ಸೆಪ್ಟೆಂಬರ್ 8 ಕ್ಕೆ ಬೆಂಗಳೂರಲ್ಲಿ 'ಬಂಟರಾತಿಥ್ಯ' ವಿಶಿಷ್ಟ ಕಾರ್ಯಕ್ರಮ
ಬೆಂಗಳೂರು, ಸೆಪ್ಟೆಂಬರ್ 06: ನಗರದ ಬಂಟರ ಹೊಟೇಲ್ ಮಾಲೀಕರ ಸಂಘವು ಸೆಪ್ಟಂಬರ್ 8 ರಂದು ನಗರದ ಬಂಟರ ಸಂಘದಲ್ಲಿ 'ಬಂಟರಾತಿಥ್ಯ' ಎಂಬ ಬಂಟರ ಹೊಟೇಲಿಗರ ಪ್ರಥಮ ಸಮ್ಮಿಲನ ಕಾರ್ಯಕ್ರಮವನ್ನು ಆಯೋಜಿಸಿದೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬೆಂಗಳೂರು ಬಂಟರ ಹೊಟೇಲ್ ಮಾಲೀಕರ ಸಂಘದ ಅಧ್ಯಕ್ಷ ಮಧುಕರ್ ಶೆಟ್ಟಿ, ಬಂಟರಾತಿಥ್ಯ ವಿಶಿಷ್ಟ ಕಾರ್ಯಕ್ರಮ. ಇಲ್ಲಿ ಹೊಟೇಲ್ ಉದ್ಯಮದ ಬಗ್ಗೆ ಯುವ ಉದ್ಯಮಿಗಳಿಗೆ ಮಾರ್ಗದರ್ಶನವನ್ನು ನೀಡಲಾಗುತ್ತದೆ ಎಂದರು.
ಈ ಕಾರ್ಯಕ್ರಮವು ರಾಧಾಬಾಯಿ ತಿಮ್ಮಪ್ಪ ಭಂಡಾರಿ ಸಭಾ ಭವನದಲ್ಲಿ ನಡೆಯಲಿದೆ. ಕಾರ್ಯಕ್ರಮವನ್ನು ಸೆಪ್ಟಂಬರ್ 8, ಭಾನುವಾರ ಬೆಳಗ್ಗೆ 10.30ಕ್ಕೆ ಮಾಜಿ ಸಂಸದರಾದ ಕೆ.ಜಯ ಪ್ರಕಾಶ್ ಶೆಟ್ಟಿಯವರು ಉದ್ಘಾಟಿಸಲಿದ್ದಾರೆ. ಶಾಸಕ ಹಾಗೂ ಮಾಜಿ ಸಚಿವ ಎಂ. ಕೃಷ್ಣಪ್ಪ ಹಾಗೂ ಅಪರ ನಿರ್ದೇಶಕರು ಹಾಗೂ ಸಿಎಓ ಜಲಾನಯನ ಅಭಿವೃದ್ದಿಯ ಇಲಾಖೆಯ ಅಜಿತ್ ಕುಮಾರ್ ಹೆಗ್ಡೆ ಶಾನಡಿ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಯುವ ಉದ್ಯಮಿಗಳಿಗೆ ಹೊಟೇಲ್ ಉದ್ಯಮಗಳ ಬಗ್ಗೆ ವಿಚಾರ ಸಂಕಿರಣವನ್ನು ಏರ್ಪಡಿಸಲಾಗಿದೆ. ಹಾಗೆಯೇ 'ಕುರುಕ್ಷೇತ್ರಕ್ಕೊಂದು ಆಯೋಗ' ಅನ್ನೋ ಯಕ್ಷ ಪ್ರಯೋಗ ಕಾರ್ಯಕ್ರಮ ಹಾಗೂ 'ಎಲ್ಲಾ ಸಮಾ ಅತ್ತು' ಎನ್ನುವ ಕುಂದಾಪ್ರ ಕನ್ನಡ ನಗೆ ನಾಟಕವೂ ನಡೆಯಲಿದೆ. ಇಳಿಸಂಜೆಯಲ್ಲಿ ಸಂತೋಷ್ ಕುಮಾರ್ ಹೆಗ್ಡೆ ಮತ್ತು ತಂಡದವರಿಂದ ಸಂಗೀತ ಸಂಜೆ ಕಾರ್ಯಕ್ರಮ ನಡೆಯಲಿದೆ ಎಂದು 'ಬಂಟರಾತಿಥ್ಯ' ಕಾರ್ಯಕ್ರಮದ ಬಗ್ಗೆ ಮಾಹಿತಿ ನೀಡಿದರು.
ಸಂಜೆ 5 ಗಂಟೆಗೆ ಬಂಟರಾತಿಥ್ಯ ಕಾರ್ಯಕ್ರಮದ ಸಮಾರೋಪ ಸಮಾರಂಭ ಕಾರ್ಯಕ್ರಮ ನಡೆಯಲಿದೆ. ಆದಿಚುಂಚನಗಿರಿ ಮಹಾ ಸಂಸ್ಥಾನದ ಪೀಠಾಧಿಪತಿ ನಿರ್ಮಲಾನಂದ ಸ್ವಾಮೀಜಿಯವರ ಸಾನ್ನಿಧ್ಯದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಮುಖ್ಯ ಮಂತ್ರಿ ಬಿ.ಎಸ್.ಯಡಿಯೂರಪ್ಪನವರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ಕಾರ್ಯಕ್ರಮದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಅವರನ್ನು ಸನ್ಮಾನಿಸಲಾಗುವುದು. ಇನ್ನು ಕಾರ್ಯಕ್ರಮದಲ್ಲಿ ಕೇಂದ್ರ ಸಚಿವ ಡಿ. ವಿ. ಸದಾನಂದ ಗೌಡ, ಸಚಿವರಾದ ಡಾ. ಸಿ. ಅಶ್ವತ್ಥ ನಾರಾಯಣ, ವಿ.ಸೋಮಣ್ಣ, ಸಿ.ಟಿ. ರವಿ, ಎಂಆರ್ಜಿ ಗ್ರೂಪ್ನ ಚೇರ್ಮೆನ್ ಕೆ. ಪ್ರಕಾಶ್ ಶೆಟ್ಟಿ ಬಂಟರ ಸಂಘದ ಅಧ್ಯಕ್ಷ ಉಪೇಂದ್ರ ಶೆಟ್ಟಿ ಮೊದಲಾದವರು ಭಾಗವಹಿಸಲಿದ್ದಾರೆ ಎಂದು ಮಧುಕರ್ ಶೆಟ್ಟಿ ಮಾಹಿತಿ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಬೆಂಗಳೂರು ಬಂಟರ ಹೊಟೇಲ್ ಮಾಲೀಕರ ಸಂಘದ ಗೌರವಾಧ್ಯಕ್ಷ ಹರಿಪ್ರಸಾದ್ ಶೆಟ್ಟಿ, ಬೆಂಗಳೂರು ಬಂಟರ ಹೊಟೇಲ್ ಮಾಲೀಕರ ಸಂಘದ ಗೌರವ ಕಾರ್ಯದರ್ಶಿ ಸಂತೋಷ್ ಕುಮಾರ್ ಶೆಟ್ಟಿ, ಪ್ರಧಾನ ಸಂಚಾಲಕರಾದ ಜಿ.ಕೆ.ಶೆಟ್ಟಿ, ಸಂಚಾಲಕರಾದ ಕೊರ್ಗಿ ಗೋಪಾಲ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.












Click it and Unblock the Notifications