ನನ್ನ ಹೇಳಿಕೆ ತಿರುಚಲಾಗಿದೆ: ರಾಮಲಿಂಗಾ ರೆಡ್ಡಿ
ಬೆಂಗಳೂರು, ಆಗಸ್ಟ್, 26: ವಿದ್ಯಾವಂತರು ಬಿಜೆಪಿಗೆ ಮತ ಹಾಕುತ್ತಾರೆ ಎಂದು ಎಲ್ಲಿಯೂ ಹೇಳಿರಲಿಲ್ಲ. ಮತದಾನ ಕಡಿಮೆ ಆದ ಬಗ್ಗೆ ವಿವರ ನೀಡಿದ್ದನ್ನು ಕೆಲ ಮಾಧ್ಯಮಗಳು ತಪ್ಪಾಗಿ ಬಿಂಬಿಸಿದ್ದವು ಎಂದು ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಸ್ಪಷ್ಟನೆ ನೀಡಿದ್ದಾರೆ.
ಮತದಾನ ಶನಿವಾರ ಇದ್ದಿದ್ದು ಸಮಸ್ಯೆಯಾಯಿತು. ಅಲ್ಲದೇ ಮಳೇ ಬಂದಿದ್ದರಿಂದ ಅಪಾರ್ಟ್ ಮೆಂಟ್ ಗಳಲ್ಲಿ ವಾಸ ಮಾಡುತ್ತಿರುವವರು ಕ್ರಿಯಾಶೀಲವಾಗಿ ಮತದಾನದಲ್ಲಿ ಭಾಗವಹಿಸಲಿಲ್ಲ ಎಂದು ಹೇಳಿದ್ದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.[ಸಚಿವರೇ, ಕಾಂಗ್ರೆಸ್ಸಿಗೆ ಮತ ಹಾಕಿದವರು ಅವಿದ್ಯಾವಂತರಾ?]
ಕೆಲವರು ನನ್ನ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಿದ್ದಾರೆ. ಅಲ್ಲದೇ ಸಾಮಾಜಿಕ ಜಾಲತಾಣಗಳ ಮೂಲಕವೂ ಅಪಪ್ರಚಾರ ಮಾಡಲಾಗುತ್ತಿದೆ. ಇದನ್ನು ನಾನು ಖಂಡಿಸುತ್ತೇವೆ ಎಂದು ತಿಳಿಸಿದ್ದಾರೆ.
ಜನರನ್ನು ತಪ್ಪು ದಾರಿಗೆ ಎಳೆಯುತ್ತಿರುವ ಇಂಥ ಕ್ರಮ ಸರಿಯಲ್ಲ. ಆಧಾರ ರಹಿತವಾದ ಇಂಥ ವರದಿಗಳು ಸತ್ಯಕ್ಕೆ ದೂರವಾದವು ಎಂದು ಹೇಳಿಕೆ ನೀಡಿದ್ದಾರೆ.
ಬಿಬಿಎಂಪಿ ಚುನಾವಣೆ ನಂತರ ಮಾಧ್ಯಮದವರೊಂದಿಗೆ ಮಾತನಾಡುತ್ತಿದ್ದ ರೆಡ್ಡಿ, ಕಾಂಗ್ರೆಸ್ ನೂರಕ್ಕೂ ಹೆಚ್ಚು ಸ್ಥಾನ ಗಳಿಸಲಿದೆ. ವಿದ್ಯಾವಂತರು ಮತ್ತು ಪ್ರಜ್ಞಾವಂತರು ಮತದಾನಕ್ಕೆ ಬರಲಿಲ್ಲ. ಇವರು ಬಿಜೆಪಿ ಮತದಾರರಾದ ಕಾರಣ ಇದರಿಂದ ಕಾಂಗ್ರೆಸ್ಸಿಗೆ ಅನುಕೂಲವಾಗಿದೆ ಎಂದಿದ್ದರು ಎಂದು ಮಾಧ್ಯಮಗಳಲ್ಲಿ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಸುದ್ದಿ ಹರಿದಾಡಿತ್ತು. ಈ ಬೆಳವಣಿಗೆಗಳ ನಂತರ ರಾಮಲಿಂಗಾ ರೆಡ್ಡಿ ಸ್ಪಷ್ಟನೆ ನೀಡಿದ್ದಾರೆ.