ರಸ್ತೆ ಅಭಿವೃದ್ಧಿ, ರಾಜಕಾಲುವೆ ತಡೆಗೋಡೆ ಕೆಲಸ ಬೇಗ ಮುಗಿಸಿ: ಬಿಬಿಎಂಪಿ
ಬೆಂಗಳೂರು, ಜನವರಿ 20: ಹೆಣ್ಣೂರು ಜಂಕ್ಷನ್ ಬಳಿಯ ಹೊರ ವರ್ತುಲ ರಸ್ತೆ ಮಾರ್ಗದಲ್ಲಿ ಮೆಟ್ರೋ ಕಾಮಗಾರಿ ನಡೆಯುತ್ತಿದೆ. ಇಲ್ಲಿ ಸಂಚಾರಕ್ಕೆ ಅಗತ್ಯವಾಗಿರುವ ಸರ್ವೀಸ್ ರಸ್ತೆಯಲ್ಲಿ ಅಭಿವೃದ್ಧಿಪಡಿಸಲು ಹಾಗೂ ತೆರವಾದ ರಾಜಕಾಲುವೆ ಒತ್ತುವರಿ ಜಾಗದ ಸೂಕ್ತ ನಿರ್ವಹಣೆ, ತ್ವರಿತ ಕಾಮಗಾರಿ ಪೂರ್ಣಗೊಳಿಸುವಂತೆ ಬಿಬಿಎಂಪಿ ಸೂಚಿಸಿದೆ.
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಗುರುವಾರ ರಾಜಕಾಲುವೆ ಒತ್ತುವರಿ ಸೇರಿದಂತೆ ಮಹದೇವಪುರ ವಲಯ ವ್ಯಾಪ್ತಿಯ ವಿವಿಧ ಸ್ಥಳಗಳಿಗಳನ್ನು ಪರಿಶೀಲಿಸಿದರು. ಹೆಣ್ಣೂರು ಜಂಕ್ಷನ್ ಬಳಿ ಮೆಟ್ರೋ ಕಾಮಗಾರಿ ನಡೆಯುತ್ತಿದೆ. ಹೀಗಾಗಿ ಇಲ್ಲಿ ಓಡಾಡುವ ವಾಹನ ಸವಾರರು ಸರ್ವೀಸ್ ರಸ್ತೆ ಅವಲಂಬಿಸಿದ್ದಾರೆ. ಇದರಿಂದ ಆ ರಸ್ತೆ ಹಾಳಾಗಿದೆ. ಆದ್ದರಿಂದ ಈ ರಸ್ತೆ ಹಾಗೂ ಪಾದಚಾರಿ ಮಾರ್ಗದ ಅಭಿವೃದ್ಧಿ ಕಾರ್ಯವನ್ನು ಕೈಗೆತ್ತಿಕೊಳ್ಳಿ. ಕೂಡಲೇ ಟೆಂಡರ್ ಕರೆದು ಕೆಲಸ ಪ್ರಾರಂಭಿಸಿ ಎಂದು ಅಧಿಕಾರಿಗಳಿಗೆ ಅವರು ತಿಳಿಸಿದರು.
ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಲೇಔಟ್ ಮಾಡುವ ವೇಳೆ ಮುಖ್ಯ ರಸ್ತೆ ಹಾಗೂ ಸರ್ವೀಸ್ ರಸ್ತೆ ಮಧ್ಯಭಾಗದಲ್ಲಿರುವ ಉದ್ಯಾನವನ್ನು ಸರಿಯಾಗಿ ನಿರ್ವಹಣೆ ಮಾಡಿಲ್ಲ. ಈ ಬಗ್ಗೆ ಸೂಕ್ತ ಕ್ರಮ ವಹಿಸಬೇಕು. ಹೆಣ್ಣೂರು ಮುಖ್ಯ ರಸ್ತೆ ಗೆದ್ದಲಹಳ್ಳಿ ಬಳಿಯ ಪಾದಚಾರಿ ಮಾರ್ಗವನ್ನು ಆಟೋ ಮೊಬೈಲ್ಸ್ ಸೇರಿದಂತೆ ಇನ್ನಿತರರು ಒತ್ತುವರಿ ಮಾಡಿಕೊಂಡಿದ್ದರು. ಪಾದಚಾರಿ ಮಾರ್ಗ ಒತ್ತುವರಿ ತೆರವು ಕಾರ್ಯಾಚರಣೆ ನಡೆಸಲು ಅಧಿಕಾರಿಗಳಿಗೆ ಸೂಚಿಸಿದರು.
