ಫೇಸ್ಬುಕ್, ಟ್ವಿಟ್ವರ್ ಮೂಲಕ ಬಿಬಿಎಂಪಿಗೆ ದೂರು ಕೊಡಿ
ಬೆಂಗಳೂರು, ಮೇ 5 : ಬೆಂಗಳೂರು ನಗರದಲ್ಲಿನ ಸಮಸ್ಯೆಗಳ ಬಗ್ಗೆ ನೀವು ನೇರವಾಗಿ ಆಡಳಿತಾಧಿಕಾರಿಗಳಿಗೆ ದೂರು ನೀಡಬಹುದಾಗಿದೆ. ಹೌದು, ಜನರಿಂದ ದೂರುಗಳನ್ನು ಸ್ವೀಕರಿಸಲು ಬಿಬಿಎಂಪಿ ಆಡಳಿತಾಧಿಕಾರಿ ಟಿ.ಎಂ.ವಿಜಯ ಭಾಸ್ಕರ್ ಅವರು ಸಾಮಾಜಿಕ ಜಾಲ ತಾಣದದಲ್ಲಿ ಖಾತೆ ತೆರೆದಿದ್ದಾರೆ.
ಅವಧಿಗೂ ಮುನ್ನವೇ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯನ್ನು ವಿಸರ್ಜನೆ ಮಾಡಿದ ಸರ್ಕಾರ ಟಿ.ಎಂ.ವಿಜಯ ಭಾಸ್ಕರ್ ಅವರನ್ನು ಆಡಳಿತಾಧಿಕಾರಿಯನ್ನಾಗಿ ನೇಮಕ ಮಾಡಿದೆ. ಪ್ರತಿದಿನ ನಗರ ಪ್ರದಕ್ಷಿಣೆ ಕೈಗೊಳ್ಳುವ ವಿಜಯ ಭಾಸ್ಕರ್ ಅವರು ಕಸ ವಿಲೇವಾರಿ ಮಾಡದ ಗುತ್ತಿಗೆದಾರರಿಗೆ ಖಡಕ್ ಎಚ್ಚರಿಕೆ ನೀಡುತ್ತಿದ್ದಾರೆ. [ಬಿಬಿಎಂಪಿಗೆ ಬೆಂಗಳೂರಿನವರೇ ಆಯುಕ್ತರು]

ಸದ್ಯ, ನಗರದ 198 ವಾರ್ಡ್ಗಳ ಜನರ ಸಮಸ್ಯೆ ಆಲಿಸಲು ವಿಜಯ ಭಾಸ್ಕರ್ ಅವರು ಸಾಮಾಜಿಕ ಜಾಲತಾಣದಲ್ಲಿ ಖಾತೆ ತೆರೆದಿದ್ದಾರೆ. ಫೇಸ್ಬುಕ್ ಮತ್ತು ಟ್ವಿಟರ್ ಖಾತೆಗಳನ್ನು ತೆರೆದು ಜನರ ಸಮಸ್ಯೆ ಬಗೆಹರಿಸಲು ಮುಂದಾಗಿದ್ದಾರೆ. [ಟ್ವಿಟರ್ ಖಾತೆ]
ಚಿತ್ರ ಮತ್ತು ಮಾಹಿತಿ ಹಾಕಿ : ಎಲ್ಲೆಂದರಲ್ಲಿ ಕಸ ಹಾಕುವುದು ಸೇರಿದಂತೆ ನಿಮ್ಮ ಬಡಾವಣೆಯಲ್ಲಿನ ಸಮಸ್ಯೆಗಳ ಬಗ್ಗೆ ನೀವು ದೂರು ಸಲ್ಲಿಸಬಹುದು. ಸ್ಥಳದ ಚಿತ್ರ, ವಾರ್ಡ್ ಸಂಖ್ಯೆ ಮತ್ತು ದೂರವಾಣಿ ಸಂಖ್ಯೆಯೊಂದಿಗೆ ದೂರು ನೀಡಿ ಎಂದು ವಿಜಯ ಭಾಸ್ಕರ್ ಫೇಸ್ಬುಕ್ ಮೂಲಕ ಜನರಿಗೆ ಕರೆ ನೀಡಿದ್ದಾರೆ. [ಫೇಸ್ ಬುಕ್ ಪುಟ]
ಸರ್ಕಾರ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯನ್ನು ಮೂರು ಭಾಗಗಳಾಗಿ ವಿಭಜನೆ ಮಾಡಲು ನಿರ್ಧರಿಸಿದೆ. ಇದಕ್ಕೆ ಏನಿಲ್ಲವೆಂದರೂ 6 ತಿಂಗಳ ಕಾಲಾವಕಾಶ ಬೇಕು. ಅಲ್ಲಿಯ ತನಕ ಪಾಲಿಕೆಯ ಆಡಳಿತವನ್ನು ಆಡಳಿತಾಧಿಕಾರಿ ವಿಜಯ್ ಭಾಸ್ಕರ್, ಆಯುಕ್ತ ಜಿ. ಕುಮಾರ್ ನಾಯಕ್ ನೋಡಿಕೊಳ್ಳುತ್ತಾರೆ. ನಿಮ್ಮ ಕ್ಷೇತ್ರದ ಸಮಸ್ಯೆ ಇದ್ದರೆ ಆಡಳಿತಾಧಿಕಾರಿಗಳಿಗೆ ದೂರು ಕೊಡಿ.












Click it and Unblock the Notifications