ಮಾಜಿ ಕಾನ್ ಸ್ಟೇಬಲ್, ಬಿಬಿಎಂಪಿ ಅಭ್ಯರ್ಥಿ ಸವಿತಾ: ಸಂದರ್ಶನ
ಬೆಂಗಳೂರು, ಆಗಸ್ಟ್, 12 : ಪೊಲೀಸ್ ವೃತ್ತಿಗೆ ಗುಡ್ ಬೈ ಹೇಳಿ ಬಿಬಿಎಂಪಿ ಅಖಾಡಕ್ಕೆ ಧುಮುಕಿ ರಾಜಕೀಯದಲ್ಲಿ ಹೊಸ ಸಂಚಲನ ಮೂಡಿಸಲು ಮುಂದಾಗಿರುವ ಸವಿತಾ, ಒನ್ ಇಂಡಿಯಾದೊಂದಿಗೆ ತಮ್ಮ ಮನದಾಳದ ಮಾತುಗಳನ್ನು, ಆಕಾಂಕ್ಷೆಗಳನ್ನು ದಿಟ್ಟ ದನಿಯಲ್ಲಿಯೇ ತೆರೆದಿಟ್ಟಿದ್ದಾರೆ.
ನಾನು ಹುಟ್ಟಿದ್ದು, ಬೆಳೆದದ್ದು ಬೆಂಗಳೂರಿನ ಶ್ರೀನಗರದಲ್ಲೇ..ನಾ ಆಡಿ, ನಲಿದು, ಕುಣಿದು ಬೆಳೆದ ಕ್ಷೇತ್ರದ ಜನರು ಸಮಸ್ಯೆಗಳ ನಡುವೆಯೇ ಬಾಳ ಬಂಡಿ ಎಳೆಯುತ್ತಿದ್ದಾರೆ. ಇವರ ಸೇವೆ ಮಾಡುತ್ತಾ ಜನರ ಸಂಕಷ್ಟ, ನೋವುಗಳಿಗೆ ದನಿಯಾಗಬೇಕು ಎಂದು ರಾಜಕೀಯ ಕಣಕ್ಕೆ ಧುಮುಕಿದ್ದೇನೆ ಎಂದು ಹೇಳುತ್ತಾರೆ.
ನಲಿವಿನ ನವಿಲು ಗರಿ ನನ್ನ ಕ್ಷೇತ್ರದಲ್ಲಿ ಶಾಶ್ವತವಾಗಿ ನೆಲೆಸುವಂತೆ ಮಾಡಬೇಕು. ಅಪ್ಪನಂತೆ ಮಗಳು ಎಂಬ ಸಮಾಧಾನ ಬಾಳಿನ ಕೊನೆಯವರೆಗೂ ನನ್ನಲ್ಲಿರಬೇಕು ಎಂದು ಬಹಳ ಉತ್ಸಾಹಭರಿತ, ಭರವಸೆಯ ಮಾತುಗಳನ್ನಾಡುತ್ತಾರೆ ಬಿಜೆಪಿ ಅಭ್ಯರ್ಥಿ ಜೆ.ಎಂ ಸವಿತಾ.[ಜಯನಗರ ಪೂರ್ವ: ಸ್ವತಂತ್ರ ಅಭ್ಯರ್ಥಿಯಾಗಿ ರಮೇಶ್ ಸ್ಪರ್ಧೆ]

* ಪೊಲೀಸ್ ವೃತ್ತಿ ತೊರೆದು ರಾಜಕೀಯ ಪ್ರವೇಶ ಮಾಡಿದ್ದು ಏಕೆ?
ನಾನು ಜನರ ಕಷ್ಟಗಳನ್ನು ಬಹಳ ಹತ್ತಿರದಿಂದ ಕಂಡವಳು. ಆದರೆ ಅಸಹಾಯಕತನ ನನ್ನನ್ನು ಕಾಡುತ್ತಿತ್ತು. ಏಕೆಂದರೆ ಕಾನ್ ಸ್ಟೇಬಲ್ ವೃತ್ತಿಯಲ್ಲಿ ಹಿರಿಯ ಅಧಿಕಾರಿಗಳ ಆಣತಿಗೆ ಅನುಗುಣವಾಗಿಯೇ ಕಾರ್ಯ ನಿರ್ವಹಿಸಬೇಕು.
