ಬೆಂಗಳೂರು ದಕ್ಷಿಣ : ಇಂಟರೆಸ್ಟಿಂಗ್ ಸಂಗತಿಗಳು
ಬೆಂಗಳೂರು, ಮೇ 19 : ಕರ್ನಾಟಕದಲ್ಲಿ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರಕ್ಕಿಂತ ಜಾಸ್ತಿ ಚರ್ಚೆಗೀಡಾದ ಕ್ಷೇತ್ರ ಮತ್ತೊಂದಿಲ್ಲ. ಇದು ಕರ್ನಾಟಕದಲ್ಲಿ ಮಾತ್ರವಲ್ಲ ದೇಶದಲ್ಲಿ ಕೂಡ ಸಾಕಷ್ಟು ಚರ್ಚೆಗೊಳಲಾಗಿತ್ತು. ಇಬ್ಬರು ಹೈ ಪ್ರೊಫೈಲ್ ವ್ಯಕ್ತಿಗಳ ಕದನಕ್ಕೆ ಸಾಕ್ಷಿಯಾದ ಕ್ಷೇತ್ರದಲ್ಲಿ ಯಾರು ಬೇಕಾದರೂ ಗೆಲ್ಲಬಹುದು ಎಂಬ ಸನ್ನಿವೇಶ ಸೃಷ್ಟಿಯಾಗಿತ್ತು.
ಇಲ್ಲಿ ನೇರಾನೇರ ಸ್ಪರ್ಧೆ ಏರ್ಪಟ್ಟಿದ್ದು, 5 ಬಾರಿ ಸಂಸದರಾಗಿ 6ನೇ ಬಾರಿ ಕಣಕ್ಕಿಳಿದಿದ್ದ ಬಿಜೆಪಿಯ ಅನಂತ್ ಕುಮಾರ್ ಮತ್ತು ಮೊತ್ತಮೊದಲ ಬಾರಿಗೆ ಅದೃಷ್ಟ ಪರೀಕ್ಷೆಗಿಳಿದಿದ್ದ ಕಾಂಗ್ರೆಸ್ ಧುರೀಣ, 'ಆಧಾರ್' ಗುರುತಿನ ಚೀಟಿಯ ಜನಕ, ಇನ್ಫೋಸಿಸ್ ಮೂಲ ಸಂಸ್ಥಾಪಕರಲ್ಲೊಬ್ಬರಾದ ನಂದನ್ ನಿಲೇಕಣಿ ನಡುವೆ.
ಅನಂತ್ ಕುಮಾರ್ ಐದು ಬಾರಿ ಗೆದ್ದಿದ್ದರೂ, ಈ ಬಾರಿ ನಂದನ್ ನಿಲೇಕಣಿ ವಿರುದ್ಧ ಮಣ್ಣುಮುಕ್ಕುವುದು ಗ್ಯಾರಂಟಿ ಎಂಬ ಸುದ್ದಿ ಕಿವಿಯಿಂದ ಕಿವಿಗೆ ಹಬ್ಬಿತ್ತು. ಬೆಂಗಳೂರು ದಕ್ಷಿಣದ ಪ್ರಜ್ಞಾವಂತ ಮತ್ತು ವಿದ್ಯಾವಂತ ಐಟಿ ಮತದಾರರು ಈ ಬಾರಿ ಅಚ್ಚರಿಯ ಫಲಿತಾಂಶ ನೀಡಲಿದ್ದಾರೆ ಎಂದು ಕೂಡ ಗುಸುಗುಸು ಸುದ್ದಿ ಹಬ್ಬಿತ್ತು.
ಆದರೆ, ಅಂತಿಮವಾಗಿ ಮೇ 16ರಂದು ನಡೆದ ಮತಎಣಿಕೆಯಲ್ಲಿ ಅನಂತ್ ಕುಮಾರ್ ಅವರು 6 ಲಕ್ಷಕ್ಕೂ ಹೆಚ್ಚು ಮತ (633,816) ಪಡೆದು ಬೆಂಗಳೂರು ದಕ್ಷಿಣದಲ್ಲಿ ತಾವೇ ಕಿಂಗ್ ಎಂದು ಮತ್ತೆ ಸಾಬೀತುಪಡಿಸಿದ್ದಾರೆ. ನಾಲ್ಕು ಲಕ್ಷಕ್ಕೂ ಹೆಚ್ಚು ಮತ (405,241) ಗಳಿಸಿದ ನಂದನ್ ನಿಲೇಕಣಿ ಕೂಡ ಅಭಿನಂದನಾರ್ಹರು. ಇವರಿಬ್ಬರಿಂದ ಬೆಂಗಳೂರು ಮತ್ತಷ್ಟು ಉದ್ಧಾರವಾಗಲಿ.
ಇಂತಿರುವ ಈ ಕ್ಷೇತ್ರದಲ್ಲಿ ನಡೆದ ಚುನಾವಣೆ ಹಲವಾರು ಸ್ತುತ್ಯಾರ್ಹ ಸಂಗತಿಗಳನ್ನು ಹೊರಹಾಕಿದೆ. ಅವುಗಳತ್ತ ಗಮನ ಹರಿಸೋಣ ಬನ್ನಿ. [ಅನಂತ್ ಕುಮಾರ್ ನಾಗಾಲೋಟ]

ಅನಂತ್ಗೆ ಇಷ್ಟೊಂದು ಮತ ಎಂದೂ ಬಿದ್ದಿಲ್ಲ
ಹಿಂದಿನ ಯಾವ ಲೋಕಸಭಾ ಚುನಾವಣೆಯಲ್ಲಿಯೂ ಅನಂತ್ ಕುಮಾರ್ ಅವರಿಗೆ ಈ ಪರಿಯ ಮತ ಬಿದ್ದಿಲ್ಲ ಮತ್ತು ಇಷ್ಟು ಅಂತರದಿಂದ ಜಯಶಾಲಿಯಾಗಿಲ್ಲ.

