'ಬರಹ' ಶೇಷಾದ್ರಿ ವಾಸು ಅವರ ತಂದೆ ದೈವಾಧೀನ
ಬೆಂಗಳೂರು, ಆಗಸ್ಟ್ 18: ನಿಮ್ಮಲ್ಲಿ ಅನೇಕರು ಕಂಪ್ಯೂಟರ್ನಲ್ಲಿ ಕನ್ನಡ ಬರವಣಿಗೆಗೆ 'ಬರಹ' ತಂತ್ರಾಂಶವನ್ನು ಬಳಸಿದವರಿದ್ದೀರಿ. 'ಬರಹ' ತಂತ್ರಾಂಶವನ್ನು ರಚಿಸಿದವರು ನ್ಯೂ ಜೆರ್ಸಿಯಲ್ಲಿ ವಾಸವಾಗಿರುವ ಶೇಷಾದ್ರಿವಾಸು ಚಂದ್ರಶೇಖರ್ ಎನ್ನುವ ಸಂಗತಿ ನಿಮ್ಮಲ್ಲಿ ಕೆಲವರಿಗಷ್ಟೇ ತಿಳಿದಿರಬಹುದು. [ಬರಹ ವಾಸು ತಂದೆ ಕೆ.ಟಿ. ಚಂದ್ರಶೇಖರ್ಗೆ ಬಸವನಗುಡಿಯಲ್ಲಿ ಅವಮಾನ]
ಶೇಷಾದ್ರಿವಾಸು ಅವರ ತಂದೆ ಕೆ.ಟಿ.ಚಂದ್ರಶೇಖರ್ ಅವರ ಬಗ್ಗೆಯಂತೂ ಕೆಲವೇ ಕೆಲವರಿಗಷ್ಟೇ ಗೊತ್ತಿರಬಹುದು. ಕೆ.ಟಿ.ಚಂದ್ರಶೇಖರ್ ಅವರು ಸ್ವಲ್ಪ ದೀರ್ಘಕಾಲದ್ದೇ ಎನ್ನಬಹುದಾದ ಅಸ್ವಾಸ್ಥ್ಯದ ನಂತರ (17, ಆಗಸ್ಟ್ 2016) ಬೆಂಗಳೂರಿನಲ್ಲಿ ನಿಧನರಾದರು. ಅವರ ಹಿರಿಯಮಗ ಕಲ್ಯಾಣರಾಮನ್ ಚಂದ್ರಶೇಖರ್ ಈ ಕುರಿತು ಫೇಸ್ಬುಕ್ನಲ್ಲಿ ತಿಳಿಸಿದ್ದಾರೆ.
ಕೆ.ಟಿ.ಚಂದ್ರಶೇಖರನ್ ಅವರು ಐಟಿಐನಲ್ಲಿ ಉದ್ಯೋಗಿಯಾಗಿದ್ದರು. ಆವಾಗಿಂದಲೂ ಕನ್ನಡಪರ ಚಟುವಟಿಕೆಗಳಲ್ಲಿ ತೊಡಗಿದ್ದರು. 'ಅನಕೃ ಪ್ರತಿಷ್ಠಾನ' ಸ್ಥಾಪಿಸಿ ಕನ್ನಡಪರ ಚಟುವಟಿಕೆಗಳಿಗೆ ಮತ್ತಷ್ಟು ಅರ್ಥಪೂರ್ಣತೆ ಕೊಟ್ಟರು. ಕನ್ನಡನಾಡಿನಲ್ಲಿ ಕನ್ನಡೇತರ ಭಾಷೆಗಳ ಅಟಾಟೋಪವನ್ನು, ಕನ್ನಡ ಜನತೆಗೆ ಅವುಗಳ ವ್ಯಾಮೋಹವಿರುವುದನ್ನು ಅವರು ತೀವ್ರವಾಗಿ ವಿರೋಧಿಸುತ್ತಿದ್ದರು.
