ಬಿಬಿಎಂಪಿ ಮೈತ್ರಿ ಬಿಕ್ಕಟ್ಟು ಅಂತಿಮ, ಜೆಡಿಎಸ್ಗೆ ಉಪ ಮೇಯರ್ ಪಟ್ಟ
ಬೆಂಗಳೂರು, ಸೆಪ್ಟೆಂಬರ್ 25 : ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ)ಯಲ್ಲಿನ ಕಾಂಗ್ರೆಸ್-ಜೆಡಿಎಸ್ ಮೈತ್ರಿಯ ಸಂಪೂರ್ಣ ಚಿತ್ರಣ ಸಿಕ್ಕಿದೆ. ಈ ಬಾರಿಯೂ ಕಾಂಗ್ರೆಸ್ ಮೇಯರ್ ಪಟ್ಟ ಉಳಿಸಿಕೊಂಡಿದ್ದು, ಜೆಡಿಎಸ್ ಉಪ ಮೇಯರ್ ಪಟ್ಟ ಪಡೆಯಲಿದೆ. ಸೆ.28ರಂದು ಮೇಯರ್ ಆಯ್ಕೆಗೆ ಚುನಾವಣೆ ನಡೆಯಲಿದೆ.
ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ.ದೇವೇಗೌಡ ನಿವಾಸದಲ್ಲಿ ಭಾನುವಾರ ನಡೆದ ಸಭೆಯಲ್ಲಿ ಮೈತ್ರಿ ಕುರಿತು ಅಂತಿಮ ನಿರ್ಧಾರ ಕೈಗೊಳ್ಳಲಾಗಿದೆ. ಆದರೆ, ಮೇಯರ್ ಮತ್ತು ಉಪ ಮೇಯರ್ ಪಟ್ಟಕ್ಕೆ ಅಭ್ಯರ್ಥಿಗಳಾರು? ಎಂಬುದನ್ನು ಇನ್ನೂ ಅಂತಿಮಗೊಳಿಸಿಲ್ಲ.
ಬಿಬಿಎಂಪಿಯಲ್ಲಿ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳಲು ಸಮನ್ವಯ ಸಮಿತಿ ರಚನೆ ಮಾಡಬೇಕು ಎಂದು ಜೆಡಿಎಸ್ ಬೇಡಿಕೆ ಇಟ್ಟಿದೆ. ಸಮಿತಿ ತೆಗೆದುಕೊಳ್ಳುವ ನಿರ್ಧಾರವನ್ನು ಎರಡೂ ಪಕ್ಷಗಳು ಒಪ್ಪಿಕೊಳ್ಳಲಿವೆ. ಜೆಡಿಎಸ್ ಸದಸ್ಯರನ್ನು ಕಡೆಗಣಿಸಬಾರದು ಎಂದು ದೇವೇಗೌಡರು ಕಾಂಗ್ರೆಸ್ ನಾಯಕರಿಗೆ ಸೂಚನೆ ನೀಡಿದ್ದಾರೆ.
ಬಿಬಿಎಂಪಿ ಮೈತ್ರಿ : ಎಚ್.ಡಿ.ಕುಮಾರಸ್ವಾಮಿ ಹೇಳುವುದೇನು?
ಸೆ.28ರಂದು ಮೇಯರ್ ಮತ್ತು ಉಪ ಮೇಯರ್ ಆಯ್ಕೆಗೆ ಚುನಾವಣೆ ನಡೆಯಲಿದೆ. ಮೇಯರ್ ಹುದ್ದೆ ಪಡೆಯಲು ಬೇಕಾದ ಮ್ಯಾಜಿಕ್ ನಂಬರ್ 134. ಬಿಜೆಪಿ 126, ಕಾಂಗ್ರೆಸ್ 116 (ಪಕ್ಷೇತರರನ್ನು ಸೇರಿಸಿ), ಜೆಡಿಎಸ್ 24 ಮತಗಳನ್ನು ಹೊಂದಿದೆ.