ಆದರೆ, ರಾಜಕೀಯದಲ್ಲಿ ಹಾಗೇನೂ ಇಲ್ಲಾ. ರಾಜಕೀಯಕ್ಕೆ ಹೋಲಿಸಿದರೆ ಪೊಲೀಸ್ ವೃತ್ತಿ ಸೀಮಿತವಾಗಿದ್ದು ಎಂದು ಅನಿಸಿತು. ಪೂರ್ಣ ಪ್ರಮಾಣದಲ್ಲಿ ಜನರ ಸೇವೆ ತೊಡಗಲು ರಾಜಕೀಯವೇ ಸರಿ ದಾರಿ ಎಂದು ಚುನಾವಣೆಗೆ ಸ್ಪರ್ಧೆ ಮಾಡಿದ್ದೇನೆ.
* ಪೊಲೀಸ್ ವೃತ್ತಿಯಿಂದ ಸಮಾಜ ಸೇವೆ ಮಾಡಲು ಸಾಕಷ್ಟು ಅವಕಾಶಗಳಿದ್ದವು. ಆದರೂ ರಾಜಕೀಯಕ್ಕೆ ಪ್ರವೇಶ ಪಡೆಯಲು ಮುಖ್ಯ ಕಾರಣ?
ಕೃಷಿ ಇಲಾಖೆಯಲ್ಲಿ ಕೆಲಸ ನಿರ್ವಹಿಸುತ್ತಿದ್ದ ನನ್ನ ತಂದೆ ಸಿ ಮಾಯಣ್ಣ ಮೂಲತಃ ಬಿಜೆಪಿ ಕಾರ್ಯಕರ್ತರು. ಕಳೆದ ಬಾರಿ ಶ್ರೀನಗರ ವಾರ್ಡ್ ನಿಂದ ಬಿಬಿಎಂಪಿ ಚುನಾವಣೆಗೆ ಸ್ಪರ್ಧಿಸಿ 88 ಮತಗಳ ಅಂತರದ ಸೋಲು ಅನುಭವಿಸಿದ್ದರು. ಅವರ ಕನಸು, ಅಭಿಲಾಷೆ ಈಡೇರಿಸುವ ಜವಾಬ್ದಾರಿ ನನ್ನ ಮೇಲಿದೆ.
ಬೆಳಗ್ಗೆಯಾಗುತ್ತಲೇ ಜನರು ತಮ್ಮ ಸಂಕಷ್ಟಗಳನ್ನು ಹೇಳಿಕೊಂಡು ಅಪ್ಪನ ಬಳಿ ಬರುತ್ತಿದ್ದರು. ನಾನು ಪೊಲೀಸ್ ವೃತ್ತಿಯಲ್ಲಿದ್ದು ಅವರ ಕಷ್ಟಗಳನ್ನು ಆಲಿಸಬಹುದಾಗಿತ್ತೇ ವಿನಃ ಸ್ಪಂದಿಸಲು ಸಾಧ್ಯವಾಗುತ್ತಿರಲಿಲ್ಲ.
ಸಾರ್ವಜನಿಕ ಸಂಪರ್ಕಾಧಿಕಾರಿಯಾಗಿ 8 ವರ್ಷ ಕೆಲಸ ಮಾಡಿದ್ದೇನೆ. ಇದು ಸಮಾಜವನ್ನು ನಿಭಾಯಿಸಿಕೊಂಡು ಹೋಗುವ ಸ್ಥೈರ್ಯ ಕಲಿಸಿಕೊಟ್ಟಿದೆ. ಅಪ್ಪನ ಅನುಭವದ ಮಾತುಗಳು ಸದಾ ನನ್ನೊಟ್ಟಿಗಿರುತ್ತದೆ.
* ನಿಮ್ಮ ಮನೆಯವರಿಂದ, ಸಂಬಂಧಿಕರಿಂದ ಬೆಂಬಲ ಹೇಗಿದೆ?
ನನ್ನ ಕುಟುಂಬದವರು, ಸಂಬಂಧಿಕರು ಬಹಳ ಸಂತಸದಿಂದಲೇ ನನ್ನನ್ನು ಬೆಂಬಲಿಸಿದ್ದಾರೆ. ಸೇವೆ ಮಾಡುವ ನನ್ನ ಇಚ್ಛೆ, ಶ್ರದ್ಧಾ ಮನೋಭವವಕ್ಕೆ ಅವರು ಎಂದು ಅಡ್ಡಗಾಲು ಹಾಕಿಲ್ಲ.