ಕಲ್ಯಾಣರಾಮನ್ ಮತ್ತು ಶೇಷಾದ್ರಿವಾಸು ಸಹ ತಮ್ಮದೇ ಆದ ರೀತಿಯಲ್ಲಿ ಕನ್ನಡ ಕೈಂಕರ್ಯ ಮಾಡಿದವರೇ. ಚಂದ್ರಶೇಖರನ್ ಅವರು ನನಗೊಬ್ಬ ಹಿರಿಯ ಹಿತೈಷಿಯಾಗಿದ್ದರು. ಅವರು ನನ್ನ ಅಂಕಣಬರಹಗಳನ್ನು ನಿಯಮಿತವಾಗಿ ಓದುತ್ತಿದ್ದರು. 2002ರಲ್ಲಿ ನಾನು ಅವರನ್ನು ನ್ಯೂಜೆರ್ಸಿಯಲ್ಲಿ ಶೇಷಾದ್ರಿವಾಸು ಅವರ ಮನೆಯಲ್ಲಿ ಭೇಟಿಯಾಗಿದ್ದೆ. ಆಗ ದಟ್ಸ್ ಕನ್ನಡ ಶಾಮ್ ಸಹ ನನ್ನೊಂದಿಗಿದ್ದರು.
ಆಮೇಲೆ ಬೆಂಗಳೂರಿನಲ್ಲಿ ಒಂದೆರಡು ಸರ್ತಿ ನಾನು ಚಂದ್ರಶೇಖರ್ ಅವರನ್ನು ಭೇಟಿಯಾಗಿದ್ದೇನೆ. ಅವರ ಮನೆಗೂ ಹೋಗಿಬಂದಿದ್ದೇನೆ. ನನ್ನ ಪುಸ್ತಕ ಬಿಡುಗಡೆ ಸಮಾರಂಭಕ್ಕೆ ಅವರು ಬಂದು ಹರಸಿದ್ದರು.
ಒಮ್ಮೆ ಅವರು ನನ್ನನ್ನು ಅಂಕಿತ ಪುಸ್ತಕ ಮಳಿಗೆಗೆ ಕರೆದುಕೊಂಡು ಹೋಗಿ, 'ಪುರಾಣನಾಮ ಚೂಡಾಮಣಿ' ಪುಸ್ತಕವೂ ಸೇರಿದಂತೆ ಕೆಲವು ಪುಸ್ತಕಗಳನ್ನು ಖರೀದಿಸಿ ನನಗೆ ಉಡುಗೊರೆಯಾಗಿ ಕೊಟ್ಟು 'ನೀವು ಲೇಖನಗಳನ್ನು ಚೆನ್ನಾಗಿ ಬರೆಯುತ್ತೀರಿ. ಲೇಖನಗಳಲ್ಲಿ ಭಾರತೀಯ ಸಂಸ್ಕೃತಿಯ ಅಂಶಗಳು ಹೆಚ್ಚು ಇರುತ್ತವೆ. ಇದು ನಿಮಗೆ ನನ್ನಿಂದ ಮೆಚ್ಚುಗೆಯೆ ಕೊಡುಗೆ' ಎಂದಿದ್ದರು. ಆ ಪುಸ್ತಕಗಳೆಲ್ಲ ಅಮೂಲ್ಯ ಆಸ್ತಿಯಾಗಿ ನನ್ನ ಬಳಿ ಇವೆ.
ಚಂದ್ರಶೇಖರ್ ಅವರ ಕುಟುಂಬವರ್ಗಕ್ಕೆ ಭಗವಂತನು ಧೈರ್ಯ, ಸ್ಥೈರ್ಯ ಕರುಣಿಸಲಿ, ಅಗಲಿದ ಆತ್ಮ ಚಿರಶಾಂತಿಯನ್ನು ಪಡೆಯಲಿ. ಭಗವಂತನ ಪಾದಾರವಿಂದಗಳಲ್ಲೂ ಅವರಿಗೆ ಕನ್ನಡ ವಾತಾವರಣವೇ ಕಾಣಿಸಿಕೊಂಡು ಸುಖವಾಗಿರಲಿ ಎಂಬ ನನ್ನ ಹಾರೈಕೆಯಲ್ಲಿ ನೀವೆಲ್ಲರೂ ಭಾಗಿಯಾಗುವಿರಿ ಎಂದು ನಂಬಿದ್ದೇನೆ.