ಉಪ ಮೇಯರ್, 4 ಸ್ಥಾಯಿ ಸಮಿತಿಗಳು
ಈ ಬಾರಿಯ ಚುನಾವಣೆಯಲ್ಲಿ ಉಪ ಮೇಯರ್ ಪಟ್ಟ, 4 ಸ್ಥಾಯಿ ಸಮಿತಿಗಳ ಅಧ್ಯಕ್ಷ ಸ್ಥಾನ ಜೆಡಿಎಸ್ಗೆ ಸಿಗಲಿದೆ. ತೆರಿಗೆ ಮತ್ತು ಆರ್ಥಿಕ ಸ್ಥಾಯಿ ಸಮಿತಿಗಳ ಅಧ್ಯಕ್ಷ ಸ್ಥಾನಕ್ಕಾಗಿ ಜೆಡಿಎಸ್ ಬೇಡಿಕೆ ಇಟ್ಟಿದೆ.
ಕೆಲವೇ ದಿನಗಳಲ್ಲಿ ಅಂತಿಮ
'ಉಪ ಮೇಯರ್ ಯಾರಾಗಬೇಕು ಎಂಬುದನ್ನು ಇನ್ನು ಎರಡು ದಿನಗಳಲ್ಲಿ ಅಂತಿಮಗೊಳಿಸಲಾಗುತ್ತದೆ' ಎಂದು ಎಚ್.ಡಿ.ದೇವೇಗೌಡ ಹೇಳಿದ್ದಾರೆ. ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಅವರು ಹೃದಯ ಶಸ್ತ್ರ ಚಿಕಿತ್ಸೆ ಬಳಿಕ ಚೇತರಿಸಿಕೊಳ್ಳುತ್ತಿದ್ದು, ಅವರ ಬಳಿ ಒಮ್ಮೆ ಚರ್ಚಿಸಿ ಉಪ ಮೇಯರ್ ಅಭ್ಯರ್ಥಿ ಅಂತಿಗೊಳಿಸಲಾಗುತ್ತದೆ.
ಮೇಯರ್ ಗದ್ದುಗೆ ಏರಲು ಪೈಪೋಟಿ
ಕಾಂಗ್ರೆಸ್ ಮೇಯರ್ ಸ್ಥಾನವನ್ನು ಉಳಿಸಿಕೊಳ್ಳಲಿದೆ. ದೇವರಜೀವನಹಳ್ಳಿ ವಾರ್ಡ್ ಆರ್.ಸಂಪತ್, ಸುಭಾಷ್ ನಗರ ವಾರ್ಡ್ ಎಲ್.ಗೋವಿಂದರಾಜು ಅವರ ಹೆಸರು ಮೇಯರ್ ಸ್ಥಾನಕ್ಕೆ ಕೇಳಿಬರುತ್ತಿದೆ. ಆರ್.ಆರ್.ನಗರ ವಿಧಾನಸಭಾ ಕ್ಷೇತ್ರದ ಲಕ್ಷ್ಮೀದೇವಿನಗರ ವಾರ್ಡ್ನ ಎಂ.ವೇಲು ನಾಯ್ಕರ್ಗೆ ಮೇಯರ್ ಪಟ್ಟ ನೀಡಬೇಕು ಎಂದು ಸಂಸದ ಡಿ.ಕೆ.ಸುರೇಶ್ ಬೇಡಿಕೆ ಇಟ್ಟಿದ್ದಾರೆ.
ಮೇಯರ್, ಉಪ ಮೇಯರ್ ಮೀಸಲಾತಿ
ಈ ಬಾರಿ ಮೇಯರ್ ಹುದ್ದೆ ಪರಿಶಿಷ್ಟ ಜಾತಿ (ಸಾಮಾನ್ಯ) ಸದಸ್ಯರಿಗೆ, ಉಪ ಮೇಯರ್ ಹುದ್ದೆ ಮಹಿಳೆಗೆ ಮೀಸಲಾಗಿದೆ. ಮೇಯರ್ ಮತ್ತು ಉಪ ಮೇಯರ್ ಯಾರಾಗಲಿದ್ದಾರೆ? ಎಂಬುದು ಇನ್ನೂ ಖಚಿತವಾಗಿಲ್ಲ.