ಬಿ.ಟಿ. ಲಲಿತಾ ನಾಯಕ್ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದೇವೆ: ಗೃಹ ಸಚಿವ ಬಸವರಾಜ್ ಬೊಮ್ಮಾಯಿ!
ಬೆಂಗಳೂರು, ಮಾ. 22: ಮಾಜಿ ಸಚಿವರಾದ ಬಿ.ಟಿ. ಲಲಿತಾ ನಾಯಕ್ ಅವರೂ ಸೇರಿದಂತೆ ರಾಜ್ಯದ ಮೂವರು ಗಣ್ಯರಿಗೆ ಬೆದರಿಕೆ ಪತ್ರದ ಪ್ರಕರಣವನ್ನು ರಾಜ್ಯ ಸರ್ಕಾರ ಗಂಭೀರವಾಗಿ ಪರಿಗಣಿಸಿದ್ದು, ಆ ಬೆದರಿಕೆ ಪತ್ರ ಬರೆದವರ ವಿರುದ್ಧ ಕಠಿಣಕ್ರಮ ಜರುಗಿಸುವುದಾಗಿ ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಹೇಳಿದ್ದಾರೆ. ಬೆಂಗಳೂರಿನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಗೃಹ ಸಚಿವರು, ಈ ಸಂಬಂಧ ಲಲಿತಾ ನಾಯಕ್ ಅವರು ದೂರು ಸಲ್ಲಿಸಿರುವುದು ಗೊತ್ತಾಗಿದೆ ಎಂದರು.
ಲಲಿತಾ ನಾಯಕ್ ಅವರು ಹಿರಿಯ ಸಾಹಿತಿ, ಗೌರವಾನ್ವಿತ ವ್ಯಕ್ತಿ, ಮಾಜಿ ಸಚಿವರು. ಅವರು ಬೆದರಿಕೆ ಬಗ್ಗೆ ಪೊಲೀಸ್ ಠಾಣೆಯಲ್ಲಿ ದೂರು ಕೊಟ್ಟಿದ್ದಾರೆ. ಈ ಪ್ರಕರಣವನ್ನು ಸರ್ಕಾರಿ ಗಂಭೀರವಾಗಿ ಪರಿಗಣಿಸುತ್ತದೆ. ಸಂಪೂರ್ಣ ತನಿಖೆ ಮಾಡುತ್ತೇವೆ. ಇದರ ಹಿಂದೆ ಯಾರೇ ಇದ್ದರೂ ಉಗ್ರ ಕ್ರಮ ಜರುಗಿಸುತ್ತೇವೆ ಎಂದು ಸಚಿವ ಬಸವರಾಜ್ ಬೊಮ್ಮಾಯಿ ಅವರು ಭರವಸೆ ನೀಡಿದ್ದಾರೆ.

ನಿನ್ನೆ (ಮಾ.21) ಬೆಂಗಳೂರಿನಲ್ಲಿ ನಡೆದಿದ್ದ ಮಾಜಿ ಸಚಿವ ಎಚ್.ಎಂ. ರೇವಣ್ಣ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದ್ದ ಮಾಜಿ ಸಚಿವೆ ಬಿ.ಟಿ. ಲಲಿತಾ ನಾಯಕ್ ಅವರು, ಮೇ 1 ರಂದು ಪ್ರಮುಖರನ್ನು ಕೊಲೆ ಮಾಡುವ ಪತ್ರ ನನಗೆ ಬಂದಿದೆ. ಪತ್ರದಲ್ಲಿ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ, ಶಾಸಕ ಸಿ.ಟಿ. ರವಿ, ಟಿವಿ ಸಂಪಾದಕ ರಂಗಣ್ಣ, ನಟ ಶಿವರಾಜಕುಮಾರ್ ಹಾಗೂ ತಮ್ಮನ್ನು ಕೊಲೆ ಮಾಡುವ ಪತ್ರ ಬಂದಿದೆ. ಅದನ್ನು ಪೊಲೀಸರಿಗೆ ಒಪ್ಪಿಸಿದ್ದು ಅವರು ಪರಿಶೀಲನೆ ಮಾಡುತ್ತಿದ್ದಾರೆ.

ಆದರೆ ನಾನು ಹೆದರುವ ಪ್ರಶ್ನೆಯೇ ಇಲ್ಲ. ಸಿ.ಟಿ. ರವಿ ಅವರನ್ನು ಕೊಲೆ ಮಾಡಿದರೆ, ನಾನು ಉಳಿಯುತ್ತೇನೆ. ನನ್ನನ್ನು ಕೊಲೆ ಮಾಡಿದರೆ ಸಿ.ಟಿ. ರವಿ ಅವರು ಉಳಿಯುತ್ತಾರೆ. ಇಂತಹ ಸಂದರ್ಭ ಎದುರಾಗಿದೆ. ಕೊಲೆ ಮಾಡುವುದಾದರೆ ಎಲ್ಲಿ ಬೇಕಾದರೂ ಮಾಡಬಹುದು. ಹೀಗಾಗಿ ನಾನು ಹೆದರದೇ ಅಭಿನಂದನಾ ಸಮಾರಂಭದಲ್ಲಿ ಭಾಗಿಯಾಗಿದ್ದೇನೆ ಎಂದು ಸ್ಪೋಟಕ ಹೇಳಿಕೆ ನೀಡಿದ್ದರು.












Click it and Unblock the Notifications