ಬಿಬಿಎಂಪಿ ಆಸ್ತಿ ತೆರಿಗೆ ಹಗರಣ; ಎಸಿಬಿ ತನಿಖೆಗೆ ಆದೇಶ
ಬೆಂಗಳೂರು, ಆಗಸ್ಟ್ 17 : ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯಲ್ಲಿ ನಡೆದ ಸುಮಾರು 500 ಕೋಟಿ ರೂ. ಮೌಲ್ಯದ ಆಸ್ತಿ ತೆರಿಗೆ ವಂಚನೆ ಬಗ್ಗೆ ಎಸಿಬಿ ತನಿಖೆ ನಡೆಯಲಿದೆ. ಬಿಬಿಎಂಪಿ ನೀಡಿದ್ದ ವರದಿ ಆಧರಿಸಿ ಎಸಿಬಿ ತನಿಖೆಗೆ ಸರ್ಕಾರ ಆದೇಶ ನೀಡಿದೆ.
Recommended Video
ಕರ್ನಾಟಕ ಸರ್ಕಾರದ ಮುಖ್ಯ ಕಾರ್ಯದರ್ಶಿ ಟಿ. ಎಂ. ವಿಜಯ ಭಾಸ್ಕರ್ ಎಸಿಬಿ ತನಿಖೆಗೆ ಆದೇಶ ನೀಡಿದ್ದಾರೆ. 2005 ರಿಂದ 2018ರ ತನಕ ನಡೆದಿರುವ ಈ ಹಗರಣದಿಂದಾಗಿ ಬಿಬಿಎಂಪಿಗೆ 500 ಕೋಟಿ ರೂ. ಆದಾಯ ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ.
80 ದೊಡ್ಡ ವಾಣಿಜ್ಯ ಸಂಕೀರ್ಣಗಳು ಹೋಟೆಲ್, ಟೆಕ್ ಪಾರ್ಕ್ಗಳು ಸೇರಿ ತೆರಿಗೆ ವಂಚನೆ ಮಾಡಿವೆ. ಕಟ್ಟಡ ಇರುವುದಕ್ಕಿಂತ ಕಡಿಮೆ ಅಳತೆಯನ್ನು ತೋರಿಸಿ ಬಿಬಿಎಂಪಿಗೆ ಆಸ್ತಿ ತೆರಿಗೆ ವಂಚನೆ ಮಾಡಲಾಗಿದೆ. ಬಿಬಿಎಂಪಿ ಈ ಕರಿತು ವರದಿ ತಯಾರು ಮಾಡಿ ಸರ್ಕಾರಕ್ಕೆ ಸಲ್ಲಿಸಿತ್ತು.

ಸುಮಾರು 2 ವರ್ಷಗಳಿಂದ ಬಿಬಿಎಂಪಿ ಕೌನ್ಸಿಲ್ ಸಭೆಯಲ್ಲಿ ಈ ಕುರಿತು ಕೆಲವು ಕಾರ್ಪೊರೇಟರ್ಗಳು ವಿಷಯ ಪ್ರಸ್ತಾಪ ಮಾಡುತ್ತಿದ್ದರು. ಬಿಬಿಎಂಪಿ ಆಯುಕ್ತ ಬಿ. ಎಚ್. ಅನಿಲ್ ಕುಮಾರ್ ಪ್ರಾಥಮಿಕ ತನಿಖೆ ನಡೆಸಿದಾಗ ವಂಚನೆ ನಡೆದಿರುವುದು ಬೆಳಕಿಗೆ ಬಂದಿದೆ.
ಅವರು ವಿವರವಾದ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿದ್ದಾರೆ. ಬಿಬಿಎಂಪಿ ಸಲ್ಲಿಕೆ ಮಾಡಿದ ವರದಿ ಅನ್ವಯೇ ಸರ್ಕಾರ ಎಸಿಬಿ ತನಿಖೆಗೆ ಆದೇಶ ನೀಡಿದೆ. ಸ್ವಯಂ ಪ್ರೇರಿತವಾಗಿ ಅಳತೆ ಅನ್ವಯ ಆಸ್ತಿ ತೆರಿಗೆ ಪಾವತಿ ಮಾಡಿ ಎಂದು ಬಿಬಿಎಂಪಿ 2008-09ರಲ್ಲಿ ಘೋಷಣೆ ಮಾಡಿತ್ತು.
ಇದನ್ನು ದುರುಪಯೋಗ ಪಡಿಸಿಕೊಂಡ ದೊಡ್ಡ ವಾಣಿಜ್ಯ ಸಂಕೀರ್ಣಗಳು ಕಡಿಮೆ ಅಳತೆ ತೋರಿಸಿ ಆಸ್ತಿ ತೆರಿಗೆ ಪಾವತಿಯಿಂದ ತಪ್ಪಿಸಿಕೊಂಡಿವೆ. 2015-16ರಲ್ಲಿ 105 ದೊಡ್ಡ ಕಟ್ಟಡಗಳು ತೆರಿಗೆ ವಂಚನೆ ಮಾಡಿವೆ.
ಬಿಬಿಎಂಪಿ ಪೂರ್ವ ವಲಯದಲ್ಲಿಯೇ 116 ಕೋಟಿ ರೂ. ವಂಚನೆಯಾಗಿದೆ ಎಂದು ವರದಿ ಹೇಳಿದೆ. ಸರ್ಕಾರಕ್ಕೆ ಸಲ್ಲಿಕೆ ಮಾಡಿರುವ ವರದಿಯಲ್ಲಿ ಕೆಲವು ಹೋಟೆಲ್, ದೊಡ್ಡ ವಾಣಿಜ್ಯ ಸಂಕೀರ್ಣಗಳ ಹೆಸರನ್ನು ಸಹ ಬಿಬಿಎಂಪಿ ಉಲ್ಲೇಖಿಸಿದೆ.












Click it and Unblock the Notifications