ಕೊರೊನಾ ಸೋಂಕಿನಿಂದ ಗುಣಮುಖರಾದವರಿಗೆ ಬಿಬಿಎಂಪಿಯಿಂದ ಕೌನ್ಸಿಲಿಂಗ್
ಬೆಂಗಳೂರು, ಸೆಪ್ಟೆಂಬರ್ 17: ಕೊರೊನಾ ಸೋಂಕಿನಿಂದ ಗುಣಮುಖರಾದವರಿಗೆ ಬಿಬಿಎಂಪಿಯು ಕೌನ್ಸಿಲಿಂಗ್ ಮಾಡಲು ಮುಂದಾಗಿದೆ.
ಕೊರೊನಾ ಸೋಂಕಿತರು ಮಾನಸಿಕ ಒತ್ತಡಗಳಿಗೆ ಒಳಗಾಗಿರುತ್ತಾರೆ, ಸೋಂಕು ಕೂಡ ರೋಗಿಗಳನ್ನು ಜರ್ಜರಿತರನ್ನಾಗಿ ಮಾಡುತ್ತದೆ. ಮತ್ತೊಂದೆಡೆ ಮನೆಗೆ ತೆರಳಿದರೆ ಸುತ್ತಮುತ್ತಲಿನ ಜನರು ಅವರನ್ನು ನೋಡು ರೀತಿಯೂ ಕೂಡ ಬೇರೆಯಾಗಿದೆ.
ಹೀಗಾಗಿ ಬಿಬಿಎಂಪಿಯು ರೋಗಿಗಳ ಕೌನ್ಸಿಲಿಂಗ್ ಮಾಡಲು ಮುಂದಾಗಿದೆ.ಕೌನ್ಸಿಲಿಂಗ್ ವೇಳೆ ಸೋಂಕಿನಿಂದ ಗುಣಮುಖರಾದವರಿಗೆ ಪ್ಲಾಸ್ಮಾ ದಾನ ಕುರಿತಂತೆ ಮಾಹಿತಿ ನೀಡಿ ಜನರು ಪ್ಲಾಸ್ಮಾ ದಾನ ಮಾಡಲು ಪ್ರೇರೇಪಿಸುವ ಕಾರ್ಯಗಳೂ ನಡೆಯಲಿದೆ.
ಕೊರೊನಾ ಪಾಸಿಟಿವ್ ಬಂದ ಕೂಡಲೇ ಜನರು ಹೆಚ್ಚೆಚ್ಚು ಭೀತಿಗೊಳಗಾಗುತ್ತಿದ್ದಾರೆ. ಅಂತಹವರಿಗೆ ಸೂಕ್ತ ಕೌನ್ಸಿಲಿಂಗ್ ನಡೆಸುವ ಅಗತ್ಯವಿದೆ. ಸೋಂಕಿನಿಂದ ಗುಣಮುಖರಾದ ಬಳಿಕ ವ್ಯಕ್ತಿ ಪ್ಲಾಸ್ಮಾ ದಾನ ಮಾಡಬಹುದಾಗಿದೆ. ಇದು ಇತರೆ ಸೋಂಕಿತರು ಗುಣಮುಖರಾಗಲು ಸಹಾಯ ಮಾಡುತ್ತದೆ ಎಂದು ತಿಳಿಸಿದ್ದಾರೆ.

ಪ್ಲಾಸ್ಮಾ ಚಿಕಿತ್ಸೆ ಪರಿಣಾಮಕಾರಿ
ಪ್ಲಾಸ್ಮಾ ಚಿಕಿತ್ಸೆ ಪರಿಣಾಮಕಾರಿಯಾಗಿದೆ ಎಂದು ಐಸಿಎಂಆರ್ ಈ ಕುರಿತು ಏನೂ ಹೇಳದೆ ಇದ್ದರೂ ರಾಜ್ಯದಲ್ಲಿ ಈ ಚಿಕಿತ್ಸೆಗೆ ಉತ್ತಮ ಫಲಿತಾಂಶ ಬರುತ್ತಿದ್ದು, ಈ ಚಿಕಿತ್ಸೆ ಮುಂದುವರೆಸಲು ರಾಜ್ಯ ಸರ್ಕಾರ ನಿರ್ಧರಿಸಿದೆ ಎಂದು ಬಿಬಿಎಂಪಿ ಆಯುಕ್ತ ಎನ್. ಮಂಜುನಾಥ್ ಪ್ರಸಾದ್ ಅವರು ಹೇಳಿದ್ದಾರೆ.