ರಾಜಕಾಲುವೆ ಕಾಮಗಾರಿ ತ್ವರಿತ ಪೂರ್ಣಕ್ಕೆ ಸೂಚನೆ
ಹೊರಮಾವು ವಾರ್ಡ್ ನ ಮುನಿಶಾಮಪ್ಪ ಬಡಾವಣೆಯಲ್ಲಿ 750 ಮೀಟರ್ ಉದ್ದದ ರಾಜಕಾಲುವೆ ಭಾಗದಲ್ಲಿ ಕೆಲವೆಡೆ ಒತ್ತುವರಿಯಾಗಿದ್ದ ಜಾಗ ತೆರವುಗೊಳಿಸಲಾಗಿದೆ. ಅಲ್ಲಿ ಕಚ್ಚಾ ಡ್ರೈನ್ ಅನ್ನು ಪಕ್ಕಾ ಡ್ರೈನ್ ಮಾಡುವ ಕಾಮಗಾರಿ ಪ್ರಗತಿಯಲ್ಲಿದೆ. ಪ್ರದೇಶದಲ್ಲಿ ಸಮರ್ಪಕವಾಗಿ ಒತ್ತುವರಿಯನ್ನು ತೆರವು ಮಾಡಿ ಮಳೆಗಾಲ ಪ್ರಾರಂಭವಾಗುವುದಕ್ಕೂ ಮುನ್ನ ರಾಜಕಾಲುವೆ ಕಾಮಗಾರಿ ಪೂರ್ಣಗೊಳಿಸಿ ಎಂದರು. ಮತ್ತೆ ಈ ಬಾಗದಲ್ಲಿ ಜಲಾವೃತವಾಗದಂತೆ ನೋಡಿಕೊಳ್ಳಬೇಕು. ಇಲ್ಲಿ ರಾಜಕಾಲುವೆಯ ಎರಡೂ ಬದಿಗಳಲ್ಇ ಸಸಿಗಳನ್ನು ನೆಡಲು ಆಯುಕ್ತರು ಹೇಳಿದರು.
ಎಸ್ಆರ್ ಬಡಾವಣೆ ನಲ್ಲಿ ರಾಜಾಕಾಲುವೆಯನ್ನು ಒತ್ತುವರಿ ಮಾಡಿಕೊಂಡಿದ್ದ 17 ಕಟ್ಟಡಗಳ ಜಾಗ ತೆರವು ಮಾಡಿದ್ದು, ಅಲ್ಲಿ 270 ಮೀಟರ್ ಉದ್ದದ 30 ಅಡಿ ರಾಜಕಾಲುವೆ, ತಡೆಗೋಡೆ ನಿರ್ಮಾಣ ಕಾಮಗಾರಿ ನಡೆಯುತ್ತಿದೆ. ಕಾಮಗಾರಿಯನ್ನು ತ್ವರಿತವಾಗಿ ಮುಗಿಸುವಂತೆ ತಿಳಿಸಿದರು.
ಈ ವೇಳೆ ವಲಯ ಆಯುಕ್ತ ಡಾ. ತ್ರಿಲೋಕ್ ಚಂದ್ರ, ವಲಯ ಜಂಟಿ ಆಯುಕ್ತ ವೆಂಕಟಾಚಲಪತಿ, ಪ್ರಧಾನ ಅಭಿಯಂತರರಾದ ಪ್ರಹ್ಲಾದ್, ಮುಖ್ಯ ಅಭಿಯಂತರರಾದ ಲೋಕೇಶ್ ಮತ್ತಿತರರು ಉಪಸ್ಥಿತರಿದ್ದರು.