ಬೆಂಗಳೂರಿಗರೇ 1533 ಒತ್ತಿರಿ: ಹಾವು, ಕೋತಿ, ಪಕ್ಷಿಗಳ ಹಾವಳಿಗೆ ದೂರು ಸಲ್ಲಿಸಿ!
ಬೆಂಗಳೂರು, ಆಗಸ್ಟ್ 9: ಸಿಲಿಕಾನ್ ಸಿಟಿ ಮಂದಿಗೆ ಕೋತಿಗಳು, ಪಕ್ಷಿಗಳು ಮತ್ತು ಹಾವುಗಳು ಸೇರಿದಂತೆ ಕಾಡು ಪ್ರಾಣಿಗಳಿಂದ ಉಂಟಾಗುವ ಸಮಸ್ಯೆಗಳಿಗೆ ಸಂಬಂಧಿಸಿದಂತೆ ದೂರು ನೀಡುವುದಕ್ಕಾಗಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಟೋಲ್ ಫ್ರೀ ಸಂಖ್ಯೆಯನ್ನು ಪ್ರಾರಂಭಿಸಿದೆ.
ನಮ್ಮ ಬೆಂಗಳೂರು ಸಹಾಯ 2.0 ಮೊಬೈಲ್ ಆ್ಯಪ್ನಲ್ಲಿ ಮಂಗಗಳ ಕಾಟ ಅಥವಾ ಹಾವು ಮತ್ತು ಪಕ್ಷಿಗಳ ಬಗ್ಗೆ ನಿವಾಸಿಗಳು ದೂರು ಸಲ್ಲಿಸಬಹುದು ಎಂದು ಬಿಬಿಎಂಪಿ ಅರಣ್ಯ ಉಪ ಸಂರಕ್ಷಣಾಧಿಕಾರಿಗಳು ತಿಳಿಸಿದ್ದಾರೆ.
ಬೆಂಗಳೂರಿನ ಬೀದಿ ನಾಯಿಗಳಿಗೆ ಸಿಹಿಸುದ್ದಿ ಕೊಟ್ಟ ಸರ್ಕಾರ!
ಬೆಂಗಳೂರಿಗರು ಇನ್ನು ಮುಂದೆ 1533 ಸಂಖ್ಯೆಗೆ ಕರೆ ಮಾಡುವುದರ ಮೂಲಕ ಅಥವಾ ನಮ್ಮ ಬೆಂಗಳೂರು ಮೊಬೈಲ್ ಅಪ್ಲಿಕೇಶನ್ನಲ್ಲಿ ದೂರುಗಳನ್ನು ನೋಂದಾಯಿಸಬಹುದು. ಈ ಮಧ್ಯೆ ಯಾವುದೇ ಕಾಡು ಪ್ರಾಣಿಗಳಿಗೆ ಹಾನಿ ಮಾಡದಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ.
ಟೋಲ್ ಫ್ರೀ ಸಂಖ್ಯೆ ಪರಿಚಯಿಸಿದ ಬಿಬಿಎಂಪಿ
ಬಿಡಾಡಿ ಪ್ರಾಣಿಗಳಿಗೆ ಪುನರ್ವಸತಿ ಕಲ್ಪಿಸಲು ಕರ್ನಾಟಕ ಹೈಕೋರ್ಟ್ ರಿಟ್ ಅರ್ಜಿ 5120/2021ರ ನಿರ್ದೇಶನದ ನಂತರ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯು ಟೋಲ್-ಫ್ರೀ ಸಂಖ್ಯೆ ಮತ್ತು ಅಪ್ಲಿಕೇಶನ್ ಅನ್ನು ಪರಿಚಯಿಸಿದೆ.
"ನ್ಯಾಯಾಲಯದ ನಿರ್ದೇಶನಗಳನ್ನು ಅನುಸರಿಸಿ, ಬಿಬಿಎಂಪಿ ಸಹಾಯವಾಣಿಯನ್ನು ಪ್ರಾರಂಭಿಸಿದೆ. ಜನರು 'ನಮ್ಮ ಬೆಂಗಳೂರು ಮೊಬೈಲ್ ಅಪ್ಲಿಕೇಶನ್ನಲ್ಲಿ ಯಾವುದೇ ಪ್ರಾಣಿಗಳಿಗೆ ಸಂಬಂಧಿಸಿದ ಅನಾಹುತಗಳ ಕುರಿತು ದೂರು ನೀಡಬಹುದು" ಎಂದು ಬಿಬಿಎಂಪಿ ಪ್ರಕಟಣೆಯಲ್ಲಿ ತಿಳಿಸಿದೆ.
