ಗೂಂಡಾ ಕಾಯ್ದೆಯಡಿ ಬೀದಿ ರೌಡಿ ಬಂಧನ
ಬೆಂಗಳೂರು, ಸೆ. 12 : ಬೆಂಗಳೂರು ಪೊಲೀಸ್ ಆಯುಕ್ತ ಎಂ.ಎನ್.ರೆಡ್ಡಿ ರೌಡಿಗಳ ಅಟ್ಟಹಾಸ ಕೊನೆಗಾಣಿಸಲು ಗೂಂಡಾ ಕಾಯ್ದೆಯೇ ಮದ್ದು ಎಂದು ಗುರುವಾರ ಬೆಳಗ್ಗೆಯಷ್ಟೇ ಹೇಳಿದ್ದರು. ಅದರಂತೆ ವಿವೇಕನಗರ ಪೊಲೀಸರು ಗೂಂಡಾ ಕಾಯ್ದೆಯಡಿ ಐವಿನ್ ಕುಮಾರ್(27) ಎಂಬಾತನನ್ನು ಆಯುಕ್ತರ ಆದೇಶದನ್ವಯ ಗುರುವಾರ ಸಂಜೆ ಬಂಧಿಸಿದ್ದಾರೆ.
ವಿವೇಕ ನಗರ ಠಾಣೆಯಲ್ಲಿ ಐವಿನ್ ಕುಮಾರ್ ಮೇಲೆ ರೌಡಿ ಶೀಟರ್ ಪಟ್ಟಿ ತೆರೆಯಲಾಗಿದ್ದು, ಫುಟ್ಪಾತ್ ವ್ಯಾಪಾರಿಗಳನ್ನು ಬೆದರಿಸಿ ಹಣ ವಸೂಲಿ ಮಾಡುತ್ತಿದ್ದ ಆರೋಪ ಈತನ ಮೇಲಿದೆ.(ಗೂಂಡಾ ಕಾಯ್ದೆಯೇ ರೌಡಿಸಂ ಕೊನೆಗಾಣಿಸಲು ಮದ್ದು)
ಐವಿನ್ ಕುಮಾರ್ನನ್ನು ಬಂಧಿಸಿ ಎಚ್ಚರಿಕೆ ನೀಡಿ ಹೊರಬಿಡಲಾಗಿತ್ತಾದರೂ ಆತ ತನ್ನ ಹಳೆ ಚಾಳಿ ಮುಂದುವರಿಸಿದ್ದ. ವಿವೇಕ ನನಗರ ಸುತ್ತಮುತ್ತಲ ಭಾಗದಲ್ಲಿ ಗುಂಪು ಕಟ್ಟಿಕೊಂಡು ಸಾರ್ವಜನಿಕರನ್ನು ಬೆದರಿಸುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.(ಗೂಂಡಾ ಕಾಯ್ದೆಯಡಿ ಇಬ್ಬರು ಪಾತಕಿಗಳ ಬಂಧನ)
ಶಾಂತಿ ಕಾಪಾಡುವ ಉದ್ದೇಶದಿಂದ ಗೂಂಡಾ ಕಾಯ್ದೆಯಡಿ ಈತನನ್ನು ಬಂಧಿಸಲಾಗಿದೆ, ಕಳ್ಳಬಟ್ಟಿ. ಜೂಜಾಟ, ಅನೈತಿಕ ಚಟುವಟಿಕೆ, ಕೊಳಚೆ ಪ್ರದೇಶ ಒತ್ತುವರಿ ಪ್ರಕರಣಗಳನ್ನು ದಾಖಲು ಮಾಡಿಕೊಳ್ಳಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.