"ನಮ್ಮ ಸುಖವನ್ನು ನಾವು ನೋಡಿಕೊಳ್ಳಬಾರದು. ಯಾವಾಗಲೂ ಜನರಿಗೆ ಸಹಾಯ ಮಾಡಿ ಅವರ ಬದುಕನ್ನು ಹಸನುಗೊಳಿಸುವತ್ತ ನಮ್ಮ ಯೋಚನೆಗಳಿರಬೇಕು". ಆ ಒಂದು ನಿಲುವು ನಿನ್ನ ಬಳಿ ಇದೆ. ನೀನು ಈ ಬಾರಿ ಚುನಾವಣೆಗೆ ಸ್ಪರ್ಧಿಸು ಎಂದು ಮನೆಯವರೇ ನನ್ನನ್ನು ಹುರಿದುಂಬಿಸಿದರು.[ನಿಮ್ಮ ಪ್ರಶ್ನೆ, ಮಲ್ಲೇಶ್ವರ ಶಾಸಕ ಅಶ್ವತ್ಥ ನಾರಾಯಣರ ಉತ್ತರ]

* ಶ್ರೀನಗರ ವಾರ್ಡಿನ ಜನರ ಸೇವೆಗಾಗಿ ಏನೇನು ಯೋಜನೆ ಹಾಕಿಕೊಂಡಿದ್ದೀರಿ?
ನಮ್ಮ ವಾರ್ಡಿನಲ್ಲಿ ಮೊದಲಿನಿಂದಲೂ ಕಸ ವಿಲೇವಾರಿ ಸಮಸ್ಯೆ ಬಹಳವಾಗಿಯೇ ಕಾಡುತ್ತಿದೆ. ಶುಚಿತ್ವ ಹಾಗೂ ಜನರ ಆರೋಗ್ಯ ಕಾಪಾಡಲು ಮೊದಲ ಆದ್ಯತೆ.
ಬಳಿಕ ಆರೋಗ್ಯ ಕೇಂದ್ರ ಸ್ಥಾಪನೆ, ಸರ್ಕಾರಿ ಶಾಲೆಯನ್ನು 10ನೇ ತರಗತಿಯವರೆಗೆ ವಿಸ್ತರಿಸುವುದು, ಸರ್ಕಾರಿ ಕಾಲೇಜು ತೆರೆಯುವುದು, ಶುದ್ಧ ಕುಡಿಯುವ ನೀರು ಕೇಂದ್ರ, ಕ್ರೀಡಾಂಗಣ ಸೌಲಭ್ಯ, ಪಾರ್ಕ್ ಅಭಿವೃದ್ಧಿ, ಬೀದಿಗಳಲ್ಲಿ ಸೋಡಿಯಂ ದೀಪ ಅಳವಡಿಕೆ, ವ್ಯಾಪಾರ ಮಳಿಗೆ ನಿರ್ಮಾಣ, ಮಹಿಳೆಯರಿಗೆ ಕಂಪ್ಯೂಟರ್ ಸೇರಿದಂತೆ ವಿವಿಧ ಗೃಹೋಪಯೋಗಿ ವಸ್ತುಗಳ ತರಬೇತಿ ಕೇಂದ್ರ ಸ್ಥಾಪನೆ ಯೋಜನೆ ಹಾಕಿಕೊಂಡಿದ್ದೇನೆ.
* ಮಹಿಳೆಯರಿಗೆ 50%ಕ್ಕೂ ಹೆಚ್ಚು ಮೀಸಲಾತಿ ಒದಗಿಸಿದ್ದಾರೆ. ಇದರ ಬಗ್ಗೆ ನಿಮ್ಮ ಅಭಿಪ್ರಾಯ
'ತೊಟ್ಟಿಲ್ಲನ್ನು ತೂಗುವ ಕೈ ದೇಶವನ್ನಾಳಬಲ್ಲದು' ಎಂದು ಇತ್ತೀಚೆಗೆ ಎಲ್ಲರಿಗೂ ಮನವರಿಕೆಯಾಗುತ್ತಿದೆ. ಮಹಿಳೆಯರು ಎಲ್ಲಾ ಕಾರ್ಯವನ್ನು ಬಹಳ ಅಚ್ಚುಕಟ್ಟಾಗಿ ನಿರ್ವಹಿಸುವಳೆಂದು ಅರ್ಥವಾದಂತಿದೆ. ಈ ಹಿನ್ನೆಲೆಯಲ್ಲಿ ಮೀಸಲಾತಿ ಜಾರಿಗೆ ತಂದು ಉತ್ತಮ ಕಾರ್ಯ ಮಾಡಿದ್ದಾರೆ. ಇದರಿಂದ ನನಗೂ ಸ್ಪರ್ಧಿಸಲು ಅವಕಾಶ ಸಿಕ್ಕಿತ್ತು. ನನ್ನ ಸೇವೆಯನ್ನು ಜನರಿಗೆ ಮೀಸಲಿರಿಸಲು ಅನುಕೂಲವಾಯಿತು.
