HP ಉದ್ಯೋಗಿಗಳಿದ್ದ ಕ್ಯಾಬ್ ಪಲ್ಟಿ: ಒಂದು ಸಾವು

ಅಪಘಾತದಲ್ಲಿ ಹೊಸಕೋಟೆ ತಾಲೂಕು ಭಕ್ತರಹಳ್ಳಿಯ ಅಶ್ವತ್ಥನಾರಾಯಣ (30) ಎಂಬ ವ್ಯಕ್ತಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಎಂಜಿ ರಸ್ತೆಯ ಕಾವೇರಿ ಎಂಪೋರಿಯಂ ಸರ್ಕಲ್ಲಿನಲ್ಲಿ ಸೋಮವಾರ ತಡರಾತ್ರಿ ಈ ಅನಾಹುತ ನಡೆದಿದೆ.
ಘಟನೆಯಲ್ಲಿ ಇನ್ನೂ ನಾಲ್ವರಿಗೆ ಗಾಯಗಳಾಗಿವೆ. ಗಾಯಾಳುಗಳಾದ ಕುಮಾರ್, ಓಂ ಪ್ರಕಾಶ್, ಸುಂದರ್ಜಿತ್ ಹಾಗೂ ಶಿವಕುಮಾರ್ ಅವರುಗಳನ್ನು ಸಮೀಪದ ಬೋರಿಂಗ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಸ್ಯಾಂಟ್ರೋ ಕಾರಿನಲ್ಲಿದ್ದ ನವೀನ್ ಎಂಬಾತ ಅಪಾಯದಿಂದ ಪಾರಾಗಿದ್ದಾನೆ. ಎರಡೂ ವಾಹನಗಳು ವೇಗವಾಗಿ ಚಲಿಸುತ್ತಿದ್ದದ್ದೇ ಅಪಘಾತಕ್ಕೆ ಕಾರಣ ಎನ್ನಲಾಗಿದೆ. ಕಬ್ಬನ್ ಪಾರ್ಕ್ ಠಾಣೆ ಸಂಚಾರಿ ಪೊಲೀಸರು ಘಟನಾ ಸ್ಥಳಕ್ಕೆ ಧಾವಿಸಿದ್ದಾರೆ.
ಕಾವೇರಿ ಎಂಪೋರಿಯಂ ಬಳಿ ಸೋಮವಾರ ಬೆಳಗಿನ ಜಾವ 2.45 ರ ಸುಮಾರಿಗೆ ಈ ಅಪಘಾತ ಸಂಭವಿಸಿದೆ. ವೈಟ್ಫೀಲ್ಡ್ ಎಚ್ಪಿ ಜಿಆರ್ ಟೆಕ್ ಪಾರ್ಕ್ ನಲ್ಲಿ 11 ವರ್ಷಗಳಿಂದ ಅಶ್ವತ್ಥನಾರಾಯಣ ಭದ್ರತಾ ಸಿಬ್ಬಂದಿಯಾಗಿ ಕೆಲಸ ಮಾಡುತ್ತಿದ್ದರು. ಉದ್ಯೋಗಿಗಳನ್ನು ಮನೆಗಳಿಗೆ ಡ್ರಾಪ್ ಮಾಡುವ ಸಂದರ್ಭದಲ್ಲಿ ಅವರು ಕಾರಿನಲ್ಲಿ ತೆರಳುತ್ತಿದ್ದರು.
ಅದೇ ರೀತಿ ಉದ್ಯೋಗಿಗಳನ್ನು ವಿಜಯನಗರಕ್ಕೆ ಡ್ರಾಪ್ ಮಾಡಲು ಟಾಟಾ ಸುಮೊ ಚಾಲಕ ತೆರಳುತ್ತಿದ್ದ. ಅತಿವೇಗದಲ್ಲಿ ಟಾಟಾ ಸುಮೊ ಕಾವೇರಿ ಎಂಪೋರಿಯಂ ಸಮೀಪ ತೆರಳುತ್ತಿದ್ದಾಗ, ಕಾಮರಾಜ ರಸ್ತೆಯಿಂದ ಬ್ರಿಗೇಡ್ ರಸ್ತೆ ಕಡೆಗೆ ತಿರುವು ಪಡೆಯುತ್ತಿದ್ದ ಸ್ಯಾಂಟ್ರೊಗೆ ಡಿಕ್ಕಿ ಹೊಡೆದಿದೆ.
ಡಿಕ್ಕಿ ರಭಸಕ್ಕೆ ಟಾಟಾ ಸುಮೊ ಪಲ್ಟಿಯಾಗಿದ್ದು, ಹಿಂದಿನ ಸೀಟಿನಲ್ಲಿ ಕುಳಿತ್ತಿದ್ದ ಅಶ್ವತ್ಥನಾರಾಯಣ ಅವರ ತಲೆಗೆ ತೀವ್ರ ಪೆಟ್ಟು ಬಿದ್ದು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ವಾಹನದ ಮಧ್ಯದ ಸೀಟಿನಲ್ಲಿ ಕುಳಿತಿದ್ದ ಸುಂದರ್ಜಿತ್ ಕಾಲಿಗೆ, ಮತ್ತೊಬ್ಬ ಉದ್ಯೋಗಿ ಶಿವಕುಮಾರ್ ಎಂಬುವವರ ಹಣೆಗೆ ಸಣ್ಣ ಪ್ರಮಾಣದ ಗಾಯಗಳಾಗಿದೆ.












Click it and Unblock the Notifications