ಖಾಯಂ ಪೌರ ಕಾರ್ಮಿಕರಿಗೆ ಬಿಡಿಎ ಪ್ಲಾಟ್ನ ಹಕ್ಕುಪತ್ರ ವಿತರಣೆ
ಬೆಂಗಳೂರು, ಫೆಬ್ರವರಿ 18: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಪಶ್ಚಿಮ ವಲಯದ ಖಾಯಂ ಪೌರ ಕಾರ್ಮಿಕರಿಗೆ ಬಿಡಿಎ ವತಿಯಿಂದ ನಿರ್ಮಿಸಿರುವ ಮನೆಗಳ (ಪ್ಲಾಟ್) ಹಕ್ಕು ಪತ್ರಗಳನ್ನು ಮಲ್ಲೇಶ್ವರಂನ ಐಪಿಪಿ ತರಬೇತಿ ಕೇಂದ್ರದಲ್ಲಿ ಬಿಬಿಎಂಪಿ ಮೇಯರ್ ಎಂ ಗೌತಮ್ ಕುಮಾರ್ ಮಂಗಳವಾರ ವಿತರಿಸಿದರು.
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಪಶ್ಚಿಮ ವಲಯದ ಕಾರ್ಯನಿರ್ವಹಿಸುತ್ತಿರುವ 60 ಖಾಯಂ ಪೌರಕಾರ್ಮಿಕರಿಗೆ "ಪೌರಕಾರ್ಮಿಕರ ಗೃಹಭಾಗ್ಯ ಯೋಜನೆಯಡಿ" ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ(ಬಿಡಿಎ)ದ ವತಿಯಿಂದ ನಿರ್ಮಿಸಿರುವ ಪ್ಲಾಟ್ ಗಳ ಹಕ್ಕು ಪತ್ರಗಳನ್ನು ಮಹಾಪೌರರು ರವರು ವಿತರಿಸಿದರು.
ಈ ವೇಳೆ ಉಪಮಹಾಪೌರ ರಾಮಮೋಹನ ರಾಜು, ಸಾರ್ವಜನಿಕ ಆರೋಗ್ಯಾ ಸ್ಥಾಯಿ ಸಮಿತಿ ಅಧ್ಯಕ್ಷ ಮಂಜುನಾಥ್ ರಾಜು.ಜಿ, ವಲಯ ವಿಶೇಷ ಆಯುಕ್ತ ಬಸವರಾಜು, ಪಶ್ಚಿಮ ವಲಯ ಜಂಟಿ ಆಯುಕ್ತ ಚಿದಾನಂದ್, ಪೌರಕಾರ್ಮಿಕರ ಪದಾಧಿಕಾರಿಗಳು ಹಾಗೂ ಇತರೆ ಅಧಿಕಾರಿಗಳು ಉಪಸ್ಥಿತರಿದ್ದರು.

ಪೌರಕಾರ್ಮಿಕರ ಗೃಹಭಾಗ್ಯ ಯೋಜನೆ
ಪಾಲಿಕೆಯ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಸುಮಾರು 400 ಮಂದಿ ಖಾಯಂ ಪೌರಕಾರ್ಮಿಕರಿಗೆ "ಪೌರಕಾರ್ಮಿಕರ ಗೃಹಭಾಗ್ಯ ಯೋಜನೆಯಡಿ" ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು ಆಲೂರಿನಲ್ಲಿ ನಿರ್ಮಿಸಿರುವ ಫ್ಲಾಟ್ನ್ನು ಹಂಚಿಕೆ ಮಾಡುತ್ತಿದೆ. ಈ ಪೈಕಿ ಪ್ರಸ್ತುತ ಸುಮಾರು 272 ಮಂದಿ ಪಾಲಿಕೆಯ ಅರ್ಹ ಫಲಾನುಭವಿಗಳಿಗೆ ಪ್ಲಾಟ್ಗಳನ್ನು ನೀಡಲು ಗುರುತಿಸಲಾಗಿದ್ದು, ಇದರಲ್ಲಿ ಪಾಲಿಕೆಯ ಪಶ್ಚಿಮ ವಲಯ ವ್ಯಾಪ್ತಿಗೆ ಒಳಪಡುವ ಒಟ್ಟು 89 ಮಂದಿ ಫಲಾನುಭವಿಗಳಿಗೆ ಪ್ಲಾಟ್ಗಳನ್ನು ನೀಡಲು ಅನುಮೋದಿಸಲಾಗಿರುತ್ತದೆ. ಅದರಂತೆ ಪ್ರಥಮ ಹಂತದಲ್ಲಿ 60 ಮಂದಿ ಫಲಾನುಭವಿಗಳಿಗೆ ಸದರಿ ಪ್ಲಾಟ್ನ ಹಕ್ಕುಪತ್ರಗಳನ್ನು ವಿತರಿಸಲಾಗಿದೆ ಎಂದು ಮೇಯರ್ ತಿಳಿಸಿದ್ದಾರೆ.