ಮಹಿಳೆಯರ ಮೇಲಿನ ನಂಬಿಕೆಯಿಂದ ಈ ಅವಕಾಶ ನೀಡಿದ್ದನ್ನು ಸದುಪಯೋಗ ಪಡಿಸಿಕೊಂಡು ಎಲ್ಲಾ ಕೆಲಸಗಳನ್ನು ದಿಟ್ಟತನದಿಂದ ಮಾಡಿ ತೋರಿಸುತ್ತೇನೆ.
ಸಮಾಜ ಸೇವಾ ಹಂಬಲ ನೀಗಿಸುವ ಕನಸಿನ ರಾಜಕೀಯ ಬದುಕಿಗೆ ಕಂಕಣ ಬದ್ದರಾದ ಸವಿತಾ ಅವರು 'ತಮಗೆ ಬೆಂಬಲ ನೀಡುತ್ತಿರುವ ಕೇಂದ್ರ ಸಚಿವ ಅನಂತ್ ಕುಮಾರ್, ಶಾಸಕರಾದ ರವಿಸುಬ್ರಹ್ಮಣ್ಯ, ತಂದೆ ಸಿ. ಮಾಯಣ್ಣ ಹಾಗೂ ಬಿಜೆಪಿ ಕಾರ್ಯಕರ್ತರ ನಂಬಿಕೆ ಹುಸಿ ಮಾಡುವುದಿಲ್ಲ.
ನಾನು ಈ ಚುನಾವಣೆಯಲ್ಲಿ ವಿಜಯ ಮಾಲೆ ಧರಿಸಿ ಈ ಕ್ಷೇತ್ರದಲ್ಲಿ ಖಂಡಿತವಾಗಿಯೂ ಅಭಿವೃದ್ದಿ ಕಾರ್ಯ ಕೈಗೊಳ್ಳುತ್ತೇನೆ' ಎಂದು ಹೇಳುತ್ತಾ ಗೆಲುವಿನ ಹಾದಿ ನನ್ನ ಪಾಲಿಗಿದೆ ಎಂದು ಭರವಸೆ ಮಾತುಗಳಾಡಿದರು.
* ಸವಿತಾ ಅವರ ವೈಯಕ್ತಿಕ ಬದುಕಿನ ಒಂದು ತುಣುಕು
ಸವಿತಾ ಅವರ ಕುಟುಂಬ ಮೂಲತಃ ಮಂಡ್ಯ ಜಿಲ್ಲೆಯ ನಾಗಮಂಗಲದವರು. ಆದರೆ ಸವಿತಾ ಅವರು ಬೆಂಗಳೂರಿನ ಶ್ರೀನಗರದಲ್ಲೇ ತಮ್ಮ ಬಾಲ್ಯ, ಯೌವನದ ದಿನಗಳನ್ನು ಕಂಡಿದ್ದಾರೆ.
ಇಂಗ್ಲಿಷ್ ವಿಷಯದಲ್ಲಿ ಬಿಎ ಪದವಿ ಪಡೆದ ಇವರು 12 ವರ್ಷ ಪೊಲೀಸ್ ಕಾನ್ಸ್ಟೇಬಲ್ ಆಗಿ ವೃತ್ತಿ ನಿರ್ವಹಿಸಿದ್ದಾರೆ. 2003ರಿಂದ 2006 ರವರೆಗೆ ಬಸವನಗುಡಿಯ ಮಹಿಳಾ ಪೊಲೀಸ್ ಠಾಣೆಯಲ್ಲಿ, 2006 ರಿಂದ 2015 ರವರೆಗೆ ಡಿಜಿಪಿ ಕಚೇರಿಯಲ್ಲಿ ವೃತ್ತಿ ಬದುಕು ಕಂಡುಕೊಂಡಿದ್ದರು.
ಖಾಸಗಿ ಕಂಪನಿ ಮ್ಯಾನೇಜರ್ ಎಂ ಚಂದ್ರಶೇಖರ್ ಅವರನ್ನು ವಿವಾಹವಾಗಿದ್ದು, ಇಬ್ಬರು ಮಕ್ಕಳಿದ್ದಾರೆ.












Click it and Unblock the Notifications