ಗಣೇಶ ವಿಸರ್ಜನೆ: ಬೆಂಗಳೂರು ಪೂರ್ವದಲ್ಲಿ ಮದ್ಯ ಮಾರಾಟ ನಿಷೇಧ
ಬೆಂಗಳೂರು, ಸೆ. 27: ಬೆಂಗಳೂರಿನ ಪೂರ್ವ ವಿಭಾಗದಲ್ಲಿ ಸಾಮೂಹಿಕ ಗಣೇಶ ಮೂರ್ತಿಗಳ ಮೆರವಣಿಗೆ ಮತ್ತು ವಿಸರ್ಜನೆ ಕಾರ್ಯಕ್ರಮಗಳು ಆಯೋಜನೆಗೊಂಡಿರುವುದರಿಂದ ಭಾನುವಾರ ಹಾಗೂ ಸೋಮವಾರದಂದು ಮದ್ಯ ಮಾರಾಟಕ್ಕೆ ನಿಷೇಧ ಹೇರಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಎನ್.ಎಸ್ ಮೇಘರಿಕ್ ಹೇಳಿದ್ದಾರೆ.
ಸೆ.27ರಂದು ಬೆಳಗ್ಗೆ 6 ಗಂಟೆಯಿಂದ ಸೆ.28ರ ಬೆಳಗ್ಗೆ 6 ಗಂಟೆಯವರೆಗೆ ಬಾರ್, ವೈನ್ಸ್ ಶಾಪ್, ಪಬ್ಗಳು ಹಾಗೂ ಎಲ್ಲ ರೀತಿಯ ಮದ್ಯ ಮಾರಾಟದ ಅಂಗಡಿಗಳು ತೆರೆಯದಂತೆ ನಗರ ಪೊಲೀಸ್ ಆಯುಕ್ತ ಎನ್.ಎಸ್.ಮೇಘರಿಕ್ ಆದೇಶಿಸಿದ್ದಾರೆ.
ಕಮರ್ಷಿಯಲ್ ಸ್ಟ್ರೀಟ್ ಪೊಲೀಸ್ ಠಾಣಾ ವ್ಯಾಪ್ತಿಯ ಶ್ರೀನಾಗದೇವತೆ ದೇವಸ್ಥಾನದ ಬಳಿ ಪ್ರತಿಷ್ಠಾಪನೆ ಮಾಡಿರುವ ಸುಮಾರು 30 ರಿಂದ 40 ಗಣೇಶ ಮೂರ್ತಿಗಳ ಸಾಮೂಹಿಕ ಮೆರವಣಿಗೆ ಹಾಗೂ ವಿಸರ್ಜನೆ ಕಾರ್ಯಕ್ರಮಗಳು ಸೆ.27ರಂದು ನಡೆಯುತ್ತದೆ.
ಸಾಮೂಹಿಕ ಗಣೇಶ ಮೂರ್ತಿಗಳ ಮೆರವಣಿಗೆಯು ಸೆ.27ರ ಮಧ್ಯಾಹ್ನ 2ಗಂಟೆಗೆ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ವೀರಪಿಳ್ಳೈ ಸ್ಟ್ರೀಟ್, ಜುವೆಲ್ಲರಿ ಸ್ಟ್ರೀಟ್, ಧರ್ಮರಾಜ ದೇವಸ್ಥಾನದ ಬೀದಿ, ಕ್ವಾರ್ಡಂಟ್ ಸರ್ಕಲ್, ಸೆಪ್ಪಿಂಗ್ಸ್ ರಸ್ತೆ, ತಿಮ್ಮಯ್ಯ ರಸ್ತೆ, ಕಾಮರಾಜ ರಸ್ತೆ, ಶಿವನ್ಚೆಟ್ಟಿ ಗಾರ್ಡನ್, ಸೆಂಟ್ ಜಾನ್ಸ್ ರಸ್ತೆ ಮೂಲಕ ರಾತ್ರಿ 8:30ರ ಸುಮಾರಿನಲ್ಲಿ ಹಲಸೂರು ಕೆರೆಯಲ್ಲಿ ವಿಸರ್ಜಿಸಲಾಗುತ್ತದೆ.

ಈಶಾನ್ಯ ವಿಭಾಗದಲ್ಲಿ ಮದ್ಯ ಮಾರಾಟ ನಿಷೇಧ: ಯಲಹಂಕ ಉಪನಗರ ಹಾಗೂ ವಿದ್ಯಾರಣ್ಯಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವಿನಾಯಕ ಸೇವಾ ಸಮಿತಿ ಸೇರಿ ಮತ್ತಿತರ ಸಂಘಟನೆಗಳು 16 ಗಣೇಶ ಮೂರ್ತಿಗಳ ಸಾಮೂಹಿಕ ಮೆರವಣಿಗೆ ಮತ್ತು ವೀರಸಾಗರ ಕೆರೆಯಲ್ಲಿ ವಿಸರ್ಜನೆ ಮಾಡುವ ಕಾರ್ಯಕ್ರಮವನ್ನು ಸೆ.27ರಂದು ಹಮ್ಮಿಕೊಂಡಿದ್ದರಿಂದ ಈ ಭಾಗದಲ್ಲಿ ಎಲ್ಲ ರೀತಿಯ ಮದ್ಯ ಮಾರಾಟವನ್ನು ನಿಷೇಧಿಸಲಾಗಿದೆ.
ಗಣೇಶ ಮೂರ್ತಿಗಳ ಮೆರವಣಿಗೆಯು ವಿದ್ಯಾರಣ್ಯಪುರ ಕೊನೆಯ ಬಸ್ ನಿಲ್ದಾಣ, ಜಲ್ಲಿ ಮಿಷಿನ್ ಸರ್ಕಲ್, ಚಿಕ್ಕಬೆಟ್ಟಹಳ್ಳಿ ಮಸೀದಿ, ಚಿಕ್ಕಬೆಟ್ಟಹಳ್ಳಿ ದರ್ಗಾ ಮುಖೇನ ಹಾದು ವೀರಸಾಗರ ಕೆರೆಯಲ್ಲಿ ವಿಸರ್ಜನೆ ಮಾಡಲಿರುವುದರಿಂದ ಈ ಭಾಗದ ಮದ್ಯದ ಅಂಗಡಿಗಳನ್ನು ತೆರೆಯದಂತೆ ನಿಷೇಧಿಸಲಾಗಿದೆ.












Click it and Unblock the Notifications