ಬೆಂಗಳೂರಿನಲ್ಲಿ ನಿಮಗೊಂದು ಮನೆ ಬೇಕಾ ಇಲ್ಲಿದೆ ಬಿಬಿಎಂಪಿ ಗುಡ್ನ್ಯೂಸ್!
ಬೆಂಗಳೂರಿನಲ್ಲಿ ಒಂದು ಮನೆ ಮಾಡಿಕೊಳ್ಳಬೇಕು ಎನ್ನುವುದು ಹಲವರ ಕನಸು. ಆದರೆ, ಬೆಂಗಳೂರಿನಲ್ಲಿ ಮನೆ ನಿರ್ಮಾಣ ಅಥವಾ ಸ್ವಂತ ಮನೆ ಎನ್ನುವುದು ಕನಸು ಎನ್ನುವಂತೆ ಆಗಿದೆ. ಇದೀಗ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯು ಬಿಗ್ ಗುಡ್ನ್ಯೂಸ್ವೊಂದನ್ನು ಕೊಟ್ಟಿದೆ. ಬಿಬಿಎಂಪಿ ವ್ಯಾಪ್ತಿಯಲ್ಲಿ ಒಂಟಿ ಮನೆ ನಿರ್ಮಾಣ ಯೋಜನೆಯ ಅಡಿಯಲ್ಲಿ ಅರ್ಹರಿಂದ ಅರ್ಜಿ ಆಹ್ವಾನಿಸಲಾಗಿದೆ. ಇದರ ಸಂಪೂರ್ಣ ವಿವರ ನೋಡೋಣ.
ಬೆಂಗಳೂರಿನಲ್ಲಿ ಮನೆ ನಿರ್ಮಾಣ ಮಾಡಿಕೊಳ್ಳಬೇಕು ಎನ್ನುವುದು ಹಲವರು ಆಸೆಪಡುತ್ತಾರೆ. ಆದರೆ, ಎಲ್ಲರಿಗೂ ಮನೆ ಕಟ್ಟುವುದು ಅಷ್ಟೊಂದು ಸುಲಭದ ವಿಷಯವಲ್ಲ. ಇದೀಗ ಈ ವಿಚಾರವಾಗಿ ಬಿಬಿಎಂಪಿಯು ಗುಡ್ನ್ಯೂಸ್ ಕೊಟ್ಟಿದೆ. ಒಂಟಿ ಮನೆ ಯೋಜನೆಯ ಅಡಿಯಲ್ಲಿ ಫಲಾನುಭವಿಗಳು ಅಥವಾ ಅರ್ಹರು 25ನೇ ಫೆಬ್ರವರಿ 2025ರ ಒಳಗಾಗಿ ಅರ್ಜಿ ಸಲ್ಲಿಸಲು ಬಿಬಿಎಂಪಿಯ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಅವರು ಬೆಂಗಳೂರಿನ ಜನರಲ್ಲಿ ಮನವಿ ಮಾಡಿದ್ದಾರೆ.

ಬೊಮ್ಮನಹಳ್ಳಿ ವಲಯ ವ್ಯಾಪ್ತಿಯಲ್ಲಿ 'ಮುಖ್ಯ ಆಯುಕ್ತರ ನಡೆ ವಲಯದ ಕಡೆ ಕಾರ್ಯಕ್ರಮ'ದಲ್ಲಿ ಸಾರ್ವಜನಿಕರಿಂದ ಬಂದ ದೂರುಗಳಿಗೆ ಸ್ಪಂದಿಸುವ ವೇಳೆ, 30ಕ್ಕೂ ಹೆಚ್ಚು ಸಾರ್ವಜನಿಕರು ಒಂಟಿ ಮನೆ ಯೋಜನೆಯಲ್ಲಿ ಅನುದಾನ ಒದಗಿಸಲು ಮನವಿ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ತುಷಾರ್ ಗಿರಿನಾಥ್ ಅವರು, 2022ರಿಂದ 24 ರವರೆಗೆ ಒಂಟಿ ಮನೆಗಾಗಿ ಬಂದಿರುವ ಅರ್ಜಿಗಳನ್ನು ಪರಿಶೀಲನೆ ನಡೆಸಲಾಗಿದೆ. ಅರ್ಹ ಫಲಾನುಭವಿಗಳಿಗೆ ಶೀಘ್ರ ಅನುದಾನ / ಮನೆ ಕಟ್ಟಿಕೊಳ್ಳುವುದಕ್ಕೆ ದುಡ್ಡು ನೀಡುವುದಾಗಿ ಅವರು ಹೇಳಿದ್ದಾರೆ.
