ಬಿಬಿಎಂಪಿಗೆ ತನ್ನ ಮೂಗಿಗಿಂತ ಮೂಗುತಿ ಭಾರ!
ಬೆಂಗಳೂರು, ಸೆಪ್ಟೆಂಬರ್ 14: ಬಿಬಿಎಂಪಿಯು ಪ್ರತಿ ವರ್ಷ ತನ್ನ ಆದಾಯಕ್ಕಿಂತ ಹೆಚ್ಚು ವೆಚ್ಚವನ್ನು ಮಾಡುತ್ತಿದೆ ಎನ್ನುವುದು ಎಲ್ಲಿರಿಗೂ ತಿಳಿದಿದೆ. ಆದಾಯ ಕಡಿಮೆ ಇದ್ದರೂ ಐಷಾರಾಮಿ ಕಾರಿಗೆ ಬೇಡಿಕೆ ಇಟ್ಟಿದ್ದಾರೆ.
ಬೆಂಗಳೂರಿನ ಮೂಲಸೌಕರ್ಯ ಮತ್ತು ನಗರಾಡಳಿತವನ್ನು ನೋಡಿಕೊಳ್ಳುವ ಬಿಬಿಎಂಪಿ ತನ್ನ ಸಾಮರ್ಥ್ಯ ಮೀರಿ ಹಣಕಾಸು ಖರ್ಚು ವೆಚ್ಚ ಮಾಡುತ್ತಿದ್ದು ಭವಿಷ್ಯದಲ್ಲಿ ಭಾರಿ ಪ್ರಮಾಣದಲ್ಲಿ ಆರ್ಥಿಕ ಪರಿಸ್ಥಿತಿ ಹದಗೆಡುವ ಲಕ್ಷಣಗಳಿವೆ. ಹಾಗಂತ ಯಾವುದೋ ರಾಜಕಾರಣಿ ಹೀಗೆ ಆರೋಪ ಮಾಡುತ್ತಿಲ್ಲ, ಬದಲಾಗಿ ಬಿಬಿಎಂಪಿ ಆಡಳಿತ ನೋಡಿಕೊಳ್ಳುವ ಆಯುಕ್ತರೇ ಹೀಗೆಂದು ಆತಂಕ ವ್ಯಕ್ತಪಡಿಸಿದ್ದಾರೆ.
ಬಿಬಿಎಂಪಿ ತನ್ನ ಗುತ್ತಿಗೆದಾರರಿಗೆ ೧೫ ಸಾವಿರ ಕೋಟಿ ರೂಪಾಯಿಗಳಿಗೂ ಹಚ್ಚು ಬಾಕಿ ಕೊಡಬೇಕಾಗಿದೆ ಎಂದು ಆಯುಕ್ತ ಮಂಜುನಾಥ ಪ್ರಸಾದ್ ರಾಜ್ಯ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ.

ಗುತ್ತಿಗೆದಾರರಿಗೆ ನೀಡುವ 15,428 ಕೋಟಿ ಬಿಲ್ ಬಾಕಿ ಉಳಿಸಿಕೊಂಡಿದೆ. ಹಾಗಾಗಿ ಕರ್ನಾಟಕ ಸ್ಥಳೀಯ ನಿಧಿ ಪ್ರಾಧಿಕಾರಗಳ ಆರ್ಥಿಕ ಹೊಣೆಗಾರಿಕೆ ಅಧಿನಿಯಮ 2003ನ್ನು ಬಿಬಿಎಂಪಿಗೂ ಜಾರಿಗೊಳಿಸಿ ಆರ್ಥಿಕ ಸ್ಥಿತಿಗೆ ಮೂಗುದಾರ ಹಾಕಿ ಎಂದು ಬಿಬಿಎಂಪಿ ಆಯುಕ್ತರೇ ಖುದ್ದಾಗಿ ಹೇಳುತ್ತಿದ್ದಾರೆ.
ಈ ಕುರಿತು ನಗರಾಭಿವೃದ್ಧಿ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಮಹೇಂದ್ರ ಜೈನ್ ಅವರಿಗೆ ಪತ್ರ ಬರೆದು ಮನವಿ ಮಾಡಿದ್ದಾರೆ ಎನ್ನಲಾಗಿದೆ. ನಿರೀಕ್ಷಿಸಿದ ಆದಾಯ ಬಿಬಿಎಂಪಿಗೆ ಬರದೆ ಇದ್ದರೂ ಬಜೆಟ್ ನಲ್ಲಿ ವೆಚ್ಚಗಳಿಗೆ ತೋರಿಸಿರುವ ಅನುದಾನದಷ್ಟು ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳುತ್ತಾ ಬರಲಾಗುತ್ತಿದೆ. ಇದರಿಂದ ಪಾಲಿಕೆಗೆ ತೀವ್ರ ಆರ್ಥಿಕ ಹೊರೆ ಬೀಳುತ್ತಿದೆ.
ಇದಕ್ಕಾಗಿ ಬಜೆಟ್ ತಯಾರಿಕೆಯಲ್ಲಿ ಪಾಲಿಸುತ್ತಿರುವ ಶಿಸ್ತನ್ನು ಬಿಬಿಎಂಪಿ ಆಯವ್ಯಯ ತಯಾರಿಕೆಗೂ ಅನ್ವಯಿಸಬೇಕು. ಈ ಹಿನ್ನೆಲೆಯಲ್ಲಿ ಕರ್ನಾಟಕ ಸ್ಥಳೀಯ ನಿಧಿ ಪ್ರಾಧಿಕಾರಗಳ ಆರ್ಥಿಕ ಹೊಣೆಗಾರಿಕೆ ಅಧಿನಿಯಮ 2003ನ್ನು ಬಿಬಿಎಂಪಿಗೂ ಅನ್ವಯಿಸುವಂತೆ ಜಾರಿಗೆ ತರಬೇಕು ಎಂದು ಮನವಿ ಮಾಡಿದ್ದಾರೆ.
ಪಾಲಿಕೆ ಬಜೆಟ್ ನಲ್ಲಿ ನಿರೀಕ್ಷಿತ ಆದಾಯ ಬರದಿದ್ದರೂ ವೆಚ್ಚಗಳಿಗೆ ಅನುಗುಣವಾಗಿ ಜಾಬ್ ಸಂಖ್ಯೆಯನ್ನು ಪಡೆದು ಕಾಮಗಾರಿಗಳನ್ನ ಕೈಗೆತ್ತಿಕೊಳ್ಳುತ್ತಿರುವುದರಿಂದ ಪ್ರತಿ ವರ್ಷ ಗುತ್ತಿಗೆದಾರರಿಗೆ ಪಾವತಿಸಬೇಕಾದ ಬಾಕಿ ಬಿಲ್ಲುಗಳ ಅಂತರ ಹೆಚ್ಚಾಗುತ್ತಿದೆ.
ಪಾಲಿಕೆ ಅನುದಾನ ಮತ್ತು ಸರ್ಕಾರಿ ಅನುದಾನದಿಂದ ಕೈಗೆತ್ತಿಕೊಂಡಿರುವ ಕಾಮಗಾರಿಗಳನ್ನು ಒಳಗೊಂಡಂತೆ ಒಟ್ಟು 15,428,.67 ಕೋಟಿ ಬಿಲ್ ಮೊತ್ತವನ್ನು ಗುತ್ತಿಗೆದಾರರಿಗೆ ಪಾವತಿಸಬೇಕಾಗಿದೆ.












Click it and Unblock the Notifications