ಕಾಂಗ್ರೆಸ್ ಟೀಕಿಸುತ್ತಾ ಎಡವಟ್ಟು ಮಾಡಿಕೊಂಡ ಅನಂತ್ ಕುಮಾರ್
ಬೆಂಗಳೂರು, ಆಗಸ್ಟ್ 20: ಬಿಜೆಪಿ ಮತ್ತು ಕಾಂಗ್ರೆಸ್ಸಿಗೆ ಪ್ರತಿಷ್ಠೆಯ ಪ್ರಶ್ನೆಯಾಗಿರುವ ಬಿಬಿಎಂಪಿ ಚುನಾವಣೆಯ ಬಹಿರಂಗ ಪ್ರಚಾರಕ್ಕೆ ಬುಧವಾರದಂದು (ಆ 19, ಶ್ರಾವಣ ಶುಕ್ಲ ನಾಗರಪಂಚಮಿ) ತೆರೆಬಿದ್ದಿದೆ.
ಇನ್ನು ಏನಿದ್ದರೂ ಮನೆ ಮನೆ ಪ್ರಚಾರ, ಅದಾದ ನಂತರ ಚುನಾವಣಾ ಮುನ್ನಾ ದಿನದ ಸಂಜೆ, ರಾತ್ರಿ ನಡೆಯುವ ಬೇರೆ ರೀತಿಯ ಪ್ರಚಾರ. ಎರಡೂ ಪಕ್ಷಗಳಿಗೂ ನಾವೇ ಗೆಲ್ಲುತ್ತೇವೆ ಎನ್ನುವ ವಿಶ್ವಾಸವಾದರೆ, ತೆನೆಹೊತ್ತ ಮಹಿಳೆಯ ಪಕ್ಷಕ್ಕೆ ಏನಾದರೂ ಸಾಧಿಸಿಯೇ ತೀರುತ್ತೇವೆ ಎನ್ನುವ ಛಲ. (ಬೆಂಗಳೂರು ಅಭಿವೃದ್ಧಿಗೊಂದು ಸಚಿವರ ನೇಮಕ)
ಈ ಮಧ್ಯೆ, ಕಾಂಗ್ರೆಸ್ ಪಕ್ಷವನ್ನು ಟೀಕಿಸುವ ಭರದಲ್ಲಿ ಕೇಂದ್ರ ರಸಗೊಬ್ಬರ ಖಾತೆಯ ಸಚಿವ ಮತ್ತು ಬೆಂಗಳೂರು ದಕ್ಷಿಣ ಸಂಸದ ಅನಂತ್ ಕುಮಾರ್ ಎಡವಟ್ಟು ಮಾಡಿಕೊಂಡಿದ್ದಾರೆ.
ಕಲ್ಲಿದ್ದಲು, 2ಜಿ, ಕಾಮನ್ವೆಲ್ತ್ ಹಗರಣಗಳು ಬಿಜೆಪಿ ಸರಕಾರದ ಅವಧಿಯಲ್ಲಿ ಆಗಿದ್ದು ಎಂದು ಅನಂತ್ ಕುಮಾರ್ ಹೇಳಿ ನಂತರ ಸಾವರಿಸಿಕೊಂಡು ಸಾರಿ.. ಕಾಂಗ್ರೆಸ್ ಅವಧಿಯಲ್ಲಿ ಅಂದಿದ್ದಾರೆ.
ಬಹಿರಂಗ ಪ್ರಚಾರದ ಕೊನೆಯ ದಿನ ಮೂರು ಪಕ್ಷಗಳು ಕಾಲಿಗೆ ಚಕ್ರ ಕಟ್ಟಿಕೊಂಡು ಸಾಧ್ಯವಾದಷ್ಟು ಏರಿಯಾವನ್ನು ಕ್ರಮಿಸಿ, ಮತದಾರರಿಗೆ ಎಂದಿನಂತೆ ಚುನಾವಣೆಯ ಹೊಸ್ತಿಲಲ್ಲಿ ಅಗಾಧ ಪ್ರೀತಿ ತೋರಿಸಿದ್ದಾರೆ.
ಅಮಿತ್ ಶಾ ಅವರಿಂದ ಕ್ಲಿಯರ್ ಕಟ್ ಸಂದೇಶ
ಬಿಬಿಎಂಪಿ ಚುನಾವಣೆಯನ್ನು ಶತಾಯುಗತಾಯು ಗೆಲ್ಲಲೇ ಬೇಕೆಂದು ಇಬ್ಬರು ಕೇಂದ್ರ ಸಚಿವರಾದ ಅನಂತ್ ಕುಮಾರ್ ಮತ್ತು ಸದಾನಂದ ಗೌಡ ಅವರಿಗೆ ಮತ್ತು ವಿಶೇಷವಾಗಿ ಆರ್ ಅಶೋಕ್ ಅವರಿಗೆ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರಿಂದ ಕ್ಲಿಯರ್ ಕಟ್ ಸಂದೇಶ ರವಾನೆಯಾಗಿದೆ ಎನ್ನುವ ಮಾಹಿತಿಯಿದೆ.
