭಿವೃದ್ಧಿ ವಿಚಾರದಲ್ಲಿ ಬೆಂಗಳೂರು ಹಿಂದುಳಿಯಲಿದೆ. ಅಲ್ಲದೇ ಬೆಂಗಳೂರಿನ ಸರ್ವತೋಮುಖ ಅಭಿವೃದ್ಧಿ ಸಾಧ್ಯವಿಲ್ಲ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ಇನ್ನು ಬೆಂಗಳೂರಿನಲ್ಲಿ ಈ ರೀತಿ ಪಾಲಿಕೆಯ ಆದಾಯ ಸಂಗ್ರಹದಲ್ಲಿ ಏರುಪೇರಾದರೆ ಕಡಿಮೆ ಆದಾಯ ಬರುವ ಪಾಲಿಕೆಗಳ ವ್ಯಾಪ್ತಿಯಲ್ಲಿ ಮುಂದಿನ ದಿನಗಳಲ್ಲಿ ಆಸ್ತಿ ತೆರಿಗೆ ಹೆಚ್ಚಳವಾಗುವ ಸಾಧ್ಯತೆಯೂ ಇದೆ.












Click it and Unblock the Notifications