ಬ್ಯಾಂಕ್ ಮ್ಯಾನೇಜರ್ ಮುನಿಯಪ್ಪ ಹತ್ಯೆಗೆ ನೋಟು ನಿಷೇಧ ಕಾರಣ!
ಬೆಂಗಳೂರು, ಆಗಸ್ಟ್ 30 : ಸುಧಾ ಕೋ ಆಪರೇಟಿವ್ ಬ್ಯಾಂಕ್ ಮ್ಯಾನೇಜರ್ ಹತ್ಯೆಯ ರಹಸ್ಯ ಬಯಲಾಗಿದೆ. ನೋಟು ನಿಷೇಧದ ಬಳಿಕ ಉಂಟಾದ ಹಣಕಾಸಿನ ಬಿಕ್ಕಟ್ಟು ಮ್ಯಾನೇಜರ್ ಹತ್ಯೆಗೆ ಕಾರಣ ಎಂಬುದು ಪೊಲೀಸರ ತನಿಖೆಯಿಂದ ಬಹಿರಂಗವಾಗಿದೆ. ಹತ್ಯೆ ಮಾಡಿದ್ದ ನಾಲ್ವರನ್ನು ಬಂಧಿಸಲಾಗಿದೆ.
ಆರ್.ಟಿ.ನಗರದ ನಿವಾಸಿಯಾಗಿದ್ದ ಬ್ಯಾಂಕ್ ಮ್ಯಾನೇಜರ್ ಮುನಿಯಪ್ಪ ಶವ ಆಗಸ್ಟ್ 16ರಂದು ಸುಮನಹಳ್ಳಿ ಸೇತುವೆ ಬಳಿ ಅವರ ಕಾರಿನಲ್ಲಿ ಪತ್ತೆಯಾಗಿತ್ತು. ಮೊದಲು ಇದು ಆತ್ಮಹತ್ಯೆ ಎಂದು ತಿಳಿಯಲಾಗಿತ್ತು. ಮುನಿಯಪ್ಪ ಅವರ ಕುಟುಂಬದವರು ಇದು ಕೊಲೆ ಎಂದು ದೂರು ಕೊಟ್ಟಿದ್ದರು.

ದೂರಿನ ಅನ್ವಯ ತನಿಖೆ ನಡೆಸಿದ ಕಾಮಾಕ್ಷಿಪಾಳ್ಯ ಪೊಲೀಸರು ಪ್ರಮುಖ ಆರೋಪಿ ತಿಲಕ್, ತಿಲಕ್ ಸಹಚರರಾದ ಪ್ರದೀಪ್, ಮಹೇಶ್ ಮತ್ತು ಆದಿ ಎನ್ನುವವರನ್ನು ಬಂಧಿಸಿದ್ದಾರೆ. ಹಣಕಾಸಿನ ವಿಚಾರಕ್ಕೆ ಸಂಬಂಧಿಸಿದಂತೆ ತಿಲಕ್ ಮತ್ತು ಮುನಿಯಪ್ಪ ನಡುವೆ ಜಗಳ ನಡೆದಿತ್ತು. ಇದೇ ಕಾರಣಕ್ಕೆ ಹತ್ಯೆ ಮಾಡಲಾಗಿದೆ.
ಘಟನೆ ವಿವರ : ಬ್ಯಾಂಕ್ ಮ್ಯಾನೇಜರ್ ಮುನಿಯಪ್ಪ ಬ್ಯಾಂಕಿನಲ್ಲಿ ಠೇವಣಿ ಇಡಲು ಬರುತ್ತಿದ್ದವರ ಬಳಿ ಹೆಚ್ಚಿನ ಬಡ್ಡಿ ನೀಡುವುದಾಗಿ ಹಣ ಪಡೆಯುತ್ತಿದ್ದರು. ಅದನ್ನು ಬೇರೆಯವರಿಗೆ ಹೆಚ್ಚಿನ ಬಡ್ಡಿಗೆ ನೀಡುತ್ತಿದ್ದರು. ಮುನಿಯಪ್ಪ ಅವರಿಗೆ ಹಣ ಕೊಟ್ಟವರು ನೋಟು ನಿಷೇಧವಾದ ಬಳಿಕ ಹಣಕ್ಕಾಗಿ ಬೇಡಿಕೆ ಇಟ್ಟಿದ್ದರು.
ಮುನಿಯಪ್ಪ ಅವರು ತಾವು ಹಣ ನೀಡಿದ ವ್ಯಕ್ತಿಗಳಿಗೆ ಹಣ ವಾಪಸ್ ನೀಡುವಂತೆ ಕೇಳಿದ್ದರು. ಆದರೆ, ಕೆಲವರು ನೀಡದ ಕಾರಣ ಸಾಲ ಮಾಡಿ ಕೆಲವು ಜನರ ಹಣ ವಾಪಸ್ ಕೊಟ್ಟಿದ್ದರು. ಇದರ ನಡುವೆಯೇ ಬಡ್ಡಿ, ಚಕ್ರಬಡ್ಡಿ ಶೂಲಕ್ಕೆ ಸಿಲುಕಿದ್ದರು.
ಆರೋಪಿ ತಿಲಕ್ಗೂ ಮುನಿಯಪ್ಪ ಹಣ ನೀಡಿದ್ದರು. ಅದನ್ನು ವಾಪಸ್ ನೀಡುವಂತೆ ಪದೇ-ಪದೇ ಪೀಡಿಸುತ್ತಿದ್ದರು. ಹಣವಿಲ್ಲದ ತಿಲಕ್ ಮುನಿಯಪ್ಪ ಅವರನ್ನು ಹತ್ಯೆ ಮಾಡಲು ಸಂಚು ರೂಪಿಸಿದ್ದ. ಮೂವರು ಸಹಚರರ ಸಹಾಯ ಪಡೆದು ಆಗಸ್ಟ್ 15ರಂದು ಅವರನ್ನು ಹತ್ಯೆ ಮಾಡಿ ಕಾರಿನಲ್ಲಿ ಶವವಿಟ್ಟು, ಆತ್ಮಹತ್ಯೆ ಎಂದು ಬಿಂಬಿಸಲು ಪ್ರಯತ್ನಿಸಿದ್ದರು.
ಸಿಕ್ಕಿಬಿದ್ದಿದ್ದು ಹೇಗೆ? : ಆಗಸ್ಟ್ 15ರಂದು ಮುನಿಯಪ್ಪ ತಿಲಕ್ ಮನೆಗೆ ಹೋಗುವುದಾಗಿ ಹೇಳಿ ಮನೆಯಿಂದ ಹೊರಟಿದ್ದರು. ಬಳಿಕ ಪುನಃ ಕರೆ ಮಾಡಿ ಬರುವುದು ತಡವಾಗುತ್ತದೆ ಎಂದು ಹೇಳಿದ್ದರು. ಆದರೆ, ನಂತರ ಮನಗೆ ಮರಳಿರಲಿಲ್ಲ. ಮರುದಿನ ಅವರ ಶವ ಪತ್ತೆಯಾಗಿತ್ತು. ಆದ್ದರಿಂದ, ಕುಟುಂಬದವರು ತಿಲಕ್ ವಿರುದ್ಧ ದೂರು ಕೊಟ್ಟಿದ್ದರು. ಕಾಮಾಕ್ಷಿಪಾಳ್ಯ ಪೊಲೀಸರು ತಿಲಕ್ ವಿಚಾರಣೆ ನಡೆಸಿದಾಗ ಹತ್ಯೆ ಪ್ರಕರಣ ಬಯಲಾಗಿದೆ.












Click it and Unblock the Notifications