ಸಿಲಿಕಾನ್ ಸಿಟಿಯಲ್ಲಿ ಕೋತಿಗಳ ಹಾವಳಿ ಬಗ್ಗೆ ಉಲ್ಲೇಖ
ಆಹಾರ ಅರಸಿ ಬರುವ ಕೋತಿಗಳ ಗುಂಪುಗಳು ನಗರದ ಹಲವಾರು ಮನೆಗಳ ಮೇಲೆ ದಾಳಿ ಮಾಡುವುದಕ್ಕೆ ರಿಟ್ ಅರ್ಜಿದಾರರು ಒತ್ತಿ ಹೇಳಿದ್ದರು. ನಿವಾಸಿಗಳು ಮತ್ತು ಕಲ್ಯಾಣ ಸಂಘಗಳು ಈ ಹಾವಳಿಯನ್ನು ಎದುರಿಸಲು ನಾಗರಿಕ ಅಧಿಕಾರಿಗಳ ನೆರವು ಪಡೆದುಕೊಳ್ಳಲು ಸಾಧ್ಯವಾಗುತ್ತಿಲ್ಲ. ಇದರ ಬದಲಿಗೆ ಖಾಸಗಿಯಾಗಿ ಕೋತಿಗಳನ್ನು ಸೆರೆ ಹಿಡಿಯುವ ವ್ಯಕ್ತಿಗಳ ಮೊರೆ ಹೋಗುವಂತೆ ಆಗಿದೆ ಎಂದು ಹೇಳಿದ್ದರು.
ಕಾಡುಪ್ರಾಣಿಗಳಿಗೆ ಪುನರ್ ವಸತಿ ಕಲ್ಪಿಸುವುದಕ್ಕೆ ಮನವಿ
ದೆಹಲಿ ಹೈಕೋರ್ಟ್ನ ನಿರ್ದೇಶನಗಳ ಪ್ರಕಾರ, ಕೋತಿಗಳ ಕಾಟದಿಂದ ನಿವಾಸಿಗಳನ್ನು ರಕ್ಷಿಸಲು ಕಾರ್ಯವಿಧಾನವನ್ನು ರೂಪಿಸಬೇಕು. ಕಾನೂನಿನ ಪ್ರಕಾರ ಮಂಗಗಳನ್ನು ನೋಡಿಕೊಳ್ಳಲು ನಾಗರಿಕ ಸಂಸ್ಥೆಗಳಿಗೆ ನಿರ್ದೇಶನ ನೀಡಬೇಕು ಎಂದು ರಿಚ್ ಅರ್ಜಿದಾರರು ತಾವು ಸಲ್ಲಿಸಿದ ಮನವಿಯಲ್ಲಿ ಉಲ್ಲೇಖಿಸಿದ್ದರು.
ಬಿಬಿಎಂಪಿಗೆ ಸೂಚನೆ ನೀಡಿದ್ದ ಕರ್ನಾಟಕ ಹೈಕೋರ್ಟ್
ಬೆಂಗಳೂರಿನ ನಿವಾಸಿಗಳನ್ನು ಮಂಗಗಳ ಹಾವಳಿಯಿಂದ ರಕ್ಷಿಸಲು ಮತ್ತು ಕೋತಿಗಳಿಗೆ ಆಶ್ರಯವನ್ನು ಒದಗಿಸುವ ನಿಟ್ಟಿನಲ್ಲಿ ಯೋಜನೆಯನ್ನು ರೂಪಿಸುವಂತೆ ಕರ್ನಾಟಕ ಹೈಕೋರ್ಟ್ ಸೂಚನೆ ನೀಡಿತ್ತು. ಇದರ ಜೊತೆಗೆ ನೈಸರ್ಗಿಕ ಆವಾಸಸ್ಥಾನನಗಳಿಗೆ ಯಾವುದೇ ರೀತಿ ಹಾನಿಯಾಗದ ರೀತಿಯಲ್ಲಿ ಕ್ರಮ ತೆಗೆದುಕೊಳ್ಳುವಂತೆ ರಾಜ್ಯ ಸರ್ಕಾರ, ಅರಣ್ಯ ಇಲಾಖೆ ಮತ್ತು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ)ಗೆ ಕೋರ್ಟ್ ನಿರ್ದೇಶನ ನೀಡಿತ್ತು.
Recommended Video