ಆರೋಗ್ಯಾಧಿಕಾರಿಗಳ ಮಾತುಕತೆ
ಸೋಂಕಿನಿಂದ ಗುಣಮುಖರಾದವರೊಂದಿಗೆ ಆರೋಗ್ಯಾಧಿಕಾರಿಗಳು ಮಾತುಕತೆ ನಡೆಸಲಿದ್ದು, ಈ ಸಂದರ್ಭದಲ್ಲಿ ಅವರ ಆರೋಗ್ಯ ಸ್ಥಿತಿ ಕುರಿತು ಮಾಹಿತಿ ನೀಡಿ, ಉದ್ಯೋಗ, ಜೀವನ, ಕುಟುಂಬದ ಕುರಿತು ಎಲ್ಲಾ ರೀತಿಯಲ್ಲಿ ಸ್ನೇಹಯುತದಿಂದ ಮಾತನಾಡುತ್ತಾರೆ.
ಬೆಳಗಿನ ಸಮಯದಲ್ಲಿ ವಾಕಿಂಗ್ ಹೋಗುವಂತೆ ಹಾಗೂ ಇತರೆ ಜನರನ್ನು ನೋಡಿ ಅವರು ನಿಮಗೆ ತಿಳಿಯದ ವ್ಯಕ್ತಿಯಾದರೂ ನಗುಮುಖದಿಂದ ತೋರಿಸುವಂತೆ ಸೂಚಿಸುತ್ತೇವೆ. ನಿಮ್ಮ ದೈಹಿಕ ಬಲವನ್ನು ಅರ್ಥೈಸಿಕೊಂಡು ಕೆಲಸವನ್ನು ಮಾಡುವಂತೆ ಇದೇ ವೇಳೆ ಸಲಹೆಯನ್ನೂ ನೀಡುತ್ತೇವೆಂದು ತಿಳಿಸಿದ್ದಾರೆ.

ಮಾನಸಿಕವಾಗಿ ಗಟ್ಟಿಗೊಳ್ಳುವಂತೆ ಮಾಡಬೇಕು
ಪ್ಲಾಸ್ಮಾ ದಾನ ಮಾಡಲು ಇಂತಹವರಿಗೆ ಮಾನಸಿಕವಾಗಿ ಹಾಗೂ ಭಾವನಾತ್ಮಕವಾಗಿ ಗಟ್ಟಿಗೊಳ್ಳುವಂತೆ ಮಾಡಬೇಕು. ಪ್ಲಾಸ್ಮಾ ದಾನ ಮಾಡಿದರೆ, ನಿಮ್ಮ ಕುಟುಂಬ ಸದಸ್ಯರಿಗೂ ಕೂಡ ಸಹಾಯವಾಗಲಿದೆ ಎಂಬುದನ್ನು ಕೌನ್ಸಿಲಿಂಗ್ ವೇಳೆ ತಿಳಿಸುತ್ತೇವೆ.
Recommended Video

ಕೊರೊನಾ ಸೋಂಕಿತರು ಮನೆಯಲ್ಲಿಯೇ ಇರಲಿ
ಆರೋಗ್ಯ ಇಲಾಖೆಯ ಅಧಿಕಾರಿಗಳು ಮಾತನಾಡಿ, ಕೊರೊನಾ ಸೋಂಕು ದೃಢಪಡುತ್ತಿದ್ದಂತೆಯೇ ಸೋಂಕಿತರು ಮನೆಯಲ್ಲಿಯೇ ಇರಲಿ, ಕೋವಿಡ್ ಕೇರ್ ಕೇಂದ್ರ ಅಥವಾ ಆಸ್ಪತ್ರೆಯಲ್ಲಿ ಸಾಮಾಜಿಕ ಬಹಿಷ್ಕಾರ ಕುರಿತು ಭೀತಿಗೊಳಗಾಗುತ್ತಿದ್ದಾರೆ. ಹೀಗಾಗಿ ಗುಣಮುಖರಾದ ಬಳಿಕ ಇತರರಿಗೆ ಸಹಾಯ ಮಾಡಲು ಮುಂದಾಗುತ್ತಿಲ್ಲ ಎಂದು ಹೇಳಿದ್ದಾರೆ.












Click it and Unblock the Notifications