ಒಂಟಿ ಮನೆ ನಿರ್ಮಾಣಕ್ಕಾಗಿ ಇದುವರೆಗೆ ಅರ್ಜಿ ಸಲ್ಲಿಸದೇ ಇರುವವರು ಕೂಡಲೇ ಪಾಲಿಕೆಯ ವೆಬ್ಸೈಟ್ಗೆ ಭೇಟಿ ನೀಡಿ ಅರ್ಜಿ ಪಡೆದು 25ನೇ ಫೆಬ್ರವರಿ 2025ರ ಒಳಗಾಗಿ ಆಯಾ ವಲಯದ ಕಲ್ಯಾಣ ವಿಭಾಗದ ಸಹಾಯಕ ಕಂದಾಯ ಅಧಿಕಾರಿ ಕಛೇರಿಯಲ್ಲಿ ಅರ್ಜಿ ಸಲ್ಲಿಸಬಹುದೆಂದು ಹೇಳಲಾಗಿದೆ. ಬಡವರಿಗೆ ಮನೆ ನಿರ್ಮಾಣ ಮಾಡಿಕೊಳ್ಳಲು ಸಹಾಯ ಮಾಡುವ ಉದ್ದೇಶದಿಂದ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯು ಒಂಟಿ ಮನೆ ಯೋಜನೆಯನ್ನು ಪರಿಚಯಿಸಿದೆ.
ಸಸಿಗಳಿಗೆ ಸಂಸ್ಕರಣ ನೀರು ಉಪಯೋಗಿಸಲು ಸೂಚನೆ: ಬೇಸಿಗೆ ಪ್ರಾರಂಭವಾಗುತ್ತಿರುವ ಹಿನ್ನೆಲೆಯಲ್ಲಿ ಮಿಯಾವಾಕಿ ಅರಣ್ಯದಲ್ಲಿ ನೆಟ್ಟಿರುವ ಸಸಿಗಳಿಗೆ ಜಲಮಂಡಳಿಯ ಸಂಸ್ಕರಣಾ ನೀರನ್ನು ಟ್ಯಾಂಕರ್ ಗಳ ಮೂಲಕ ವ್ಯವಸ್ಥೆ ಮಾಡಲು ಅಧಿಕಾರಿಗಳಿಗೆ ಸೂಚಿಸಲಾಗಿದೆ. ಅಲ್ಲದೆ ರಾಯಲ್ ರೆಸಿಡೆನ್ಸಿ ಪಾರ್ಕ್ ಗೆ ತ್ವರಿತವಾಗಿ ಫೆನ್ಸಿಂಗ್ ಮಾಡಲು ಕಮಿಷನರ್ ಹೇಳಿದ್ದಾರೆ.
ಒಳಚರಂಡಿ ದುರಸ್ತಿ ಜವಾಬ್ದಾರಿ ಜಲಮಂಡಳಿ ಜವಾಬ್ದಾರಿ: ಬಿಬಿಎಂಪಿ ವ್ಯಾಪ್ತಿಯಲ್ಲಿ ಬರುವ ಸಿಎಂಸಿ, ಟಿಎಂಸಿ ವ್ಯಾಪ್ತಿಯಲ್ಲಿರುವ ಒಳಚಂಡಿಗಳ ದುರಸ್ತಿ ಕಾಮಗಾರಿಯನ್ನು ಜಲಮಂಡಳಿಯಿಂದ ಮಾಡಬೇಕಿದೆ. ಈ ಸಂಬಂಧ ಇನ್ನು ಮುಂದೆ ಪಾಲಿಕೆಯಿಂದ ಯಾವುದೇ ಒಳಚರಂಡಿ ದುರಸ್ತಿ ಕಾರ್ಯವನ್ನು ನಡೆಸಬಾರದೆಂದು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಅವರು ಹೇಳಿದ್ದಾರೆ.
ರಸ್ತೆ ಗುಂಡಿಗಳನ್ನು ಮುಚ್ಚಲು ಸೂಚನೆ: ಇನ್ನು ಬೊಮ್ಮನಹಳ್ಳಿ ವಲಯ ವ್ಯಾಪ್ತಿಯಲ್ಲಿ ಬರುವ ಪ್ರಮುಖ ರಸ್ತೆ, ವಾರ್ಡ್ ರಸ್ತೆಗಳಲ್ಲಿ ಬರುವ ರಸ್ತೆ ಗುಂಡಿಗಳನ್ನು ತ್ವರಿತಗತಿಯಲ್ಲಿ ಮುಚ್ಚಲು ಸೂಚಿಸಲಾಯಿತು. ಅದಕ್ಕೆ ಮುಖ್ಯ ಅಭಿಯಂತರರು ಪ್ರತಿಕ್ರಿಯಿಸಿ 15 ದಿನಗಳ ಒಳಗಾಗಿ ರಸ್ತೆ ಗುಂಡಿಗಳನ್ನು ಮುಚ್ಚುವುದಾಗಿ ತಿಳಿಸಿದ್ದಾರೆ.












Click it and Unblock the Notifications