ಬೊಮ್ಮನಹಳ್ಳಿ ವಾರ್ಡ್
ಬೊಮ್ಮನಹಳ್ಳಿ ವಾರ್ಡಿನಲ್ಲಿ ಚುನಾವಣಾ ಪ್ರಚಾರ ನಡೆಸುತ್ತಿದ್ದ ಅನಂತ್ ಕುಮಾರ್, ದೇಶ ತಲೆತಗ್ಗಿಸುವ ಹಗರಣದ ಬಗ್ಗೆ ಪ್ರಸ್ತಾಪಿಸುತ್ತಾ ಕಾಂಗ್ರೆಸ್ ಪಕ್ಷವನ್ನು ಟೀಕಿಸುವ ಭರದಲ್ಲಿ ಕಲ್ಲಿದ್ದಲು, 2ಜಿ, ಕಾಮನ್ವೆಲ್ತ್ ಹಗರಣಗಳು ಬಿಜೆಪಿ ಸರಕಾರದ ಅವಧಿಯಲ್ಲೇ ಆಗಿದ್ದು ಎಂದು ಹೇಳಿದರು. ಪಕ್ಕದಲ್ಲೇ ಇದ್ದ ಸ್ಥಳೀಯ ಶಾಸಕ ಸತೀಶ್ ರೆಡ್ಡಿ ಕೂಡಾ ಇದನ್ನು ತಿದ್ದುವ ಪ್ರಯತ್ನ ಮಾಡದೇ ಇದ್ದಾಗ, ವೇದಿಕೆಯಲ್ಲಿದ್ದ ಬಿಜೆಪಿಯ ಮುಖಂಡರೊಬ್ಬರು ಅನಂತ್ ಅವರನ್ನು ಎಚ್ಚರಿಸಿದರು.
ಸಿದ್ದುಗೆ ಪ್ರತಿಷ್ಠೆಯ ಪ್ರಶ್ನೆ
ಬಿಬಿಎಂಪಿ ಚುನಾವಣೆ ಮುಂದೂಡಲು ಸಾಧ್ಯವಾದಷ್ಟು ಪ್ರಯತ್ನ ನಡೆಸಿದ್ದ ಸಿದ್ದು, ಚುನಾವಣೆಯ ದಿನಾಂಕ ಘೋಷಣೆಯಾಗುತ್ತಿದ್ದಂತೆಯೇ ಪೂರ್ಣ ಪ್ರಮಾಣದಲ್ಲಿ ಆಖಾಡಕ್ಕಿಳಿದಿದ್ದಾರೆ. ಬಿಜೆಪಿಯ ಐದು ವರ್ಷದ ಅವಧಿಯ ಭ್ರಷ್ಟಾಚಾರವನ್ನು ಹೋದಲೆಲ್ಲಾ ಎಳೆಎಳೆಯಾಗಿ ಬಿಡಿಸುತ್ತಿದ್ದಾರೆ.
ಕುಮಾರಣ್ಣ ಏಕಾಂಗಿ
ದೇವೇಗೌಡ್ರು ಕೆಲವೊಂದು ಕ್ಷೇತ್ರದಲ್ಲಿ ಸಂಚರಿಸಿ ಪಕ್ಷದ ಪರವಾಗಿ ಮತಯಾಚಿಸಿದ್ದನ್ನು ಬಿಟ್ಟರೆ, ಬಿಬಿಎಂಪಿ ಚುನಾವಣೆಯ ಸಂಪೂರ್ಣ ಜವಾಬ್ದಾರಿಯನ್ನು ಹೆಗಲ ಮೇಲೆ ಹೊತ್ತು ಸಾಗುತ್ತಿರುವುದು ಕುಮಾರಸ್ವಾಮಿ. ಎಚ್ಡಿಕೆಗೆ ಸಾಥ್ ನೀಡುತ್ತಿರುವುದು ಜಮೀರ್ ಮಾತ್ರ. ರೇವಣ್ಣ ಮತ್ತು ಚೆಲುವರಾಯಸ್ವಾಮಿ ಕೂಡಾ ಅಷ್ಟಾಗಿ ಪ್ರಚಾರದಲ್ಲಿ ತೊಡಗಿಸಿಕೊಂಡಿಲ್ಲ.
ಸಿದ್ದು ಬ್ರಹ್ಮಾಸ್ತ್ರ
ಬೆಂಗಳೂರು ನಗರದ ಅಭಿವೃದ್ಧಿಗಾಗಿ ಪ್ರತ್ಯೇಕ ಸಚಿವರನ್ನೇ ನೇಮಿಸುತ್ತೇನೆಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸುವ ಮೂಲಕ ಹೊಸ ಬ್ರಹ್ಮಾಸ್ತ್ರ ಪ್ರಯೋಗಿಸಿದ್ದಾರೆ. ಬಿಬಿಎಂಪಿ ಚುನಾವಣೆ ಬಳಿಕ ಸಚಿವ ಸಂಪುಟ ಪುನಾರಚನೆ ಮಾಡಲಾಗುತ್ತದೆ. ಆಗ ಸಚಿವರನ್ನು ನೇಮಕ ಮಾಡುತ್ತೇನೆಂದು ಹೊಸ ಬಾಣ ಪ್ರಯೋಗಿಸಿದ್ದಾರೆ.