ಶೇಕಡಾವಾರು ಮತದಾನದಲ್ಲಿಯೂ ಮುಂದು
ಶೇಕಡಾವಾರು ಮತದಾನ ಪರಿಗಣನೆಗೆ ತೆಗೆದುಕೊಂಡರೂ ಅನಂತ್ ಅವರಿಗೆ ಶೇ.57.28ರಷ್ಟು ಮತಗಳು ಬಿದ್ದಿವೆ. ಬಹುಶಃ 28 ಕ್ಷೇತ್ರಗಳಲ್ಲಿ ಅತಿ ಹೆಚ್ಚು ಶೇ.ವಾರು ಮತ ಪಡೆದ ರಾಜಕಾರಣಿ ಅನಂತ್.

ಅನಂತ್ ಆರು ಬಾಲಿಗೆ ಆರು ಸಿಕ್ಸರ್
ಲೋಕಸಭೆಗೆ ಸತತವಾಗಿ 6 ಬಾರಿ ಆಯ್ಕೆಯಾದ ಕರ್ನಾಟಕದ ಏಕೈಕ ರಾಜಕಾರಣಿ ಎಂದರೆ ಅನಂತ್ ಕುಮಾರ್ ಅವರು. ಆರು ಬಾಲಿಗೆ ಆರು ಸಿಕ್ಸರ್ ಹೊಡೆದ ಸಂಸದ.

ಬದಲಾವಣೆಗೆ ಮತ ಹಾಕಿ ಎಂದಿದ್ದ ನಿಲೇಕಣಿ
ಬದಲಾವಣೆಗೆ ಮತ ಹಾಕಿ ಎಂದು ಆಧಾರ್ ಕೈಯಲ್ಲಿ ಹಿಡಿದುಕೊಂಡು ನಿಲೇಕಣಿ ಮತ ಯಾಚಿಸಿದ್ದರು. ಸೋಷಿಯಲ್ ಮೀಡಿಯಾದಲ್ಲಿ ಕೂಡ ಅವರ ಅತೀ ಹೆಚ್ಚು ಜಾಹೀರಾತುಗಳು ರಾರಾಜಿಸುತ್ತಿದ್ದವು. [ತೋರುಬೆರಳಿಗೆ ಅಂಟಿದ ಮಸಿ]

ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ನೇರ ಹಣಾಹಣಿ
ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ನೇರಾನೇರ ಹಣಾಹಣಿ ಕಂಡ ಕ್ಷೇತ್ರವೆಂದರೆ ಅದು ಬೆಂಗಳೂರು ದಕ್ಷಿಣ. ಈ ಕ್ಷೇತ್ರದಲ್ಲಿ ಜೆಡಿಎಸ್ ಮತ್ತು ಆಮ್ಮ ಆದ್ಮಿ ಪಕ್ಷ ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂಬತ್ತಿದ್ದವು.

ಅನಂತ್ ಪರ ಕೆಲಸ ಮಾಡಿದ ಮೋದಿ ಅಲೆ
ಕೊನೆಗೂ ಮೋದಿ ಅಲೆ ಅನಂತ್ ಕುಮಾರ್ ಅವರ ಪರವಾಗಿ ಕೆಲಸ ಮಾಡಿದೆ. ಬೆಂಗಳೂರಿಗಿಂತ ದೇಶಕ್ಕಾಗಿ, ಮೋದಿಯವರಿಗಾಗಿ ಮತ ಹಾಕಿ ಎಂದು ಅನಂತ್ ಮತ ಯಾಚಿಸಿದ್ದರು.

ಬೆಂಗಳೂರಲ್ಲಿ ಅನಂತ್ ಸಂಪರ್ಕ ಸದೃಢ
ಬಿಜೆಪಿ ಪ್ರಧಾನ ಕಾರ್ಯದರ್ಶಿಯಾಗಿ ರಾಷ್ಟ್ರಮಟ್ಟದಲ್ಲಿ ಜವಾಬ್ದಾರಿ ಹೊತ್ತಿದ್ದರೂ, ಬೆಂಗಳೂರಿನಲ್ಲಿ ಅನಂತ್ ಕುಮಾರ್ ಇನ್ನೂ ಪ್ರಸ್ತುತವಾಗಿದ್ದಾರೆ ಎಂಬುದಕ್ಕೆ ಈ ಫಲಿತಾಂಶವೇ ಸಾಕ್ಷಿ.

ತ್ರಿಕೋನ, ಚತುಷ್ಕೋನ ಸ್ಪರ್ಧೆ ಏರ್ಪಟ್ಟಿದ್ದರೆ?
ಒಂದು ವೇಳೆ ಬೆಂಗಳೂರು ದಕ್ಷಿಣ ಕ್ಷೇತ್ರದಲ್ಲಿ ತ್ರಿಕೋನ ಅಥವಾ ಚತುಷ್ಕೋನ ಸ್ಪರ್ಧೆ ಏರ್ಪಟ್ಟಿದ್ದರೆ ಅನಂತ್ ಅವರು ಗೆಲುವಿನ ಅಂತರ ಇನ್ನೂ ಹೆಚ್ಚುತ್ತಿತ್ತು ಅಂತಿದ್ದಾರೆ ಬಿಜೆಪಿಯವರು.












Click it and Unblock the Notifications