ಪೌರಕಾರ್ಮಿಕರಿಗೆ ವಸತಿ ಗೃಹ
ರಾಜ್ಯ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಪೌರಕಾರ್ಮಿಕರಿಗೆ ವಸತಿ ಗೃಹ ನಿರ್ಮಿಸಿ ಕೊಡುವ "ಪೌರಕಾರ್ಮಿಕರ ಗೃಹಭಾಗ್ಯ ಯೋಜನೆ" ಸೌಲಭ್ಯವನ್ನು ಒದಗಿಸಲು ರಾಜ್ಯ ಸರ್ಕಾರವು ಪೌರಾಡಳಿತ ನಿರ್ದೇಶನಲಾಯದಡಿ ಯೋಜನೆಯನ್ನು ಅನುಷ್ಠಾನಗೊಳಿಸಲಾಗುತ್ತಿದೆ. ಅದಕ್ಕಾಗಿ 2014-15ನೇ ಸಾಲಿನ ಆಯವ್ಯಯದಲ್ಲಿ ರೂ. 25 ಕೋಟಿಗಳನ್ನು ಹಂಚಿಕೆ ಮಾಡಲಾಗಿದೆ ಎಂದು ಮೇಯರ್ ತಿಳಿಸಿದ್ದಾರೆ.

ಒಂಬತ್ತು ಲಕ್ಷದ ಪ್ಲಾಟ್
10 ರೂ ಕೋಟಿಗಳನ್ನು ಯೋಜನೆಯ ಅನುಷ್ಠಾನಕ್ಕೆ ಬಿಡುಗಡೆ ಮಾಡಲಾಗಿರುತ್ತದೆ. 2015-16ನೇ ಸಾಲಿನಲ್ಲಿ ರೂ. 50 ಕೋಟಿಗಳನ್ನು ಹಂಚಿಕೆ ಮಾಡಲಾಗಿರುತ್ತದೆ. ಸದರಿ ಯೋಜನೆಯ ಫಲಾನುಭವಿಗಳಿಗೆ ನೀಡಲಾಗುವ ತಲಾ ಪ್ಲಾಟ್ನ ಒಟ್ಟಾರೆ ರೂ. 9 ಲಕ್ಷಗಳಲ್ಲಿ ರೂ. 6 ಲಕ್ಷಗಳನ್ನು ಪೌರಾಡಳಿತ ನಿರ್ದೇಶನಾಲಯ ಹಾಗೂ ರೂ. 3 ಲಕ್ಷಗಳನ್ನು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯು ಭರಿಸಿದೆ ಎಂದು ಮೇಯರ್ ತಿಳಿಸಿದ್ದಾರೆ.

ಅರ್ಹತೆಗಳು ಏನು?
ಈ ಯೋಜನೆ ಪಡೆಯುವುದಕ್ಕೆ ಸರ್ಕಾರಿ ಆದೇಶದ ಮಾರ್ಗಸೂಚಿಯಂತ ಖಾಯಂ ಪೌರಕಾರ್ಮಿಕರು 10 ರಿಂದ 15 ವರ್ಷಗಳವರೆಗೆ ಸೇವೆ ಸಲ್ಲಿಸಿರಬೇಕು. ಒಂದು ಕುಟುಂಬದಲ್ಲಿ ಒಬ್ಬರಿಗಿಂತ ಹೆಚ್ಚು ಪೌರಕಾರ್ಮಿಕರು ಇದ್ದಲ್ಲಿ ಅವರುಗಳಿಗೆ ಒಂದೇ ಮನೆಯನ್ನು ನೀಡಲಾಗುವುದು. ರಾಜ್ಯದಲ್ಲಿ ಪೌರಕಾರ್ಮಿಕ ಅಥವಾ ಕುಟುಂಬದವರು ಸ್ವಂತ ಮನೆಯನ್ನು ಹೊಂದಿರಬಾರದು. ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದಲ್ಲಿ ಅಂತಹವರನ್ನು ಫಲಾನುಭವಿಗಳಾಗಿ ಆದ್ಯತೆ ಮೇಲೆ ಪರಿಗಣಿಸಲಾಗುತ್ತದೆ.












Click it and Unblock the Notifications